Sunday, June 16, 2019

ಇಂದಿನ ಇತಿಹಾಸ History Today ಜೂನ್ 16

ಇಂದಿನ ಇತಿಹಾಸ History Today ಜೂನ್ 16
2019: ನವದೆಹಲಿಭಾರತ ಮತ್ತು ಮ್ಯಾನ್ಮಾರ್ ಸೇನೆಗಳು ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಮಿನಲ್ಲಿ ಸಕ್ರಿಯರಾಗಿದ್ದ ಹಲವಾರು ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಟ್ಟುಕೊಂಡು ಮೂರು ವಾರಗಳಆಪರೇಷನ್ ಸನ್ರೈಸ್- ಜಂಟಿ ಕಾರ್ಯಾಚರಣೆ ನಡೆಸಿ ಹಲವಾರು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿ, ೭೨ರನ್ನೂ ಹೆಚ್ಚು ಉಗ್ರರನ್ನು ಸೆರೆ ಹಿಡಿದಿವೆ. ಮೇ ೧೬ರಿಂದ ಮೂರು ವಾರಗಳ ಕಾಲ ಹಲವಾರು ಭಯೋತ್ಪಾದಕ ಗುಂಪುಗಳನ್ನು  ಗುರಿಯಾಗಿಟ್ಟುಕೊಂಡು ಉಭಯ ರಾಷ್ಟ್ರಗಳ ಗಡಿಯಲ್ಲಿಆಪರೇಷನ್ ಸನ್ರೈಸ್ ಸಮನ್ವಯಿತ ಕಾರ್ಯಾಚರಣೆಯನ್ನು ಉಭಯ ರಾಷ್ಟ್ರಗಳ ಸೇನೆಗಳು ನಡೆಸಿವೆ ಎಂದು ರಕ್ಷಣಾ ಮೂಲಗಳು ಈದಿನ  ಬಹಿರಂಗ ಪಡಿಸಿದವು. ಕಮ್ಟಾಪುರ ಲಿಬರೇಷನ್ ಆರ್ಗನೈಸೇಷನ್ (ಕೆಎಲ್), ಎನ್ಎಸ್ಸಿಎನ್  (ಖಪ್ಲಂಗ್), ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ () ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋರೋಲ್ಯಾಂಡ್ (ಎನ್ಡಿಎಫ್ಬಿ) ಸಂಘಟನೆಗಳು ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳ ಶಿಬಿರಗಳನ್ನು ನಾಶ ಪಡಿಸಲಾಗಿದೆ ಎಂದು ಮೂಲಗಳು ಹೇಳಿದವು. ಭಾರತೀಯ ಸೇನೆ ಹೊರತಾಗಿ ಅಸ್ಸಾಮ್ ರೈಫಲ್ಸ್ ತುಕಡಿಗಳೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಮೂರು ವಾರಗಳ ಕಾರ್ಯಾಚರಣೆಯಲ್ಲಿ ಗುಂಪುಗಳಿಗೆ ಸೇರಿದ ಕನಿಷ್ಠ ಆರು ಡಜನ್ ಭಯೋತ್ಪಾದಕರನ್ನು ಸೆರೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿದವು. ಮೂರು ತಿಂಗಳ ಹಿಂದೆ ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಜಂಟಿಯಾಗಿಆಪರೇಷನ್ ಸನ್ ರೈಸ್ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಈಶಾನ್ಯ ಭಾರತ ಮೂಲದ ಹಲವಾರು ಭಯೋತ್ಪಾದಕ ಶಿಬಿರಗಳನ್ನು ಪುಡಿಗಟ್ಟಲಾಗಿತ್ತು. ನಾಗಾಲ್ಯಾಂಡ್ ಮತ್ತು ಮಣಿಪುರ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳ ಜೊತೆಗೆ ,೬೪೦ ಕಿಮೀ ಗಡಿಯನ್ನು ಹಂಚಿಕೊಂಡಿರುವ ಆಯಕಟ್ಟಿನ ನೆರೆಹೊರೆ ದೇಶಗಳಲ್ಲಿ ಮ್ಯಾನ್ಮಾರ್ ಕೂಡಾ ಒಂದು. ಗಡಿ ಕಾವಲು ವೇಳೆಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳ ಮಧ್ಯೆ ಆಳವಾದ ಸಮನ್ವಯಕ್ಕೆ ಭಾರತ ನಿರಂತರ ಒತ್ತು ನೀಡುತ್ತಾ ಬಂದಿತ್ತು. ಉಭಯ ರಾಷ್ಟ್ರಗಳ ಸೇನೆಗಳು ಗುಪ್ತಚರ ಮಾಹಿತಿ ಮತ್ತು ತಳಮಟ್ಟದ ಪರಿಸ್ಥಿತಿಯನ್ನು ಅವಲಂಬಿಸಿ ಮೂರನೇ ಹಂತದ ಕಾರ್ಯಾಚರಣೆಯನ್ನು ಕೂಡಾ ನಡೆಸಬಹುದು ಎಂದು ಮೂಲಗಳು ಹೇಳಿದವು. ೨೦೧೫ರ ಜೂನ್ ತಿಂಗಳಲ್ಲಿ ಭಯೋತ್ಪಾದಕರು ಮಣಿಪುರದಲ್ಲಿ ೧೮ ಮಂದಿ ಯೋಧರನ್ನು ಬಲಿತೆಗೆದುಕೊಂಡ ಕೆಲವು ದಿನಗಳ ಬಳಿಕ ಭಾರತೀಯ ಸೇನೆಯು ಭಾರತ -ಮ್ಯಾನ್ಮಾರ್ ಗಡಿಯಲ್ಲಿ ಎನ್ಎಸ್ಸಿಎನ್(ಕೆ) ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿತ್ತುಆಪರೇಷನ್ ಸನ್ರೈಸ್ ಕಾರ್ಯಾಚರಣೆಯ ಮೊದಲ ಹಂತದಲ್ಲಿ ಸೇನೆಯು ಕಲಾದನ್ ಬಹುಮಾದರಿ ಸಾಗಣೆ ಸಾರಿಗೆ ಯೋಜನೆಯನ್ನು ವಿರೋಧಿಸುತ್ತಿದ್ದ ಅರಕನ್ ಆರ್ಮಿಯ ಸದಸ್ಯರನ್ನು ಗುರಿಯಾಗಿಟ್ಟುಕೊಂಡಿತ್ತು. ಕಲಾದನ್ ಬಹು ಮಾದರಿ ಸಾಗಣೆ ಸಾರಿಗೆ ಯೋಜನೆಯನ್ನು ಆಗ್ನೇಯ ಏಷ್ಯಾಕ್ಕೆ ಭಾರತದ ಹೆಬ್ಬಾಗಿಲು ಎಂಬುದಾಗಿ ಪರಿಗಣಿಸಲಾಗಿತ್ತು. ಭಾರತವು ೨೦೦೮ರ ಏಪ್ರಿಲ್ ತಿಂಗಳಲ್ಲಿ ಮ್ಯಾನ್ಮಾರ್ ಜೊತೆಗೆ ಯೋಜನೆ ಅನುಷ್ಠಾನಕ್ಕೆ ನೆರವು ಒದಗಿಸುವ ನಿಟ್ಟಿನಲ್ಲಿ ಚೌಕಟ್ಟು ಒಪ್ಪಂದ ಮಾಡಿಕೊಂಡಿತ್ತುಯೋಜನೆ ಪೂರ್ಣಗೊಂಡಾಗ ಈಶಾನ್ಯದ ಮಿಜೋರಂ ರಾಜ್ಯವು ಮ್ಯಾನ್ಮಾರಿನ ರಾಖೈನ್ ರಾಜ್ಯದ ಸಿಟ್ವೆ ಬಂದರಿನ ಜೊತೆಗೆ ಸಂಪರ್ಕಿಸಲು ಸಾಧ್ಯವಾಗುತ್ತದೆಐಜ್ವಾಲ್-ಸೈಹಾ ರಾಷ್ಟ್ರೀಯ ಹೆದ್ದಾರಿಯನ್ನು ಅಂತಾರಾಷ್ಟ್ರೀಯ ಗಡಿಯ ಕಡೆಗೆ ಜೋರಿನ್ಪುರಿಯಲ್ಲಿ ೯೦ ಕಿಮೀಗಳಷ್ಟು ವಿಸ್ತರಿಸಲು ಭಾರತದ ಕಡೆಯಿಂದ ಕೆಲಸ ನಡೆಯುತ್ತಿದೆಭದ್ರತಾ ಸಂಸ್ಥೆಗಳ ಪ್ರಕಾರ, ಮ್ಯಾನ್ಮಾರಿನ ಈಶಾನ್ಯ  ಕಡೆಯಲ್ಲಿ ಕಳೆದ ವರ್ಷದ ವರೆಗೆ ಸುಮಾರು ೫೦ ಭಯೋತ್ಪಾದಕ ಶಿಬಿರಗಳು ಸಕ್ರಿಯವಾಗಿದ್ದವು. ಇದಕ್ಕೂ ಮುನ್ನ ಫೆಬ್ರುವರಿ೨೨ರಿಂದ ೨೬ರವರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದ ಭಾರತ ಮತ್ತು ಮ್ಯಾನ್ಮಾರ್ ಸೇನಾ ಪಡೆಗಳುಸನ್ ರೈಸ್ ಕಾರ್ಯಾಚರಣೆ ಹೆಸರಿನಲ್ಲಿ ಅರ್ಕನೀಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದವುಮ್ಯಾನ್ಮಾರ್ ಗಡಿಯೊಳಗೆ ಇದ್ದ ಎನ್ಎಸ್ಸಿಎನ್ -ಕೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆ ಯೋಧರು ೨೦೧೫ರಲ್ಲಿ ದಾಳಿ ನಡೆಸಿದ್ದರು. ತನಗೆ ಪೂರ್ವ ಮಾಹಿತಿ ನೀಡದೆ ಏಕಪಕ್ಷೀಯವಾಗಿ ದಾಳಿ ನಡೆಸಿದ್ದಕ್ಕೆ ಮ್ಯಾನ್ಮಾರ್ ಆಕ್ಷೇಪಿಸಿತ್ತು. ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಸೇನಾ ಪಡೆ ಜೊತೆಗೆ ಉಗ್ರರ ನೆಲೆಗಳ ಮೇಲೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ನಿರ್ಧರಿಸಿತ್ತು. ತನ್ನ ಪ್ರಯತ್ನ ಸಫಲಗೊಂಡಿದೆ ಎಂದು ಭಾರತ ಹೇಳಿತು.


2019: ನವದೆಹಲಿ: ಜೂನ್ ೧೭ರ ಸೋಮವಾರ ಆರಂಭವಾಗಲಿರುವ ಸಂಸತ್ತಿನ ಮುಂಗಡಪತ್ರ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಈದಿನ ಸರ್ಕಾರವು ಸರ್ವ ಪಕ್ಷ ಸಭೆ ನಡೆಸಿ ವಿವಿಧ ವಿಷಯಗಳ ಬಗ್ಗೆ ವಿರೋಧ ಪಕ್ಷಗಳ ಜೊತೆ ಚರ್ಚಿಸಿತು. ಸಂಸತ್ತಿನಲ್ಲಿ ಕೃಷಿ ಸಂಕಷ್ಟ, ನಿರುದ್ಯೋಗ ಮತ್ತು ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ಸಭೆಯಲ್ಲಿ ಆಗ್ರಹಿಸಿದವು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲ ಮತ್ತು ಟಿಎಂಸಿ ನಾಯಕ ಡೆರೆಕ್ ಬ್ರಿಯನ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ಪಾಲ್ಗೊಂಡಿದ್ದರು. ಪ್ರಧಾನಿಯವರುಒಂದು ರಾಷ್ಟ್ರ ಒಂದು ಚುನಾವಣೆ ವಿಷಯ, ೨೦೨೨ರಲ್ಲಿ ಭಾರತದ ೭೫ನೇ ಸ್ವಾತಂತ್ರ್ಯ ಉತ್ಸವ ಆಚರಣೆ,   ವರ್ಷ ಮಹಾತ್ಮಾ ಗಾಂಧಿಯವರ ೧೫೦ನೇ ವರ್ಷದ ಜನ್ಮದಿನದ ಆಚರಣೆ ಮತ್ತುಮಹತ್ವಾಕಾಂಕ್ಷೆಯ ಜಿಲ್ಲೆಗಳು ವಿಷಯಗಳ ಬಗ್ಗೆ ಚರ್ಚಿಸಲು ಜೂನ್ ೧೯ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿನಿಧಿಗಳನ್ನು ಹೊಂದಿರುವ ಎಲ್ಲ ಪಕ್ಷಗಳ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ ಎಂದು ಸರ್ವ ಪಕ್ಷ ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಜೂನ್ ೨೦ರಂದು ಸಂಸತ್ ಸದಸ್ಯರ ಸಭೆಯನ್ನೂ ಪ್ರಧಾನಿ ಕರೆದಿದ್ದಾರೆ ಎಂದು ಜೋಶಿ ನುಡಿದರು. ಸಭೆಯ ಬಳಿಕ ವರದಿಗಾರರ ಜೊತೆ ಮಾತನಾಡಿದ ಗುಲಾಂ ನಬಿ ಆಜಾದ್ ಅವರು ಜನರ ಹಿತಕ್ಕೆ ಸಂಬಂಧಿಸಿದ ಮಸೂದೆಗಳಿಗೆ ನಮ್ಮ ವಿರೋಧವಿಲ್ಲ ಎಂದು ಹೇಳಿದರುರೈತರ ಸಂಕಷ್ಟ, ನಿರುದ್ಯೋಗ ಮತ್ತು ಬರಪರಿಸ್ಥಿತಿ ಬಗ್ಗೆ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು. ಪ್ರಸ್ತುತ ರಾಷ್ಟ್ರಪತಿ ಆಳ್ವಿಕೆಯಲ್ಲಿ ಇರುವ ಜಮ್ಮು  ಮತ್ತು ಕಾಶ್ಮೀರದಲ್ಲಿ ಶೀಘ್ರ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಗಳನ್ನು ನಡೆಸಬಹುದಾದರೆ, ವಿಧಾನಸಭಾ ಚುನಾವಣೆಗಳನ್ನು ಏಕೆ ನಡೆಸಲಾಗದು? ಎಂದು ಪ್ರಶ್ನಿಸಿದ ಅವರುರಾಜ್ಯಪಾಲರ ಆಡಳಿತದ ಮೂಲಕ ರಾಜ್ಯವನ್ನು ನಡೆಸಲು ಕೇಂದ್ರವು ಬಯಸುತ್ತಿರುವಂತೆ ಕಾಣುತ್ತದೆ ಎಂದು ಆಪಾದಿಸಿದರು. ಕಾಂಗ್ರೆಸ್ಸಿನ ಅಧೀರ್ ರಂಜನ್ ಚೌಧರಿ ಮತ್ತು ಕೆ. ಸುರೇಶ್ ಅವರು ಕೂಡಾ ಸಭೆಯಲಿ ಹಾಜರಿದ್ದರು. ಟಿಎಂಸಿಯ ಬ್ರಿಯನ್ ಅವರು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳ ಮೀಸಲಾತಿ  ಕೋರಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಅಧಿವೇಶನದಲ್ಲಿ ತತ್ ಕ್ಷಣವೇ ತರಬೇಕು ಎಂದು ಆಗ್ರಹಿಸಿದರು. ಹೊಸದಾಗಿ ರಚನೆಗೊಂಡಿರುವ ೧೭ನೇ ಲೋಕಸಭೆಯು ಜೂನ್ ೧೬ರಿಂದ ಜುಲೈ ೨೬ರವರೆಗೆ ತನ್ನ ಚೊಚ್ಚಲ ಅಧಿವೇಶನವನ್ನು ನಡೆಸಲಿದೆ.  ಇದಕ್ಕೆ ಮುನ್ನ ಸರ್ಕಾರವು ತ್ರಿವಳಿ ತಲಾಖ್ ಮಸೂದೆ ಸೇರಿದಂತೆ ೧೦ ಸುಗ್ರೀವಾಜ್ಞೆಗಳನ್ನು ತುರ್ತಾಗಿ ಅಂಗೀಕರಿಬೇಕಾದ ಅಗತ್ಯವನ್ನು ಸಭೆಗೆ ವಿವರಿಸಿತು ಎಂದು ಮೂಲಗಳು ತಿಳಿಸಿವೆಮುಂಗಡಪತ್ರ ಅಧಿವೇಶನ ಆರಂಭದ ಬಳಿಕ ಸುಗ್ರೀವಾಜ್ಞೆಗಳು ರದ್ದಾಗುವುದರಿಂದ ತುರ್ತಾಗಿ ಅವುಗಳನ್ನು ಅಂಗೀಕರಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿತು ಎಂದು ಸುದ್ದಿ ಮೂಲಗಳು ಹೇಳಿದವು. ಮೋಟಾರು ವಾಹನ ತಿದ್ದುಪಡಿ ಮಸೂದೆ, ಪೌರತ್ವ ತಿದ್ದುಪಡಿ ಮಸೂದೆ,ಕಾರ್ಮಿಕ ಸುಧಾರಣಾ ಮಸೂದೆಗಳು ಪಟ್ಟಿಯಾಗಿರುವ ಮಸೂದೆಗಳಲ್ಲಿ ಸೇರಿವೆಕಾಂಗ್ರೆಸ್ ಪಕ್ಷವು ಇನ್ನೂ ಉಭಯ ಸದನಗಳ ತನ್ನ ನಾಯಕರನ್ನು ಸೂಚಿಸಿಲ್ಲ. ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ನಾಯಕನಾಗಿ ಹೆಸರಿಸುವ ಯತ್ನಗಳು ನಡೆದಿವೆ. ಕಾಂಗ್ರೆಸ್ ಅಧ್ಯಕ್ಷರು ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಪರಾಭವದ ಹಿನ್ನೆಲೆಯಲ್ಲಿ ತಮ್ಮ ಪದತ್ಯಾಗದ ಪಟ್ಟನ್ನು ಸಡಿಲಿಸದೇ ಇರುವ ಹಾಗೂ ಪಕ್ಷವು ಅವರ ನಿರ್ಧಾರವನ್ನು ಅಂಗೀಕರಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ.

2019: ನವದೆಹಲಿ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೆ, ಅವರು ಆಯ್ಕೆ ಮಾಡಿದ ಸ್ಥಳದಲ್ಲಿ ಮಾತುಕತೆ ನಡೆಸಲು ತಾವು ಸಿದ್ಧ ಎಂದು ಸಹೋದ್ಯೋಗಿ ಮೇಲಿನ ಮಾರಕ ಹಲ್ಲೆ ವಿರುದ್ಧ ಪ್ರತಿಭಟಿಸುತ್ತಿದ್ದ ಪಶ್ಚಿಮ ಬಂಗಾಳ ಆಸ್ಪತ್ರೆಗಳ ಮುಷ್ಕರ ನಿರತ ಕಿರಿಯ ವೈದ್ಯರು  ಪ್ರಕಟಿಸಿದರು, ಆದರೆ ಮಾತುಕತೆಯು ಮಾಧ್ಯಮಗಳು ಮತ್ತು  ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟರು.  ‘ಜಾಗದ ಆಯ್ಕೆಯನ್ನು ನಾವು ಮುಖ್ಯಮಂತ್ರಿಯವರಿಗೇ ಬಿಡುತ್ತೇವೆ. ನಾವು ಮಾತುಕತೆಗೆ ಸಿದ್ಧರಿದ್ದೇವೆ. ಮಾತುಕತೆಗೆ ವ್ಯವಸ್ಥೆ ಮಾಡಲಾಗುವುದು ಮತ್ತು ಬ್ಯಾನರ್ಜಿಯವರು ನಮ್ಮ ಬೇಡಿಕೆಗಳನ್ನು ಪರಿಗಣಿಸುವ ಮೂಲಕ ವೈದ್ಯಕೀಯ ಸೇವೆ ಪುನರಾಂಭಕ್ಕೆ ನೆರವಾಗುವರು ಎಂದು ನಾವು ಹಾರೈಸಿದ್ದೇವೆ ಎಂದು ಮೂರು ಗಂಟೆಗಳ ಸಮಾಲೋಚನೆ ಬಳಿಕ ವೈದ್ಯರ ಸರ್ವ ಸದಸ್ಯ ಸಭೆ ಹೇಳಿತುಪ್ರತಿಭಟನೆಯ ಆರನೇ ದಿನ ಬೆಳವಣಿಗೆ ನಡೆದಿದೆ. ಮುಷ್ಕರ ನಿರತ ವೈದ್ಯರು ಮುನ್ನ ತಾವು ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ, ಆದರೆ ಮಾತುಕತೆಯ ಸ್ಥಳವನ್ನು ವೈದ್ಯರ ಆಡಳಿತ ಮಂಡಳಿಯು ನಿರ್ಧರಿಸುತ್ತದೆ ಎಂದು ಹೇಳಿದ್ದರು.  ‘ಮುಖ್ಯಮಂತ್ರಿ ಜೊತೆಗಿನ ಮಾತುಕತೆಯಿಂದ ಬಿಕ್ಕಟ್ಟು ತತ್ ಕ್ಷಣ ಬಗೆಹರಿಯಬೇಕು ಎಂದು ನಾವು ಬಯಸುತ್ತೇವೆ. ಆದರೆ ಮಾತುಕತೆ ಪಾರದರ್ಶಕವಾಗಿರಬೇಕು ಮತ್ತು ಬಾಗಿಲು ಮುಚ್ಚಿದ ಕೊಠಡಿಯ ಒಳಗೆ ಅಲ್ಲ, ಬದಲಿಗೆ ಮಾಧ್ಯಮಗಳ ಮತ್ತು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಬೇಕು ಎಂದು ಅವರು ನುಡಿದರು. ಇದಕ್ಕೆ ಮುನ್ನ ಮುಷ್ಕರ ನಿರತ ವೈದ್ಯರು ಬ್ಯಾನರ್ಜಿಯವರು ಚಳವಳಿಯ ಕೇಂದ್ರವಾದ ಕೋಲ್ಕತ ನಗರದ ಎನ್ಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆಗ್ರಹಿಸಿದ್ದರು. ಹಿಂದಿನ ದಿನ ಆಂತರಿಕ ಸಭೆಯ ಬಳಿಕ ವೈದ್ಯರು ರಾಜ್ಯ ಸಚಿವಾಲಯದಲ್ಲಿ ಬ್ಯಾನರ್ಜಿ ಅವರ ಜೊತೆಗೆ ರಹಸ್ಯ ಸಂಧಾನದ ಆಹ್ವಾನವನ್ನು ತಿರಸ್ಕರಿಸಿದ್ದರು. ಆದರೆ  ಈದಿನ ತಮ್ಮ ಕಠಿಣ ನಿಲುವನ್ನು ಸ್ವಲ್ಪ ಮೆದುಗೊಳಿಸಿದ ವೈದ್ಯರು ಯಾವುದೇ ರೀತಿಯ ಮಾತುಕತೆಗೆ ಸಿದ್ಧ ಆದರೆ ಸ್ಥಳವನ್ನು ಬಳಿಕ ನಿರ್ಧರಿಸಲಾಗುವುದು ಎಂದಿದ್ದರು. ಎನ್ಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತಮ್ಮ ಇಬ್ಬರು ಸಹೋದ್ಯೋಗಿಗಳ ಮೇಲೆ ಜೂನ್ ೧೦ರ ಸೋಮವಾರ ರಾತ್ರಿ ಸಾವನ್ನಪ್ಪಿದ ರೋಗಿಯೊಬ್ಬರ ಕುಟುಂಬ ಸದಸ್ಯರು ನಡೆಸಿದ ಮಾರಣಾಂತಿಕ ಹಲ್ಲೆಯ ಬಳಿಕ ರಾಜ್ಯದ್ಯಂತ ವೈದ್ಯರು ಮುಷ್ಕರಕ್ಕೆ ಇಳಿದಿದ್ದರು. ರಾಜ್ಯದ ಸರ್ಕಾರಿ ಸ್ವಾಮ್ಯದ ಆಸ್ಪತೆಗಳು ಮತ್ತು ಖಾಸಗಿ ಆಸ್ಪತ್ರೆಗಳ ತುರ್ತು ವಾರ್ಡುಗಳು, ಹೊರ ಚಿಕಿತ್ಸೆ ಮತ್ತು ಪ್ಯಾಥೋಲಾಜಿಕಲ್ ಘಟಕಗಳಲ್ಲಿ ಮುಷ್ಕರದಿಂದಾಗಿ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿತ್ತು. ಕಲ್ಕತ್ತ ಹೈಕೋರ್ಟ್ , ಕಿರಿಯ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಬಳಿಕ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತ್ತುಕೆಲಸ ಆರಂಭಿಸುವ ನಿಟ್ಟಿನಲ್ಲಿ ವೈದ್ಯರ ಮನವೊಲಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತುವೈದ್ಯರ ಹೇಳಿಕೆಗೆ ಸರ್ಕಾರದಿಂದ ಸಂಜೆಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಮುಖ್ಯಮಂತ್ರಿಯವರು ಮಾತ್ರವೇ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.  ಮುಖ್ಯಮಂತ್ರಿಯವರು ನೀಡಿದ ಹೇಳಿಕೆಯಲ್ಲಿ ಹಲವಾರು ಲೋಪದೋಷಗಳಿವೆ. ಚಳವಳಿಯ ಹಿಂದಿನ ಉದ್ದೇಶ ಮತ್ತು ಅದಕ್ಕೆ ಸರ್ಕಾರದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅಪಪ್ರಚಾರಗಳಿಗೆ ಕಾರಣವಾಗಿದೆ ಎಂದು ಪತ್ರಿಕಾ ಹೇಳಿಕೆಯನ್ನು ಓದುತ್ತಾ  ಪ್ರತಿಭಟನಕಾರರೊಬ್ಬರು ನುಡಿದರು. ಹಲ್ಲೆಗೆ ಒಳಗಾಗಿದ್ದ ಕಿರಿಯ ವೈದ್ಯ ಪರಿಬಾಹ ಮುಖರ್ಜಿ ಸಾಕಷ್ಟು ಚೇತರಿಸಿದ್ದಾರೆ. ಪೂರ್ತಿ ಸುಧಾರಣೆಗೆ ಇನ್ನಷ್ಟು ಸಮಯ ಬೇಕಾಗಬಹುದು. ಇಂತಹ ಕ್ರೌರ್ಯ ಎಂದಿಗೂ ಯಾವ ವೈದ್ಯರ ಮೇಲೂ ನಡೆಯಬಾರದು ಎಂದು ಆರೋಗ್ಯ ಸೇವಾ ನಿರ್ದೇಶಕ ಪ್ರದೀಪ ಮಿತ್ರ ಹೇಳಿದರುತಮ್ಮ ಸರ್ಕಾರ ಯಾವಾಗ ಬೇಕಿದ್ದರೂ ಚಳವಳಿ ನಿರತ ವೈದ್ಯರ ವಿರುದ್ಧ ಎಸ್ಮಾ ಬಳಸಹುದು. ಹಾಗೆ ಮಾಡುವ ಮೂಲಕ ಯುವ ಜನರ ಭವಿಷ್ಯ ಹಾಳಾಗುವಂತೆ ಮಾಡಲು ತಾವು ಬಯಸುವುದಿಲ್ಲ ಎಂದು ಶನಿವಾರ ಮಮತಾ ಬ್ಯಾನರ್ಜಿ ಹೇಳಿದ್ದರು. ’ವಿವೇಕ ಮೂಡಲಿ. ಕರ್ತವ್ಯಕ್ಕೆ ಹಾಜರಾಗಿ ಮತ್ತು ಸಹಸ್ರಾರು ಮಂದಿಯ ನರಳುವಿಕೆಯನ್ನು ಕೊನೆಗೊಳಿಸಿ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ ಎಂದೂ ತಮ್ಮ ಭೇಟಿಗೆ ನಿಯೋಗ ಕಳುಹಿಸಲು ಚಳವಳಿ ನಿರತರು ನಿರಾಕರಿಸಿದ ಬಳಿಕ ಬ್ಯಾನರ್ಜಿ ಮಾದ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದರು.

2019: ಪಾಟ್ನಾ: ಬಿಹಾರದಲ್ಲಿ ಅತಿಯಾದ ಬಿಸಿಲಿನ ತಾಪ ದಿಂದಾಗಿ ಒಂದೇ ದಿನದಲ್ಲಿ ೪೦ಕ್ಕೂ ಅಧಿಕ ಜನರು ಮೃತರಾದ ದಾರುಣ ಘಟನೆ ಘಟಿಸಿತು.. ಬಿಹಾರದ ಮುಜಾಫರ್ ನಗರದ ಜನರು ಈಗಾಗಲೇ ಮೆದುಳು ಜ್ವರ ಎಂಬ ಮಾರಣಾಂ ತಿಕ ರೋಗವನ್ನು ಎದುರಿಸುತ್ತಿದ್ದು. ಮೆದುಳು ಜ್ವರದಿಂದಾಗಿ ಸತ್ತವರ ಸಂಖ್ಯೆ 80 ಕ್ಕೆ ಏರಿತು. ಬಿಹಾರದ ಔರಂಗಾಬಾದ್, ಗಯಾ ಮತ್ತು ನಾವ್ಡಾ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದ್ದು, ಇಲ್ಲಿನ ಜನರೇ ಹೆಚ್ಚಾಗಿ ಸಾವನ್ನಪ್ಪಿದರು.  ಔರಂಗಾಬಾದ್ ಜಿಲ್ಲೆಯೊಂದರಲ್ಲೇ ಕಳೆದ ಎರಡು ದಿನಗಳಲ್ಲಿ ೨೭ ಜನರು ಅಸುನೀಗಿದ್ದರು.  ಗಯಾ ನಗರದಲ್ಲಿ ೧೩ ಜನರು ಸಾವನ್ನಪ್ಪಿದರು. ನಾವ್ಡಾ ಜಿಲ್ಲೆಯಲ್ಲಿ ೧೨ ಕ್ಕೂ ಅಧಿಕ ಮಂದಿ ಮೃತರಾಗಿದ್ದರು. ಪಾಟ್ನಾ ನಗರದಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ . ಡಿಗ್ರಿ ಸೆಲ್ಸಿಯಸ್ ತಾಪಮಾನ ಅಧಿಕ ವಾಗಿತ್ತು.  ಗಯಾ ಜಿಲ್ಲೆಯಲ್ಲಿ ೪೫. ಡಿಗ್ರಿ ಸೆಲ್ಸಿಯಸ್, ಭಾಗಲ್ಪುರದಲ್ಲಿ ೪೧. ಡಿಗ್ರಿ ಸೆಲ್ಸಿಯಸ್, ಪುರ್ನೆಯಾದಲ್ಲಿ ೩೫. ಡಿಗ್ರಿ ಉಷ್ಣಾಂಶ ದಾಖಲಾಗಿತ್ತು.  ಗರಿಷ್ಠ ತಾಪಮಾನ ಇರುವ ಕಾರಣ ಜೂನ್ ೧೯ ರವರೆಗೆ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಬಿಹಾರ ಸರ್ಕಾರ ತಿಳಿಸಿತು. ಇದುವರೆಗೂ ದಾಖಲಾಗಿರುವ ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. ಹಲವಾರು ಜನರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಸತ್ತಿರುವ ಎಲ್ಲರೂ ಅಧಿಕ ತಾಪಮಾನದ ಜ್ವರದಿಂದ ಬಳಲುತ್ತಿದ್ದರು ಎಂದು ಔರಂಗಾಬಾದ್ ಆಸ್ಪತ್ರೆಯ ವೈದ್ಯ ಡಾ. ಸುರೇಂದ್ರ ಪ್ರಸಾದ್ ಸಿಂಗ್ ತಿಳಿಸಿದರು. ಮೃತರಾದವರಿಗೆ  ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ,  ಮೃತರ ಕುಟುಂಬಗಳಿಗೆ ತಲಾ ೪ ಲಕ್ಷ ರೂ. ಪರಿಹಾರ ಘೋಷಿಸಿದರು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಘಟನೆ ದುರದೃಷ್ಟಕರ ಎಂದು ವಿಷಾದಿಸಿದರು.


2019:  ಮ್ಯಾಂಚೆಸ್ಟರ್: ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ತನ್ನ ಜೈತ್ರಯಾತ್ರೆ ಮುಂದುವರಿಸಿರುವ ಭಾರತ ತಂಡವು ಸತತ ಏಳನೇ ಗೆಲುವು ಬಾರಿಸಿತು. ಐಸಿಸಿ 2019 ಏಕದಿನ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರನ್ ಅಂತರದ ಭರ್ಜರಿ ಗೆಲುವುದಾಖಲಿಸಿತು. ಮೂಲಕ ಪಾಕಿಸ್ತಾನ ಭಾರಿ ಮುಖಭಂಗ ಕ್ಕೊಳಗಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ಗಿಳಿಸಲ್ಪಟ್ಟ ಟೀಮ್ ಇಂಡಿಯಾ, ಉಪನಾಯಕ ರೋಹಿತ್ ಶರ್ಮಾ ಶತಕದ ವೈಭವ (140) ಮತ್ತು ನಾಯಕ ವಿರಾಟ್ ಕೊಹ್ಲಿ (77) ಹಾಗೂ ಕೆಎಲ್ ರಾಹುಲ್ (57) ಆಕರ್ಷಕ ಅರ್ಧಶತಕಗಳ ನೆರವಿನಿಂದ 336 ರನ್ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ ಫಖಾರ್ ಜಮಾನ್ (62) ಹಾಗೂ ಬಾಬರ್ ಅಜಾಮ್ (48) ಜತೆಯಾಟದ ಹೊರತಾಗಿಯೂ ರನ್ ಗಳಸಲಷ್ಟೇ ಶಕ್ತವಾಯಿತು.  ಇದರೊಂದಿಗೆ 27 ವರ್ಷಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಉಳಿಸಿಕೊಂಡರು. ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವುಗಳು: 1992: 43 ರನ್ ಅಂತರದ ಗೆಲುವು, ಸಿಡ್ನಿ.  1996: 39 ರನ್ ಅಂತರದ ಗೆಲುವು, ಬೆಂಗಳೂರು. 1999: 47 ರನ್ ಅಂತರದ ಗೆಲುವು, ಮ್ಯಾಂಚೆಸ್ಟರ್. 2003: 6 ವಿಕೆಟ್ ಅಂತರದ ಗೆಲುವು, ಸೆಂಚುರಿಯನ್ . 2011: 29 ರನ್ ಅಂತರದ ಗೆಲುವು, ಮೊಹಾಲಿ. 2015: 76 ರನ್ ಅಂತರದ ಗೆಲುವು, ಆಡಿಲೇಡ್. 2019: ಡಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ 89 ರನ್ ಅಂತರದ ಗೆಲುವು, ಮ್ಯಾಂಚೆಸ್ಟರ್.
2018: ನವದೆಹಲಿ: ಐಎಎಸ್ ಅಧಿಕಾರಿಗಳು ಆಪ್ ಸರ್ಕಾರದ ಸಚಿವರ ಯಾವುದೇ ಸಭೆಗಳಿಗೂ ಕಳೆದ ೪ ತಿಂಗಳುಗಳಿಂದ ಹಾಜರಾಗುತ್ತಿಲ್ಲ, ಸರ್ಕಾರದ ಆದೇಶಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆಪಾದಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ನಡೆಸುತ್ತಿರುವ ಧರಣಿ ಆರನೇ ದಿನಕ್ಕೆ ಕಾಲಿರಿಸಿತು. ಈ ಮಧ್ಯೆ ಐಎಎಸ್ ಅಧಿಕಾರಿಗಳ ಸಂಘ ತಾವು ಪ್ರತಿದಿನ ಸಾಂಕೇತಿಕ ಪ್ರತಿಭಟನೆಯನ್ನು ಮಾತ್ರವೇ ಮಾಡುತ್ತಿದ್ದೇವೆ ಎಂದು ಪ್ರತಿಪಾದಿಸಿತು.  ಐಎಎಸ್ ಅಧಿಕಾರಿಗಳು ಸರ್ಕಾರದ ಸಭೆಗಳಿಗೆ ಹಾಜರಾಗುತ್ತಿಲ್ಲ ಮತ್ತು ಸಚಿವರ ಆದೇಶಗಳ ಪ್ರಕಾರ ಕೆಲಸ ಮಾಡುತ್ತಿಲ್ಲ ಎಂಬುದಾಗಿ ತಮ್ಮ ವಿರುದ್ಧ ಅರವಿಂದ ಕೇಜ್ರಿವಾಲ್ ಸರ್ಕಾರ ಮಾಡಿದ ಆಪಾದನೆಯನ್ನು ಅಲ್ಲಗಳೆದಿರುವ ಸಂಘ, ’ರಾಜಕೀಯ ನಾಯಕರು ಐಎಎಸ್ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ ಎಂದು ತಪ್ಪು ಹೇಳಿಕೆ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಇದು ಬುಡರಹಿತ ಆಪಾದನೆ. ಎಲ್ಲ ಮುಖ್ಯಸ್ಥರ ಸಭೆಗಳೂ ಸಮರ್ಪಕವಾಗಿ ನಡೆಯುತ್ತಿವೆ ಎಂದು ಹೇಳಿಕೆ ತಿಳಿಸಿತು.  ‘ಅಧಿಕಾರಿಗಳು ಮುಖ್ಯಮಂತ್ರಿಯವರ ನಿವಾಸದಲ್ಲಿ ಮುಖ್ಯ ಕಾರ್‍ಯದರ್ಶಿ ಮೇಲೆ ನಡೆದ ಹಲ್ಲೆಯ ವಿರುದ್ಧ ಊಟದ ವೇಳೆಯಲ್ಲಿ ಐದು ನಿಮಿಷಗಳ ಮೌನ ಪ್ರತಿಭಟನೆಯನ್ನು ಮಾತ್ರವೇ ನಡೆಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಘನತೆ ಮೇಲಿನ ದಾಳಿಗಳ ಬಗ್ಗೆ ಚಿಂತಿತರಾಗಿದ್ದಾರೆ. ಕಾನೂನುಬದ್ಧ ಕರ್ತವ್ಯ ನಿರ್ವಹಣೆ ಮಾಡುತ್ತಿರುವಾಗ ದೈಹಿಕ, ಮೌಖಿಕ ಹಲ್ಲೆಗಳು ನಡೆಯಬಾರದು ಎಂದು ಬಯಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿತು.  ಈ ಮಧ್ಯೆ ಐಎಎಸ್ ಅಧಿಕಾರಿಗಳ ಮುಷ್ಕರ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಚಿವಾಲಯದಲ್ಲಿ ಧರಣಿ ನಡೆಸುತ್ತಿರುವ ಕೇಜ್ರಿವಾಲ್ ಮತ್ತು ಅವರ ಸಂಪುಟದ ಮೂವರು ಸಹೋದ್ಯೋಗಿಗಳ ಪ್ರತಿಭಟನೆ ೬ನೇ ದಿನಕ್ಕೆ ಪ್ರವೇಶಿಸಿತು.  ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಹಾಗೂ ಅಭಿವೃದ್ಧಿ ಸಚಿವ ಗೋಪಾಲ್ ರೈ ಅವರು ಅರವಿಂದ ಕೇಜ್ರಿವಾಲ್ ಜೊತೆಗೆ ಜೂನ್ ೧೧ರ ಸೋಮವಾರ ಸಂಜೆಯಿಂದ ಎಲ್ ಜಿ ಕಚೇರಿಯಲ್ಲಿ ಧರಣಿ ಕುಳಿತರು.  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್ ಐಎಎಸ್ ಅಧಿಕಾರಿಗಳ ಮುಷ್ಕರ ಅಂತ್ಯಗೊಳಿಸಲು ಮಧ್ಯಪ್ರವೇಶ ಮಾಡುವಂತೆ ಆಗ್ರಹಿಸಿದ್ದರು.  ಅಧಿಕಾರಿಗಳು ಸಭೆಗಳಿಗೆ ಹಾಜರಾಗದೇ ಇದ್ದರೆ ನಿಮಗೆ ಕೆಲಸ ಮಾಡಲು ಸಾಧ್ಯವಿದೆಯೇ?’ ಎಂದು ಅವರು ಮೋದಿ ಅವರನ್ನು ಪ್ರಶ್ನಿಸಿದ್ದರು.   ‘ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಕೆಲಸ ಮಾಡಲು ಸಾಧ್ಯ? ಮೋದಿಜಿ ಅವರು ಇಂತಹ ಸ್ಥಿತಿಯಲ್ಲಿ ಒಂದು ದಿನವಾದರೂ ಕೆಲಸ ಮಾಡಬಲ್ಲರೇ? ನಮ್ಮನ್ನು ಟೀಕಿಸುವವರು ಇಂತಹ ಸ್ಥಿತಿಯಲ್ಲಿ ನಾವು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ನಮಗೆ ವಿವರಿಸಲಿ ಎಂದು ಮಾಲಿನ್ಯ ಕುರಿತ ಸಭೆಗೆ ಪರಿಸರ ಕಾರ್‍ಯದರ್ಶಿ ಹಾಜರಾಗಿಲ್ಲ ಎಂಬುದಗಿ ದೆಹಲಿ ಪರಿಸರ ಸಚಿವ ಇಮ್ರಾನ್ ಹುಸೇನ್ ಆಪಾದಿಸಿದ ಬಳಿಕ ಟ್ವೀಟ್ ಮೂಲಕ ಕೇಜ್ರಿವಾಲ್ ಸವಾಲು ಹಾಕಿದ್ದರು.   ನೀತಿ ಆಯೋಗದ ಸಭೆಗೆ ಹಾಜರಾಗಲು ತಮಗೆ ಸಾಧ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಐಎಎಸ್ ಅಧಿಕಾರಿಗಳ ಮುಷ್ಕರ ಮುಕ್ತಾಯ ಮಾಡಿಸಿ ಎಂದು ಕೇಜ್ರಿವಾಲ್  ಪತ್ರದಲ್ಲಿ ಪ್ರಧಾನಿಯನ್ನು ಒತ್ತಾಯಿಸಿದ್ದರು. ಎಲ್ ಜಿ ಸೆಕ್ರೆಟೇರಿಯಟ್ ನಿಂದ ತಮ್ಮನ್ನು ಬಲವಂತವಾಗಿ ಖಾಲಿ ಮಾಡಿಸಿದರೆ, ನೀರು ಕುಡಿಯುವುದನ್ನೂ ನಿಲ್ಲಿಸುತ್ತೇವೆ ಎಂದು ಮನಿಶ್ ಸಿಸೋಡಿಯಾ ಅವರು ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದರು. ಆಪ್ ಸಚಿವರ ಮುಷ್ಕರದ ಪರಿಣಾಮವಾಗಿ ತಮ್ಮ ನಿವಾಸದಿಂದಲೇ ಕಾರ್ಯ ನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಗವರ್ನರ್  ಅವರು ಸಚಿವರ ಆರೋಗ್ಯ ನೋಡಿಕೊಳ್ಳಲು ವೈದ್ಯರ ಮೂರು ತಂಡಗಳನ್ನು ರಚಿಸಿದ್ದರು. ಈ ಮಧ್ಯೆ ಐಎಎಸ್ ಅಧಿಕಾರಿಗಳ ಅನೌಪಚಾರಿಕ ಮುಷ್ಕರ ಕೊನೆಗೊಳಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿದ ಅರ್ಜಿಯ ವಿಚಾರಣೆಯನ್ನು ಜೂನ್ ೧೮ರಂದು ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿತು.  ಅದೇ ದಿನ ಕೇಜ್ರಿವಾಲ್ ಮತ್ತು ಸಚಿವರ ಧರಣಿಯ ವಿರುದ್ಧ ಸಲ್ಲಿಸಲಾದ ಅರ್ಜಿಯೂ ವಿಚಾರಣೆಗೆ ಬರಲಿದೆ.

2018: ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಅಟ್ಟಾರಿ-ವಾಘಾ ಗಡಿಯಲ್ಲಿ ಈದ್ -ಉಲ್- ಫಿತರ್ ಸಂದರ್ಭದಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಸಿಹಿ ಹಂಚಿಕೊಳ್ಳುವ ಸಂಪ್ರದಾಯ ಈ ವರ್ಷ ಹಳಸಿದೆ. ನಿರಂತರ ಕದನವಿರಾಮ ಉಲ್ಲಂಘನೆ ಘಟನೆಗಳ ಹಿನ್ನೆಲೆಯಲ್ಲಿ ಈ ವರ್ಷ ಸಿಹಿ ಹಂಚಿಕೊಳ್ಳುವ ಸಂಭ್ರಮ ಆಚರಿಸದೇ ಇರಲು ಭಾರತದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಮತ್ತು ಪಾಕಿಸ್ತಾನಿ ರೇಂಜರ್ ಗಳು ನಿರ್ಧರಿಸಿದರು. ಕದನ ವಿರಾಮ ಉಲ್ಲಂಘನೆಯ ಇತ್ತೀಚಿನ ಘಟನೆಯಲ್ಲಿ ಮಣಿಪುರದ ೨೧ರ ಹರೆಯದ ರೈಫಲ್ ಮ್ಯಾನ್ ಬಿಕಾಸ್ ಗುರುಂಗ್ ಅವರು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ದಳದ ಮೇಲೆ ಪಾಕಿಸ್ತಾನಿ ಟ್ರೂಪರ್ ಗಳು ಗುಂಡು ಹಾರಿಸಿದ ಪರಿಣಾಮವಾಗಿ ಹುತಾತ್ಮರಾಗಿದ್ದಾರೆ.  ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ಅದೂ, ಈದ್ ಉಲ್ ಫಿತರ್ ಸಂದರ್ಭದಲ್ಲಿ ಅತ್ಯಂತ ಅನೀತಿಯುತವೂ, ವೃತ್ತಿ ಪರತೆಗೆ ವಿರುದ್ಧವೂ ಆಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ಇಲ್ಲಿ ಹೇಳಿದರು. ತೀವ್ರ ಪ್ರಚೋದನೆ ಇದ್ದಾಗಲೂ ಭಾರತೀಯ ಪಡೆಗಳು ಗರಿಷ್ಠ ಸಂಯಮ ಮೆರೆದಿವೆ ಎಂದು ಅವರು ನುಡಿದರು.  ಸಾಂಬಾ ಜಿಲ್ಲೆಯ ರಾಮಗಢ ವಿಭಾಗದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ರೇಂಜರುಗಳು ಜೂನ್ ೧೨ರ ಮಂಗಳವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಒಬ್ಬರು ಸೇರಿದಂತೆ ನಾಲ್ವರು ಬಿಎಸ್ ಎಫ್ ಸಿಬ್ಬಂದಿಯನ್ನು ಕೊಲೆಗೈದ ನಾಲ್ಕು ದಿನಗಳ ಬಳಿಕ ಈದಿನದ ಕದನವಿರಾಮ ಉಲ್ಲಂಘನೆ ಘಟನೆ ಘಟಿಸಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಂಜಾನ್ ಅವಧಿಯಾದ ಮೇ ತಿಂಗಳಲ್ಲಿ ಸೇನಾ ಕಾರ್‍ಯಾಚರಣೆಗಳ ಅಮಾನತು ಘೋಷಣೆ ಮಾಡಿದ್ದರು. ಭದ್ರತಾ ಪಡೆಗಳ ಮೇಲೆ ದಾಳಿ ನಡೆದರೆ ಕಾರ್‍ಯಾಚರಣೆಗಳು ಪುನಾರಂಭಗೊಳ್ಳುವವು ಎಂದು ಅವರು ಸ್ಪಷ್ಟ ಪಡಿಸಿದ್ದರು.
ಶನಿವಾರ ಸೇನಾ ಕಾರ್‍ಯಾಚರಣೆ ಅಮಾನತಿನ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಅದನ್ನು ವಿಸ್ತರಿಸುವ ಬಗೆಗೆ ಕೇಂದ್ರ ಇನ್ನೂ ನಿರ್ಧಾರ ಕೈಗೊಂಡಿಲ್ಲ.  ರಂಜಾನ್ ಕದನವಿರಾಮವನ್ನು ವಿಸ್ತರಿಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಅವರು ಈದಿನ ಇಲ್ಲಿ ಹೇಳಿದರು.  ಸೇನಾ ಕಾರ್‍ಯಾಚರಣೆ ಅಮಾನತುಗೊಳಿಸುವ ಕೇಂದ್ರದ ನಿರ್ಧಾರವನ್ನು ಕಾಶ್ಮೀರದ ಜನ ಸ್ವಾಗತಿಸಿದ್ದರು. ’ಜಮ್ಮು ಮತ್ತು ಕಾಶ್ಮೀರದಲ್ಲಿ (ರಂಜಾನ್ ಅವಧಿಯಲ್ಲಿ) ಸೇನಾ ಕಾರ್ಯಾಚರಣೆ ಅಮಾನತು ಮಾಡಿದ ಬಳಿಕ ನಮಗೆ ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ. ಮುಂದಿನ ಯಾವುದೇ ಕ್ರಮವನ್ನು ಅವರ (ಕಾಶ್ಮೀರಿಗಳ) ಭಾವನೆ/ ಅಭ್ಯುದಯವನ್ನು ಆಧರಿಸಿಯೇ ಕೈಗೊಳ್ಳಲಾಗುವುದು ಎಂದು ಅಹಿರ್ ನುಡಿದರು.  ಈದುಲ್ ಫಿತರ್ ಆಚರಣೆಯ ವೇಳೆಗೆ ಸರಿಯಾಗಿ ಜೂನ್ ೧೪ರಂದು ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರ ಹತ್ಯೆಯ ಘಟನೆ, ಹಾಗೂ ಯೋಧ ಔರಂಗಜೇಬ್ ಅಪಹರಣ ಹಾಗೂ ಹತ್ಯೆಯ ಘಟನೆಗಳು ಘಟಿಸಿವೆ.  ಹಿರಿಯ ಪತ್ರಕರ್ತನ ಕೊಲೆಯ ಬಗ್ಗೆ ಪ್ರಸ್ತಾಪಿಸಿದ ಅಹಿರ್ ಅವರು ’ನಾವು ಘಟನೆಯನ್ನು ಖಂಡಿಸುತ್ತೇವೆ ಮತ್ತು ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ’ನಮ್ಮ ಸರ್ಕಾರಕ್ಕೆ ಕಾಶ್ಮೀರ ದೊಡ್ಡ ವಿಷಯ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಕಣಿವೆಯಲ್ಲಿ ಶಾಂತಿ ಖಚಿತತೆಗಾಗಿ ಎಲ್ಲ ಕ್ರಮ ಕೈಗೊಳ್ಳುತ್ತಾರೆ. ಪಾಕಿಸ್ತಾನವು ನಿರಂತರವಾಗಿ ಕಾಶ್ಮೀರ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿರುವುದು ಅತ್ಯ,ಂತ ದುರದೃಷ್ಟಕರ ಎಂದುಜ ಅವರು ನುಡಿದರು.  ಇದಕ್ಕೆ ಮುನ್ನ ೬೯ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೂಡಾ ಅಟ್ಟಾರಿ -ವಾಘಾ ಗಡಿಯಲ್ಲಿ ಪಾಕಿಸ್ತಾನಿ ರೇಂಜರುಗಳ ಜೊತೆ ಸಿಹಿ ಮತ್ತು ಶುಭಾಶಯ ವಿನಿಮಯ ಮಾಡಿಕೊಳ್ಳಲು ಬಿಎಸ್ ಎಫ್ ನಿರಾಕರಿಸಿತ್ತು.  ದೀಪಾವಳಿ, ಈದ್ ನಂತಹ ಪ್ರಮುಖ ಧಾರ್ಮಿಕ ಉತ್ಸವ ಹಾಗೂ ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯ ದಿನದಂತಹ ಪ್ರಮುಖ ರಾಷ್ಟ್ರೀಯ ದಿನಗಳಂದು ಉಭಯ ರಾಷ್ಟ್ರಗಳ ಗಡಿಯಲ್ಲಿನ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವ ಪರಂಪರೆ ದೀರ್ಘಕಾಲದಿಂದ ನಡೆಯುತ್ತಾ ಬಂದಿತ್ತು.
 
2018: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಈದ್ ಉತ್ಸವ ಆಚರಣೆ ಹಾಗೂ ಪ್ರಾರ್ಥನೆ ಬಹುತೇಕ ಶಾಂತಿಯುತವಾಗಿದ್ದರೂ, ಶ್ರೀನಗರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ಮಧ್ಯೆ ಹಲವೆಡೆ ಘರ್ಷಣೆಗಳು ಸಂಭವಿಸಿದ್ದು, ಗ್ರೆನೇಡ್ ಸ್ಫೋಟಕ್ಕೆ ಒಬ್ಬ ವ್ಯಕ್ತಿ ಬಲಿಯಾದ. ಪ್ರತ್ಯೇಕ ಘಟನೆಯೊಂದರಲ್ಲಿ ೨೧ರ ಹರೆಯದ ಸೇನಾಯೋಧ ಬಿಕಾಸ್ ಗುರುಂಗ್, ಪಾಕಿಸ್ತಾನಿ ಪಡೆಗಳು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ದಳದ ಮೇಲೆ ಗುಂಡು ಹಾರಿಸಿದಾಗ ಹುತಾತ್ಮರಾಗಿರುವುದಾಗಿ ಸೇನಾ ಮೂಲಗಳು ಹೇಳಿದವು. ನಗರದ ಹೊರವಲಯದ ಲಸ್ಜಾನಿನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದು, ಸಿಆರ್ ಪಿಎಫ್ ಯೋಧ ದಿನೇಶ ಪಾಸ್ವಾನ್ ಗಾಯಗೊಂಡಿದ್ದು ಅವರನ್ನು ಶ್ರೀನಗರದ ಬಾದಾಮಿ ಬಾಗ್ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.  ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬ್ರಕ್ಪೋರಾದಲ್ಲಿ ಘರ್ಷಣೆ ವೇಳೆಯಲ್ಲಿ ಗ್ರೆನೇಡ್ ಸ್ಫೋಟಗೊಂಡ ಪರಿಣಾಮವಾಗಿ ಪ್ರತಿಭಟನಕಾರನೊಬ್ಬ ಅಸು ನೀಗಿದ್ದಾನೆ. ಕೈಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಶೆರಾಜ್ ಅಹಮದ್ ಎಂಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು. ಸ್ಫೋಟದಿಂದ ಅಹ್ಮದನ ಬಲಗೈ ತೀವ್ರವಾಗಿ ಹಾನಿಗೊಂಡಿದೆ ಎಂದು ವಕ್ತಾರರು ನುಡಿದರು. ಶ್ರೀನಗರದ ಸಫಾಕಾದಲ್ ಪ್ರದೇಶದಲ್ಲಿ ಈದ್ ಪ್ರಾರ್ಥನೆಯ ಬಳಿಕ ಸಂಭವಿಸಿದ ಘರ್ಷಣೆಗಳಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಉತ್ತರ ಕಾಶ್ಮೀರದ ಸೊಪೋರ್ ಮತ್ತು ಕುಪ್ವಾರ ಪ್ರದೇಶಗಳಲ್ಲಿ ಕಾನೂನು ಪಾಲನಾ ಸಿಬ್ಬಂದಿ ಮತ್ತು ಪ್ರತಿಭಟನಕಾರರ ಮಧ್ಯೆ ಘರ್ಷಣೆಗಳು ಸಂಭವಿಸಿದವು , ಕಣಿವೆಯ ಇತರ ಭಾಗಗಳಲ್ಲಿ ಈವರೆಗೂ ಪರಿಸ್ಥಿತಿ ಶಾಂತವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.  ಸಂಭ್ರಮದ ಈದ್: ಕಾಶ್ಮೀರ ಕಣಿವೆಯಾದ್ಯಂತ ಮುಸ್ಲಿಮರು ಈದ್ಗಾ ಮೈದಾನ ಮತ್ತು ಮಸೀದಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆ ನೆರವೇರಿಸುವ ಮೂಲಕ ಸಂಭ್ರಮದೊಂದಿಗೆ ಈದುಲ್ ಫಿತರ್ ಆಚರಿಸಿದರು.  ಹಜರತ್ ಬಾಲ್ ಪ್ರಾರ್ಥನಾ ಮಂದಿರದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಹಳೆ ನಗರದ ಈದ್ಗಾದಲ್ಲಿ ಕೂಡಾ ಭಾರೀಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.  ನಗರದ ಹೃದಯ ಭಾಗದಲ್ಲಿನ ಸೋನಾವರ್ ಮತ್ತು ಸೌರಾ ಪ್ರಾರ್ಥನಾ ಮಂದಿರಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದರು. ಕಾಶ್ಮೀರ ಕಣಿವೆಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಇದೇ ರೀತಿ ಮುಸ್ಲಿಮ್ ಬಾಂಧವರ ದೊಡ್ಡ ಸಮೂಹಗಳು ಪ್ರಾರ್ಥನೆ ನೆರವೇರಿಸಿದವು ಎಂದು ವರದಿಗಳು ಹೇಳಿದವು.

2018: ಬೀಜಿಂಗ್: ಚೀನಾದ ೫೦೦೦ ಕೋಟಿ ಅಮೆರಿಕನ್ ಡಾಲರ್ ಡಾಲರ್ ಮೌಲ್ಯದ ಉತ್ಪನ್ನಗಳ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇಕಡಾ ೨೫ರಷ್ಟು ಸುಂಕ ವಿಧಿಸಿದ್ದರ ವಿರುದ್ಧ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಚೀನಾ ಅಮೆರಿಕದ ಅಷ್ಟೇ ಮೌಲ್ಯದ (೫೦೦೦ ಕೋಟಿ ಡಾಲರ್) ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿತು. ಇದರೊಂದಿಗೆ ವಿಶ್ವದ ಎರಡು ಬೃಹತ್ ರಾಷ್ಟ್ರಗಳ ಮಧ್ಯೆ ಪೂರ್ಣ ಪ್ರಮಾಣದ ’ವಾಣಿಜ್ಯ ಸಮರ ಆರಂಭಗೊಂಡಿತು. ಚೀನಾವು ಬೌದ್ಧಿಕ ಆಸ್ತಿ ಕಳವು ಮತ್ತು ಅಕ್ರಮ ವ್ಯಾಪಾರ ವ್ಯವಹಾರದಲ್ಲಿ ನಿರತವಾಗಿದೆ ಎಂದು ಹಿಂದಿನ ದಿನ ಆಪಾದಿಸಿದ್ದ ಟ್ರಂಪ್ ಅವರು ಚೀನಾದ ೫೦೦೦ ಕೋಟಿ (೫೦ ಬಿಲಿಯನ್) ಅಮೆರಿಕನ್ ಡಾಲರ್ ಮೌಲ್ಯದ ಉತ್ಪನ್ನಗಳ ಮೇಲೆ ಶೇಕಡಾ ೨೫ರಷ್ಟು ಸುಂಕವನ್ನು ಘೋಷಿಸಿದ್ದರು.  ಟ್ರಂಪ್ ಕ್ರಮಕ್ಕೆ ಸೇಡಿನ ಕ್ರಮವಾಗಿ ಅಮೆರಿಕದ ೫೦೦೦ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ೬೫೯ ಉತ್ಪನ್ನ ಐಟಂಗಳ ಮೇಲೆ ಶೇಕಡಾ ೨೫ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಚೀನೀ ಸರ್ಕಾರ ತೀರ್ಮಾನಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.  ಯಾವ ಯಾವ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂಬುದಾಗಿ ಸ್ಪಷ್ಟ ಪಡಿಸಿ, ಅಮೆರಿಕದ ಆ ಉತ್ಪನ್ನಗಳ ಪಟ್ಟಿಯನ್ನು ಕೂಡಾ ಸರ್ಕಾರ ಪ್ರಕಟಿಸಿದೆ ಎಂದು ವರದಿ ಹೇಳಿತು. ಕೃಷಿ ಮತ್ತು ಜಲಚರ ಉತ್ಪನ್ನಗಳು ಹಾಗೂ ವಾಹನಗಳು: ಕೃಷಿ, ಜಲಚರ ಉತ್ಪನ್ನಗಳು ಮತ್ತು ವಾಹನಗಳು ಸೇರಿದಂತೆ ೩೪೦೦ ಕೋಟಿ (೩೪ ಬಿಲಿಯನ್) ಅಮೆರಿಕನ್ ಡಾಲರ್ ಮೌಲ್ಯದ ೫೪೫ ಉತ್ಪನ್ನಗಳ ಮೇಲಿನ ಹೆಚ್ಚುವರಿ ಸುಂಕ ೨೦೧೮ರ ಜುಲೈ ೬ರಿಂದ ಜಾರಿಗೆ ಬರುವುದು ಎಂದು ಚೀನಾದ ಕಸ್ಸಮ್ಸ್ ಟಾರಿಫ್ ಕಮೀಷನ್ ಪ್ರಕಟಣೆ ತಿಳಿಸಿತು. ರಾಸಾಯನಿಕ ಉತ್ಪನ್ನಗಳು, ವೈದ್ಯಕೀಯ ಉಪಕರಣಗಳು ಮತ್ತು ಇಂಧನ ಉತ್ಪನ್ನಗಳು ಸೇರಿದಂತೆ ಉಳಿದ ೧೧೪ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಸುಂಕಗಳ ಜಾರಿ ದಿನಾಂಕವನ್ನು ತಡವಾಗಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿತು. ಚೀನಾದ ವಿದೇಶೀ ವ್ಯಾಪಾರ ಕಾನೂನು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಆಮದು ಮತ್ತು ರಫ್ತು ನಿಯಮಾವಳಿಗಳು ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಮೂಲಭೂತ ತತ್ವಗಳಿಗೆ ಅನುಗುಣವಾಗಿ ಹೆಚ್ಚುವರಿ ಸುಂಕ ಹೇರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಪ್ರಕಟಣೆ ಹೇಳಿತು.  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ೫೦೦೦ ಅಮೆರಿಕನ್ ಡಾಲರ್ ಮೌಲ್ಯದ ಆಮದು ಉತ್ಪನ್ನಗಳ ಮೇಲೆ ಶೇಕಡಾ ೨೫ರಷ್ಟು ಹೆಚ್ಚುವರಿ ಸುಂಕ ಪ್ರಕಟಿಸಿದ್ದರು.  ೩೪೦೦ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕೆಲವು ಚೀನೀ ಉತ್ಪನ್ನಗಳ ಮೇಲೆ ಜುಲೈ ೬ರಿಂದ ಹೆಚ್ಚುವರಿ ಸುಂಕ ವಿಧಿಸಲಾಗುವುದು . ಉಳಿದ ೧೬೦೦ ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಚೀನೀ ಉತ್ಪನ್ನಗಳ ಮೇಲಿನ ಸುಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ಅಮೆರಿಕ ಹೇಳಿತ್ತು.  ಅಮೆರಿಕದ ಕ್ರಮವು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯೂ ಟಿ ಒ) ಸಂಬಂಧಿತ ನಿಯಮಗಳನ್ನು ಉಲ್ಲಂಘಿಸುತ್ತದೆ ಮತ್ತು ಈಗಾಗಲೇ ಮಾಡಿಕೊಳ್ಳಲಾಗಿರುವ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಕುರಿತ ಸಹಮತಕ್ಕೆ ವಿರುದ್ಧವಾಗಿದೆ. ಇದು ಚೀನಾದ ಶಾಸನಬದ್ಧ ಹಕ್ಕುಗಳು ಮತ್ತು ಬಾಧ್ಯತೆಗಳಿಗೆ ಗಂಭೀರವಾದ ಧಕ್ಕೆ ಉಂಟು ಮಾಡುತ್ತದೆ ಮತ್ತು ಚೀನಾದ ಜನರ ಹಿತಾಸಕ್ತಿಗಳನ್ನು ಗೌಣಗೊಳಿಸುತ್ತದೆ. ಚೀನಾವು ಇದನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಆಯೋಗದ ಹೇಳಿಕೆ ತಿಳಿಸಿತು.

2018: ಲಂಡನ್:  ಇಂಗ್ಲೆಂಡಿನ ವಿಶ್ವ ವಿದ್ಯಾಲಯಗಳನ್ನು ಸೇರಲು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಯಮಾವಳಿಗಳು ಅನ್ವಯವಾಗುವ ೨೫ ರಾಷ್ಟ್ರಗಳ ನೂತನ ಪಟ್ಟಿಯಿಂದ ಭಾರತದ ವಿದ್ಯಾರ್ಥಿಗಳನ್ನು ಹೊರಗಿಡಲಾಗಿದ್ದು, ಇಂಗ್ಲೆಂಡ್ ಸರ್ಕಾರವು ಭಾರತಕ್ಕೆ ತೀವ್ರ ಆಘಾತವನ್ನು ಉಂಟು ಮಾಡಿತು.  ಈ ಪಟ್ಟಿಯಲ್ಲಿನ ರಾಷ್ಟ್ರಗಳನ್ನು ಕಡಿಮೆ ಅಪಾಯದ ರಾಷ್ಟ್ರಗಳು ಎಂಬುದಾಗಿ ಇಂಗ್ಲೆಂಡ್ ಗುರುತಿಸಿದೆ.  ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ತನ್ನ ವಲಸೆ ನೀತಿಯಲ್ಲಿನ ಬದಲಾವಣೆಗಳನ್ನು ಇಂಗ್ಲೆಂಡಿನ ಗೃಹ ಇಲಾಖೆಯು ಮಂಡಿಸಿತು.  ಈ ಬದಲಾವಣೆಗಳ ಪ್ರಕಾರ ಸುಮಾರು ೨೫ ರಾಷ್ಟ್ರಗಳ ಸಾಗರದಾಚೆಯ ವಿದ್ಯಾರ್ಥಿಗಳನ್ನು ಟಯರ್ -೪ ವರ್ಗಕ್ಕೆ ಸೇರಿಸಿ ಅವರಿಗೆ ನಿಯಮಾವಳಿಗಳನ್ನು ಸರಳಗೊಳಿಸಲಾಯಿತು. ಇಂಗ್ಲೆಂಡ್ ತಯಾರಿಸಿರುವ ರಾಷ್ಟ್ರಗಳ ಈ ಪಟ್ಟಿಯಲ್ಲಿ ಅಮೆರಿಕ, ಕೆನಡಾ ಮತ್ತು ನ್ಯೂಜಿಲೆಂಡ್ ಈಗಾಗಲೇ ಸ್ಥಾನ ಪಡೆದಿವೆ. ಚೀನಾ, ಬಹರೈನ್ ಮತ್ತು ಸರ್ಬಿಯಾದಂತಹ ಇತರ ಕೆಲವು ರಾಷ್ಟ್ರಗಳನ್ನು ಪಟ್ಟಿಗೆ ಹೊಸದಾಗಿ ಸೇರಿಸಲಾಗಿದ್ದು ಅಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ, ಆರ್ಥಿಕ ಮತ್ತು ಇಂಗ್ಲಿಷ್ ಭಾಷಾ ಕೌಶಲಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪರಿಶೀಲನೆಗಳಿಗೆ ಒಳಪಡಬೇಕಾಗಿಲ್ಲ.  ಜುಲೈ ೬ರಿಂದ ಜಾರಿಗೆ ಬರಲಿರುವ ಈ ಬದಲಾವಣೆಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಂಗ್ಲೆಂಡಿನಲ್ಲಿ ಅಧ್ಯಯನಕ್ಕ ಬರುವುದನ್ನು ಸುಲಭಗೊಳಿಸುವ ಉದ್ದೇಶವನ್ನು ಹೊಂದಿದೆ.

ಆದರೆ ಹೊಸ ವಿಸ್ತರಿತ ಪಟ್ಟಿಯಿಂದ ಭಾರತವನ್ನು ಕೈಬಿಡಲಾಗಿದ್ದು, ಇಂತಹ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳು ತೀವ್ರ ತಪಾಸಣೆಗಳಿಗೆ ಒಳಗಾಗಬೇಕಾಗುತ್ತದೆ ಮತ್ತು ದಾಖಲೆಗಳನ್ನು ಒದಗಿಸಬೇಕಾಗುತ್ತದೆ.  ಇಂಗ್ಲೆಂಡಿನ ಅಂತಾರಾಷ್ಟ್ರೀಯ ವಿದ್ಯಾರ್ಥಿ ವ್ಯವಹರಗಳ ಮಂಡಳಿಯ (ಯುಕೆಸಿಐಎಸ್ ಎ) ಅಧ್ಯಕ್ಷ ಹಾಗೂ ಭಾರತೀಯ ಮೂಲದ ಉದ್ಯಮಿ ಲಾರ್ಡ್ ಕರಣ್ ಬಿಲಿಮೋರಿಯಾ ಅವರು ಇಂಗ್ಲೆಂಡ್ ಸರ್ಕಾರದ ಈ ಕ್ರಮವನ್ನು ಭಾರತಕ್ಕೆ ಮಾಡಿರುವ ಅವಮಾನ ಮತ್ತು ಬ್ರಿಟನ್ನಿನ ಆರ್ಥಿಕ ಅನಕ್ಷರತೆ ಮತ್ತು ವಲಸೆ ವಿರೋಧಿ ದೋರಣೆಗೆ ಇನ್ನೊಂದು ಉದಾಹರಣೆ ಎಂದು ಟೀಕಿಸಿದರು.   ‘ನಾನು ಇದನ್ನು ಭಾರತದ ದವಡೆ ಮೇಲಿನ ಇನ್ನೊಂದು ಪೆಟ್ಟು ಎಂದು ಭಾವಿಸುತ್ತೇನೆ. ಟಯರ್ ೪ ಸವಲತ್ತುಗಳಿಂದ ಭಾರತವನ್ನು ಹೊರತುಪಡಿಸುವ ಈ ಕ್ರಮ ಭಾರತಕ್ಕೆ ಸಂಪೂರ್ಣ ತಪ್ಪು ಸಂದೇಶವನ್ನು ರವಾನಿಸುತ್ತದೆ. ಸರ್ಕಾರ ತಪ್ಪೆಸಗಿದೆ ಎಂದು ಬಿಲಿಮೋರಿಯಾ ಹೇಳಿದರು.  ಇದೇ ವೇಳೆಗೆ ಇಂಗ್ಲೆಂಡಿನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್ ಅವರು ಮಂಡಿಸಿದ ಒಟ್ಟಾರೆ ವೀಸಾ ಸಡಿಲಿಕೆ ಕ್ರಮಗಳನ್ನು ಅವರು ಸ್ವಾಗತಿಸಿದರು. ಕೋಬ್ರಾ ಬೀಯರ್ ಸ್ಥಾಪಕ ಹಾಗೂ ಇಂಗ್ಲೆಂಡ್ ಭಾರತ ವಾಣಿಜ್ಯ ಮಂಡಳಿಯ (ಯುಕೆಐಬಿಸಿ) ಸ್ಥಾಪಕ ಅಧ್ಯಕ್ಷರೂ ಆಗಿರುವ ಬಿಲಿಮೋರಿಯಾ ಅವರು ’ಬ್ರೆಕ್ಸಿಟ್ ಬಳಿಕ ಭಾರತದ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡುವ ಬಗ್ಗೆ ಮಾತನಾಡುತ್ತಿರುವ ವೇಳೆಯಲ್ಲೇ ಬ್ರಿಟನ್ ಇಂತಹ ಕ್ರಮ ಪ್ರಕಟಿಸಿರುವುದು ಸಂಪೂರ್ಣವಾಗಿ ಅದರ ಬೂಟಾಟಕೆ ವರ್ತನೆಯನ್ನು ತೋರಿಸಿದೆ ಎಂದೂ ಖಂಡಿಸಿದರು.  ಭಾರತವು ಸದಾಕಾಲಕ್ಕೂ ಬ್ರಿಟನ್ನಿನ ನಿಕಟ ಮಿತ್ರರಾಷ್ಟ್ರವಾಗಿದ್ದು, ಜಾಗತಿಕ ಆರ್ಥಿಕ ಸೂಪರ್ ಪವರ್ ಆಗಿ ಉದಯಿಸುತ್ತಿರುವ ರಾಷ್ಟ್ರ. ಭಾರತವನ್ನು ಈಪಟ್ಟಿಯಿಂದ ಹೊರಗಿಟ್ಟಿರುವುದು ದೂರದೃಷ್ಟಿಯ ಕ್ರಮವಲ್ಲ ಮತ್ತು ಉಭಯ ರಾಷ್ಟ್ರಗಳ ನಡುವಣ ವಿಶೇಷ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುವಂತಹುದು ಎಂದೂ ಅವರು ಹೇಳಿದರು.  ಇಂಗ್ಲೆಂಡಿನ ದಿ ನ್ಯಾಷನಲ್ ಇಂಡಿಯನ್ ಸ್ಟೂಡೆಂಟ್ಸ್ ಅಂಡ್ ಅಲುಮಿನಿ ಯೂನಿಯನ್ (ಎನ್ ಐಎಸ್ ಎಯು) ಕೂಡಾ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿರುವ ಬಗ್ಗೆ ಭ್ರಮ ನಿರಸನ ವ್ಯಕ್ತ ಪಡಿಸಿತು.  ಈ ಕ್ರಮವು ಭಾರತೀಯ ವಿದ್ಯಾರ್ಥಿಗಳನ್ನು ’ಅಪಾಯಕಾರಿಗಳು ವರ್ಗಕ್ಕೆ ಸೇರಿಸಿದೆ ಎಂದು ಅದು ಹೇಳಿತು. ಭಾರತದ ವಿದ್ಯಾರ್ಥಿಗಳನ್ನು ಚೀನಾ ಅಥವಾ ಪಟ್ಟಿಯಲ್ಲಿನ ಇತರ ರಾಷ್ಟ್ರಗಳ ಪ್ರಜೆಗಳಿಗಿಂತ ಭಿನ್ನವಾಗಿ ನೋಡುವುದು ಅನ್ಯಾಯ ಎಂದು ವಿದ್ಯಾರ್ಥಿ ಯೂನಿಯನ್ ಹೇಳಿತು. ಭಾರತೀಯ ವಿದ್ಯಾರ್ಥಿಗಳ ಅರ್ಜಿಯ ಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವನ್ನೂ ಇಂದಿನ ಪ್ರಕಟಣೆ ಮಾಡಿಲ್ಲ. ಆದರೆ ಅದು ಭಾರತೀಯ ವಿದ್ಯಾರ್ಥಿಗಳಿಗೆ ನೀಡುವ ಸಂದೇಶವು ನಮ್ಮನ್ನು ಚಿಂತಿತರನ್ನಾಗಿ ಮಾಡಿದೆ. ಇನ್ನೊಂದು ಪ್ರಶ್ನೆ ಏನೆಂದರೆ ಚೀನಾಕ್ಕೆ ಹೆಚ್ಚು ಅನುಕೂಲಗಳು ಪ್ರಾಪ್ತವಾದರೆ ಭಾರತದ ವಿದ್ಯಾರ್ಥಿಗಳು ಕ್ಲಿಷ್ಟ ಪ್ರಕ್ರಿಯೆಯನ್ನು ಎದುರಿಸಬೇಕಾಗುವುದಿಲ್ಲವೇ ಎಂದು ಎನ್ ಐ ಎಸ್ ಎಯು ಯುಕೆ ಅಧ್ಯಕ್ಷ ಸನಮ್ ಆರೋರಾ ಪ್ರಶ್ನಿಸಿದರು.


2017: ಮುಂಬೈಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಹಾಗೂ, ಸ್ಫೋಟ ನಡೆಸಿದ್ದ ಮುಸ್ತಫಾ ದೊಸ್ಸಾ ಮತ್ತು ಆತನ ಸಹೋದರ ಮೊಹಮ್ಮದ್ ದೋಸಾ ಹಾಗೂ ಅಬು ಸಲೇಂ ಸೇರಿದಂತೆ 6 ಆರೋಪಿಗಳು ತಪ್ಪಿತಸ್ಥರು ಎಂದು ಮುಂಬೈಯ ವಿಶೇಷ  ಟಾಡಾ ನ್ಯಾಯಾಲಯ ತೀರ್ಪು ನೀಡಿತು. 1993 ಮಾರ್ಚ್ 12ರಂದು ನಡೆದ ಸರಣಿ ಸ್ಫೋಟದಲ್ಲಿ 257 ಜನರು ಮೃತರಾಗಿ, 715 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. 27 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ  ಹಾನಿಯಾಗಿತ್ತು. ಸ್ಫೋಟ ಪ್ರಕರಣ ಪ್ರಮುಖ ಆರೋಪಿಗಳಾದ ಮುಸ್ತಫಾ ದೊಸ್ಸಾ, ಮೊಹಮ್ಮದ್ ದೊಸ್ಸಾ, ಮೊಹಮ್ಮದ್ ತಾಹಿರ್ ತಪ್ಪಿತಸ್ಥರು ಎಂದು ಮುಂಬೈನ ಸೆಷನ್ಸ್ ನ್ಯಾಯಾಲಯ ಹೇಳಿತು. ಸ್ಫೋಟಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಸಹಕರಿಸಿದ್ದ ಫಿರೋಜ್ ರಶೀದ್ ಖಾನ್ ಸಹ ಅಪರಾಧಿ ಎಂದು ನ್ಯಾಯಾಲಯ ಹೇಳಿತು. ಪ್ರಕರಣದಲ್ಲಿ ಅಬು ಸಲೇಂ ಕೂಡ ಭಾಗಿಯಾಗಿದ್ದು, 2005ರಲ್ಲಿ ಆವನನ್ನು ಪೋರ್ಚುಗಲ್ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೊಬ್ಬ    ಆರೋಪಿ ಮುಸ್ತಫಾ ದೊಸ್ಸಾನನ್ನು ಅರಬ್ಸಂಯುಕ್ತ ರಾಷ್ಟ್ರ(ಯುಎಇ)ದಿಂದ ಬಂಧಿಸಿ ಕರೆತರಲಾಗಿತ್ತು. ಇನ್ನೊಬ್ಬ ಆರೋಪಿ ಅಬ್ದುಲ್ ಖಯ್ಯೂಮ್ನನನು ನ್ಯಾಯಾಲಯ ಎಲ್ಲ ಆರೋಪಗಳಿಂದ ಮುಕ್ತಗೊಳಿಸಿ ವೈಯಕ್ತಿಕ ಬಾಂಡಿನಲ್ಲಿ ಬಿಡುಗಡೆ ಮಾಡಲು ಆದೇಶ  ನೀಡಿತು
2009: ಪಾಕ್ ನೆಲದಿಂದ ಭಾರತದ ಮೇಲೆ ನಡೆಯುವ ಭಯೋತ್ಪಾದನಾ ಕೃತ್ಯಗಳಿಗೆ ತಡೆಯೊಡ್ಡುವಂತೆ ಪ್ರಧಾನಿ ಮನಮೋಹನ್‌ಸಿಂಗ್ ಆ ದೇಶದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರಿಗೆ ರಷ್ಯಾದ ಯೆಕಾಟರಿನ್‌ಬರ್ಗ್‌ನಲ್ಲಿ ಕಟುವಾಗಿ ಹೇಳಿದರು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಜರ್ದಾರಿ ಅವರೊಂದಿಗೆ 40 ನಿಮಿಷಗಳ ಕಾಲ ನಡೆದ ಮುಖಾಮುಖಿ ಮಾತುಕತೆಯಲ್ಲಿ ಪ್ರಧಾನಿ ಈ ಸಂದೇಶ ನೀಡಿದರು. ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ನಂತರ ಇದೇ ಮೊದಲ ಬಾರಿ ನೆರೆಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದರಿಂದ ಈ ಭೇಟಿ ಭಾರಿ ಮಹತ್ವ ಪಡೆಯಿತು.

2009: ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಅಬು ಸಲೇಂ ವಿರುದ್ಧ ಭೋಪಾಲ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು.

2009: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ನಂತರ ತಮ್ಮನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಿದ್ದರ ಕ್ರಮಬದ್ಧತೆಯನ್ನು ಹಲವು ಹಿರಿಯ ನಾಯಕರು ಪ್ರಶ್ನಿಸಿದ ಬೆನ್ನಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅರುಣ್ ಜೇಟ್ಲಿ ರಾಜೀನಾಮೆ ಸಲ್ಲಿಸಿದರು. ತಮ್ಮನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ ನೇಮಿಸಿರುವ ಹಿನ್ನೆಲೆಯಲ್ಲಿ 'ಒಬ್ಬರಿಗೆ ಒಂದು ಹುದ್ದೆ' ನಿಯಮದ ಅನ್ವಯ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಜೇಟ್ಲಿ ಪತ್ರದಲ್ಲಿ ಸ್ಪಷ್ಟಪಡಿಸಿದರು.

2009: ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಕರ್ನಾಟಕದ ರೈಲ್ವೆ ಸುರಕ್ಷತೆ ಹಾಗೂ ಸುಭದ್ರತೆ ಜತೆಗೆ ಆಂಧ್ರ, ಗುಜರಾತ್, ರಾಜಸ್ತಾನ್, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಮಧ್ಯ ಪ್ರದೇಶ ರೈಲ್ವೆ ಅಭಿವೃದ್ಧಿ ಹೊಣೆ ವಹಿಸಲಾಯಿತು. ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಮುನಿಯಪ್ಪ ಹಾಗೂ ಮತ್ತೊಬ್ಬ ರಾಜ್ಯ ಸಚಿವ ಇ ಅಹಮದ್ ಅವರಿಗೆ ಹೊಣೆಗಾರಿಕೆ ಹಂಚಿಕೆ ಮಾಡಿ ಆದೇಶ ಹೊರಡಿಸಿದರು.

2009: ಪಶ್ಚಿಮ ಬಂಗಾಳದ ಇಟಾಬೆರಿಯಾದಲ್ಲಿನ ಸಿಪಿಎಂ ಪಕ್ಷದ ಕಚೇರಿಯಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದ ಉದ್ರಿಕ್ತ ಜನ ಕಚೇರಿಯನ್ನು ಧ್ವಂಸಗೊಳಿಸಿದರು. ಪಕ್ಷದ ಕಚೇರಿಯ ಒಳಗಡೆ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂಬ ಸಾರ್ವಜನಿಕರ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರ, ಸ್ಫೋಟಕಗಳು ಪತ್ತೆಯಾಗಿದ್ದವು. ಮೂರು ಗನ್‌ಗಳು, ಬಾಂಬುಗಳಿದ್ದ  ಒಂದು ಪೆಟ್ಟಿಗೆ, 100 ಸುತ್ತು ಗುಂಡುಗಳು ಮತ್ತು ಒಂದು ಚೀಲದ ತುಂಬ ಬಾಂಬ್ ತಯಾರಿಸುವ ಸಾಧನಗಳು ತಪಾಸಣೆ ಕಾಲದಲ್ಲಿ ಸಿಕ್ಕಿದ್ದವು. ಪೋಲಿಸರು ಕಚೇರಿಯನ್ನು ಮೊಹರು ಮಾಡಿ ಅಲ್ಲಿಂದ ತೆರಳಿದ ಬಳಿಕ ಉದ್ರಿಕ್ತ ಜನರು ಕಟ್ಟಡವನ್ನು ಧ್ವಂಸಗೊಳಿಸಿದರು.

2009: ಮಂಗಳೂರು ಸಮೀಪ ಹೊಸ ಪ್ರಭೇದದ ಕಪ್ಪೆ ಪತ್ತೆಯಾಗಿದೆ ಎಂದು ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಜೋಶಿ ಮತ್ತು ಸಹ ವಿಜ್ಞಾನಿಗಳು ಪ್ರಕಟಿಸಿದರು. ಕಪ್ಪೆ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಲೋಶಿಯಸ್ ಕಾಲೇಜಿಗೆ ಗೌರವ ಸೂಚಕವಾಗಿ ಈ ಪ್ರಭೇದಕ್ಕೆ 'ಯಪಿಕ್ಲ್ಟಿಸ್ ಅಲೋಸ್ಸಿ' ಎಂದು ಹೆಸರಿಡಲಾಯಿತು. ದೇಶದಲ್ಲಿ 260 ಪ್ರಭೇದದ ಕಪ್ಪೆಗಳಿವೆ. ಜೀವವೈವಿಧ್ಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶ ಎನಿಸಿರುವ ಪಶ್ಚಿಮ ಘಟ್ಟ ಮತ್ತು ಬಯಲು ಪ್ರದೇಶದಲ್ಲೇ 140 ಪ್ರಭೇದ ಪತ್ತೆಯಾಗಿವೆ ಎಂದು ಹರೀಶ್ ಜೋಶಿ ತಿಳಿಸಿದರು. ಬಾಹ್ಯಗುಣ, ಜೀವಕೋಶದ ವಂಶವಾಹಿನಿ ಕಣ ಹಾಗೂ ನಿರ್ದಿಷ್ಟ ವಟರುಗುಟ್ಟುವ ಶಬ್ದಗಳ ಗುಣವಿಶೇಷ ಅಧ್ಯಯನದಿಂದ ಹೊಸ ಪ್ರಭೇದದ ಕಪ್ಪೆ ಗುರುತಿಸಲಾಗುತ್ತದೆ. ಈ ಕಪ್ಪೆಯ ಗುಣವಿಶೇಷ ವಿವರ ಒಳಗೊಂಡ ಪ್ರಬಂಧ ಪ್ಯಾರಿಸ್‌ನ 'ಎಲಿಟಸ್' ಅಂತರರಾಷ್ಟ್ರೀಯ ವಿಜ್ಞಾನ ಸಂಚಿಕೆಯಲ್ಲಿ ಪ್ರಕಟವಾಗಿದೆ ಎಂದು ವಿವರಿಸಿದರು. ಡಾ.ಜೋಶಿ ತಂಡ ಮತ್ತು ಜಪಾನಿನ ಫುಕುವಾಕೊ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಕುರುಮೋಟೊ ಜಂಟಿ ಶೋಧನೆ ಹೊಸ ಪ್ರಭೇದದ ಕಪ್ಪೆ ಬೆಳಕಿಗೆ ತಂದಿತು.

2008: ಸಮುದ್ರದ ನೀರು ಹಾಗೂ ಸವಳು ನೀರನ್ನು ಕಡಿಮೆ ವೆಚ್ಚದಲ್ಲಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಭೌತ ರಸಾಯನ ಶಾಸ್ತ್ರದ ಪಾಲಿಮರ್ ವಿಜ್ಞಾನ ವಿಭಾಗದಿಂದ ಅಮೆರಿಕದ ಪೇಟೆಂಟಿಗೆ ಸಲ್ಲಿಸಿದ್ದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಮೊದಲನೇ ರ್ಯಾಂಕ್ ದೊರಕಿತು. ಜಗತ್ತಿನಲ್ಲಿಯೇ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲ ಸ್ಥಾನ ಪಡೆದ್ದದರಿಂದ ಕವಿವಿ ಮುಕುಟಕ್ಕೆ ಮತ್ತೊಂದು ಗರಿ ಇಟ್ಟಂತಾಯಿತು. ಇಡೀ ರಾಜ್ಯದ ಇತಿಹಾಸದಲ್ಲಿಯೇ ಕವಿವಿ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲನೇ ಸ್ಥಾನ ಪಡೆದದ್ದು ಇದೇ ಮೊದಲು.

2007: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು. ಅಮೆರಿಕದ ಗಗನಯಾತ್ರಿ ಶಾನನ್ ಲುಸಿದ್ 1996ರಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿ 188 ದಿನ ಮತ್ತು 4 ಗಂಟೆಗಳನ್ನು ಕಳೆದದ್ದು ಈವರೆಗಿನ ದಾಖಲೆಯಾಗಿತ್ತು. ಸುನೀತಾ ಅದನ್ನು ಈದಿನ ಮುರಿದರು. 2006ರ ಡಿಸೆಂಬರ್ 10ರಿಂದ ಬಾಹ್ಯಾಕಾಶ ಕೇಂದ್ರವಾಸಿಯಾದ ಸುನೀತಾ ದಾಖಲೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ 29 ಗಂಟೆ ಮತ್ತು 17 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡು ನೂತನ ದಾಖಲೆ ಮಾಡಿದ್ದರು. ಈ ಗೌರವ ಗಗನಯಾತ್ರಿ ಕ್ಯಾಥರಿನ್ ತಾರ್ನ್ ಟನ್ ಅವರ ಹೆಸರಲ್ಲಿ ಇತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದುಕೊಂಡೇ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಏಪ್ರಿಲ್ ತಿಂಗಳಲ್ಲಿ ಸುನೀತಾ ಮತ್ತೊಂದು ದಾಖಲೆ ಸ್ಥಾಪಿಸಿದ್ದರು.

2007: ಭಾರತೀಯ ಕ್ರಿಕೆಟ್ ಆಟಗಾರ ದೊಡ್ಡ ನರಸಯ್ಯ ಗಣೇಶ್ ಈದಿನ ಮುಸ್ಸಂಜೆ ಕ್ರಿಕೆಟ್ಟಿಗೆ ವಿದಾಯ ಹೇಳಿದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗಣೇಶ್ ಐದು ವಿಕೆಟ್ ಪಡೆದಿದ್ದರು. ಜಿಂಬಾಬ್ವೆ ವಿರುದ್ಧ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದ್ದರು.  104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 29.42 ಸರಾಸರಿಯಲ್ಲಿ 365 ವಿಕೆಟ್ ಕಬಳಿಸಿದ್ದರು.

2007: ನೈಜೀರಿಯಾದ ಉಗ್ರಗಾಮಿಗಳು ತಾವು ಅಪಹರಿಸಿದ್ದ 10 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಎಂದು ಭದ್ರತಾ ಮೂಲಗಳು ಪ್ರಕಟಿಸಿದವು. ಹದಿನೈದು ದಿನಗಳ ಹಿಂದೆ ಈ 10 ಮಂದಿಯನ್ನು ಅಪಹರಿಸಲಾಗಿತ್ತು.

2007: ಭಾರತೀಯ ಮೂಲದ ಬರಹಗಾರ ಸಲ್ಮಾನ್ ರಷ್ದಿ ಅವರನ್ನು ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಪ್ರತಿಷ್ಠಿತ `ನೈಟ್ಹುಡ್' ಪದವಿಗೆ ಆಯ್ಕೆ ಮಾಡಿದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.

2007: ಮುಸ್ಲಿಂ ಪ್ರತ್ಯೇಕವಾದಿಗಳು ಮತ್ತು ಫಿಲಿಪ್ಪೀನ್ಸ್ ಸರ್ಕಾರದ ಮಧ್ಯೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಲ್ವೆಸ್ಟರ್ ಅಘಬ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಶಾಂತಿ ಸ್ಥಾಪನೆಯ ಯತ್ನಕ್ಕೆ ಹಿನ್ನಡೆಯಾಯಿತು.

2006: ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ `ಪ್ರತಿಷ್ಠಿತ ಕ್ರಿಸ್ಟಲ್ ಪಿರಮಿಡ್' ಪ್ರಶಸ್ತಿ ಲಭಿಸಿತು. ದಕ್ಷಿಣ ಏಷ್ಯ ಸಿನೆಮಾ ಪ್ರತಿಷ್ಠಾನವು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಲಂಡನ್ನಿನ ನೆಹರೂ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಹೈಕಮೀಷನರ್ ಕಮಲೇಶ ಶರ್ಮಾ ಪ್ರದಾನ ಮಾಡಿದರು.

2006: ಇಂಧನ ಕ್ಷೇತ್ರದ ಬ್ರಿಟನ್ನಿನ ಮುಂಚೂಣಿ ಸಂಸ್ಥೆ ಪವರ್ ಜೆನ್ ಭಾರತದಲ್ಲಿರುವ ತನ್ನ ಎಲ್ಲ ಕಾಲ್ ಸೆಂಟರುಗಳನ್ನು ಮುಚ್ಚಲು ನಿರ್ಧರಿಸಿತು. ಹೊರಗುತ್ತಿಗೆಯಿಂದ ಗ್ರಾಹಕರಿಗೆ ಕಿರಿಕಿರಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಇನ್ನು ಮುಂದೆ ಸಂಸ್ಥೆಯ ಎಲ್ಲ 60 ಲಕ್ಷ ಗ್ರಾಹಕರಿಗೂ ಬ್ರಿಟನ್ನಿನಲ್ಲೇ ಉತ್ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಿಸಿತು.

2006: ಭಾರಿ ವಾದ ವಿವಾದಕ್ಕೆ ಕಾರಣವಾದ ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ (ಬಿಎಂಐಸಿ) ಭಾಗವಾದ ಕೆಂಗೇರಿ- ತಲಘಟ್ಟಪುರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಫರಿಫೆರಲ್ ರಸ್ತೆ) ಸರ್ಕಾರದ ವಿರೋಧದ ಮಧ್ಯೆಯೇ ಈದಿನ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು. 9 ಕಿ.ಮೀ. ಉದ್ದದ ಈ ರಸ್ತೆಯನ್ನು 58 ಪುಟಾಣಿಗಳು ಟೇಪು ಕತ್ತರಿಸಿ ಉದ್ಘಾಟಿಸಿದರು. 98 ವರ್ಷದ ರಾಮಕ್ಕ ಜ್ಯೋತಿ ಬೆಳಗಿ ಕಾರ್ಯಕಮಕ್ಕೆ ಚಾಲನೆ ನೀಡಿದರು.

2006: ವಿಶ್ವದ ಅತ್ಯಂತ ಕಿರಿಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಓ) ಸುಹಾಸ ಗೋಪಿನಾಥ ಅವರು ತಮ್ಮ `ಗ್ಲೋಬಲ್ ಇಂಕ್' ಕಂಪೆನಿಯ ಕೇಂದ್ರ ಕಚೇರಿಯನ್ನು ಕ್ಯಾಲಿಫೋರ್ನಿಯಾದಿಂದ ತಮ್ಮ ತಾಯ್ನೆಲವಾದ ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಬೆಂಗಳೂರಿನಲ್ಲಿ ಈದಿನ ಪ್ರಕಟಿಸಿದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಚೇರಿಗೆ ಸ್ಥಳಾವಕಾಶ ಒದಗಿಸುವುದಾಗಿ ಭೇಟಿ ಕಾಲದಲ್ಲಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ಗೋಪಿನಾಥ ಈ ನಿರ್ಧಾರ ಕೈಗೊಂಡರು. ಭಾರತದಲ್ಲಿ 18 ವರ್ಷವಾಗದ ವಿನಃ ಕಂಪೆನಿ ಆರಂಭಿಸಲು ಸಾಧ್ಯವಿಲ್ಲವಾದ ಕಾರಣ 2000 ದಲ್ಲಿ, 14ನೇ ವಯಸ್ಸಿನಲ್ಲಿ ಗೋಪಿನಾಥ ಅವರು ಕ್ಯಾಲಿಫೋರ್ನಿಯಾದಲ್ಲಿ ತಮ್ಮ `ಗ್ಲೋಬಲ್ ಇಂಕ್' ನ್ನು ಸ್ಥಾಪಿಸಿದ್ದರು. ಪ್ರಸ್ತುತ 13 ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಕಂಪೆನಿಯಲ್ಲಿ 2006ರ ವೇಳೆಗೆ 600ಕ್ಕೂ ಹೆಚ್ಚು ಜನ ದುಡಿಯುತ್ತಿದ್ದರು.

1990: ಮುಂಬೈಯಲ್ಲಿ 42 ಸೆಂ.ಮೀ. ದಾಖಲೆ ಮಳೆ. 1986ರಲ್ಲಿ 41 ಸೆಂ.ಮೀ. ಮಳೆ ಒಂದೇ ದಿನ ಸುರಿದಿತ್ತು.

1977: ಲಿಯೋನಿದ್ ಬ್ರೆಜ್ನೇವ್ ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ) ಅಧ್ಯಕ್ಷರಾದರು.

1974: ಸಾಹಿತಿ ಗವಿಸಿದ್ದ ಎನ್. ಬಳ್ಳಾರಿ ಜನನ.

1963: ಸೋವಿಯತ್ ಗಗನಯಾನಿ  ವಾಲೆಂಟಿನಾ ತೆರೆಸ್ಕೋವಾ ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಮಹಿಳೆಯಾದರು. ಬಾಹ್ಯಾಕಾಶ ನೌಕೆ ವೊಸ್ತೋಕ್ 6 ಮೂಲಕ ಅವರು ಬಾಹ್ಯಾಕಾಶಕ್ಕೆ ಏರಿದರು.

1961: ಸೋವಿಯತ್ ಬ್ಯಾಲೆ ನೃತ್ಯಪಟು ರುಡೋಲ್ಫ್ ನ್ಯೂರೆಯೆವ್ ತಮ್ಮ ತಂಡವು ಪ್ಯಾರಿಸ್ಸಿನಲ್ಲಿ ಇದ್ದಾಗ ಪಶ್ಚಿಮಕ್ಕೆ ರಾಷ್ಟ್ರಾಂತರ ಮಾಡಿದರು.

1950: ಹಿಂದಿ ಚಿತ್ರನಟ ಮಿಥುನ್ ಚಕ್ರವರ್ತಿ ಜನನ.

1946: ಮಧ್ಯಂತರ ಸರ್ಕಾರ ರಚನೆಗೆ ಭಾರತೀಯ ನಾಯಕರನ್ನು ಬ್ರಿಟನ್ ಲಂಡನ್ನಿಗೆ ಆಹ್ವಾನಿಸಿತು.

1942: ರಂಗಭೂಮಿ, ಟಿವಿ, ಸಿನಿಮಾ ಕ್ಷೇತ್ರಗಳಲ್ಲಿ ಉತ್ತಮ ಕಲಾವಿದರೆಂದು ಹೆಸರು ಪಡೆದ ಸಿ.ಆರ್. ಸಿಂಹ ಅವರು ರಾಮಸ್ವಾಮಿ ಶಾಸ್ತ್ರಿ- ಲಲಿತಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣದಲ್ಲಿ ಜನಿಸಿದರು.

1931: ಕಲಾವಿದ ಎಸ್. ವೆಂಕಟಸ್ವಾಮಿ ಜನನ.

1925: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ, ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಕಟ್ಟಲಾದ ಸ್ವರಾಜ್ (ಸ್ವತಂತ್ರ) ಪಕ್ಷದ ಧುರೀಣರೂ ಆಗಿದ್ದ ವಕೀಲ ಚಿತ್ತರಂಜನ್ ದಾಸ್ ಅವರು ಡಾರ್ಜಿಲಿಂಗಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1924: ಸಾಹಿತಿ ಬಿ. ವಿರೂಪಾಕ್ಷಪ್ಪ ಜನನ.

1924: ಕಲಾವಿದ ಕಲಾವಿದ ಎಂ.ಎಸ್. ಚಂದ್ರಶೇಖರ್ ಜನನ.

1920: ಖ್ಯಾತ ಗಾಯಕ ಹೇಮಂತ್ ಚೌಧರಿ ಜನನ.

1917: ಅಮೆರಿಕದ ಪ್ರಸಿದ್ಧ ಪತ್ರಿಕೆ `ವಾಷಿಂಗ್ಟನ್ ಪೋಸ್ಟ್' ನ ಪ್ರಕಾಶಕಿ ಮತ್ತು ಅಮೆರಿಕದ 20ನೇ ಶತಮಾನದ ಪ್ರಭಾವಿ ಮಹಿಳೆ ಕ್ಯಾಥರಿನ್ ಗ್ರಾಹಂ ಈ ದಿನ ಜನಿಸಿದರು. ರಿಚರ್ಡ್ ನಿಕ್ಸನ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಎರಡು ದಶಕಗಳ ಕಾಲ ಅಮೆರಿಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳಿಗೆ ವಾಷಿಂಗ್ಟನ್ ಪೋಸ್ಟ್ ಕಾರಣವಾಯಿತು.

1903: ಡೆಟ್ರಾಯಿಟ್ ಹೂಡಿಕೆದಾರರು ಫೋರ್ಡ್ ಕಂಪೆನಿಯನ್ನು ಕಟ್ಟಿದರು. ಈ ಸಂಸ್ಥೆಯ ಉಪಾಧ್ಯಕ್ಷರೂ, ಮುಖ್ಯ ಎಂಜಿನಿಯರರೂ ಆಗಿದ್ದ ಹೆನ್ರಿ ಫೋರ್ಡ್ ಕಂಪೆನಿಯಲ್ಲಿ ಶೇಕಡಾ 25 ಷೇರುಗಳನ್ನು ಹೊಂದಿದ್ದರು.

1900: ಖ್ಯಾತ ಸಾಹಿತಿ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿ ರಾವ್ (ಎ.ಎನ್. ಮೂರ್ತಿರಾವ್) (16-6-1900ರಿಂದ 23-8-2003) ಅವರು ಸುಬ್ಬರಾವ್- ಪುಟ್ಟಮ್ಮ ದಂಪತಿಯ ಮಗನಾಗಿ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು.

1890: ಸ್ಟಾನ್ ಲಾರೆಲ್ ಎಂದೇ ಖ್ಯಾತರಾದ ಆರ್ಥರ್ ಸ್ಟ್ಯಾನ್ಲಿ ಜೆಫರ್ ಸನ್ (1890-1965) ಜನ್ಮದಿನ. ಒಲಿವರ್ ಹಾರ್ಡಿ ಅವರ ಪಾಲುದಾರಿಕೆಯೊಂದಿಗೆ ಮೊತ್ತ ಮೊದಲ ಹಾಲಿವುಡ್ ಚಲನಚಿತ್ರ ಹಾಸ್ಯ ತಂಡವನ್ನು ಇವರು ಕಟ್ಟಿದರು.

1873: ಲೇಡಿ ಒಟ್ಟೋಲಿನ್ ಮೊರ್ರೆಲ್(1873-1950) ಜನ್ಮದಿನ. ಕಲೆಗಳ ಪೋಷಕಿಯಾಗಿದ್ದ ಈಕೆ ತನ್ನ ಸಮಕಾಲೀನರಾದ ಹಲವಾರು ಬರಹಗಾರರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿದವರು. ಆಕೆ ಹೀಗೆ ಒಟ್ಟುಗೂಡಿಸಿದವರಲ್ಲಿ ಡಿ.ಎಚ್. ಲಾರೆನ್ಸ್, ವರ್ಜೀನಿಯಾ ವೂಲ್ಫ್, ಆಲ್ಡವಸ್ ಹಕ್ಸ್ಲೆ, ಬರ್ಟ್ರೆಂಡ್ ರಸೆಲ್ ಮತ್ತಿತರರು ಸೇರಿದ್ದಾರೆ.

1605: ಮೊಘಲ್ ದೊರೆ ಅಕ್ಬರ್ ನಿಧನ.

 (ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment