ಇಂದಿನ ಇತಿಹಾಸ History
Today
ಜುಲೈ 17
2020: ನವದೆಹಲಿ: ದಾಖಲೆ ಪ್ರಮಾಣದ ಒಂದೇ ದಿನದ ಏರಿಕೆಯಲ್ಲಿ ೩೪,೯೫೬ ಹೊಸ ಕೋವಿಡ್-೧೯ ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ಭಾರತದ ಕೊರೋನಾ ಪ್ರಕರಣಗಳ ಸಂಖ್ಯೆ 2020 ಜುಲೈ 17ರ ಶುಕ್ರವಾರ ಹತ್ತು ಲಕ್ಷ ದಾಟಿತು. ಕೋವಿಡ್ ಪ್ರಕರಣಗಳ ಸಂಖ್ಯೆ ೯ ಲಕ್ಷ ದಾಟಿದ ಕೇವಲ ಮೂರು ದಿನಗಳ ಬಳಿಕ ಅದು ೧೦ ಲಕ್ಷವನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳು ತಿಳಿಸಿದವು. ದೇಶದ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ ೧೦,೦೩,೮೩೨ ಕ್ಕೆ ಏರಿದರೆ, ಸಾವಿನ ಸಂಖ್ಯೆ ೨೫,೬೦೨ ಕ್ಕೆ ಏರಿದೆ. ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ ೬೮೭ ಸಾವುಗಳು ದಾಖಲಾಗಿವೆ ಎಂದು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ನವೀಕರಿಸಲಾದ ಮಾಹಿತಿ ಹೇಳಿತು. ಕಳೆದ ೨೪ ಗಂಟೆಗಳಲ್ಲಿ ಒಟ್ಟು ೨೨,೯೪೨ ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಕೂಡಾ ಏಕದಿನದಲ್ಲಿ ಅತ್ಯಂತ ಹೆಚ್ಚು ಚೇತರಿಕೆಯ ದಾಖಲೆ ನಿರ್ಮಿಇಸಿದೆ. ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಒಟ್ಟು ಪ್ರಕರಣಗಳ ಸಂಖ್ಯೆ ೬,೩೫,೭೫೬ಕ್ಕೆ ಏರಿದೆ. ಪ್ರಸ್ತುತ ೩,೪೨,೪೭೩ ಸಕ್ರಿಯ ಕೋವಿಡ್-೧೯ ಪ್ರಕರಣಗಳಿವೆ. "ಹೀಗಾಗಿ, ಇದುವರೆಗೆ ಸುಮಾರು ೬೩.೩೩ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸತತ ಆರನೇ ದಿನ ೨೮,೦೦೦ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ಇಸ್ಲಾಮಾಬಾದ್: ಭಾರತೀಯ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಿದ ಒಂದು ದಿನದ ಬಳಿಕ, ಪಾಕಿಸ್ತಾನದಲ್ಲಿ ಗೂಢಚರ್ಯೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ನೌಕಾಪಡೆ ಅಧಿಕಾರಿಯನ್ನು ಭೇಟಿ ಮಾಡಲು ಇನ್ನೊಂದು ರಾಜತಾಂತ್ರಿಕ ಅವಕಾಶ ನೀಡಲು ತಾನು ನಿರ್ಧರಿಸಿರುವುದಾಗಿ ಪಾಕಿಸ್ತಾನ 2020 ಜುಲೈ 17ರ ಶುಕ್ರವಾರ ಹೇಳಿತು. ಜಾಧವ್ ಭೇಟಿಗೆ ಇದು ಮೂರನೇ ರಾಜತಾಂತ್ರಿಕ ಅವಕಾಶವಾಗಲಿದೆ. ಬೆಳವಣಿಗೆಯನ್ನು ದೃಢಪಡಿಸಿದ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಸಭೆಯ ವೇಳೆಯಲ್ಲಿ ಭದ್ರತಾ ಸಿಬ್ಬಂದಿ ಇರಬಾರದು ಎಂಬ ಭಾರತದ ಬೇಡಿಕೆಯನ್ನು ತಾವು ಒಪ್ಪಿರುವುದಾಗಿ ಹೇಳಿದರು. ಆದಾಗ್ಯೂ, ಗುರುವಾರ ಜಾಧವ್ ಅವರನ್ನು ಭೇಟಿ ಮಾಡಲು ಬಂದ ಭಾರತೀಯ ಅಧಿಕಾರಿಗಳು ಅವರನ್ನು ಆಲಿಸದೆಯೇ ವಾಪಸಾದರು ಎಂದು ಖುರೇಶಿ ನುಡಿದರು. ’ಜಾಧವ್ ತನ್ನ ಜೊತೆ ಮಾತನಾಡುವಂತೆ ಭಾರತೀಯ ರಾಜತಾಂತ್ರಿಕರನ್ನು ಕೇಳುತ್ತಿದ್ದರು ಮತ್ತು ಅವರು (ಅಧಿಕಾರಿಗಳು) ನೇರ ಹೊರಟು ಹೋದರು’ ಎಂದು ಖುರೇಶಿ ಪ್ರತಿಪಾದಿಸಿದರು. ಭಾರತೀಯ ಅಧಿಕಾರಿಗಳ ವರ್ತನೆ ’ಚಕಿತಗೊಳಿಸುವಂತಹುದು’ ಎಂದು ನುಡಿದ ಖುರೇಶಿ, ’ಭಾರತೀಯ ರಾಜತಾಂತ್ರಿಕರಿಗೆ ಜಾಧವ್ ಜೊತೆ ಮಾತನಾಡಲು ಇಷ್ಟವಿಲ್ಲವಾದರೆ, ಅವರು ರಾಜತಾಂತ್ರಿಕ ಭೇಟಿಗೆ ಕೋರುವುದು ಏಕೆ?’ ಎಂದು ಪ್ರಶ್ನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲುಕುಂಗ್ (ಲಡಾಕ್): ಚೀನಾದ ಜೊತೆಗೆ ಲಡಾಕ್ ಪ್ರದೇಶದಲ್ಲಿನ ಗಡಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ, ಆದರೆ ಇದರ ಬಗ್ಗೆ ಏನನ್ನೂ ಖಚಿತವಾಗಿ ಹೇಳಲಾಗದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ 2020 ಜುಲೈ 17ರ ಶುಕ್ರವಾರ ಇಲ್ಲಿ ಹೇಳಿದರು. ಲಡಾಖ್ನ ಲುಕುಂಗ್ ಪ್ರದೇಶಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆ ಮತ್ತು ಭಾರತ - ಟಿಬೆಟ್ ಗಡಿ ಪೊಲೀಸ್ ಪಡೆ (ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್-ಐಟಿಬಿಪಿ) ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು. ಯೋಧರೊಂದಿಗೆ ಚಹಾ ಕುಡಿಯುತ್ತಾ ಕೆಲವರಿಗೆ ಸಿಹಿ ತಿನ್ನಿಸಿ ಕುಶಲೋಪರಿ ವಿಚಾರಿಸಿದರು. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಜೊತೆಗಿದ್ದರು. ಜೂನ್ ೧೫ರಂದು ಪೂರ್ವ ಲಡಾಖ್ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಪಡೆಗಳ ನಡುವಣ ಸಂಘರ್ಷದ ಬಳಿಕವೂ ಉಭಯ ರಾಷ್ಟ್ರಗಳ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಗಡಿ ಸಮಸ್ಯೆ ಶಮನಗೊಳಿಸುವ ಸಲುವಾಗಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ’ಗಡಿ ವಿವಾದ ಇತ್ಯರ್ಥಕ್ಕಾಗಿ ಪರಸ್ಪರ ಮಾತುಕತೆ ನಡೆಯುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಅದು ಫಲಪ್ರದವಾಗಲಿದೆ ಎಂಬುದನ್ನು ಖಚಿತಪಡಿಸಲಾರೆ. ಜಗತ್ತಿನ ಯಾವುದೇ ಶಕ್ತಿಯಿಂದ ನಮ್ಮ ನೆಲದ ಒಂದು ಅಂಗುಲ ಜಾಗವನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ನಾನು ಭರವಸೆ ನೀಡುತ್ತೇವೆ.’ ಎಂದು ರಾಜನಾಥ್ ಸಿಂಗ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಜುಲೈ 17 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment