ನಾನು ಮೆಚ್ಚಿದ ವಾಟ್ಸಪ್

Sunday, November 1, 2020

ಇಂದಿನ ಇತಿಹಾಸ History Today ನವೆಂಬರ್ 01

 ಇಂದಿನ ಇತಿಹಾಸ  History Today ನವೆಂಬರ್ 01

2020: ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಕುಖ್ಯಾತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯ ಕಮಾಂಡರನನ್ನು ಭದ್ರತಾ ಪಡೆಗಳು ಗುಂಡಿನ ಘರ್ಷಣೆಯಲ್ಲಿ  2020 ನವೆಂಬರ್ 01ರ ಭಾನುವಾರ ಕೊಂದು ಹಾಕಿದವು. ಶ್ರೀನಗರದ  ಹೊರವಲಯದ ರಂಗ್ರೆತ್ ಪ್ರದೇಶದಲ್ಲಿ  ನಡೆದ ಗುಂಡಿನ ಘರ್ಷಣೆಯಲ್ಲಿ ಹಿಜ್ಬುಲ್  ಕಮಾಂಡರ್ ಸಫಿವುಲ್ಲಾನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರದ ಐಜಿ ವಿಜಯಕುಮಾರ್ ಸ್ಪಷ್ಟಪಡಿಸಿದರು. ಸಫಿವುಲ್ಲಾ ಅವಿತುಕೊಂಡಿದ್ದ ಸ್ಥಳದ ಖಚಿತ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ದಾಳಿ ಮಾಡಿದ್ದಾರೆ ಎಂದು ವಿಜಯಕುಮಾರ್ ತಿಳಿಸಿದರುಶರಣಾಗುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಸಫಿವುಲ್ಲಾ, ತನ್ನ ಎಕೆ-೪೭ ಬಂದೂಕಿನಿಂದ ಭದ್ರತಾ ಪಡೆಗಳತ್ತ ಏಕಾಏಕಿ ಗುಂಡು ಹಾರಿಸತೊಡಗಿದ. ಇದಕ್ಕೆ ಪ್ರತ್ಯುತ್ತರ ನೀಡಿದ ಭದ್ರತಾ ಪಡೆರಗಳು ಘರ್ಷಣೆಯಲ್ಲಿ ಸಫಿವುಲ್ಲಾನನ್ನು ಹೊಡೆದುರುಳಿಸಿದವು ಎಂದು ವರದಿಗಳು ಹೇಳಿದವು. ಕಳೆದ ಮೇ ತಿಂಗಳಲ್ಲಿ  ರಿಯಾಜ್ ನಾಯ್ಕೂ  ಹತ್ಯೆ ಬಳಿಕ ಸಫಿವುಲ್ಲಾ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ನೇಮಕಗೊಂಡಿದ್ದ. ಗುಂಡಿನ ಘರ್ಷಣೆಯಲ್ಲಿ ಈತನನ್ನು ಕೊಂದಿರುವುದು ಭದ್ರತಾ ಪಡೆಗಳಿಗೆ ದೊರೆತ ಭಾರೀ ಯಶಸ್ಸು ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಸಂತಸ ವ್ಯಕ್ತಪಡಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ಬೆಂಗಳೂರು: ಕನ್ನಡ ಭಾಷೆಯ ಅಬಿವೃದ್ಧಿ ನಿಟ್ಟಿನಲ್ಲಿ  2020 ನವೆಂಬರ್ ಭಾನುವಾರದಿಂದ ಮುಂದಿನ ವರ್ಷ ಅಕ್ಟೋಬರ್ ವರೆಗೆ  ‘ಕನ್ನಡ ಕಾಯಕ ವರ್ಷವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020 ನವೆಂಬರ್ 1ರ ಭಾನುವಾರ ಘೋಷಿಸಿದರು. ಬೆಂಗಳೂರು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ೬೫ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ  ಅವರು ಮಾತನಾಡಿದರು.
 ’ಕನ್ನಡ ಭಾಷೆಯ ಬಳಕೆ ನವೆಂಬರ ತಿಂಗಳಿಗಷ್ಟೇ ಸೀಮಿತವಾಗದೆ ವರ್ಷಪೂರ್ತಿ ಆಚರಿಸುವಂತಾಗಬೇಕು. ಬದಲಾದ ಕಾಲಘಟ್ಟದಲ್ಲಿ ಕನ್ನಡವನ್ನು ತಂತ್ರಜ್ಞಾನದ ಭಾಷೆಯನ್ನಾಗಿ ಮಾಡಬೇಕಾಗಿದೆ.ಇದಕ್ಕಾಗಿ ಕನ್ನಡ ಕಾಯಕ ವರ್ಷದಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮಗೊಳಿಸಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದುಎಂದು ಮುಖ್ಯಮಂತ್ರಿ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್ ಪರ ಪ್ರಚಾರ ಮಾಡಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದರು. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಹಂಕಾರವನ್ನು ಪೋಷಿಸುವುದರಲ್ಲೇ ಕಾಲ ಕಳೆದರೇ ಹೊರತು, ಮಾರಕ ಕೊರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಒಬಾಮಾ ಕಿಡಿಕಾರಿದರು. ಟ್ರಂಪ್ಗೆ ಜನರ ಪ್ರಾಣ ರಕ್ಷಣೆಗಿಂತ ತಮ್ಮ ಅಹಂಕಾರವೇ ಮುಖ್ಯವಾಗಿತ್ತು. ತಮ್ಮ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಟ್ರಂಪ್ ತಮ್ಮೊಬ್ಬರನ್ನು ಹೊರತುಪಡಿಸಿ, ಉಳಿದ ಯಾವುದೇ ಅಮೆರಿಕನ್ನರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ ಎಂದು ಬರಾಕ್ ಒಬಾಮ ತೀವ್ರ ವಾಗ್ದಾಳಿ ನಡೆಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 01 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment