Thursday, July 30, 2020

ಇಂದಿನ ಇತಿಹಾಸ History Today ಜುಲೈ 30

ಇಂದಿನ ಇತಿಹಾಸ  History Today ಜುಲೈ 30

2020: ಲಕ್ನೋ: ಅಯೋಧ್ಯೆಯಲ್ಲಿನ ರಾಮಮಂದಿರಕ್ಕಾಗಿ 2020 ಆಗಸ್ಟ್ ೫ರಂದು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ನಡೆಸಲು ನಿಗದಿಯಾಗಿರುವ ಭವ್ಯ ಭೂಮಿ ಪೂಜೆ ಸಮಾರಂಭದ ಮೇಲೆ ಕೊರೋನಾವೈರಸ್ ತನ್ನ ಕರಿನೆರಳನ್ನು ಚಾಚಿದ್ದು, ಅರ್ಚಕ ಮತ್ತು ೧೬ ಮಂದಿ ಭದ್ರತಾ ಸಿಬ್ಬಂದಿಗೆ ಕೋವಿಡ್-೧೯ ಸೋಂಕು ತಗುಲಿದೆ.  ಅರ್ಚಕ ಪ್ರದೀಪ ದಾಸ್ ಅವರಿಗೆ ಕೊರೋನಾವೈರಸ್ ಸಾಂಕ್ರಾಮಿಕ ತಗುಲಿದೆ. ದಾಸ್ ಅವರು ನಿವೇಶನದಲ್ಲಿ ನಿಯಮಿತವಾಗಿ ಪೂಜೆ ನಡೆಸುತ್ತಿರುವ ನಾಲ್ವರು ಅರ್ಚಕರ ಪೈಕಿ ಒಬ್ಬರಾದ ಆಚಾರ್ಯ  ಸತೇಂದ್ರ ದಾಸ್ ಅವರ ಶಿಷ್ಯನಾಗಿದ್ದಾರೆ. ಪ್ರದೀಪ ದಾಸ್ ಅವರು ಪ್ರಸ್ತುತ ಹೋಮ್ ಕ್ಯಾರಂಟೈನಿನಲ್ಲಿ ಇದ್ದು, ಅವರ ಜೊತೆಗೆ ಸಂಪರ್ಕ ಹೊಂದಿದ್ದವರ ಪತ್ತೆ ಯತ್ನವನ್ನು ತೀವ್ರಗೊಳಿಸಲಾಗಿದೆ. ಇದಕ್ಕೆ ಮುನ್ನ ಬುಧವಾರ ಸತೇಂದ್ರ ದಾಸ್ ಅವರ ಸಂದರ್ಶನ ನಡೆಸಿದ್ದ ಕೆಲವು ಮಾಧ್ಯಮ ಮಂದಿ ಕೂಡಾ ಇದೀಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಉತ್ತರ ಪ್ರದೇಶ ಆರೋಗ್ಯ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅಯೋಧ್ಯೆಯಲ್ಲಿ 2020 ಜುಲೈ 29ರ ಬುಧವಾರ ೬೬ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈವರೆಗೆ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಚೇತರಿಸಿದ ೬೦೫ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ೩೭೫ ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಈವರೆಗೆ ೧೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೇಶದ ವಿವಿಧ ಕಡೆಗಳಿಂದ ಆಗಮಿಸಲಿರುವ ಗಣ್ಯರು ಭೂಮಿ ಪೂಜಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಭೂಮಿ ಪೂಜೆಯ ಭವ್ಯ ಸಮಾರಂಭದ ಯಸ್ಸಿಗಾಗಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸರ್ವ ಯತ್ನಗಳನ್ನು ನಡೆಸುತ್ತಿದೆ. ಎರಡು ವಾಟರ್ ಪ್ರೂಫ್ ಪೆಂಡಾಲ್ಗಳು ಮತ್ತು ಸಣ್ಣ ವೇದಿಕೆಯನ್ನು ನಿರ್ಮಿಸಲಾಗಿದೆ.  ಅಯೋಧ್ಯಾ ರಾಮಮಂದಿರದ ಭೂಮಿ ಪೂಜೆಯನ್ನು ದೀಪಾವಳಿ ಹಬ್ಬದೋಪಾದಿಯಲ್ಲಿ ನಡೆಸಲು ಭರದ ಸಿದ್ಧತೆಗಳು ನಡೆಯುತ್ತಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರ ಜೊತೆಗೆ ಹೊಸ ಸುಪ್ರೀಂ ಕೋರ್ಟ್ ಕಟ್ಟಡವನ್ನು 2020 ಜುಲೈ 30ರ ಗುರುವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ನೆರೆಹೊರೆಯ ದೇಶಗಳಿಗೆ ಅವುಗಳ ಆದ್ಯತೆಗೆ ಅನುಗುಣವಾಗಿ ನೀಡುವ ಅಭಿವೃದ್ಧಿ ನೆರವು ಯಾವುದೇ ಷರತ್ತು ರಹಿತವಾದದ್ದು ಎಂದು ಸ್ಪಷ್ಟ ಪಡಿಸಿದರು. ಷರತ್ತು ರಹಿತವಾಗಿ ಅಭಿವೃದ್ಧಿ ನೆರವು ನೀಡುವುದು ಭಾರತದ ದಾಖಲೆಯಾಗಿದೆ ಎಂದು, ಅಭಿವೃದ್ಧಿ ಸಹಕಾರದಲ್ಲಿ ತೊಡಗಿರುವ ಇತರ ನೆರೆಹೊರೆ ದೇಶಗಳನ್ನು ಉಲ್ಲೇಖಿಸದೆಯೇ ಪ್ರಧಾನಿ ಹೇಳಿದರು. ತನ್ಮೂಲಕ ಪ್ರಧಾನಿಯವರು ಭಾರತೀಯ ನೆರವು ಮತ್ತು ದೇಶಗಳನ್ನು ಸಾಲದ ಬಲೆಯಲ್ಲಿ ಕೆಡವುತ್ತಿರುವ ಚೀನಾ ಬೆಂಬಲಿತ ಯೋಜನೆಗಳ ನೆರವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು.  ವರ್ಚುವಲ್ ಸಮಾರಂಭದಲ್ಲಿ ಮಾತನಾಡಿದ ಮೋದಿ, ’ಅಭಿವೃದ್ಧಿ ನಿಟ್ಟಿನಲ್ಲಿ ಭಾರತದ ನಡೆಯು ಮಾನವ ಕೇಂದ್ರಿತವಾಗಿದೆ ಮತ್ತು ಅದರ ಅಭಿವೃದ್ಧಿ ಪಾಲುದಾರಿಕೆಗಳು ರಾಷ್ಟ್ರಗಳ ಗೌರವ, ವೈವಿಧ್ಯತೆ, ಭವಿಷ್ಯದ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟಿವೆಎಂದು ಹೇಳಿದರು. ಭಾರತಕ್ಕೆ ಸಂಬಂಧಿಸಿದಂತೆ, ಅಭಿವೃದ್ಧಿ ಸಹಕಾರದ ಅತ್ಯಂತ ಮೂಲಭೂತ ತತ್ವವೆಂದರೆ ನಮ್ಮ ಪಾಲುದಾರರನ್ನು ಗೌರವಿಸುವುದು. ಅಭಿವೃದ್ಧಿ ಪಾಠಗಳ ಹಂಚಿಕೊಳ್ಳುವಿಕೆ ನಮ್ಮ ಏಕೈಕ ಪ್ರೇರಣೆಎಂದು ಮೋದಿ ನುಡಿದರು. "ಹೀಗಾಗಿಯೇ ನಮ್ಮ ಅಭಿವೃದ್ಧಿ ಸಹಕಾರವು ಯಾವುದೇ ಷರತ್ತುಗಳೊಂದಿಗೆ ಬರುವುದಿಲ್ಲ. ಇದು ರಾಜಕೀಯ ಅಥವಾ ವಾಣಿಜ್ಯ ಪರಿಗಣನೆಗಳಿಂದ ಪ್ರಭಾವಿತವಾಗುವುದಿಲ್ಲಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಅವರಿಗೆ ವಿಧಿಸಲಾಗಿದ್ದ ವರ್ಷಗಳ ಸೆರೆವಾಸಕ್ಕೆ ದೆಹಲಿ ಹೈಕೋರ್ಟ್ 2020 ಜುಲೈ 30ರ ಗುರುವಾರ ತಡೆಯಾಜ್ಞೆ ನೀಡಿದೆ ಎಂದು ಜಯಾ ಜೇಟ್ಲಿ ಪರ ವಕೀಲರು ತಿಳಿಸಿದರು. ತಮಗೆ ಸೆರೆವಾಸ ವಿಧಿಸಿದ್ದನ್ನು ಪ್ರಶ್ನಿಸಿ ಜಯಾ ಜೇಟ್ಲಿ ಅವರು ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುರೇಶ ಕುಮಾರ್ ಕೈಟ್ ಅವರು ಸಿಬಿಐಯ ಪ್ರತಿಕ್ರಿಯೆ ಕೋರಿದರು ಎಂದು ವಕೀಲ ಅಭಿಜಿತ್ ಹೇಳಿದರು. ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಪಿಪಿ ಮಲ್ಹೋತ್ರ ಮೂಲಕ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದ ಜಯಾ ಜೇಟ್ಲಿ ವಿಚಾರಣಾ ನ್ಯಾಯಾಲಯವು ತನಗೆ ಶಿಕ್ಷೆ ವಿಧಿಸಿ ಜುಲೈ ೨೧ರಂದು ನೀಡಿದ ಆದೇಶವನ್ನು ಪ್ರಶ್ನಿಸಿದ್ದಾರೆ. ೨೦೦೦-೨೦೦೧ರ ಸಾಲಿನ ರಕ್ಷಣಾ ವ್ಯವಹಾರ ಒಂದಕ್ಕೆ ಸಂಬಂಧಿಸಿದಂತೆ ಜೇಟ್ಲಿ ಮತ್ತು ಇತರ ಇಬ್ಬರು ಆರೋಪಿಗಳು ತಪ್ಪಿತಸ್ಥರು  ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು ಎಂದು ವಕೀಲರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ) 

2020: ನವದೆಹಲಿ: ಎರಡು ನೆರೆಹೊರೆ ದೇಶಗಳ ನಡುವಣ ಉದ್ವಿಗ್ನತೆಗಳಿಗೆ ಪರಿಹಾರ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ  ಭಾರತವು ಹಿಮಾಲಯದಲ್ಲಿನ ಚೀನಾ ಜೊತೆಗಿನ ತನ್ನ ವಿವಾದಿತ ಗಡಿಯಲ್ಲಿ ೩೫,೦೦೦ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ. ಕ್ರಮವು ವಿವಾದಾತ್ಮಕವಾದ ,೪೮೮ ಕಿಲೋಮೀಟರ್ (,೧೬೨ ಮೈಲಿ) ಉದ್ಧದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುತ್ತದೆ ಮತ್ತು ಈಗಾಗಲೇ ಬಿಗಿಯಾಗಿರುವ ರಾಷ್ಟ್ರದ ಮಿಲಿಟರಿ ಬಜೆಟನ್ನು ಹೆಚ್ಚಿಸುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಭಾರತದ ಹಿರಿಯ ಅಧಿಕಾರಿಗಳು 2020 ಜುಲೈ 30ರ ಗುರುವಾರ ಹೇಳಿದರು. ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಹಿಂಸಾತ್ಮಕ ಚಕಮಕಿಯಲ್ಲಿ ಭಾರತದ ಇಪ್ಪತ್ತು ಯೋಧರು ಹುತಾತ್ಮರಾಗಿದ್ದರೆ ಚೀನಾ ಕಡೆಯಲ್ಲಿ ಅಸಂಖ್ಯಾತ ಸೈನಿಕರು ಸಾವನ್ನಪ್ಪಿದ್ದಾರೆ. ಬಳಿಕದಿಂದ ಉಭಯ ಕಡೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರು, ಫಿರಂಗಿ, ಬಂದೂಕು ಮತ್ತು  ಮತ್ತು ಸಮರ ಟ್ಯಾಂಕ್ಗಳನ್ನು ಪ್ರದೇಶಕ್ಕೆ ಒಯ್ದಿದ್ದಾರೆ. ಭಾರತ-ಚೀನಾ ಗಡಿ ಒಪ್ಪಂದಗಳು ರೂಪುಗೊಳ್ಳದ ಕಾರಣ, ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ಸೈನಿಕರ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ / ನವದೆಹಲಿ: ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ಪುನರಪಿ ಮನವಿಗಳ ಬಳಿಕ  2020 ಆಗಸ್ಟ್ ೧೪ ರಿಂದ ವಿಧಾನಸಭೆ ಅಧಿವೇಶನ ಕರೆಯಲು ರಾಜಸ್ಥಾನ ರಾಜ್ಯಪಾಲ ಕಲರಾಜ್ ಮಿಶ್ರ  ಅವರು ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಅಧಿವೇಶನದಲ್ಲಿ ತಾವು ಪಾಲ್ಗೊಳ್ಳುವುದಾಗಿ ಸಚಿನ್ ಪೈಲಟ್ ನೇತೃತ್ವದ ಬಂಡಾಯ ಶಾಸಕರ ಬಣ 2020 ಜುಲೈ 30ರ ಗುರುವಾರ ಹೇಳಿತು. ಪೈಲಟ್ ಬಣದ ಹೇಳಿಕೆಯು ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿತು.  ಪ್ರಸ್ತುತ ಹರಿಯಾಣದಲ್ಲಿ ಬೀಡುಬಿಟ್ಟಿರುವ ಸಚಿನ್ ಪೈಲಟ್ ಮತ್ತು ೧೮ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಮುರಿದ ನಂತರ ಇದೇ ಮೊದಲ ಬಾರಿಗೆ ಜೈಪುರಕ್ಕೆ ಮರಳಲು ರಕ್ಷಣೆ ಕೋರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿದವು. ಅಧಿವೇಶನಕ್ಕೆ ಹಾಜರಾಗುವಿರಾ?’ ಎಂಬ ಪ್ರಶ್ನೆಗೆ ಬಂಡಾಯ ಶಾಸಕರೊಬ್ಬರು, "ಖಂಡಿತ, ನಾವು ಹಾಜರಾಗುತ್ತೇವೆಎಂದು ಉತ್ತರಿಸಿದರು. ಜೈಪುರಕ್ಕೆ ಮರಳಲು ಯಾವುದೇ ದಿನಾಂಕವನ್ನು ಬಂಡಾಯ ಶಾಸಕರು ನಿಗದಿಪಡಿಸಿಲ್ಲ. ಸಚಿನ್ ಪೈಲಟ್ ಬಂಡಾಯ ಪ್ರಾರಂಭಿಸಿದ ಜುಲೈ ೧೧ ರಿಂದ ಅವರು ದೆಹಲಿ ಸಮೀಪದ ಮಾನೇಸರ್ನಲ್ಲಿರುವ ಎರಡು ರೆಸಾರ್ಟ್ಗಳಲ್ಲಿ ಶಿಬಿರ ಹೂಡಿದ್ದಾರೆ. ಬಂಡುಕೋರರು ಅಧಿವೇಶನಕ್ಕೆ ಹಾಜರಾಗದಿದ್ದರೆ, ಅವರು ಸಚೇತಕಾಜ್ಞೆ ಧಿಕ್ಕರಿಸಿದ್ದಕ್ಕಾಗಿ ಸದಸ್ಯತ್ವದಿಂದ ಅನರ್ಹರಾಗುತ್ತಾರೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕಾಂಗ್ರೆಸ್ ದೂರಿನ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸುವ ಸ್ಪೀಕರ್ ಸಿಪಿ ಜೋಶಿ ಅವರ ಕ್ರಮಗಳ ವಿರುದ್ಧ ಬಂಡಾಯ ಶಾಸಕರು ಪ್ರಸ್ತುತ ಹೋರಾಡುತ್ತಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶದ ಒಟ್ಟು ಕೊರೋನಾ ಸೋಂಕಿತರ ಪೈಕಿ ೧೦ ಲಕ್ಷಕ್ಕೂ ಹೆಚ್ಚು ಮಂದಿ ಸಂಪೂರ್ಣ ಗುಣಮುಖರಾಗಿ ಚೇತರಿಸಿದ್ದು, ಸಾವಿನ ಪ್ರಮಾಣ ಶೇಕಡಾ .೧ಕ್ಕೆ ಇಳಿದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಸರ್ಕಾರ  2020 ಜುಲೈ 30ರ ಗುರುವಾರ ತಿಳಿಸಿತು. ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿ ಸಂಖ್ಯೆಗಳ ಪ್ರಕಾರ ಭಾರತದ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ೧೬,೧೬,೭೬೭. ಸಾವಿನ ಸಂಖ್ಯೆ ೩೫,೩೭೪. ಚೇತರಿಸಿದವರ ಸಂಖ್ಯೆ ೧೦,೨೯,೦೬೯.  ದೇಶಾದ್ಯಂತ ಹೆಚ್ಚಿರುವ ಕೊರೊನಾ ಸುನಾಮಿ ವಿರುದ್ಧ ಹೋರಾಟ ನಡೆಸಲು ಹಲವಾರು ತಂತ್ರಗಳನ್ನು ಉಪಯೋಗಿಸಲಾಗಿದೆ. ಬಗ್ಗೆ ಈಗಾಗಲೇ ಚರ್ಚೆಗೆ ಬಂದಿರುವ ಸಮುದಾಯ ಪ್ರತಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ)ಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಆರ್. ಭೂಷಣ್, ’ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಹರ್ಡ್ ಇಮ್ಯುನಿಟಿಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ಕೊರೊನಾದ ಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕಾಗಿದೆ ಎಂದು ತಿಳಿಸಿದರು. ಒಟ್ಟು ಜನಸಂಖ್ಯೆಯ ಶೇಕಡ ೭೦ ರಿಂದ ೯೦ರಷ್ಟು ಮಂದಿಗೆ ಸೋಂಕು ತಗುಲಿದಾಗ ಹರ್ಡ್ ಇಮ್ಯುನಿಟಿ ತಂತ್ರ ಪ್ರಯೋಜನಕಾರಿ. ಆದರೆ ಇದನ್ನೇ ಈಗ ಬಳಸಲು ಸಾಧ್ಯವಿಲ್ಲ ಎಂದು ಭೂಷಣ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 30 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment