ನಾನು ಮೆಚ್ಚಿದ ವಾಟ್ಸಪ್

Monday, January 6, 2020

ಇಂದಿನ ಇತಿಹಾಸ History Today ಜನವರಿ 06

 ಇಂದಿನ ಇತಿಹಾಸ  History Today ಜನವರಿ 06 
2020: ನವದೆಹಲಿ: ಇಡೀ ದೇಶದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ದಿನಾಂಕ 2020 ಜನವರಿ 06ರ ಸೋಮವಾರ ಪ್ರಕಟಗೊಳ್ಳುವುದರೊಂದಿಗೆ ಇನ್ನೊಂದು ಸುತ್ತಿನ ಪ್ರತಿಷ್ಠಿತ ರಾಜಕೀಯ ಸಮರಕ್ಕೆ ರಂಗ ಸಜ್ಜುಗೊಂಡಿದೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಧ್ಯ ಜಿದ್ದಾಜಿದ್ದಿ ಸಮರ ನಡೆಯಲಿದೆ. ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ ೮ರಂದು ಚುನಾವಣೆ ನಡೆಯಲಿದ್ದು, ಫೆಬ್ರುವರಿ ೧೧ರಂದು ಮತಗಳ ಎಣಿಕೆ ನಡೆಯಲಿದೆ. ದೆಹಲಿ ವ್ಯಾಪ್ತಿಯಲ್ಲಿ ಈದಿನದಿಂದಲೇ  ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ದೆಹಲಿಯ ಹಾಲಿ ವಿಧಾನಸಭೆಯ ಅವಧಿ ಫೆಬ್ರುವರಿ ೨೨ರಂದು ಮುಕ್ತಾಯಗೊಳ್ಳಲಿದ್ದು, ನೂತನ ವಿಧಾನಸಭೆ ಅದಕ್ಕೆ ಮುನ್ನ ರಚನೆಯಾಗಬೇಕಾಗಿದೆ. ೨೦೧೫ರ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಆಪ್) ಚುನಾವಣೆಯಲ್ಲಿ ಪುನರಾಯ್ಕೆ ಬಯಸುತ್ತಿದೆ. ೨೦೧೫ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ೬೭ ಸ್ಥಾನಗಳನ್ನು ಗೆದ್ದಿತ್ತು. ಉಳಿಕ ಸ್ಥಾನಗಳನ್ನು  ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿತ್ತು. ೨೦೨೦ರ ಫೆಬ್ರುವರಿ ೮ರಂದು ದೆಹಲಿ ವಿಧಾನಸಭೆಗೆ ಏಕಹಂತದ ಚುನಾವಣೆ ನಡೆಯಲಿದ್ದು, ಮತಗಳ ಎಣಿಕೆ ಫೆಬ್ರುವರಿ ೧೧ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗಾಗಿ ಜನವರಿ ೧೪ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಜನವರಿ ೨೨ ಅಂತಿಮ ದಿನವಾಗಿರುತ್ತದೆ. ನಾಮಪತ್ರ ವಾಪಸಿಗೆ ಜನವರಿ ೨೪ ಕೊನೆಯ ದಿನ ಎಂದು ಸುನಿಲ್ ಅರೋರಾ ಹೇಳಿದರು. ಮಾದರಿ ನೀತಿ ಸಂಹಿತೆ: ಮಾದರಿ ನೀತಿ ಸಂಹಿತೆಯು ದೆಹಲಿಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಿಇಸಿ ನುಡಿದರು. (ಹೆಚ್ಚಿನ  ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ
: ಕೇರಳದ ಶಬರಿಮಲೈಯ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦-೫೦ರ 
ನಡುವಣ ವಯೋಮಾನದ ಮಹಿಳೆಯರ ಮೇಲೆ ಇದ್ದ ನಿಷೇಧವನ್ನು ರದ್ದು ಪಡಿಸಿ ತಾನು ೨೦೧೮ರಲ್ಲಿ ನೀಡಿದ್ದ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಸದಸ್ಯರ ಸಂವಿಧಾನ ಪೀಠವು ಮುಂದಿನ 2020 ಜನವರಿ 13ರ ಸೋಮವಾರ  ಹೊಸದಾಗಿ ವಿಚಾರಣೆ ಆರಂಭಿಸಲಿದೆ. ಸಪ್ತ ಸದಸ್ಯ ಪೀಠವು ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸುವುದು ಎಂದು ಸುಪ್ರಿಂಕೋರ್ಟ್ ಕಳೆದ ತಿಂಗಳು ಇಂಗಿತ ವ್ಯಕ್ತ ಪಡಿಸಿತ್ತು. ಆದಾಗ್ಯೂ ಸುಪ್ರೀಕೋರ್ಟ್  2020 ಜನವರಿ 06ರ ಸೋಮವಾರ ನೀಡಿದ ಹೊಸ ಸೂಚನೆಯು ಪ್ರಕರಣವನ್ನು ಸದಸ್ಯ ಪೀಠವು ಜನವರಿ ೧೩ರಿಂದ (ಮುಂದಿನ ಸೋಮವಾರ) ವಿಚಾರಣೆ ನಡೆಸುವುದು ಎಂದು ತಿಳಿಸಿತು. ೨೦೧೮ರಲ್ಲಿ ದೇವಾಲಯಕ್ಕೆ ಋತುಮತಿ ಮಹಿಳೆಯರ ಪ್ರವೇಶ ನಿಷೇಧಕ್ಕೆ ಸಂಬಂಧಿಸಿದಂತೆ ನಡೆಸಿದ್ದ ವಿಚಾರಣೆಯ ಬಳಿಕ ಸುಪ್ರೀಕೋರ್ಟಿನ  ಪಂಚ ಸದಸ್ಯ ಸಂವಿಧಾನಪೀಠವು ದಕ್ಷಿಣ ಕೇರಳದ ೮೦೦ ವರ್ಷಗಳಷ್ಟು ಪುರಾತನವಾದ ದೇವಾಲಯದಲ್ಲಿ ಅನಾದಿ ಕಾಲದಿಂದ ಇದ್ದ ಋತುಮತಿ ವಯೋಮಾನದ ಮಹಿಳಾ ಪ್ರವೇಶ ನಿಷೇಧ ಪದ್ಧತಿಯನ್ನು : ಬಹುಮತದ ತೀರ್ಪಿನಲ್ಲಿ ರದ್ದು ಪಡಿಸಿತ್ತು. ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ೨೦೧೮ರ ಸೆಪ್ಟೆಂಬರ್ ೨೮ರಂದು ನೀಡಲಾಗಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಸುಮಾರು ೬೦ಕ್ಕೂ ಹೆಚ್ಚಿನ ಅರ್ಜಿಗಳ ವಿಚಾರಣೆಯನ್ನು  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ಮುನ್ನ ವಿಸೃತ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ  ವರ್ಗಾವಣೆ ಮಾಡಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ  ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್, .ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತ್ತು. ಇದೀಗ ನವ ಸದಸ್ಯ ಪೀಠವು ಮಸೀದಿಗಳಿಗೆ ಮಹಿಳಾ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪದ್ಧತಿ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನೂ ಪುನರ್ ಪರಿಶೀಲನೆ ಮಾಡಲಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಟೆಹರಾನ್: ಇರಾನಿನ ಮೇಜರ್ ಜನರಲ್ ಖಾಸಿಂ ಸೊಲೈಮಾನಿ ಸಾವಿಗಾಗಿ ಅಮೆರಿಕದ ಅಧ್ಯಕ್ಷ   ಡೊನಾಲ್ಡ್  ಟ್ರಂಪ್ ತಲೆಗೆ ೮೦ ಮಿಲಿಯನ್ (೮೦ ದಶಲಕ್ಷ) ಡಾಲರ್ ಬಹುಮಾನವನ್ನು ಇರಾನ್ 2020 ಜನವರಿ 06ರ ಸೋಮವಾರ ಘೋಷಿಸಿತು. ಸೊಲೈಮಾನಿ ಅಂತ್ಯಯಾತ್ರೆಯ ವೇಳೆಯಲ್ಲಿ ಇರಾನಿನ ಉನ್ನತ ನಾಯಕರೊಬ್ಬರು ಇರಾನಿನ ಪ್ರತಿಯೊಬ್ಬ ಪ್ರಜೆಯೂ ಡಾಲರನ್ನು ನೀಡಲಿದ್ದು ಮೊತ್ತವನ್ನು ಅಮೆರಿಕದ ಅಧ್ಯಕ್ಷನನ್ನು ಕೊಂದ ಯಾವುದೇ ವ್ಯಕ್ತಿಗೆ ನೀಡಲಾಗುವುದು ಎಂದು ಘೋಷಿಸಿರುವುದಾಗಿ ಅಂತ್ಯಯಾತ್ರೆಯ ನೇರಪ್ರಸಾರ ಮಾಡಿದ ಟಿವಿಗಳು ವರದಿ ಮಾಡಿದವು.  ‘ಇರಾನ್ ೮೦ ದಶಲಕ್ಷ ಪ್ರಜೆಗಳನ್ನು ಹೊಂದಿದೆ. ಇರಾನಿನ ಜನಸಂಖ್ಯೆಯನ್ನು ಆಧರಿಸಿ, ನಾವು ೮೦ ದಶಲಕ್ಷ ಡಾಲರ್ ಸಂಗ್ರಹಿಸಲು ಬಯಸಿದ್ದೇವೆ ಮತ್ತು  ಅದನ್ನು ಅಧ್ಯಕ್ಷ ಟ್ರಂಪ್ ಅವರ ತಲೆ ತೆಗೆದವರಿಗೆ ಬಹುಮಾನವಾಗಿ ನೀಡಲು ಬಯಸಿದ್ದೇವೆಎಂದು ಇರಾನೀ ನಾಯಕ ಪ್ರಕಟಿಸಿದರು ಎಂದು ವರದಿಗಳು ತಿಳಿಸಿದವು. ಟ್ರಂಪ್ ಆದೇಶದ ಮೇರೆಗೆ ಜನವರಿ ೩ರಂದು ನಡೆದ ಡ್ರೋಣ್ ದಾಳಿಯಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್ ಖಡ್ಸ್ ಪಡೆಗಳ ಕಮಾಂಡರ್ ಸೊಲೈಮಾನಿ ಮತ್ತು ಇರಾಕಿನ ಅರೆ ಸೇನಾ ಪಡೆ ಹಶ್ಡ್ ಶಾಬಿ ಪಡೆಗಳ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಾಂಡಿಸ್ ಸಾವನ್ನಪ್ಪಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನೋಯ್ಡಾ: ಕರ್ನಾಟಕದ ಮಾಜಿ ರಾಜ್ಯಪಾಲ ಟಿ ಎನ್ ಚತುರ್ವೇದಿ ಅವರು 2020 ಜನವರಿ 06ರ ಭಾನುವಾರ ರಾತ್ರಿ ಕೊನೆಯುಸಿರೆಳೆದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ನೋಯ್ಡಾದ ಖಾಸಗಿ ಆಸ್ಪತ್ರೆಗೆ ನಿನ್ನೆ ರಾತ್ರಿ ದಾಖಲಿಸಲಾಗಿತ್ತು. ಆದರೆ ಅವರು ಅದಾಗಲೇ ಇಹಲೋಕ ತ್ಯಜಿಸಿದ್ದರು. ಚತುರ್ವೇದಿಯವರು ೨೦೦೨ರಿಂದ ೨೦೦೭ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಪ್ರದೇಶದ ಕನೌಜ್ ನಲ್ಲಿ ಜನಿಸಿದ್ದ ತ್ರಿಲೋಕನಾಥ್ ಚತುರ್ವೇದಿ ಅವರು ಐಎಎಸ್ ಅಧಿಕಾರಿಯಾಗಿದ್ದರು. ಭಾರತ ಸರ್ಕಾರದ  ಸಿಎಜಿ ಆಗಿ ಕಾರ್ಯ ನಿರ್ವಹಿಸಿದ್ದ ಅವರಿಗೆ ೧೯೯೧ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)






No comments:

Post a Comment