Sunday, June 23, 2019

ಇಂದಿನ ಇತಿಹಾಸ History Today ಜೂನ್ 23

ಇಂದಿನ ಇತಿಹಾಸ History Today ಜೂನ್ 23
2018: ವಾಷಿಂಗ್ಟನ್: ಮಿಷಿಗನ್ ವಿಶ್ವ ವಿದ್ಯಾಲಯದ ಸಂಶೋಧಕರು ವಿಶ್ವದ ಅತಿಸಣ್ಣ ’ಕಂಪ್ಯೂಟರ್- ಒಂದು ಬದಿಗೆ ಕೇವಲ ೦.೩ ಮಿಲಿ ಮೀಟರ್ (ಎಂಎಂ) ಅಳತೆಯ ಸಾಧನವನ್ನು ನಿರ್ಮಿಸಿದರು.  ಈ ಅತಿಸಣ್ಣ ಕಂಪ್ಯೂಟರ್ ಅಕ್ಕಿಕಾಳಿನ ಗಾತ್ರಕ್ಕೆ ಕುಗ್ಗಿದೆ. ಪವರ್ ಬ್ಯಾಕಪ್ ಇಲ್ಲದಿದ್ದರೂ ತಮ್ಮ ಪ್ರೋಗ್ರಾಮ್ ಮತ್ತು ಮಾಹಿತಿಯನ್ನು (ಡಾಟಾ) ಉಳಿಸಿಕೊಳ್ಳಬಲ್ಲಂತಹ ಸಾಂಪ್ರದಾಯಿಕ ಡೆಕ್ಸ್ ಟಾಪ್‌ಗಳಿಗೆ ವ್ಯತಿರಿಕ್ತವಾಗಿ ಈ ’ಕುಬ್ಜ ಕಂಪ್ಯೂಟರ್ ಸ್ವಿಚ್ ಆಫ್ ಆದ ತತ್ ಕ್ಷಣವೇ ತಮ್ಮ ಮೂಲ ಪ್ರೋಗ್ರಾಮಿಂಗ್ ಮತ್ತು ಮಾಹಿತಿ (ಡಾಟಾ) ಕಳೆದುಕೊಳ್ಳುತ್ತದೆ ಎಂದು ಕ್ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು. ’ಇದನ್ನು ಕಂಪ್ಯೂಟರ್ ಎಂಬುದಾಗಿ ಕರೆಯಬೇಕೆ ಅಥವಾ ಬೇಡವೆ ಎಂಬ ಬಗ್ಗೆ ನಮಗೆ ಇನ್ನೂ ಖಚಿತತೆ ಇಲ್ಲ. ಇದು ಅಗತ್ಯವಾದ ಅತ್ಯಂತ ಕನಿಷ್ಠ ಮಾಹಿತಿ ಹೊಂದಿರುತ್ತದೆ ಎಂದು ಹೊಸ ಸಂಶೋಧನಾ ತಂಡದ ಮುಖ್ಯಸ್ಥ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಡೇವಿಡ್ ಬ್ಲಾವ್ಯೂ ಹೇಳಿದರು. ರಾಮ್ ಮತ್ತು ಫೊಟೋವೋಲ್ಟಾಲಿಕ್ಸ್ ಜೊತೆಗೆ ಹೊಸ ಮೈಕ್ರೋ ಕಂಪ್ಯೂಟಿಂಗ್ ಸಾಧನ ’ಮಿಷಿಗನ್ ಮೈಕ್ರೋ ಮೋಟ್ ಪ್ರೊಸೆಸರ್‍ಸ್ ಮತ್ತು ವೈರ್ ಲೆಸ್ ಟ್ರಾನ್ಸ್ ಮೀಟರುಗಳನ್ನು ಹಾಗೂ ರೀಸೀವರ್ ಗಳನು ಹೊಂದಿದೆ. ಸಾಧನದ ತುಣುಕುಗಳು ಅತ್ಯಂತ ಸಣ್ಣವಾದ ಕಾರಣ ಸಾಂಪ್ರದಾಯಿಕ ರೇಡಿಯೋ ಆಂಟೆನಾ ಬದಲಿಗೆ ಕಣ್ಣಿಗೆ ಕಾಣುವಂತಹ ಬೆಳಕಿನ ಮೂಲಕವೇ ಅದು ಮಾಹಿತಿ ಸ್ವೀಕಾರ ಮತ್ತು ರವಾನೆಯನ್ನು ಮಾಡುತ್ತದೆ. ಮೂಲ ಕೇಂದ್ರವು ಶಕ್ತಿಗೆ ಬೇಕಾದ ಬೆಳಕು ಪ್ರೋಗ್ರಾಮಿಂಗ್ ಒದಗಿಸುತ್ತದೆ ಮತ್ತು ಅದು ಮಾಹಿತಿಯನ್ನು ಸ್ವೀಕರಿಸುತ್ತದೆ.  ಮಿಷಿಗನ್ ವಿಶ್ವ ವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಸಂಶೋಧನೆಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಅಂದರೆ ಸಾಧನವನ್ನು ಇನ್ನೂ ಕಿರಿದುಗೊಳಿಸುವತ್ತ ಸಾಗಿ ವಿಶ್ವದ ಅತ್ಯಂತ ಸಣ್ಣ ಕೇವಲ ೦.೩ ಎಂಎಂ ಗಾತ್ರದ ಕಂಪ್ಯೂಟರ್ ನಿರ್ಮಿಸಿದರು ಎಂದು ವಿಶ್ವ ವಿದ್ಯಾಲಯದ ಟ್ವೀಟ್ ತಿಳಿಸಿದೆ. ಪ್ರಿಸಿಷನ್ ಟೆಂಪರೇಚರ್ ಸೆನ್ಸರನಂತೆ ವಿನ್ಯಾಸಗೊಳಿಸಲಾಗಿರುವ ನೂತನ ಸಾಧನವು ಉಷ್ಣತೆಯನ್ನು ಟೈಮ್ ಇಂಟರ್ ವಲ್ ಗಳಾಗಿ ಪರಿವರ್ತಿಸುತ್ತದೆ. ಹೀಗಾಗಿ ಈ ಕಂಪ್ಯೂಟರ್ ಕ್ಲಸ್ಟರ್ ಸೆಲ್ ಗಳಂತಹ ಅತ್ಯಂತ ಸೂಕ್ಷ್ಮ ಪ್ರದೇಶದ ಉಷ್ಣತೆಯನ್ನು ವರದಿ ಮಾಡಬಲ್ಲುದು. ಇದು ಅತ್ಯಂತ ಕಡಿಮೆ ಅಂದರೆ ೦.೧ ಡಿಗ್ರಿ ಸೆಲ್ಸಿಯಸ್ ನಷ್ಟು ಮಾತ್ರ ತಪ್ಪಾಗಬಲ್ಲುದು. ಈ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ವಿವಿಧ ಉದ್ದೇಶಗಳಿಗೆ ಬಳಸಬಹುದು. ಸಾಧನವು ಗ್ರಂಥಿ ವಿಜ್ಞಾನದ ಸಂಶೋಧನೆಗೆ ನೆರವಾಗಬಲ್ಲುದು. ’ಟೆಂಪರೇಚರ್ ಸೆನ್ಸರ್ ಗಳು ಅತ್ಯಂತ ಸಣ್ಣವಾದ ಕಾರಣ ನಾವು ಅದನ್ನು ಕ್ಯಾನ್ಸರ್ ಸೆಲ್ ಗಳು ಬೆಳೆಯುತ್ತಿರುವ ಇಲಿಗೂ ಅಳವಡಿಸಬಹುದು ಎಂದು ಗಾರಿ ಲ್ಯೂಕೆರ್ ಹೇಳಿದರು.  ಇದನ್ನು ಬಳಸಿ ಚಿಕಿತ್ಸೆ ಕಾಲದಲ್ಲಿ ಬಳಸಬೇಕಾದ ಉಷ್ಣತೆಯನ್ನು ಬದಲಾಯಿಸಿಕೊಳ್ಳಬಹುದು ಮತ್ತು ಥೆರೆಪಿಯ ಯಶಸ್ಸು ಮತ್ತು ವೈಫಲ್ಯವನ್ನು ನಿರ್ಧರಿಸಬಹುದು ಎಂದು ಗಾರಿ ನುಡಿದರು.
  
2018: ರಾಜಗಢ/ ಭೋಪಾಲ್ (ಮಧ್ಯ ಪ್ರದೇಶ) : ವಿರೋಧ ಪಕ್ಷಗಳು ದೇಶದ ಜನರಲ್ಲಿ ಸುಳ್ಳುಗಳನ್ನು ಹರಡುತ್ತಿವೆ; ಗೊಂದಲಗಳನ್ನು ಸೃಷ್ಟಿಸುತ್ತಿವೆ ಮತ್ತು ನಿರಾಶಾವಾದವನ್ನು ಹುಟ್ಟುಹಾಕುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಆಪಾದಿಸಿದರು.  ರಾಜಗಢ ಜಿಲ್ಲೆಯ ೪,೦೦೦ ಕೋಟಿ ರೂ. ವೆಚ್ಚದ ಮೋಹನಪುರ ನೀರಾವರಿ ಯೋಜನೆಯನ್ನು ಉದ್ಘಾಟಿಸಿ, ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು  "ಬಿಜೆಪಿ ಸರ್ಕಾರ ಜನರ ಕಲ್ಯಾಣಕ್ಕಾಗಿ ಅವಿರತ  ಶ್ರಮಿಸುತ್ತಿದೆ; ಆದರೆ ಕೆಲವು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧದ ನಂಜಿನಿಂದ ಜನರಲ್ಲಿ  ಸುಳ್ಳು ಹರಡುತ್ತಿವೆ; ಅವರನ್ನು ಗೊಂದಲಕ್ಕೆ ತಳ್ಳುತ್ತಿವೆ ಮತ್ತು ಅವರಲ್ಲಿ ನಿರಾಶಾವಾದವನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೆ ಪರೋಕ್ಷವಾಗಿ ಟಾಂಗ್ ನೀಡಿದರು.  ದೇಶದ ಜನರು ಬಿಜೆಪಿಯನ್ನು ಮತ್ತು ಅದರ ಸರ್ಕಾರವನ್ನು ನಂಬುತ್ತಾರೆ; ಯಾರು ಸುಳ್ಳು ಹರಡುತ್ತಾರೋ, ಗೊಂದಲ ಸೃಷ್ಟಿಸುತ್ತಾರೋ, ನಿರಾಶಾವಾದ ಹುಟ್ಟುಹಾಕುತ್ತಾರೋ ಅವರು ವಾಸ್ತವತೆಯಿಂದ ದೂರವಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.  ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರ ಗುಣಗಾನ ಮಾಡಿದದ ಮೋದಿ ’ಶಿಕ್ಷಣ, ಆರೋಗ್ಯ, ಹಣಕಾಸು ಮತ್ತು ಭದ್ರತೆಯನ್ನು ಬಲಪಡಿಸುವುದು ಅವರ ದೃಷ್ಟಿಯಾಗಿತ್ತು ಎಂದು ಹೇಳಿದರು.  ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಒಲವು ಸಂಪಾದಿಸುವ ಉದ್ದೇಶದೊಂದಿಗೆ ಪ್ರಧಾನಿ ಅವರಿಂದು ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಮೋಹನಪುರ ನೀರಾವರಿ ಯೋಜನೆಯನ್ನು ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಭಾಗಿಯಾಗಿದ್ದರು.  ಮಧ್ಯಪ್ರದೇಶದ ಜನರಿಗಾಗಿ ನಿರ್ಮಿಸಲ್ಪಟ್ಟಿರುವ ನಾಲ್ಕು ಸಾವಿರ ಕೋಟಿ ರೂ.ಗಳ ಈ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯನ್ನು  ಉದ್ಘಾಟಿಸಲು ನಾನು ಹೆಮ್ಮೆ ಪಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.  ಪ್ರಧಾನಿ ಮೋದಿ ಅವರು ರಾಜಗಢಕ್ಕೆ ಆಗಮಿಸಿದೊಡನೆ ಅವರಿಗೆ ಮುಖ್ಯಮಂತ್ರಿ ಚೌಹಾಣ್ ಭವ್ಯ ಸ್ವಾಗತ ನೀಡಿದರು. ಮೋಹನಪುರ ನೀರಾವರಿ ಯೋಜನೆಯಿಂದ ಜಿಲ್ಲೆಯ ಜನರ ಕೃಷಿ ಭೂಮಿಗೆ ನೀರುಣಿಸಲು ಮತ್ತು ಜನರಿಗೆ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.  ಮೋದಿ ಅವರು ಮಧ್ಯಪ್ರದೇಶಕ್ಕೆ ಭೇಟಿ ನೀಡಿರುವ ಈ ಸಂದರ್ಭದಲ್ಲಿ ಇಂದೋರ್‌ನಲ್ಲಿನ ಶೇಹಾರಿ ವಿಕಾಸ್ ಮಹೋತ್ಸವ್‌ನಲ್ಲಿಯೂ ಪಾಲ್ಗೊಳ್ಳುವರು. ಸುಮಾರು ೪,೦೦೦ ಕೋಟಿ ರೂ. ಗಳ ಹಲವು ನಗರಾಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿತ್ತು.


2018: ಜಮ್ಮು: ಪಿಡಿಪಿ- ಬಿಜೆಪಿ ಮೈತ್ರಿ ಅವಸಾನಗೊಂಡ ಕೆಲವೇ ದಿನಗಳ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈದಿನ ಜಮ್ಮು ಮತ್ತು ಲಡಾಖ್ ನಲ್ಲಿ ಬಿಜೆಪಿ ರ್‍ಯಾಲಿಗಳಲ್ಲಿ ಪಾಲ್ಗೊಂಡು ೨೦೧೯ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಪಕ್ಷದ ಯೋಜನೆಗಳಿಗೆ ಒತ್ತು ನೀಡಿದರು.  ಹಿಂದು ಪ್ರಾಬಲ್ಯದ ಜಮ್ಮು ಮೆಹಬೂಬಾ ಮುಫ್ತಿ ಸರ್ಕಾರದಲ್ಲಿ ಅಭಿವೃದ್ಧಿಯ ಓಟದಲ್ಲಿ ಹಿಂದುಳಿಯಿತು ಎಂದು ಅವರು ಆಪಾದಿಸಿದರು.


2016: ಧರ್ಮಶಾಲಾಬಹು ನಿರೀಕ್ಷಿತ ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ವಿಚಾರ ಕೊನೆಗೂ ತೆರೆಬಿದ್ದಿತು., ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೇಮಕ ಮಾಡಿತು. ಸಲಹಾ ಸಮಿತಿ ನೀಡಿರುವ ಶಿಫಾರಸ್ಸಿನ ಮೇರೆಗೆ ಧರ್ಮಶಾಲಾದಲ್ಲಿ ಈದಿನ  ಸಂಜೆ ನಡೆದ ಸಭೆಯಲ್ಲಿ ಬಿಸಿಸಿಐ ಅಧಿಕೃತವಾಗಿ ನೂತನ ಕೋಚ್ ಹೆಸರನ್ನು ಬಹಿರಂಗಪಡಿಸಿತು. ಪ್ರಧಾನ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಒಂದು ತಿಂಗಳಿನಿಂದ ನಡೆಯುತ್ತಿದ್ದಆಯ್ಕೆ ಪ್ರಕ್ರಿಯೆ ಹಿಂದಿನ ದಿನ ಪೂರ್ಣಗೊಂಡಿದ್ದು, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನು ಒಳಗೊಂಡ ಸಲಹಾ ಸಮಿತಿ ಕೋಚ್ ಹುದ್ದೆ ಆಕಾಂಕ್ಷಿಗಳ ಸಂದರ್ಶನ ನಡೆಸಿ ಅದರ ವರದಿ ಮತ್ತು ತಮ್ಮ ಶಿಫಾರಸ್ಸನ್ನು
ಬಿಸಿಸಿಐಗೆ ಸಲ್ಲಿಸಿತ್ತು. ಈದಿನ ಸಂಜೆ ನೂತನ ಕೋಚ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದರು. ಅಂತೆಯೇ ಇದೀಗ ಬಿಸಿಸಿಐ ಅನಿಲ್ ಕುಂಬ್ಳೆ ಅವರ ಹೆಸರನ್ನು ಬಹಿರಂಗಪಡಿಸಿತು. ಮೂಲಕ ಕುಂಬ್ಳೆ ರವಿಶಾಸ್ತ್ರಿಯನ್ನು ಹಿಂದಿಕ್ಕೆ ಕೋಚ್ ಹುದ್ದೆಗೇರಿದರು. ಇಂದಿನಿಂದ 1 ವರ್ಷದವರೆಗೆ ಕುಂಬ್ಳೆ ಭಾರತದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟೀಮ್ ಇಂಡಿಯಾ ಹುದ್ದೆಗೆ ಒಟ್ಟು 57 ಜನ ಅರ್ಜಿ ಸಲ್ಲಿಸಿದ್ದರು, ಕಡೆಗೆ ಪಟ್ಟಿ 21 ಕ್ಕೆ ಇಳಿದಿತ್ತು. ಘಟಾನುಘಟಿಗಳಾದ ರವಿಶಾಸ್ತ್ರಿ, ಟಾಮ್ ಮೂಡಿ, ಸ್ಟುವರ್ಟ್ ಲಾ, ಲಾಲ್ಚಂದ್ ರಾಜಪೂತ್ ಹೆಸರುಗಳಿದ್ದ ಪಟ್ಟಿಯಲ್ಲಿ ಕುಂಬ್ಳೆ ಹೆಸರು ಅಂತಿಮವಾಗಿ ಘೊಷಿತವಾಯಿತು. ಮೊದಲು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮೆಂಟರ್ ಆಗಿ ಕಾರ್ಯನಿರ್ವಹಿಸಿರುವ ಜಂಬೋ ಭಾರತ ತಂಡದಲ್ಲಿದ್ದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು. ಕೋಚ್ ಆಗಿ ನೇಮಕವಾಗಿದ್ದಕ್ಕೆ ಹರ್ಷಗೊಂಡಿರುವ ಕುಂಬ್ಳೆ ತಂಡದ ಕೋಚ್ ಜವಬ್ದಾರಿ ನನ್ನ ಮೇಲೆ ನಂಬಿಕೆಯಿಟ್ಟು ವಹಿಸಿದ್ದಕ್ಕೆ ತಂಡದ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುವುದಾಗಿ ಮತ್ತು ಹಿರಿಯ ಕ್ರಿಕೆಟರುಗಳಾದ ಸೌರವ್, ಸಚಿನ್, ಲಕ್ಷ್ಮಣ್ ಜತೆ ರ್ಚಚಿಸುವುದಾಗಿ ಹೇಳಿದರು. ಕುಂಬ್ಳೆ ಭಾರತದ ಪರ 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ವಿರುದ್ಧ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಪಡೆದಿರುವುದು ಕುಂಬ್ಳೆ ಬೌಲಿಂಗ್ ಸಮರ್ಥತತೆಗೆ ಹಿಡಿದ ಕನ್ನಡಿಯಾಗಿದೆ. 18 ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಮೆರೆದ ಕೀರ್ತಿ ಕುಂಬ್ಳೆ ಅವರದ್ದು.
2016: ನವದೆಹಲಿ/ ತಾಷ್ಕೆಂಟ್/ ಸಿಯೋಲ್ಎಸ್ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೆಳಗ್ಗೆ ಉಜ್ಬೆಕಿಸ್ತಾನಕ್ಕೆ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ನಲ್ಲಿ ಚೀನಾದ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿ ಪರಮಾಣು ಪೂರೈಕೆದಾರರ ಸಮೂಹ (ಎನ್ಎಸ್ಜಿ) ಸದಸ್ಯತ್ವ ಪಡೆಯುವ ಭಾರತದ ಯತ್ನವನ್ನು ಬೆಂಬಲಿಸುವಂತೆ ನೇರವಾಗಿ ಕೋರಿದರು. ಎಸ್ಸಿಒ ಶೃಂಗಸಭೆಗಾಗಿ ಇಲ್ಲಿಗೆ ಆಗಮಿಸಿದ ಮೋದಿ, ಕ್ಷಿ ಅವರನ್ನು ಭೇಟಿ ಮಾಡಿ, ಎನ್ಎಸ್ಜಿ ಸದಸ್ಯತ್ವಕ್ಕಾಗಿ ಭಾರತ ನಡೆಸುತ್ತಿರುವ ಯತ್ನವನ್ನು ಚೀನಾವು ಪ್ರಾಮಾಣಿಕ ಹಾಗೂ ವಸ್ತುನಿಷ್ಠವಾಗಿ ಅಂದಾಜು ಮಾಡಬೇಕು. ಭಾರತದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಎಸ್ಜಿಯಲ್ಲಿ ಮೂಡಿಬರುತ್ತಿರುವ ಸಹಮತದೊಂದಿಗೆ ಚೀನಾ ಸೇರಬೇಕು ಮತ್ತು ತನ್ನ ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು. ಇದೇ ವೇಳೆಗೆ ಸಿಯೋಲ್ನಲ್ಲಿ ಆರಂಭಗೊಂಡಿರುವ ಪರಮಾಣು ಪೂರೈಕೆದಾರರ ಸಮೂಹದ (ಎನ್ಎಸ್ಜಿ) ನಿರ್ಣಾಯಕ ಸಭೆಯಲ್ಲಿ ಈದಿನ ಭಾರತಕ್ಕೆ ಸಮೂಹದ ಸದಸ್ಯತ್ವ ನೀಡುವ ವಿಚಾರ ಚರ್ಚೆಗೆ ಬರಲಿದೆ. 48 ರಾಷ್ಟ್ರಗಳು ಸದಸ್ಯತ್ವ ಹೊಂದಿರುವ ಪರಮಾಣು ಕ್ಲಬ್ ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನ ಅರ್ಜಿ ಸಲ್ಲಿಸಿವೆ.

2016: ಸೆವಿಲೆ (ಸ್ಪೇನ್): ವಿಶ್ವಪರ್ಯಟನೆಗಾಗಿ ಹೊರಟ ಸೋಲಾರ್ ವಿದ್ಯುತ್ ಚಾಲಿತ ವಿಮಾನಸೋಲಾರ್ ಇಂಪಲ್ಸ್’ 70 ಗಂಟೆಗಳ ನಿರಂತರ ಹಾರಾಟದ ಬಳಿಕ ಯಶಸ್ವಿಯಾಗಿ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಸ್ಪೇನ್ ತಲುಪಿತು. ಮೂಲಕ ಸೋಲಾರ್ ಇಂಪಲ್ಸ್ ಮತ್ತೊಂದು ಮಹಾಸಾಗರವನ್ನು ದಾಟಿದ ಸಾಧನೆ ಮಾಡಿತು. ಮತ್ತು ಅಟ್ಲಾಂಟಿಕ್ ಸಾಗರ ದಾಟಿದ ಮೊದಲ ಸೌರ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ಜೂನ್ 13ರಂದು ಅಮೆರಿಕದ ನ್ಯೂಯಾರ್ಕ್ನಿಂದ ಪ್ರಯಾಣ ಆರಂಭಿಸಿದ್ದ ಸೋಲಾರ್ ಇಂಪಲ್ಸ್ ಈದಿನ ಬೆಳೆಗ್ಗೆ 7.40 (ಸ್ಥಳೀಯ ಕಾಲಮಾನ) ದಕ್ಷಿಣ ಸ್ಪೇನ್ ಸೆವೆಲೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಆಗಮಿಸಿತು. 15ನೇ ಹಂತದ ಪ್ರಯಾಣದಲ್ಲಿ ಸೋಲಾರ್ ಇಂಪಲ್ಸ್ ವಿಮಾನವು ಅಟ್ಲಾಂಟಿಕ್ ಮಹಾಸಾಗರದ ಮೇಲೆ 6,272 ಕಿ.ಮೀ. ದೂರ ಕ್ರಮಿಸಿದೆ ಎಂದು ವಿಮಾನದ ಚಾಲಕ ಸ್ವಿಜರ್ಲೆಂಡ್ ಬೆಟ್ರಾಂಡ್ ಪಿಕಾರ್ಡ್ ಸಂತಸ ಹಂಚಿಕೊಂಡರು. 2015 ಮಾರ್ಚ್ 9ರಂದು ಅಬುದಾಬಿಯಿಂದ ಪ್ರಯಾಣ ಆರಂಭಿಸಿದ್ದ ಸೋಲಾರ್ ಇಂಪಲ್ಸ್ ವಿಮಾನವು ಏಷ್ಯಾ ಖಂಡ ಮತ್ತು ಫೆಸಿಫಿಕ್ ಮಹಾಸಾಗರ ದಾಟಿ ಅಮೆರಿಕ ತಲುಪಿತ್ತು. ಸೋಲಾರ್ ಇಂಪಲ್ಸ್ ಭೂಮಿಯ ಸುತ್ತ 35,400 ಕಿ.ಮೀ. ದೂರ ಪ್ರಯಾಣ ಮಾಡುವ ಉದ್ದೇಶ ಹೊಂದಿದೆ. ಒಬ್ಬರೇ ಕೂರಬಹುದಾದ ವಿಮಾನವನವನ್ನು ಸ್ವಿಜರ್ಲೆಂಡ್ ಪಿಕಾರ್ಡ್ ಮತ್ತು ಆಂಡ್ರೆ ಬ್ರಾಸ್ಕಬರ್ಗ್ ಪಾಳಿಯ ಮೇಲೆ ಚಲಾಯಿಸಿದರು.

2016: ಶ್ರೀನಗರಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲೋಲಬ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗ ನಡೆದು, ಯೋಧರು ಮೂವರು ಉಗ್ರರನ್ನು ಹತ್ಯೆ ಗೈದರು. ಲೋಲಬ ಪ್ರದೇಶದ ದೋಬ್ವಾನ್ ಅರಣ್ಯ ಪ್ರದೇಶದಲ್ಲಿ ಕೆಲವು ಉಗ್ರರು ಅವಿತಿರುವ ಮಾಹಿತಿಯ ಮೇರೆಗೆ  ಸೇನೆ ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದವು. ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದಾಗ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಮೃತರಾದರು.

2016: ಮಣಿಪಾಲಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ವಿಷ್ಣುಪ್ರಿಯಾ ವಿಶ್ವನಾಥನ್ ಅಮೆರಿಕದಲ್ಲಿ ನಡೆದ 18 ನೇ ವಾರ್ಷಿಕ ಬರ್ಕಲೀ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಪ್ರಶಸ್ತಿಯೊಂದಿಗೆ 6 ಸಾವಿರ ಯುಎಸ್ ಡಾಲರ್ (41 ಸಾವಿರ ರೂ) ಗಳನ್ನು ತಮ್ಮದಾಗಿಸಿಕೊಂಡರು. ಆರ್ಕಿಟೆಕ್ಚರ್ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿಷ್ಣುಪ್ರಿಯಾ ಪದವಿ ವಿದ್ಯಾರ್ಥಿಗಳಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಪ್ರಬಂಧದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿದರು. 2,500 ಪದಗಳ ಪ್ರಬಂಧ ಬರೆದ ಈಕೆ ಬರವಣಿಗೆ ತನ್ನ ನೆಚ್ಚಿನ ಹವ್ಯಾಸವಾಗಿದ್ದು, ಪ್ರಶಸ್ತಿ ಬಂದಿರುವುದು ಇನ್ನೂ ಹೆಚ್ಚಿನ ಬರವಣಿಗೆಗೆ ಪ್ರೇರೇಪಿಸಿದೆ ಎಂದಳು.. ಮೂಲತಃ ತಮಿಳುನಾಡಿನವಳಾದ ವಿಷ್ಣುಪ್ರಿಯಾ ಅವರು ಪಾವುಲ್ ಸುಂದರ್ ಸಿಂಗ್ ಅವರು ನಡೆಸುತ್ತಿರುವಕರುಣಾಲಯಸಾಮಾಜಿಕ ಸಂಘಟನೆ ಬಗ್ಗೆ ಪ್ರಬಂಧ ಬರೆದಿದ್ದಳು.
2009: ಭಾರತೀಯರ ಮೇಲೆ ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ ಮುಂದುವರೆಯಿತು. ಹೈದರಾಬಾದಿನ 20 ವರ್ಷದ ಮತ್ತೊಬ್ಬ ವಿದ್ಯಾರ್ಥಿ ಹಾಗೂ ಟ್ಯಾಕ್ಸಿ ಚಾಲಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಗಾಯಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದವರ ಮೇಲೆ ನಡೆದಿರುವ 16ನೇ ದಾಳಿ ಇದು. ಹಲ್ಲೆಗೊಳಗಾದ ಯುವಕನನ್ನು ಎಂ.ಎ.ಖಾನ್. ಇನ್ನೊಂದು ಘಟನೆಯಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆದು ಪ್ರಯಾಣಿಸಿದ ಗುಂಪೊಂದು ನಂತರ ಆ ಟ್ಯಾಕ್ಸಿಯ ಚಾಲಕ ಗುಲ್ಷನ್ ಕುಮಾರ್ ಎಂಬುವವರನ್ನು ಕ್ಲೇಟನ್ ಪ್ರದೇಶದಲ್ಲಿ ಥಳಿಸಿತು ಎಂದು ಆಸ್ಟ್ರೇಲಿಯಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಅಮಿತ್ ಮಘನಾನಿ ತಿಳಿಸಿದರು.

2009: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ) ನೀಡುವ ರಾಜ್ಯದ 2008-09ನೇ ಸಾಲಿನ 'ಶ್ರೇಷ್ಠ ರಫ್ತುದಾರ ಪ್ರಶಸ್ತಿ'ಯು (ಉತ್ಪಾದನಾ ವಿಭಾಗ)- ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ಗೆ ಲಭಿಸಿತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಉಪಾಧ್ಯ ರಫ್ತು  ಪ್ರಶಸ್ತಿ ಸ್ವೀಕರಿಸಿದರು. ಎಂಆರ್‌ಪಿಎಲ್ ಕಂಪೆನಿಯು 11,600 ಕೋಟಿ ರೂಪಾಯಿ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿ ರಾಜ್ಯದ ಶ್ರೇಷ್ಠ ರಫ್ತುದಾರ ಕಂಪೆನಿಯಾಗಿ ಹೊರಹೊಮ್ಮಿದೆ.

2009: ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಒಂದೂ ಲೋಕಸಭಾ ಸ್ಥಾನ ಗೆಲ್ಲಲಾಗದೆ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡದ ಮುಖ್ಯಮಂತ್ರಿ ಬಿಜೆಪಿಯ ಬಿ.ಸಿ.ಖಂಡೂರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಲ್.ಕೆ.ಅಡ್ವಾಣಿ ಅವರ ನಿವಾಸದಲ್ಲಿ ಪಕ್ಷದ ಹಿರಿಯ ಮುಖಂಡರು ಸಭೆ ಸೇರಿ ಖಂಡೂರಿ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಲು ನಿರ್ಧರಿಸಿದ ನಂತರ ಖಂಡೂರಿ ರಾಜನಾಥ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.

2009: ಡೀಸೆಲ್‌ನೊಂದಿಗೆ ಜತ್ರೋಪ ಅಥವಾ ಹೊಂಗೆ ಎಣ್ಣೆಯನ್ನುಬಳಸಿ ವಾಹನ ಓಡಿಸಬಹುದು ಎನ್ನುವುದು ಹಳೆ ಸುದ್ದಿ ಆದರೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಸಿಇ) ವಿದ್ಯಾರ್ಥಿಗಳು ಜತ್ರೋಪ ಮತ್ತು ಹೊಂಗೆ ಬೀಜಗಳಿಂದ ತಯಾರಿಸಿದ ತೈಲಕ್ಕೆ ಸ್ವಲ್ಪ ಮಾತ್ರ ಡೀಸೆಲ್ ಹಾಕಿ ಗಾಡಿಯನ್ನು ಓಡಿಸುವ ಸಾಧ್ಯತೆ ಬಗ್ಗೆ ಸಂಶೋಧಿಸಿದ್ದನ್ನು ಬಹಿರಂಗ ಪಡಿಸಿದರು. ಹೊಂಗೆ ಎಣ್ಣೆ ಮತ್ತು ಜತ್ರೋಪದಿಂದ ತಯಾರಿಸಿದ ತೈಲ ಶೇ 60 ಹಾಗೂ ಶೇ 40ರಷ್ಟು ಡೀಸೆಲ್ ಬಳಸಿ ವಾಹನಗಳನ್ನು ಓಡಿಸಬಹುದು. ಇದಕ್ಕಾಗಿ ವಾಹನ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾಗಿಲ್ಲ. ಎಂಜಿನ್ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇಂತಹ ಪ್ರಯೋಗ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಹೊಂಗೆ ಹಾಗೂ ಜತ್ರೋಪ ಬೀಜಗಳಿಂದ ಕಚ್ಚಾ ತೈಲ ಉತ್ಪಾದಿಸಲು ವಿದ್ಯಾರ್ಥಿಗಳೇ ಹೊಸ ಯಂತ್ರವನ್ನು  ಅನ್ವೇಷಣೆ ಮಾಡಿದರು. ಅದರ ಸಹಾಯದಿಂದ ಜತ್ರೋಪ ಸಸ್ಯದ ಬೀಜಗಳನ್ನು ದ್ರವರೂಪಕ್ಕೆ ಪರಿವರ್ತಿಸಬಹುದು. ಹಲವು ಹಂತಗಳ ಪ್ರಯೋಗದಿಂದ ಜತ್ರೋಪದಲ್ಲಿನ ಭಾರದ ವಸ್ತುಗಳನ್ನು ಬೇರ್ಪಡಿಸಿ, ಬಳಿಕ ಉಳಿಯುವ ತೈಲದಿಂದ ಇಂಧನದ ಗುಣಗಳನ್ನು ಪಡೆಯಬಹುದು. ಈ ತೈಲವನ್ನು ಹೊಂಗೆ ಮರದ ಮಿಶ್ರಣದೊಂದಿಗೆ ಸೇರಿಸಲಾಗುತ್ತದೆ. ಈ ಎರಡೂ ಮಿಶ್ರಣಗಳು ಒಟ್ಟಾದಾಗ 'ಬಯೋ ಡೀಸೆಲ್' ಇಂಧನ ಸೃಷ್ಟಿಯಾಗುತ್ತದೆ. ಹೀಗೆ ಪ್ರಾಯೋಗಿಕವಾಗಿ ಸಿದ್ಧಪಡಿಸಿದ 'ಕಚ್ಚಾ ತೈಲ'ವನ್ನು ಡೀಸೆಲ್‌ನೊಂದಿಗೆ ಸೇರಿಸಬಹುದು. ಈ ಇಂಧನ ಮಾರುಕಟ್ಟೆ ಪ್ರವೇಶ ಮಾಡಿದರೆ ಇಂಧನ ವೆಚ್ಚದಲ್ಲಿ ಶೇ 50ರಷ್ಟನ್ನು ಉಳಿಸಬಹುದು. ಈ ಇಂಧನವನ್ನು ಬಳಸಿ ನಾವೀಗ ಎಂಜಿನ್ ಚಾಲನೆ ಮಾಡ್ದಿದೇವೆ ಎಂಬುದು ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೆ. ಚಂದ್ರಶೇಖರ್ ಹೇಳಿಕೆ. ಬಯೋಡೀಸೆಲ್ ಪರಿಸರ ಸ್ನೇಹಿ ಇಂಧನ. ಇಂಧನ ಉರಿದ ನಂತರ ಹೊರಬರುವ ಹೊಗೆಯಿಂದ ಮಾಲಿನ್ಯದ  ಪ್ರಮಾಣ ಕಡಿಮೆ. ಜತ್ರೋಪ ಗಿಡ ಎಲ್ಲೆಡೆ ಹೇರಳವಾಗಿ ಬೆಳೆಯುತ್ತದೆ. ಯಾರೂ ನೀರೆರೆಯದ್ದಿದರೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತವೆ. ರೈತರು ವಾಣಿಜ್ಯ ಬೆಳೆಯಂತೆ ಹೊಂಗೆ ಹಾಗೂ ಜತ್ರೋಪ ಬೆಳೆದು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು. ಈ ಅಂಶವೂ ನಮ್ಮ ಸಂಶೋಧನೆಯಲ್ಲಿ ಅಡಗಿದೆ ಎನ್ನುತ್ತಾರೆ ಡಾ.ಕೆ  ಚಂದ್ರಶೇಖರ್.  ಈ ಇಂಧನದ ಬಳಕೆಯಿಂದ ಲೀಟರ್ ಒಂದಕ್ಕೆ 4 ರೂ. ಉಳಿಸಬಹುದು ಎಂಬುದು ಸಂಶೋಧಿಸಿದ ವಿದ್ಯಾರ್ಥಿಗಳ ಅನಿಸಿಕೆ. ಜತ್ರೋಪ ಗಿಡದಿಂದ ಪ್ರಯೋಗಾಲಯದಲ್ಲಿ ಹೊರಬಂದ ಜಿಡ್ಡಿನ ಪದಾರ್ಥವೂ ಬಹುಪಯೋಗಿ. ಬೀಜಗಳಿಂದ ಬೇರ್ಪಟ್ಟ ಘನತ್ಯಾಜ್ಯದಿಂದ ಸೋಪ್ ತಯಾರಿಸಬಹುದು.

2009: ದಕ್ಷಿಣ ಭಾರತದ ಪ್ರಖ್ಯಾತ ಪರ್ವತಾರೋಹಿ ವಿ.ಗೋವಿಂದರಾಜು (77) ಮೈಸೂರಿನ ರಾಘವೇಂದ್ರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಗೋವಿಂದರಾಜ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ತೇನ್‌ಸಿಂಗ್ ಅವರ ಸಹವರ್ತಿ. ಡಾರ್ಜಿಲಿಂಗಿನ ಹಿಮಾಲಯನ್ ಮೌಂಟೆನಿಂಗ್ ಇನ್ಸ್‌ಟಿಟ್ಯೂಟಿನಲ್ಲಿ ಚಾರಣ ಮತ್ತು ಪರ್ವತಾರೋಹಣ ತರಬೇರತುದಾರರಾಗಿದ್ದ ತೇನ್‌ಸಿಂಗ್ ಬಳಿ 1962ರಲ್ಲಿ ಗೋವಿಂದರಾಜ್ ತರಬೇತಿ ಪಡೆದಿದ್ದರು. 1966ರಲ್ಲಿ ಚತುರಂಗಿಯ ಭಾಗೀರಥಿ-2 ಎಂಬ 26,800 ಅಡಿ ಪರ್ವತವನ್ನು ಮೊದಲ ಬಾರಿಗೆ ಚಾರಣ ಮಾಡಿದ ನಾಲ್ವರಲ್ಲಿ ಇವರೂ ಒಬ್ಬರು. ಚಾರಣ ಮುಗಿಸಿ ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಜೊತೆಯಲ್ಲಿದ್ದ ಮೂವರು ಸಾವನ್ನಪ್ಪಿದರೆ ಗೋವಿಂದರಾಜ್ 20 ಗಂಟೆಗಳವರೆಗೆ ಹಿಮದಲ್ಲಿ ಸಿಲುಕಿಯೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ನಂತರ ಅವರ ಎರಡೂ ಕಾಲುಗಳ 9 ಬೆರಳುಗಳನ್ನು ತೆಗೆದು ಹಾಕಲಾಯಿತು. ಇಂತಹ ಸ್ಥಿತಿಯಲ್ಲಿಯೂ ಗೋವಿಂದರಾಜ್ ಚಾರಣ, ಸಾಹಸ ಚಟುವಟಿಕೆಗಳನ್ನು ನಿಲ್ಲಿಸದೆ 80ರ ದಶಕದಲ್ಲಿ ಮೈಸೂರಿನಲ್ಲಿ  'ಡೆಕ್ಕನ್ ಮೌಂಟೆನಿಯರಿಂಗ್ ಲೀಗ್' ಪರ್ವತಾರೋಹಣ ತರಬೇತಿ ಸಂಸ್ಥೆ ಪ್ರಾರಂಭಿಸಿ ಸಾವಿರಾರು ಮಂದಿಗೆ ತರಬೇತಿ ನೀಡಿದ್ದರು. ಹೈದರಾಬಾದಿನ ನ್ಯಾಷನಲ್ ಪೋಲಿಸ್ ಅಕಾಡೆಮಿ ಮತ್ತು ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಪೋಲಿಸ್ ಅಧಿಕಾರಿಗಳಿಗೆ ಪರ್ವತಾರೋಹಣದ ಬಗ್ಗೆ ತರಬೇತಿ ನೀಡಿದ್ದರು. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 1982ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

2009: ನಿಲ್ದಾಣಕ್ಕೆ ಇಳಿಯುವಾಗ ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳ ಕಂಪೆನಿಗಳಿಂದ 12 ನೇ ಶತಮಾನದ ಸ್ಮಾರಕ ಕುತುಬ್ ಮಿನಾರ್‌ಗೆ ಹಾನಿಯಾಗುತ್ತಿದೆ. ಹಾಗಾಗಿ ತಕ್ಷಣವೇ ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕು ಎಂದು  ಭಾರತೀಯ ಪುರಾತತ್ವ ಇಲಾಖೆ (ಎಸ್‌ಐಎ) ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಸೂಚಿಸಿತು. ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳು 72.5 ಮೀಟರ್ ಎತ್ತರದ ಈ ಸ್ಮಾರಕಕ್ಕೆ ಯಾವ ರೀತಿಯಲ್ಲಿ ಅಪಾಯಕಾರಿಯಾಗಿವೆ ಎನ್ನುವುದನ್ನು ಎಸ್‌ಐಎ, ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿತು.

2009: ಹೊಸದಾಗಿ ಅಸ್ತಿತ್ವಕ್ಕೆ ಬಂದ 'ಕುವೆಂಪು ಭಾಷಾ ಭಾರತಿ' ಅಧ್ಯಕ್ಷರಾಗಿ ಪ್ರಧಾನ  ಗುರುದತ್ ಅವರನ್ನು ಸರ್ಕಾರ ನೇಮಕ ಮಾಡಿತು. ನೂತನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಯಿತು. ಇದರಿಂದ ಹಲವಾರು ವರ್ಷಗಳಿಂದ ಅನುವಾದ ಅಕಾಡೆಮಿಯನ್ನು ಮುನ್ನಡೆಸಿದ ಹಿರಿಯ ಅನುಭವಿಗೆ ಹೊಸದೊಂದು ಜವಾಬ್ದಾರಿ ವಹಿಸಿದಂತಾಯಿತು.

2009: ಕೆನಡಾದ ಲ್ಯಾವಲಿನ್ ಕಂಪನಿಯೊಂದಿಗಿನ 374 ಕೋಟಿ ರೂಪಾಯಿಗಳ ಹಗರಣ ಪ್ರಕರಣದ ಆರೋಪಿಯಾದ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತು. ಲ್ಯಾವಲಿನ್ ಕಂಪನಿ ಜತೆಗಿನ ಒಪ್ಪಂದದ ಈ ಹಗರಣಕ್ಕೆ ಸಂಬಂಧಿಸಿದಂತೆ ಪಿನರಾಯಿ ವಿಜಯನ್ ಹಾಗೂ ಇತರ ಎಂಟು ಜನ ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸುತ್ತ್ದಿದಂತೆಯೇ ನ್ಯಾಯಾಲಯ ಈ ಕ್ರಮ ಜರುಗಿಸಿತು.

2009: ಸಿಗರೇಟು ತಯಾರಕರ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ಅಧಿಕಾರ ನೀಡುವ ಮಹತ್ವದ ತಂಬಾಕು ಮಸೂದೆಗೆ ಅಧ್ಯಕ್ಷ ಬರಾಕ್ ಒಬಾಮ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಇದರೊಂದಿಗೆ ಕಟ್ಟುನಿಟ್ಟಿನ ಕಾನೂನೊಂದು ಅಮೆರಿಕದಲ್ಲಿ ಜಾರಿಗೆ ಬಂದಂತಾಯಿತು. ಅಮೆರಿಕದಲ್ಲಿ ಪ್ರತಿ ದಿನ 19 ವರ್ಷದೊಳಗಿನ ಸಾವಿರ ಮಂದಿ ಸಿಗರೇಟಿಗೆ ದಾಸರಾಗುತ್ತಿದ್ದಾರೆ ಎಂಬ ಭಯಾನಕ ವಿದ್ಯಮಾನದ ನಡುವೆಯೇ ಯುವಕರನ್ನು ಈ ಚಟದಿಂದ ದೂರ ಇರಿಸಲು ನೂತನ ಕಾನೂನನ್ನು ಜಾರಿಗೆ ತರಲಾಯಿತು. ಈ ಮೂಲಕ ಒಬಾಮ ಅವರು ತಾವು ನೀಡಿದ ಭರವಸೆಯಂತೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಸಾಬೀತುಪಡಿಸಿದರು. ಈ ಕಾನೂನು ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ತಂಬಾಕು ಉತ್ಪನ್ನಗಳ ಕೆಲವು ಬಗೆಯ ಸುವಾಸನೆಗಳನ್ನು ಸೇರಿಸುವುದನ್ನು ನಿಷೇಧಿಸುವ, ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯವಾಗಿ ಛಾಪಿಸುವಂತೆ ಮಾಡುವ ಅಧಿಕಾರ ನೀಡಿತು.

2008: ಬ್ರಿಟನ್ನ ಪ್ರಧಾನಿ ಗೋರ್ಡಾನ್ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರು, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಶಿವರಾಜ್ ಪೌಲ್ ಅವರ ಕಿರಿಯ ಮಗಳು ಅಂಬಿಕಾ ಅವರ ನೆನಪಿನ `ಪ್ರಿಥ್ರಿ' (ಪೋಡಿಯಂ ಥ್ರಿ) ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಈ ಅಧ್ಯಯನ ಕೇಂದ್ರ, ಕಲಿಕೆ, ತರಬೇತಿ ನೀಡುತ್ತಾ ಸಂಶೋಧನೆಗಳ ಅನುಷ್ಠಾನಕ್ಕೆ ಪುರಕವಾಗಿ ಉದ್ಯಮಿಗಳು ಮತ್ತು ಶಿಕ್ಷಣವೇತ್ತರಿಗೆ ಒಂದು ಸಮಾನ ವೇದಿಕೆ ಒದಗಿಸುವುದು.

2007: ಕರ್ನಾಟಕದಲ್ಲಿ ಉಗ್ರ ಸ್ವರೂಪ ತಾಳಿದ ಮಳೆ 35 ಜನರನ್ನು ಬಲಿ ತೆಗೆದುಕೊಂಡಿತು.

2007: ನವ ಮಂಗಳೂರು ಬಂದರಿನಿಂದ ಯುಎಇಗೆ ಕಬ್ಬಿಣದ ಅದಿರನ್ನು ಹೊತ್ತು ಹೊರಟ `ಡೆನ್ ಡೆನ್' ಆಫ್ರಿಕನ್ ಹಡಗು ತಾಂತ್ರಿಕ ದೋಷದ ಜೊತೆಗೆ ಭಾರಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಸಮುದ್ರ ದಂಡೆ ಬಳಿ ಸಂಭವಿಸಿದ ದುರಂತದಲ್ಲಿ ಇಬ್ಬರು ಅಸು ನೀಗಿ ಒಬ್ಬರು ಕಣ್ಮರೆಯಾದರು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ - ಎಡಪಕ್ಷಗಳ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದರು.

2007: ಬಾಹ್ಯಾಕಾಶದಲ್ಲಿ 195 ದಿನಗಳನ್ನು ಕಳೆದು ಭೂಮಿಗೆ ವಾಪಸಾದ ಭಾರತೀಯ ಸಂಜಾತ ಅಮೆರಿಕದ ಗಗನಯಾನಿ ಸುನೀತಾ ವಿಲಿಯಮ್ಸ್ (41) ಅವರನ್ನು ನ್ಯೂಯಾರ್ಕಿನ ಎಬಿಸಿ ಟೆಲಿವಿಷನ್ ನೆಟ್ ವರ್ಕ್ `ವಾರದ ವ್ಯಕ್ತಿ' ಎಂಬುದಾಗಿ ಆಯ್ಕೆ ಮಾಡಿತು.

2006: ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ `ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ'ಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಲಭಿಸಿತು. ವಿಶ್ವಸಂಸ್ಥೆಯು ಜೂನ್ 23ರ ಈ ದಿನವನ್ನು `ವಿಶ್ವಸಂಸ್ಥೆ ಸಾರ್ವಜನಿಕ ಸೇವಾದಿನ'ವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಜಗತ್ತಿನ ವಿವಿಧ 11 ರಾಷ್ಟ್ರಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕ ಸೇವಾ ಸಂಸ್ಥೆ(ಇಲಾಖೆ)ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು..

2005: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

1997: ಜೈನ ಧರ್ಮದ ತೇರಾಪಂಥದ ಸ್ಥಾಪಕ ಆಚಾರ್ಯ ತುಳಸಿ ನಿಧನ.

1995: ವೈದ್ಯಕೀಯ ತಜ್ಞ ಡಾ. ಜಾನ್ ಸಾಲ್ಕ್ ತಮ್ಮ 80ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಜೊಲ್ಲಾದಲ್ಲಿ ನಿಧನರಾದರು. ಇವರು ಪೋಲಿಯೋ ವಿರುದ್ಧ ಮೊತ್ತ ಮೊದಲಿಗೆ ಲಸಿಕೆ ಅಭಿವೃದ್ಧಿ ಪಡಿಸಿದರು.

1985: ಏರ್ ಇಂಡಿಯಾ 747 `ಎಂಪರರ್ ಕನಿಷ್ಕ' ವಿಮಾನ ಐರಿಷ್ ಕರಾವಳಿಯಲ್ಲಿ ಸ್ಫೋಟಗೊಂಡು ಅದರಲ್ಲಿದ್ದ 329 ಜನ ಅಸುನೀಗಿದರು. ಈ ವಿಮಾನಸ್ಫೋಟಕ್ಕೆ ಸಿಖ್ ಭಯೋತ್ಪಾದಕರು ಕಾರಣ ಎಂದು ಶಂಕಿಸಿ ಖಟ್ಲೆ ಹೂಡಲಾಗಿತ್ತು. ಇದರ ವಿಚಾರಣೆ ಇತ್ತೀಚಿನವರೆಗೂ ನಡೆಯಿತು.

1981: ಪ್ರಮುಖ ಕಾಂಗೈ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೆ. ಪಾಟೀಲ ಅವರು ಈದಿನ  ನಿಧನರಾದರು.

1980: ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1956: ಗಮೆಲ್ ಅಬ್ದುಲ್ ನಾಸ್ಸೇರ್ ಈಜಿಪ್ಟಿನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿತ್ತು. ನಾಸ್ಸೇರ್ ಕಣದಲ್ಲಿ ಇದ್ದ ಏಕೈಕ ಅಭ್ಯರ್ಥಿ.

1955: ಕಲಾವಿದ ಪುಟ್ಟೇಗೌಡ ಎಚ್. ಬಿ. ಜನನ.

1953: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕಾಶ್ಮೀರದ ಸೆರೆಮನೆಯೊಂದರಲ್ಲಿ ಮೃತರಾದರು.

1953: ಕಲಾವಿದೆ ಇಂದೂ ವಿಶ್ವನಾಥ್ ಜನನ.

1941: ಕಲಾವಿದ ಪ್ರಭಾಶಂಕರ್ ಜನನ.

1932: ಕಲಾವಿದ ರಾಜಾರಾಮ್ ಗಿರಿಯನ್ ಜನನ.

1931: ಸಾಹಿತಿ ದೇವಕಿ ಮೂರ್ತಿ ಜನನ.

1920: ಜನತಾ ಪಕ್ಷದ ಹಿರಿಯ ಮುಖಂಡ ಜಗನ್ನಾಥರಾವ್ ಜೋಶಿ ಜನನ.

1912: ಸಾಹಿತಿ ಜಯದೇವಿ ತಾಯಿ ಲಿಗಾಡೆ ಜನನ.

1896: ಕನ್ನಡ ರಂಗಭೂಮಿಯ ಭೀಷ್ಮ ಪಿತಾಮಹರೆನಿಸಿದ್ದ ಆರ್. ನಾಗೇಂದ್ರರಾವ್ ಅವರು ರಟ್ಟಿಹಳ್ಳಿ ಕೃಷ್ಣರಾವ್ - ರುಕ್ಮಿಣಿದೇವಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. ಅಪೂರ್ವ ಸಹೋದರಗಳ್, ಸತಿ ಸುಲೋಚನಾ, ವಸಂತ ಸೇನಾ, ಗಾಳಿ ಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿ ನೋಡು, ವೀರ ಕೇಸರಿ, ಕರುಳಿನ ಕರೆ ಮುಂತಾದ ಚಿತ್ರಗಳಲ್ಲಿ ತಮ್ಮ ಅಚ್ಚಳಿಯದ ಅಭಿನಯದಿಂದ ಜನಮನದಲ್ಲಿ ವಿರಾಜಮಾನರಾದವರು ನಾಗೇಂದ್ರರಾವ್. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದ್ದವು.

1868: ಕ್ರಿಸ್ಟೋಫರ್ ಲಾಥಮ್ ಶೋಲ್ಸ್ ತಮ್ಮ ಸಂಶೋಧನೆ `ಟೈಪ್ ರೈಟರ್'ಗೆ ಪೇಟೆಂಟ್ ಪಡೆದರು.

1761: ಮರಾಠಾ ದೊರೆ ಪೇಶ್ವಾ ಬಾಲಾಜಿ ಬಾಜಿ ರಾವ್ ಮೂರನೇ ಪಾಣಿಪತ್ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಅದೇ ದುಃಖದಲ್ಲಿ ಅಸುನೀಗಿದ.

1757: ರಾಬರ್ಟ್ ಕ್ಲೈವನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್- ದೌಲನನ್ನು ಸೋಲಿಸಿದ. ಈ ಜಯದಿಂದ ಬ್ರಿಟಿಷರಿಗೆ ಬಂಗಾಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಯಿತು. ಇದು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೂ ಅಡಿಗಲ್ಲಾಯಿತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment