Saturday, July 20, 2019

ಇಂದಿನ ಇತಿಹಾಸ History Today ಜುಲೈ 20

ಇಂದಿನ ಇತಿಹಾಸ History Today ಜುಲೈ 20
2019: ಕೇರಳ: ಕೇರಳದ  ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಹಲವಡೆ ಪ್ರವಾಹ ಸ್ಥಿತಿ ಉಂಟಾಯಿತು. ಭಾರತೀಯ ಹವಾಮಾನ ಇಲಾಖೆಯು ಜುಲೈ 22ರವರೆಗೆ ಕಟ್ಟೆಚ್ಚರವನ್ನು ಘೋಷಿಸಿತು. ಏಳು ಮಂದಿ ಮೀನುಗಾರರು ಕಣ್ಮರೆಯಾಗಿದ್ದು, ಎರಡು ಜಿಲ್ಲೆಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆಯಲಾಯಿತು. ನೈಋತ್ಯ ಮುಂಗಾರು ತೀವ್ರಗೊಂಡ ಪರಿಣಾಮವಾಗಿ ಸತತ ಎರಡನೇ ದಿನವೂ ಜಡಿಮಳೆ ಸುರಿಯಿತು. ಕಣ್ಮರೆಯಾಗಿರುವ ಮೀನುಗಾರರು ವಿಳ್ಹಿಂಜಮ್ ಮತ್ತು ಕೊಲ್ಲಂನ ಶಕ್ತಿಕುಲ್ನಗರದಿಂದ ಪ್ರತ್ಯೇಕ ದೋಣಿಗಳಲ್ಲಿ ಸಮುದ್ರದತ್ತ ತೆರಳಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿದವು. ಕಾಸರಗೋಡು, ಇಡುಕ್ಕಿ, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸೂಚಿಸಿತು.

2018: ನವದೆಹಲಿ: ಇಡೀ ರಾಷ್ಟ್ರವೇ ಕುತೂಹಲದಿಂದ ವೀಕ್ಷಿಸುತ್ತಿದ್ದ ಅವಿಶ್ವಾಸ ನಿರ್ಣಯದ ಅಗ್ನಿ
ಪರೀಕ್ಷೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಯ ಗಳಿಸುವುದರ ಜೊತೆಗೇ ೨೦೨೪ರಲ್ಲಿ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವಿಪಕ್ಷಗಳಿಗೆ ಸವಾಲು ಎಸೆದರು.  ತೆಲುಗುದೇಶಂ ಪಕ್ಷವು (ಟಿಡಿಪಿ) ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಸದನವು ಧ್ವನಿಮತದಿಂದ ತಿರಸ್ಕರಿಸಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದಾಗ ಒಟ್ಟು ೪೫೧ ಮತಗಳ ಪೈಕಿ ೧೨೬ ಮತಗಳು ನಿರ್ಣಯದ ಪರವಾಗಿಯೂ, ೩೨೫ ಮತಗಳು ನಿರ್ಣಯಕ್ಕೆ ವಿರುದ್ಧವಾಗಿಯೂ ಬಂದವು. ಇದಕ್ಕೂ ಮುನ್ನ ನಿರ್ಣಯದ ಪರವಾಗಿರುವವರು ಹೌದು ಎಂಬುದಾಗಿಯೂ, ವಿರುದ್ಧವಾಗಿರುವವರು ಇಲ್ಲ ಎಂಬುದಾಗಿಯೂ ಸೂಚಿಸುವಂತೆ ಸುಮಿತ್ರಾ ಮಹಾಜನ್ ಸೂಚಿಸಿದಾಗ ಧ್ವನಿ ಮತವು ನಿರ್ಣಯಕ್ಕೆ ವಿರುದ್ಧವಾಗಿ ಮೂಡಿ ಬಂತು.  ತೆಲುಗುದೇಶಂ ಪಕ್ಷವು ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಇಡೀ ದಿನದ ಚರ್ಚೆಗೆ ಬಳಿಕ ಒಂದೂವರೆ ಗಂಟೆಗಳ ಸುದೀರ್ಘ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ’೨೦೨೪ರವರೆಗೂ ತಾವೇ ಅಧಿಕಾರದಲ್ಲಿ ಮುಂದುವರೆಯುವುದಾಗಿ ಪರೋಕ್ಷವಾಗಿ ಸೂಚಿಸಿದ್ದಲ್ಲದೆ, ೨೦೨೪ರಲ್ಲಿ ಇನ್ನೊಮ್ಮೆ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ವಿಪಕ್ಷಗಳಿಗೆ ಸವಾಲು ಹಾಕಿದರು.  ತಮ್ಮ ಬಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಪುಂಖಾನುಪುಂಖವಾಗಿ ತರಾಟೆಗೆ ತೆಗೆದುಕೊಂಡ ಅವರು, ರೈತರಿಗೆ ಬೆಂಬಲ ಬೆಲೆ ಏರಿಕೆಯಿಂದ ಹಿಡಿದು, ತ್ರಿವಳಿ ತಲಾಖ್ ಮಸೂದೆಯವರೆಗೆ ತಮ್ಮ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು. ದೇಶಾದ್ಯಂತ ರಸ್ತೆಗಳ ನಿರ್ಮಾಣವಾಗುತ್ತಿರುವ ಬಗ್ಗೆ, ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿದ್ದು, ಲಕ್ಷಾಂತರ ಉದ್ಯೋಗ ಸೃಷ್ಟಿ ಸೇರಿದಂತೆ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಮುಂದಿಟ್ಟರು.  ರಾಷ್ಟ್ರದ ೧೨೫ ಕೋಟಿ ಜನರು ಮಾತ್ರವೇ ಪ್ರಧಾನಿ ಕುರ್ಚಿಯಲ್ಲಿ ಯಾರು ಕುಳಿತುಕೊಳ್ಳಬೇಕು, ಯಾರನ್ನು ಪದಚ್ಯತಿಗೊಳಿಸಬೇಕು ಎಂದು ತೀರ್ಮಾನಿಸುತ್ತಾರೆ ಎಂದು ಅವರು ನುಡಿದರು. ರಾಹುಲ್ ಗಾಂಧಿ ಅವರ ಆಲಿಂಗನ ರಾಜಕೀಯ, ಸೋನಿಯಾ ಗಾಂಧಿ ಅವರ ಸಂಖ್ಯೆಗಳ ಲೆಕ್ಕಾಚಾರವನ್ನೂ ತರಾಟೆಗೆ ತೆಗೆದುಕೊಂಡರು. ಆಂಧ್ರ ಪ್ರದೇಶದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ನೀಡಿದ ಭರವಸೆ ಈಡೇರಿಸಲು ಸರ್ಕಾರ ಈಗಲೂ ಬದ್ಧ ಎಂದು ಅವರು ನುಡಿದರು.  ‘ನಾವು ರಾಷ್ಟ್ರದ ಜನರ ಸಲುವಾಗಿ ಮಾಡಲು ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ. ೨೦೨೪ರಲ್ಲಿ ಇನ್ನೊಂದು ಅವಿಶ್ವಾಸ ನಿರ್ಣಯವನ್ನು ತನ್ನಿ ಎಂಬುದಾಗಿ ನಾನು ನಿಮಗೆ ಸೂಚಿಸುತ್ತೇನೆ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ಚರ್ಚೆ ಆರಂಭಕ್ಕೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ’ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂದು ಅತ್ಯಂತ ಮಹತ್ವದ ದಿನ ಎಂದು ಟ್ವೀಟ್ ಮಾಡಿದ್ದರು. ಅವಿಶ್ವಾಸ ನಿರ್ಣಯವು ಒಡಿಶಾದ ಜನರಿಗೆ ಒಳ್ಳೆಯದಲ್ಲ ಎಂದು ಹೇಳಿ ಬಿಜು ಜನತಾ ದಳವು (ಬಿಜೆಡಿ) ಲೋಕಸಭೆಯಿಂದ ಸಭಾತ್ಯಾಗ ಮಾಡಿತ್ತು.  ಪಕ್ಷದ ಪರವಾಗಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ ಮೊದಲಿಗರಾಗಿ ಮಾತನಾಡಿದ ತೆಲುಗುದೇಶಂ ಪಕ್ಷದ (ಟಿಡಿಪಿ) ಜಯದೇವ ಗಲ್ಲಾ ಅವರು ಆಂಧ್ರ ಪ್ರದೇಶಕ್ಕೆ ವಿಶೇಷ ಕೆಟಗರಿ ಸ್ಥಾನಮಾನ (ಎಸ್ ಸಿಎಸ್) ನೀಡುವಂತೆ ಪುನಃ ಆಗ್ರಹಿಸಿದರು.  ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಈ ಅವಿಶ್ವಾಸ ನಿರ್ಣಯದಿಂದಾಗಿ ಬೀಳುವುದಿಲ್ಲ ಎಂದು ಪ್ರತಿಕ್ರಿಯಿಸಿದ ಎನ್ ಡಿಎ ಮಿತ್ರ ಪಕ್ಷ ಶಿವ ಸೇನಾ ಲೋಕಸಭಾ ಕಲಾಪದಿಂದ ಹೊರಗುಳಿಯುವುದಾಗಿ ಮೊದಲೇ ಪ್ರಕಟಿಸಿತ್ತು.
ಸರ್ಕಾರದ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮಗೆ ಸರ್ಕಾರದ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ಹೇಳಿ ನೇರವಾಗಿ ಪ್ರಧಾನಿ ರಾಹುಲ್ ಗಾಂಧಿ ಅವರ ಬಳಿಗೆ ತೆರಳಿ ಅವರನ್ನು ಆಲಿಂಗಿಸಿದ್ದರು.  ರಾಹುಲ್ ಗಾಂಧಿ ಅವರ ಈ ವರ್ತನೆಗೆ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಗರಂ ಆಗಿದ್ದರು. ತಾವು ಆಲಿಂಗನಕ್ಕೆ ವಿರೋಧಿಯಲ್ಲ, ಆದರೆ ಇದು ಸಂಸದೀಯ ವರ್ತನೆಗೆ ವಿರುದ್ಧ ಎಂದು ಅವರು ಆಕ್ಷೇಪಿಸಿದ್ದರು.  ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅವಿಶ್ವಾಸ ನಿರ್ಣಯದ ಪರಿಸ್ಥಿತಿ ಎದುರಿಸಿದ್ದು ಇದೇ ಮೊದಲು. ಇಡೀ ದೇಶದ ಕಣ್ಣು ಶುಕ್ರವಾರ ಸಂಪೂರ್ಣವಾಗಿ ಲೋಕಸಭಾ ಕಲಾಪದ ಮೇಲಿತ್ತು. ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನ ಮಾನ ನೀಡಲಾಗಿಲ್ಲ ಮತ್ತು ಸಾಕಷ್ಟು ಹಣ ಒದಗಿಸಲಾಗಿಲ್ಲ ಎಂಬ ಕಾರಣಕ್ಕಾಗಿ ತೆಲುಗುದೇಶಂ ಪಕ್ಷವು ತಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಇನ್ನೂ ಮುಂದಕ್ಕೆ ಸಾಗಿ ರಫೇಲ್ ವ್ಯವಹಾರದಿಂದ ಹಿಡಿದು ಗುಂಪು ಹಿಂಸಾಚಾರದವರೆಗೆ ದೇಶದ ಹಲವಾರು ವಿಷಯಗಳನ್ನು ತನ್ನ ಮಡಿಲಿಗೆ ಸೆಳೆದುಕೊಂಡಿತ್ತು. ಸದಸ್ಯರ ವಾಗ್ವಾದದ ಪರಿಣಾಮವಾಗಿ ಸದನ ಎರಡು ಬಾರಿ ಮುಂದೂಡಿಕೆಯಾಯಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಟಕೀಯ ’ಆಲಿಂಗನ ರಾಜಕೀಯಕ್ಕೂ ಸದನ ಸಾಕ್ಷಿಯಾಯಿತು.

2018: ನವದೆಹಲಿ: ಅವಿಶ್ವಾಸ ನಿರ್ಣಯದ ಸದನ ಪರೀಕ್ಷೆ ಸರ್ಕಾರಕ್ಕಲ್ಲ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಎಂದು ಲೋಕಸಭೆಯಯಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಪೂರ್ಣ ಪ್ರಮಾಣದ ಬಹುಮತವನ್ನು ಪಡೆದ ಸರ್ಕಾರದ ಜೊತೆಗೆ ನಿಲ್ಲುವಂತೆ ಮತ್ತು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವಂತೆ ಸಂಸದರಿಗೆ ಮನವಿ ಮಾಡಿದರು. ತೆಲುಗುದೇಶಂ ಪಕ್ಷವು ಇತರ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಇಡೀದಿನ ಚರ್ಚೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಸದಸ್ಯರು ಮಾಡಿದ ವಾಕ್ ಪ್ರಹಾರಕ್ಕೆ ಪ್ರಧಾನಿ ಉತ್ತರಿಸಿದರು. ಇಡೀ ದಿನ ಕಲಾಪವನ್ನು ನಡೆಸಿಕೊಟ್ಟ ಲೋಕಸಭಾಧ್ಯಕ್ಷರ ತಾಳ್ಮೆಯನ್ನು ಶ್ಲಾಘಿಸಿದ ಪ್ರಧಾನಿ ’ಅವಿಶ್ವಾಸ ನಿರ್ಣಯವು ಪ್ರಜಾಪ್ರಭುತ್ವದ ಶಕ್ತಿ. ಈ ರಾಷ್ಟ್ರದಲ್ಲಿ ರಾಜಕೀಯ ಹೇಗೆ ಆಟವಾಡುತ್ತದೆ ಎಂಬುದನ್ನು ನೋಡಲೂ ಇದು ಉತ್ತಮ ಅವಕಾಶ ಎಂದು ಮೋದಿ ನುಡಿದರು. ಅಭಿವೃದ್ಧಿಗೆ ವಿರೋಧ ಹಾಗೂ ನಕಾರಾತ್ಮಕತೆಯನ್ನು ನಾನು ಗಮನಿಸಬಲ್ಲೆ. ನಮ್ಮ ಅಭಿಪ್ರಾಯವನ್ನು ಮುಂದಿಡಲು ಇದು ಉತ್ತಮವಕಾಶ ಎಂದು ನಾನು ನಂಬುವೆ. ಆದರೆ ರಾಷ್ಟ್ರವು ಇತರರು ಪ್ರಯೋಗಿಸುತ್ತಿರುವ ನಕಾರಾತ್ಮಕತೆ ಮತ್ತು ಅಭಿವೃದ್ಧಿ ವಿರೋಧಿರಾಜಕೀಯವನ್ನೂ ಗಮನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.  ಈ ಅವಿಶ್ವಾಸ ನಿರ್ಣಯ ಏಕೆ ಎಂದು ಹಲವರು ಅಚ್ಚರಿ ಪಡುತ್ತಿದ್ದಾರೆ. ವಿರೋಧ ಪಕ್ಷಗಳು ಚರ್ಚೆಯನ್ನು ವಿಳಂಬಿಸಲು ಯತ್ನಿಸುತ್ತಿವೆ ಎಂಬುದಾಗಿ ನುಡಿದ ಮೋದಿ ’ಚರ್ಚೆಯನ್ನು ವಿಳಂಬಿಸುವುದರಿಂದ ಭೂಕಂಪ ಸಂಭವಿಸುತ್ತದೆಯೇ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದರು.  ರಾಹುಲ್ ಗಾಂಧಿಯವರ ಅಪ್ಪುಗೆ ನೀತಿಯನ್ನೂ ಪ್ರಸ್ತಾಪಿಸಿದ ಪ್ರಧಾನಿ, ’ನನ್ನನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ಅವರಿಗಿದ್ದ ಅವಸರ ನನ್ನನ್ನು ಅಚ್ಚರಿಗೊಳಿಸಿದೆ. ನೀವು ಜನರು ಮತ್ತು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇರಿಸಬೇಕು. ನನ್ನನ್ನು ಅಪ್ಪಿಕೊಳ್ಳಲು ಜನರು ಧಾವಿಸಿದ್ದಾರೆ. ಅವರಿಗೆ ಏನವಸರ?’ ಎಂದು ಪ್ರಶ್ನಿಸಿದರು.  ೨೦೧೯ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಪ್ರಧಾನಿಯಾಗುವೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಕಷ್ಟ ಪಟ್ಟ ಇತರರ ಗತಿ ಏನು? ಎಂದು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಮೋದಿ ತರಾಟೆಗೆ ತೆಗೆದುಕೊಂಡರು.  ‘ಪ್ರಧಾನಿಯವರು ೧೫ ನಿಮಿಷಕ್ಕಿಂತ ಹೆಚ್ಚು ಕಾಲ ಸದನದಲ್ಲಿ ನಿಲ್ಲಲು ಶಕ್ತರಾಗಿಲ್ಲ ಎಂದು ಕೆಲವರು ಹೇಳುತ್ತಾರೆ. ನಾನು ಇಲ್ಲಿ ನಿಂತಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಲೆಕ್ಕಾಚಾರಕ್ಕೆ ಮೊದಲೇ ಜನರು ನನ್ನ ಪೀಠದತ್ತ ಬಂದು ನಾನು ನಿಲ್ಲಬೇಕೆಂದು ಬಯಸುತ್ತಾರೆ. ಯಾರನ್ನಾದರೂ ಕುಳಿತುಕೊಳ್ಳುವಂತೆ ಅಥವಾ ಹೋಗುವಂತೆ ಯಾರೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿಯಬೇಕು. ಇದನ್ನು ನಿರ್ಧರಿಸುವುದು ರಾಷ್ಟ್ರ ಎಂದು ಮೋದಿ ನುಡಿದರು.  ಇದು ಸರ್ಕಾರಕ್ಕೆ ಸದನ ಪರೀಕ್ಷೆಯಲ್ಲ, ಕಾಂಗ್ರೆಸ್ಸಿಗೆ ಸದನ ಪರೀಕ್ಷೆ. ಅವಿಶ್ವಾಸ ನಿರ್ಣಯವು ಅವರಿಗೆ ಅವರ ಸದಸ್ಯರನ್ನು ಒಟ್ಟಿಗೆ ಇರಿಸಿಕೊಳ್ಳಲು ಅವಕಾಶ. ಮೋದಿಯನ್ನು ಕಿತ್ತು ಹಾಕುವುದಷ್ಟೇ ಗುರಿ. ನೀವು ಸರ್ಕಾರದ ಮೇಲೆ ಅವಿಶ್ವಾಸ ಇಟ್ಟಿರುವಷ್ಟೇ ನಿಮ್ಮ ಮಿತ್ರ ಪಕ್ಷಗಳು, ಗೆಳೆಯರ ಮೇಲೆ ವಿಶ್ವಾಸ ಇಡಿ ಎಂದು ಮೋದಿ ಸೂಚಿಸಿದರು.  ನಮಗೆ ಇಲ್ಲಿ ಸಂಖ್ಯೆ ಇದೆ. ೧೨೫ ಕೋಟಿ ಜನರ ಆಶೀರ್ವಾದವೂ ಇದೆ. ಕಳೆದ ನಾಲ್ಕು ವರ್ಷಗಳಿಂದ ವೋಟ್ ಬ್ಯಾಂಕ್ ಬಗ್ಗೆ ಚಿಂತಿಸದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದು ವಿರೋಧ ಪಕ್ಷ ಸದಸ್ಯರ ಪ್ರತಿಭಟನೆ ಮಧ್ಯೆ ಪ್ರಧಾನಿ ನುಡಿದರು.  ಟಿಡಿಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿದರು. ಬಿಜೆಪಿ ಮತ್ತು ವಿರೋಧಿ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರಧಾನಿಯವರು ಕೇವಲ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಮಾತನಾಡುತ್ತಿಲ್ಲ ಎಂದು ತೆಲುಗುದೇಶಂ ಸದಸ್ಯರು ಆಕ್ಷೇಪಿಸಿದರು. ಪ್ರತಿಭಟನೆ ಮಧ್ಯೆ ಮಾತು ಮುಂದುವರೆಸಿದ ಪ್ರಧಾನಿ ಗ್ರಾಮಗಳಿಗೆ ವಿದ್ಯುತ್ ಒದಗಿಸಿದ ಬಗ್ಗೆ, ಈಶಾನ್ಯ ಭಾರತದ ದಲಿತರು ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ಕಲ್ಪಿಸಿದ ಬಗ್ಗೆ ವಿವರಿಸಿದರು. ಚುನಾವಣಾ ಹಿತಾಸಕ್ತಿಗಳನ್ನು ರಕ್ಷಿಸಿಲ್ಲ ಎಂಬ ಕಾರಣಕ್ಕಾಗಿ ಅಲ್ಲಿನ ಅಭಿವೃದ್ಧಿಯನ್ನು ಈ ಹಿಂದೆ ನಿರ್ಲಕ್ಷಿಸುತ್ತಾ ಬರಲಾಗಿದೆ ಎಂದು ಅವರು ನುಡಿದರು. ರೈತರ ಆದಾಯ ದುಪ್ಪಟ್ಟುಗೊಳಿಸಲು ತಮ್ಮ ಸರ್ಕಾರ ಯತ್ನಿಸುತ್ತಿರುವ ಬಗ್ಗೆ ವಿವರಿಸಿದ ಪ್ರಧಾನಿ, ರಾಹುಲ್ ಗಾಂಧಿಯವರು ರಫೇಲ್ ವಿಷಯ ಎತ್ತಿಕೊಂಡು ಎರಡು ರಾಷ್ಟ್ರಗಳನ್ನು ಟೀಕಿಸಿದ್ದು ಬಾಲಿಶ ವರ್ತನೆ ಎಂದು ಹೇಳಿದರು.  ಇಂತಹ ರಾಜಕಾರಣ ದೇಶಕ್ಕೆ ಯಾವುದೇ ಒಳ್ಳೆಯದನ್ನೂ ಮಾಡುವುದಿಲ್ಲ. ರಫೇಲ್ ಒಪ್ಪಂದ ಎರಡು ಜವಾಬ್ದಾರಿಯುತ ರಾಷ್ಟ್ರಗಳ ಸರ್ಕಾರಗಳ ಮಧ್ಯೆ ಆಗಿದೆ. ಎರಡು ಪಕ್ಷಗಳ ಮಧ್ಯೆ ಅಲ್ಲ ಎಂದು ನಾನು ಜನರಿಗೆ ತಿಳಿಸಬಯಸುತ್ತೇನೆ ಎಂದು ಮೋದಿ ಚುಚ್ಚಿದರು.  ಈ ಅವಿಶ್ವಾಸ ನಿರ್ಣಯವು ಕಾಂಗ್ರೆಸ್ ಪ್ರಕೃತಿಯಾಗಿದೆ. ರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ತರುವ ಸಲುವಾಗಿ ಅವರು ಈ ನಿರ್ಣಯವನ್ನು ಮಂಡಿಸಿದ್ದಾರೆ ಎಂದು ನುಡಿದ ಮೋದಿ, ತಮ್ಮ ಕಡೆಗೆ ಸಂಖ್ಯೆ ಇದೆ ಎಂದು ಹೇಳಿದ್ದಕ್ಕಾಗಿ ಸೋನಿಯಾ ಗಾಂಧಿ ಅವರನ್ನೂ ಟೀಕಿಸಿದರು.  ಪ್ರಧಾನಿಯವರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ ಎಂಬುದಾಗಿ ರಾಹುಲ್ ಗಾಂಧಿ ಮಾಡಿದ ಟೀಕೆಯನ್ನು ಪ್ರಸ್ತಾಪಿಸಿದ ಮೋದಿ, ’ನೀವು ನಾಮ್ ದಾರ್. ನಾನು ಕಾಮ್ ದಾರ್. ಹೇಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯ? ಎಂದು ಚುಚ್ಚಿದರು.  ರಾಹುಲ್ ಗಾಂಧಿ ಅವರು ಕಣ್ಣು ಮಿಟುಕಿಸಿದ್ದನ್ನು ಮತ್ತು ತಮ್ಮನ್ನು ಚೌಕಿದಾರ್ ಅಲ್ಲ ಭ್ರಷ್ಟಾಚಾರದ ಭಾಗೀದಾರ್ ಎಂಬುದಾಗಿ ಟೀಕಿಸಿದ್ದನ್ನೂ ಲೇವಡಿ ಮಾಡಿದ ಮೋದಿ ತಮ್ಮ ಎದೆಯನ್ನು ತಟ್ಟಿ ಕರತಾಡನ ಹಾಗೂ ’ಮೋದಿ ಮೋದಿ ಮಂತ್ರದ ಮಧ್ಯೆ  ನಾನೊಬ್ಬ ಚೌಕಿದಾರ, ನಾನು ಭಾಗೀದಾರ ಕೂಡಾ, ಆದರೆ ನಿಮ್ಮಂತೆ ಸೌದಾಗಾರ ಅಲ್ಲ ಎಂದು ಹೇಳಿದರು.  ರಾಹುಲ್ ಗಾಂಧಿಯವರತ್ತ ತಿರುಗಿದ ಮೋದಿ ’ನಾವು ಜನರ ಬೇಸರಗಳ ಭಾಗೀದಾರರು. ನಾವು ಅಭಿವೃದ್ಧಿಯ ಭಾಗೀದಾರರು ಎಂದು ನುಡಿದರು.  ದೇಶವನ್ನು ಹಿಂಸೆಯತ್ತ ತಳ್ಳಲು ಸಂಚು ನಡೆದಿದೆ. ಚುನಾವಣೆ ಗೆಲ್ಲಲು ಅವರು ಉಳ್ಳವರು ಮತ್ತು ಇಲ್ಲದವರನ್ನು ಭಾವಾವೇಶಗೊಳಿಸಿ ಬ್ಲಾಕ್ ಮೇಲ್ ಮಾಡುತ್ತಾರೆ. ಬಾಬಾ ಅಂಬೇಡ್ಕರ್ ಅವರನ್ನು ನಗೆಪಾಟಲಿಗೆ ಈಡು ಮಾಡಿ ಈಗ ಹಾಡಿ ಹೊಗಳುತ್ತಿರುವ ಜನ ಇವರು. ಕಾಂಗ್ರೆಸ್ ವಾಸ್ತವ ನೆಲೆಗಟ್ಟಿನ ಸಂಪರ್ಕ ಕಡಿದುಕೊಂಡಿದೆ ಎಂದೂ ಮೋದಿ ಚುಚ್ಚಿದರು.  ‘ಆಂಧ್ರ ಪ್ರದೇಶವನ್ನು ರಾಜಕೀಯ ಲಾಭಕ್ಕಾಗಿ ವಿಭಜಿಸಲಾಯಿತು. ನಾಯ್ಡು ಮತ್ತು ಕೆಸಿಆರ್ ವಿಭಜನೆಗಾಗಿ ಹೋರಾಡುತ್ತಿದ್ದರು. ಟಿಆರ್ ಎಸ್ ಈಗ ಪ್ರಬುದ್ಧತೆ ತೋರುತ್ತಿದೆ. ಕಾಂಗ್ರೆಸ್ ಚರಣ್ ಸಿಂಗ್ ಜಿ ಅವರಿಗೆ ಏನು ಮಾಡಿತು? ಚಂದ್ರಶೇಖರ್ ಜಿ ಅವರಿಗೆ ಏನು ಮಾಡಿತು? ದೇವೇ ಗೌಡಾಜಿ ಅವರಿಗೆ ಏನು ಮಾಡಿತು? ಐಕೆ ಗುಜ್ರಾಲ್ ಜಿ ಅವರಿಗೆ ಏನು ಮಾಡಿತು? ಎಂದು ಮೋದಿ ಪ್ರಶ್ನಿಸಿದರು.
ಎನ್ ಡಿಎ ಆಂಧ್ರದ ಜನರ ಆಶೋತ್ತರಗಳನ್ನು ಗೌರವಿಸುತ್ತದೆ. ನಾವು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬದಲು ವಿಶೇಷ ಪ್ಯಾಕೇಜ್ ಕೊಡಲು ಒಪ್ಪಿದ್ದೇವೆ. ಇದನ್ನು ಇದನ್ನು ಆಂಧ್ರ ಮುಖ್ಯಮಂತ್ರಿ ಪೂರ್ಣ ತಿಳುವಳಿಯೊಂದಿಗೇ ಒಪ್ಪಿದ್ದಾರೆ. ಈಗ ವೈಎಸ್ ಆರ್ ಪ್ರಭಾವದಿಂದ ಹೊರಬರುತ್ತಿದ್ದಾರೆ ಎಂದು ಮೋದಿ ನುಡಿದರು.  ಅಟಲ್ ಜಿ ಅವರು ಉತ್ತರಾಖಂಡ, ಛತ್ತೀಸಗಢ ಮತ್ತು ಜಾರ್ಖಂಡ್ ಈ ಮೂರು ರಾಜ್ಯಗಳನ್ನು ರಚಿಸಿದವು. ಅವು ಈಗ ಸಮೃದ್ಧವಾಗುತ್ತಿವೆ. ಕಾಂಗ್ರೆಸ್ ಆಂಧ್ರ ಪ್ರದೇಶವನ್ನು ವಿಭಜಿಸಿತು. ಅದರ ಆಗಿನ ವರ್ತನೆ ನಾಚಿಕೆಗೇಡಿನದು ಎಂದು ಮೋದಿ ಟೀಕಿಸಿದರು.  ಸಿಪಿಎಂನ ಸೀತಾರಾಂ ಯೆಚೂರಿ, ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರು ಪ್ರಧಾನಿ ಒಂದೇ ಒಂದು ಪ್ರಶ್ನೆಗೂ ಉತ್ತರ ನೀಡಿಲ್ಲ ಎಂದು ಆಕ್ಷೇಪಿಸಿದರು.  ಒಂದು ಹಂತದಲ್ಲಿ ವೀರಪ್ಪ ಮೊಯ್ಲಿ ಹೆಸರನ್ನು ಪ್ರಸ್ತಾಪಿಸಿದ ಮೋದಿ,’ಆಂಧ್ರಪ್ರದೇಶಕ್ಕೆ ನಾವು ಸಾಧ್ಯವಿರುವಷ್ಟೂ ನೆರವು ನೀಡುತ್ತೇವೆ ಎಂದರು.



2017: ನವದೆಹಲಿ: ನಿರೀಕ್ಷೆಯಂತೆ ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ ಅವರು ಆಯ್ಕೆಯಾದರು. ಎನ್ ಡಿಎ ಬೆಂಬಲಿತ ಅಭ್ಯರ್ಥಿ ರಾಮನಾಥ ಕೋವಿಂದ ಅವರು 7,02,644 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದರು. ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರು 3,67,314 ಮತಗಳನ್ನು ಪಡೆದು ಪರಾಜಯಗೊಂಡರು. ರಾಮನಾಥ ಕೋವಿಂದ ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೋವಿಂದ ಅವರು 3,34,730 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಕೇಂದ್ರ ಚುನಾವಣಾ ಆಯೋಗ  ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಿತು. ದೇಶದ ಮೊದಲ ಪ್ರಜೆಯ ಆಯ್ಕೆಯ ಮತಎಣಿಕೆ ಗುರುವಾರ ಬೆಳಗ್ಗೆ 11ಗಂಟೆಗೆ ಆರಂಭವಾಗಿದ್ದು, ಸಂಜೆ ವೇಳೆ ಮುಕ್ತಾಯವಾಗಿತ್ತು. ಆರಂಭ ಮತಎಣಿಕೆಯಲ್ಲಿಯೇ ರಾಮನಾಥ ಕೋವಿಂದ ಭರ್ಜರಿ ಮುನ್ನಡೆ ಸಾಧಿಸಿದ್ದರು. ಸಂಸದರು, ಶಾಸಕರ ಒಟ್ಟು ಮತಗಳ ಮೌಲ್ಯ 10, 98. 903. ದೆಹಲಿಯ ಸಂಸತ್ ಭವನದಲ್ಲಿ ಮತಎಣಿಕೆ ಪ್ರಕ್ರಿಯೆ ನಡೆದಿತ್ತು. ನೂತನವಾಗಿ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಮನಾಥ ಕೋವಿಂದ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು. ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಗುಲಾಬಿ ಹೂವು ನೀಡಿ ಅಭಿನಂದಿಸಿ, ರಾಮನಾಥ ಕೋವಿಂದ ಅವರಿಗೆ ಸಿಹಿಯನ್ನೂ ತಿನ್ನಿಸಿದರು.
2017: ಶಿಮ್ಲಾ: ಹಿಂದೂಸ್ತಾನ–ಟಿಬೆಟ್ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ರಾಮ್‌ಪುರ ವಲಯದಲ್ಲಿ 700 ಮೀಟರ್‌ ಆಳದ ಕಣಿವೆಗೆ ಬಸ್‌ ಉರುಳಿ ಬಿದ್ದು ಸಂಭವಿಸಿದ ದುರಂತದಲ್ಲಿ 28 ಮಂದಿ ಸಾವನ್ನಪ್ಪಿ, ಇತರ ಹಲವರು ಗಾಯಗೊಂಡರು. ‘ದುರಂತದಲ್ಲಿ ಗಾಯಗೊಂಡವರನ್ನು ಖಾನೇರಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಶಿಮ್ಲಾ ಜಿಲ್ಲಾಧಿಕಾರಿ ರೋಹನ್ ಚಂದ್ ಠಾಕೂರ್ ಹೇಳಿದರು. ‘ಘಟನಾ ಸ್ಥಳಕ್ಕೆ ದೌಡಾಯಿಸಿದ ರಾಷ್ಟ್ರೀಯ ವಿಪತ್ತು  ನಿಗ್ರಹ ಪಡೆ ಮೇಲಧಿಕಾರಿಗಳ ಉಸ್ತುವಾರಿಯಲ್ಲಿ  ಉಳಿದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಯಿತು. ದುರಂತಕ್ಕೀಡಾದ ಬಸ್ಸು ಕಿನೌರ್‌ನ ರೆಕಾಂಗ್‌ ಪಿಯೊದಿಂದ ಸೊಲಾನ್‌ನ ನೌನಿ ಕಡೆ ತೆರಳುತ್ತಿತ್ತು. ಬಸ್ಸಿನಲ್ಲಿ ಒಟ್ಟು 40 ಮಂದಿ ಪ್ರಯಾಣಿಕರಿದ್ದರು. ಸ್ಥಳದಲ್ಲಿಯೇ ಸಾವಿಗೀಡಾದ 15 ಮೃತದೇಹ ಪತ್ತೆಯಾಯಿತು. ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು.
2017: ನವದೆಹಲಿ: ರಾಜ್ಯಸಭಾ ಸದಸ್ಯತ್ವಕ್ಕೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನೀಡಿದ್ದ ರಾಜೀನಾಮೆಯನ್ನು
ಸಭಾಪತಿಗಳು ಹಮೀದ್ ಅನ್ಸಾರಿ ಅಂಗೀಕರಿಸಿದರು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಬಿಜೆಪಿ ಮತ್ತು ಸಭಾಪತಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಮಾಯಾವತಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ  19ರ ಮಂಗಳವಾರ ರಾಜೀನಾಮೆ ನೀಡಿದ್ದರು. ಉತ್ತರ ಪ್ರದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾಯಾವತಿ ಅವರು ರಾಜ್ಯಸಭೆಯಲ್ಲಿ 19ರ ಬೆಳಗ್ಗೆ ಮಾತನಾಡಿದರು. ಆದರೆ, ಮಾತನ್ನು ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸೀಮಿತಗೊಳಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿತ್ತು. ‘ನನ್ನ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಅವಕಾಶ ಇಲ್ಲ ಎಂದಾದರೆ ನಾನು ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿ ರಾಜ್ಯಸಭೆಯಿಂದ ಹೊರನಡೆದಿದ್ದರು. ಮುಂದಿನ ಏಪ್ರಿಲ್‌ಗೆ ಅವರ ಸದಸ್ಯತ್ವದ ಅವಧಿ ಕೊನೆಗೊಳ್ಳುತ್ತಿತ್ತು. ಮೂರು ಪುಟಗಳ ರಾಜೀನಾಮೆ ಪತ್ರದಲ್ಲಿ ಕಾರಣಗಳನ್ನೂ ವಿವರಿಸಿದ್ದರಿಂದ ತಿರಸ್ಕೃತವಾಗಿತ್ತು. ಬಳಿಕ ಮಾಯಾವತಿ ಅವರು ನಿಯಮಕ್ಕೆ ಅನುಸಾರವಾಗಿ ಯಾವುದೇ ಕಾರಣವನ್ನು ನಮೂದಿಸದೆಯೇ, ಒಂದು ಸಾಲಿನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
2017: ಮುಂಬೈ: ಬಾಲಿವುಡ್ ನಟಿ ಕಂಗನಾ ರಾನೌತ್ ಅವರಿಗೆ ಶೂಟಿಂಗ್ ಸಂದರ್ಭದಲ್ಲಿ ಗಾಯವಾಗಿದ್ದು, ಒಂದು
ವಾರ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳಿದರು. ಹಿಂದಿನ ದಿನ ಕಂಗನಾ ಅವರು ಸಹ ನಟ ನಿಹಾರ್ ಪಾಂಡ್ಯ ಅವರ ಜೊತೆ ‘ಮಣಿಕರ್ಣಿಕಾ–ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾದ ಯುದ್ಧದ ದೃಶ್ಯದ ಶೂಟಿಂಗ್‌ನಲ್ಲಿ ತೊಡಗಿದ್ದರು. ಈ ವೇಳೆ ಇಬ್ಬರ ನಡುವೆ ಕತ್ತಿ ವರಸೆ ನಡೆಯುವ ಸಂದರ್ಭದಲ್ಲಿ ಅಚನಕ್ಕಾಗಿ ಕಂಗನಾ ಅವರ ಹಣೆಯ ಭಾಗಕ್ಕೆ ಕತ್ತಿ  ತಗುಲಿ ಗಾಯವಾಯಿತು. ತಕ್ಷಣವೇ ಕಂಗನಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಗಾಯಕ್ಕೆ 15 ಹೊಲಿಗೆ ಹಾಕಲಾಯಿತು. ಒಂದು ವಾರದ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದರು. ‘ಯುದ್ಧದ ಸನ್ನಿವೇಶದಲ್ಲಿ ತೊಡಗಿದ್ದಾಗ ಮುಖದ ಮೇಲೆ ಅನಿರೀಕ್ಷಿತವಾಗಿ ಗಾಯವಾಗಿದೆ. ನನ್ನ ಮುಖದ ಮೇಲೆ ರಕ್ತ ಹರಿದಾಗ ಕೊಂಚ ಮಟ್ಟಿಗೆ ಹೆದರಿದ್ದೆ. ಆದರೆ ಈ ವೇಳೆ ರಾಣಿಯ ನಿಜ ಜೀವನದ ಅನುಭವವಾಯಿತು’ ಎಂದು ಕಂಗನಾ ಹೇಳಿದರು.  ಕಂಗನಾ ಅವರ ಬಹುನಿರೀಕ್ಷಿತ ‘ಮಣಿಕರ್ಣಿಕಾ–ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ವಾರದಿಂದ ನಡೆಯುತ್ತಿತ್ತು.


2017: ಮುಂಬಯಿ : ಖಾಸಗಿ ರಂಗದ ದೇಶದ ಅತೀ ದೊಡ್ಡ  ಬ್ಯಾಂಕ್‌ ಆಗಿರುವ ಐಸಿಐಸಿಐ ಬ್ಯಾಂಕ್‌ ತನ ಆಯ್ದ
 ಮಾಸಿಕ ವೇತನದ ಗ್ರಾಹಕರಿಗೆ 15 ಲಕ್ಷ ರೂ. ವರೆಗಿನ ವೈಯಕ್ತಿಕ ಸಾಲವನ್ನು ಎಟಿಎಂ ಮೂಲಕ ಒದಗಿಸಲು ಮುಂದಾಯಿತು.. ಈ ವರ್ಗದ ಗ್ರಾಹಕರು ಈ ಮೊದಲು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಹಾಕಿರದಿದ್ದರೂ ಅವರಿಗೆ
ಎಟಿಎಂ ಮೂಲಕ ಸಾಲ ಪಡೆಯುವ ಅವಕಾಶ ಇರುತ್ತದೆ.  ಖಾಸಗಿ ಸಾಲ ಪಡೆಯಬಯಸುವವರು ಸಾಲ ಮಾಹಿತಿ ಕಂಪೆನಿಗಳ ಅಂಕಿ ಅಂಶಗಳನ್ನು ಬಳಸಿಕೊಂಡು "ಆಯ್ದ ಗ್ರಾಹಕರ' ಅರ್ಹತೆಯನ್ನು ಪಡೆಯಬಹುದಾಗಿದೆ. ಅಂತಹ ಗ್ರಾಹಕರು ವ್ಯವಹಾರವೊಂದನ್ನು ಪೂರ್ಣಗೊಳಿಸಿದಾಗ ಅವರಿಗೆ ಎಟಿಎಂ ಪರದೆಯಲ್ಲಿ "ನೀವು ಖಾಸಗಿ ಸಾಲದ ಅರ್ಹತೆಯನ್ನು ಪಡೆದವರಾಗಿರುತ್ತೀರಿ' ಎಂಬ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ.  ಒಂದೊಮ್ಮೆ ಆ ಗ್ರಾಹಕನು ಆಗ ಸಾಲ ಪಡೆಯಲು ಬಯಸಿದಲ್ಲಿ ಐದು ವರ್ಷಗಳ ಅವಧಿಗೆ 15 ಲಕ್ಷ ರೂ.ಗಳ ವೈಯಕ್ತಿಕ ಸಾಲವನ್ನು ಪಡೆಯಬಹುದು ಮತ್ತು ತತ್‌ಕ್ಷಣವೇ ಆ ಮೊತ್ತ ಆ ಗ್ರಾಹಕನ ಉಳಿತಾಯ ಖಾತೆಗೆ ಜಮೆಯಾಗುತ್ತದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿತು. ಸಾಲ ಮೊತ್ತ ಗ್ರಾಹಕನ ಖಾತೆಗೆ ಜಮೆಯಾಗುವ ಮುನ್ನ ಗ್ರಾಹಕನಿಗೆ ಆತನಿಗೆ ವಿವಿಧ ಸಾಲ ಮೊತ್ತಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಆತನಿಗೆ ಸಾಲದ ಬಡ್ಡಿ ದರ, ಸಂಸ್ಕರಣ ಶುಲ್ಕ ಮತ್ತು ತಿಂಗಳ ಕಂತು ಇತ್ಯಾದಿ ವಿವರಗಳನ್ನು ತಿಳಿಸಲಾಗುತ್ತದೆ. ಗ್ರಾಹಕರು ವೈಯಕ್ತಿಕ ಸಾಲವನ್ನು ಆಯ್ಕೆಮಾಡಿದಾಗ ಸುಲಭದಲ್ಲಿ ಅವರಿಗೆ ಹಣ ಸಿಗುವುದಕ್ಕೆ ಅವಕಾಶ ಉಂಟಾಗುತ್ತದೆ  ಎಂದು ಐಸಿಐಸಿಐ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅನೂಪ್‌ ಬಗ್ಚಿ ಹೇಳಿದರು.  ಎಟಿಎಂ ಮೂಲಕ 15 ಲಕ್ಷ ರೂ. ಸಾಲ ಪಡೆಯುವ ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿದ್ದು  ತತ್‌ಕ್ಷಣದ ಸೌಕರ್ಯವಾಗಿರುತ್ತದೆ ಮತ್ತು ಇದರಿಂದ ಗ್ರಾಹಕರಿಗೆ ಬಹಳ ಸುಲಭದಲ್ಲಿ ಸಾಲ ಸೌಲಭ್ಯ ಸಿಗುವಂತಾಗುತ್ತದೆ ಎಂದವರು ಹೇಳಿದರು.

2017: ತಿರುವನಂತಪುರ : ಮಹಿಳಾ ಉದ್ಯೋಗಿಗಳಿಗೆ ತಮ್ಮ ಮಾಸಿಕ ಋತುಚಕ್ರದ ಮೊದಲ ದಿನ ರಜೆ ಪಡೆಯುವ
ಸೌಕರ್ಯವನ್ನು ಕೇರಳದ ಮಾತೃಭೂಮಿ ಟಿವಿ ಕಲ್ಪಿಸಿತು. ಅಂತೆಯೇ ಮಾತೃಭೂಮಿ ಟಿವಿಯಲ್ಲಿ ದುಡಿಯುತ್ತಿರುವ ಮಹಿಳಾ ಉದ್ಯೋಗಿಗಳು ಈಗಿನ್ನು ವರ್ಷಕ್ಕೆ 12 ದಿನಗಳ "ಋತುಚಕ್ರದ ಮೊದಲ ದಿನ'ವಾಗಿ ರಜೆಯನ್ನು ಪಡೆಯಲಿದ್ದಾರೆ. ಈ ಮಹಿಳಾ ಉದ್ಯೋಗಿಗಳು ಈಗ ಪಡೆಯುತ್ತಿರುವ ಎಲ್ಲ ರಜಾ ಸೌಲಭ್ಯಕ್ಕೆ ಹೊರತಾದ ವಿಶೇಷ ರಜೆ ಇದು.  ಈ ಮೊದಲು ಮುಂಬಯಿಯ ಕಲ್ಚರ್‌ ಮಶೀನ್ಸ್‌ ಸಂಸ್ಥೆಯು ತನ್ನ ಮಹಿಳಾ ಉದ್ಯೋಗಿಗಳಿಗೆ ಮಾಸಿಕ ಋತು ಚಕ್ರದ ಮೊದಲ ದಿನದ ರಜೆ (ವರ್ಷಕ್ಕೆ 12 ದಿನ) ಸೌಕರ್ಯವನ್ನು ಪ್ರಕಟಿಸಿತ್ತು. ಇಂಡೋನೇಶ್ಯ, ದಕ್ಷಿಣ ಕೊರಿಯ ಮತ್ತು ತೈವಾನ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಈ ರೀತಿಯ ರಜಾ ಸೌಕರ್ಯವಿತ್ತು.

2016: ನವದೆಹಲಿ/ ಲಖನೌ: ಗುಜರಾತಿನ ಉನಾ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆದ ದಾಳಿ ಮತ್ತು ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನುವೇಶ್ಯೆಗೆಹೋಲಿಸಿದ ವಿಷಯ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಭಾರಿ ಕೋಲಾಹಲಕ್ಕೆ ಕಾರಣವಾಗಿ ಒಂದು ಹಂತದಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ವಿಷಾದ ವ್ಯಕ್ತ ಪಡಿಸುವಂತಾಯಿತು. ಕೋಲಾಹಲದ ಪರಿಣಾಮವಾಗಿ ರಾಜ್ಯಸಭೆಯಲ್ಲಿ ಕಲಾಪಗಳು ಇಡೀ ದಿನ ಕಲಾಪಗಳು ಸಂಪೂರ್ಣ ಅಸ್ತವ್ಯಸ್ತಗೊಂಡವು. ಹಲವಾರು ಬಾರಿ ಕಲಾಪಗಳು ಮುಂದೂಡಿಕೆಯಾಗಿ ಕೊನೆಗೆ ಮಾಯಾವತಿ ಬಗೆಗಿನ ಹೇಳಿಕೆ ಪರಿಣಾಮವಾಗಿ ಕಲಾಪಗಳು ದಿನದ ಮಟ್ಟಿಗೆ ಮುಂದೂಡಿಕೆಯಾದವುಘಟನೆಯಿಂದ ತೀವ್ರ ಇರುಸು ಮುರಿಸಿಗೆ ಒಳಗಾದ ಬಿಜೆಪಿ, ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶ ಬಿಜೆಪಿ ಘಟಕದ 15 ಮಂದಿ ಉಪಾಧ್ಯಕ್ಷರಲ್ಲಿ ಒಬ್ಬರಾದ ದಯಾ ಶಂಕರ ಸಿಂಗ್ ಅವರನ್ನು ಪಕ್ಷದ ಹುದ್ದೆಯಿಂದ ಕಿತ್ತು ಹಾಕಿದ್ದಲ್ಲದೆ, 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಿತು. ರಾಜ್ಯಸಭೆಯಲ್ಲಿ ಒಂದು ಹಂತದಲ್ಲಿ ಬಿಜೆಪಿ ನಾಯಕನ ಹೇಳಿಕೆಗಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಾವುತೀವ್ರ ವಿಷಾದವ್ಯಕ್ತ ಪಡಿಸುವುದಾಗಿ ಹೇಳಿದರು.


2016: ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ವಿಧಾನ ಸಭೆಯಲ್ಲಿ 46 ಶಾಸಕ ಬೆಂಬಲದೊಂದಿಗೆ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾದರು. ಪೆಮಾ ಖಂಡು ವಿರುದ್ಧವಾಗಿ 11 ಬಿಜೆಪಿ ಶಾಸಕರು ಮತ ಚಲಾಯಿಸಿದರು. ಜುಲೈ 17ರಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ಗವರ್ನರ್ ತಥಾಗತ ರಾಯ್ ಈದಿನ ವಿಶ್ವಾಸ ಮತ ಯಾಚನೆ ಮಾಡುವಂತೆ ಪೆಮಾ ಖಂಡು ಅವರಿಗೆ ಹಿಂದಿನ  ರಾತ್ರಿ ಸೂಚನೆ ನೀಡಿದ್ದರು. ಅದರಂತೆ ಖಂಡು  ಈದಿನ ವಿಶ್ವಾಸ ಮತ ಯಾಚನೆ ಮಾಡಿದರು. 44 ಕಾಂಗ್ರೆಸ್ ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರು ಪೆಮಾ ಖಂಡು ಪರ ಮತ ಚಲಾಯಿಸಿದರು. ಸರ್ಕಾರಕ್ಕೆ ಬೆಂಬಲ ಸೂಚಿಸಿದ ನಬಮ್ ತುಕಿ ಮತ್ತು ಕಲಿಖೋ ಪೌಲ್ ಅವರಿಗೆ ಪೆಮಾ ಖಂಡು ಧನ್ಯವಾದ ಅರ್ಪಿಸಿದರು. ನಂತರ ರಾಜ್ಯದಲ್ಲಿರುವ 26 ಪ್ರಮುಖ ಬುಡಕಟ್ಟು ಸಮುದಾಯ ಮತ್ತು 100 ಕ್ಕೂ ಹೆಚ್ಚು ಉಪ ಬುಡಕಟ್ಟು ಸಮುದಾಯಗಳನ್ನು ಸಮಾನವಾಗಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ ಟೀಮ್ ಅರುಣಾಚಲ ಎಂಬ ತಂಡವನ್ನು ಕಟ್ಟಲು ತೀರ್ಮಾನಿಸಿದ್ದು, ಇದು ಅರುಣಾಲ ಪ್ರದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದು ಪೆಮಾ ಖಂಡು ವಿಧಾನ ಸಭೆಯಲ್ಲಿ ತಿಳಿಸಿದರು.

2016: ನವದೆಹಲಿ: ಅಮೆರಿದ ದೈತ್ಯ ಸಂಸ್ಥೆ ಗೂಗಲ್ 2016ನೇ ಸಾಲಿನ ಕಮ್ಯುನಿಟಿ ಇಂಪ್ಯಾಕ್ಟ್ ಅವಾರ್ಡ್ ಘೋಷಣೆ ಮಾಡಿದ್ದು, ಚೆನ್ನೈ ಮೂಲದ ಹದಿನಾಲ್ಕು ವರ್ಷದ ಬಾಲಕ ಅದ್ವಾಯ್ ರಮೇಶ್ ಗೌರವಕ್ಕೆ ಪಾತ್ರರಾದರು. ರಮೇಶ್ ಏಷ್ಯಾದಲ್ಲಿಯೇ ಪ್ರಶಸ್ತಿಗೆ ಭಾಜನರಾದ ಮೊದಲಿಗ ಎಂಬ ಹೆಗ್ಗಳಿಕೆಗೂ ಭಾಜನರಾದರು. ಒಟ್ಟು 107 ಪ್ರಾಜೆಕ್ಟ್ಗಳು ವರ್ಷ ಗೂಗಲ್ ಸಂಸ್ಥೆಗೆ ಸಲ್ಲಿಕೆಯಾಗಿದ್ದವು. ಇದರಲ್ಲಿ ಭಾರತೀಯ ಬಾಲಕ ರಮೇಶ್ ಅವರು ಎಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು. ಅಂತಿಮ ಹಂತದ ಪ್ರವೇಶ ಪಡೆದ 20 ಮಂದಿ ಸ್ಪರ್ಧಾಳುಗಳಿಗೆ ತಲಾ 50,000 ಡಾಲರ್ ಶಿಷ್ಯವೇತನವನ್ನೂ ಗೂಗಲ್ ಪ್ರಕಟಿಸಿತು. ಪರಿಸರ, ಆರೋಗ್ಯ ಸಂಪನ್ಮೂಲಗಳ ಸವಾಲುಗಳನ್ನು ಯಾವರೀತಿ ಎದುರಿಸಬಹುದು ಎಂಬ ವಿಷಯದ ಆಧಾರದ ಮೇಲೆ ಪ್ರಾಜೆಕ್ಟ್ಗಳನ್ನು ರೂಪಿಸಲಾಗಿತ್ತು.ಫಿಶರ್ವೆುನ್ ಲೈಫ್ಲೈನ್ ಟರ್ವಿುನಲ್’ (ಎಫ್ ಎಲ್ ಟಿ) ಶೀರ್ಷಿಕೆಯ ಯೋಜನೆಗೆ ಹತ್ತು ಸಾವಿರ ಡಾಲರ್ ( 6 ಲಕ್ಷ 72 ಸಾವಿರ ರೂ.) ಬಹುಮಾನವನ್ನು ಅದ್ವಾಯ್ ಪಡೆದರು.  ಇದರ ಜತೆಗೆ ಅಮೆರಿಕದ ಸೈಂಟಿಫಿಕ್ ಅಮೆರಿಕನ್ ಸಂಸ್ಥೆಯಿಂದ ಒಂದು ವರ್ಷದ ಗೂಗಲ್ ಸದಸ್ಯತ್ವವನ್ನು ಪಡೆದರು.
ಅದ್ವಾಯ್ ರೂಪಿಸಿದ ಪ್ರಾಜೆಕ್ಟ್ ಮೀನುಗಾರರ ಹಿತರಕ್ಷಣೆ ಮಾಡಲಿದ್ದು, ಜಿಪಿಎಸ್ ತಂತ್ರಜ್ಞಾನ ಉಪಯೋಗಿಸಿಕೊಂಡು ಯಾವರೀತಿ ಮೀನುಗಾರರನ್ನು ಸಂಕಷ್ಟದಿಂದ ಪಾರುಮಾಡಬಹುದು ಹಾಗೂ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸಬಹುದು ಎನ್ನುವುದನ್ನು ತಿಳಿಸುತ್ತದೆ. ಕುರಿತು ಅದ್ವಾಯ್ ಪ್ರತಿಕ್ರಿಯಿಸಿ, ಗೌರವದಿಂದ ನನಗೆ ಇನ್ನಷ್ಟು ಪ್ರೋತ್ಸಾಹ ದೊರಕಿದೆ. ಭವಿಷ್ಯದಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನನ್ನ ಮುಂದಿನ ಸಂಶೋಧನೆ ನಡೆಯಲಿದೆ ಎಂದು ತಿಳಿಸಿದರು.
2016: ಮುಂಬೈ: ನಟ, ರೂಪದರ್ಶಿ ರೋಹಿತ್ ಖಂಡೇಲ್ವಾಲ್ಮಿಸ್ಟರ್ ವರ್ಲ್ಡ್ 2016’ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾಧನೆ ಮಾಡಿದ ಮೊದಲ ಭಾರತೀಯ, ಏಷ್ಯಾದ ಮೊದಲ ನಟ ಎನ್ನುವ ಕೀರ್ತಿಗೆ ಪಾತ್ರರಾದರು. 26 ವರ್ಷದ ರೋಹಿತ್ ಸೇರಿದಂತೆ ಒಟ್ಟು 46 ಸ್ಪರ್ಧಾಳುಗಳು ಸ್ಪರ್ಧೆಯಲ್ಲಿದ್ದರು. ಸ್ಪರ್ಧೆಯ ಫೈನಲ್ ಜುಲೈ 19ರಂದು ಇಂಗ್ಲೆಂಡ್ ಸೌತ್ಪೋರ್ಟ್ನಲ್ಲಿ ಸ್ಪರ್ಧೆ ನಡೆಯಿತು. ಬಗ್ಗೆ ಪ್ರತಿಕ್ರಿಯಿಸಿರುವ ಖಂಡೇಲ್ವಾಲ್, ಮಿ.ವರ್ಲ್ಡ್ 2016 ಗೆದ್ದಿರುವುದು ಬಹಳ ಖುಷಿ ಕೊಟ್ಟಿದೆ. ಜತೆಗೆ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಆಭಾರಿಯಾಗಿದ್ದೇನೆ. ನಿಮ್ಮ ಬೆಂಬಲವಿಲ್ಲದೇ ಪ್ರತಿಷ್ಠಿತ ಪ್ರಶಸ್ತಿಯನ್ನು ನನ್ನದಾಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇಂತದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರುತ್ತದೆಂದು ಖಂಡಿತಾ ಭಾವಿಸಿರಲಿಲ್ಲ ಎಂದರು.  ರೋಹಿತ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 2014ರಲ್ಲಿ ನಡೆದ ಸ್ಪರ್ಧೆಯಲ್ಲಿ ಮಿ.ವರ್ಲ್ಡ್ ಆಗಿದ್ದ ನಿಕ್ಲಾಸ್ ಪೆಡರ್ಸೆನ್ ಜತೆಗಿರುವ ಫೋಟೊವನ್ನು ಪೋಸ್ಟ್ ಮಾಡಿಕೊಂಡರು.

2016: ನವದೆಹಲಿ: ಭಾರತೀಯ ಹಾಕಿ ದಿಗ್ಗಜರಲ್ಲಿ ಒಬ್ಬರಾದ, ಮಾಜಿ ಒಲಿಂಪಿಯನ್ ಮೊಹಮ್ಮದ್ ಶಾಹಿದ್ ಅವರು ಲಿವರ್ ಕಾರ್ಯಸ್ಥಗಿತ ಮತ್ತು ಕಿಡ್ನಿ ವೈಫಲ್ಯದಿಂದ ನಿಧನರಾದರು. ಮೃತರಿಗೆ 56 ವರ್ಷ ವಯಸ್ಸಾಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶಾಹಿದ್ ಅವರನ್ನು ಗುರ್ಗಾಂವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆ ನೋವಿನ ಕಾರಣದಿಂದ ಜೂನ್ 29ರಂದು ಮೊಹಮ್ಮದ್ ಶಾಹಿದ್ ಅವರು ಬನಾರಸ್ ಹಿಂದು ವಿಶ್ವವಿದ್ಯಾಲಯದ ಎಸ್ಎಸ್ಎಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಗುರ್ಗಾಂವ್ ಮೆದಾಂತ ಮೆಂಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಜುಲೈ 19ರ  ಸಂಜೆ ನಿಧನರಾಗಿರುವುದಾಗಿ ಕುಟುಂಬ ಮೂಲಗಳು ತಿಳಿಸಿದವು. ಮೃತರು ಮತ್ನಿ ಪರ್ವೀನ್ ಶಾಹಿದ್ ಹಾಗೂ ಮಕ್ಕಳಾದ ಮೊಹಮ್ಮದ್ ಸೈಫ್ ಮತ್ತು ಹೀನಾ ಶಾಹಿದ್ ಅವರನ್ನು ಅಗಲಿದರು. ಮೊಹಮ್ಮದ್ ಶಾಹಿದ್ ಅವರು 1980 ಮಾಸ್ಕೊ ಒಲಿಂಪಿಕ್ಸ್ನಲ್ಲಿ ಅತ್ಯಾಕರ್ಷಕ ಆಟದೊಂದಿದೆ ತಂಡಕ್ಕೆ ಆಧಾರಸ್ತಂಭವೆನಿಸಿಕೊಂಡಿದ್ದರು. 1960, ಏಪ್ರಿಲ್ 14ರಂದು ವಾರಾಣಸಿಯಲ್ಲಿ ಜನಿಸಿದ ಮೊಹಮ್ಮದ್ ಶಾಹಿದ್ ಅವರು ತಮ್ಮ 19ನೇ ವಯಸ್ಸಿನಲ್ಲಿ ಫ್ರಾನ್ಸ್ ವಿರುದ್ಧ ಕಿರಿಯರ ವಿಶ್ವಕಪ್ (1979)ನಲ್ಲಿ ಆಡಿ ಗಮನ ಸೆಳೆದಿದ್ದರು. ನಂತರದ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. 1985-86ನೇ ಸಾಲಿನಲ್ಲಿ ಮೊಹಮ್ಮದ್ ಶಾಹಿದ್ ಭಾರತ ತಂಡದ ನಾಯಕರಾಗಿಯೂ ಯಶಸ್ಸು ಕಂಡಿದ್ದರು. 1981ರಲ್ಲಿ ಅರ್ಜುನ ಪ್ರಶಸ್ತಿ, 1986ರಲ್ಲಿಲ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ವಾರಾಣಸಿ ಮೂಲದವರಾದ ಮೊಹಮ್ಮದ್ ಶಾಹಿದ್ ಅವರು ಭಾರತೀಯ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

2016: ಲಖನೌ: ಬಾಬ್ರಿ ಮಸೀದಿ ಪರವಾಗಿ ಧ್ವನಿ ಎತ್ತಿದ್ದ ಹಿರಿಯ ಹೋರಾಟಗಾರ ಹಸೀಮ್ ಅನ್ಸಾರಿ (96) ದೀರ್ಘ ಕಾಲದ ಅಸ್ವಸ್ಥತೆಯಿಂದ ನಿಧರಾದರು. 1949ರಿಂದಲೇ ಬಾಬ್ರಿ ಮಸೀದಿ ಪರವಾಗಿ ಹೋರಾಟ ನಡೆಸುತ್ತಿದ್ದ ಹಸೀಮ್ ಅನ್ಸಾರಿ, ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಕ್ಕಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ವಿರುದ್ಧ ಮೊದಲ ಬಾರಿಗೆ ಫೈಜಾಬಾದ್ ನ್ಯಾಯಾಲಯದ ಮೆಟ್ಟಿಲೇರಿದ್ದ ಹಸೀಮ್ ವಿಚಾರವಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಕಳೆದ ವರ್ಷ ವಿಶ್ವ ಹಿಂದು ಪರಿಷತ್ ಮುಖ್ಯಸ್ಥ ಆಶೋಕ್ ಸಿಂಘಾಲ್ ನಿಧನರಾಗಿದ್ದ ಸಮಯದಲ್ಲಿ ಸಿಂಘಾಲ್ ಅವರ ಮರಣ ರಾಮ ಜನ್ಮಭೂಮಿ ಸಂಚಲನಕ್ಕೆ ಭಾರೀ ನಷ್ಟವಾಗಿದೆ ಎಂದು ಹೇಳಿಕೆ ನೀಡಿದ್ದರು ಹಸೀಮ್ ಅನ್ಸಾರಿ.

2008: ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು. ವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2001ರ ಆಗಸ್ಟ್ ತಿಂಗಳಲ್ಲಿ ಪರ್ತ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 7:25.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಆ ಸಮಯವನ್ನು 1.86 ಸೆಕೆಂಡುಗಳಷ್ಟು ಉತ್ತಮಪಡಿಸಿಕೊಳ್ಳಲು ಯಶಸ್ವಿಯಾದರು.

2007: 2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ, ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆ' ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತು. ಪ್ರಸ್ತುತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಸಮಿತಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಪ್ರಕಟಿಸಿದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಸಂಗೀತ, ಛಾಯಾಗ್ರಹಣ, ಸಂಭಾಷಣೆ, ಗೀತ ರಚನೆ, ಧ್ವನಿ ಗ್ರಹಣ ಪ್ರಶಸ್ತಿಗಳು `ಮುಂಗಾರು ಮಳೆ' ಪಾಲಾದವು. `ಮುಂಗಾರು ಮಳೆ' ನಂತರ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಎರಡನೆಯದಾದ `ದುನಿಯಾ' ಪ್ರಶಸ್ತಿ ಪಟ್ಟಿಯಲ್ಲೂ ಎರಡನೆಯ ಸ್ಥಾನ ಪಡೆಯಿತು. ದ್ವಿತೀಯ ಅತ್ಯುತ್ತಮ ಚಿತ್ರ ಪುರಸ್ಕಾರದೊಂದಿಗೆ ಇನ್ನೂ ಐದು ಪ್ರಶಸ್ತಿಗಳನ್ನು `ದುನಿಯಾ' ಬಾಚಿಕೊಂಡಿತು. ಮೂರನೇ ಅತ್ಯುತ್ತಮ ಚಿತ್ರವಾಗಿ `ಸೈನೈಡ್' ಆಯ್ಕೆಯಾಯಿತು. ಡಾ. ರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಎಂ.ಎನ್. ಲಕ್ಷ್ಮಿದೇವಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಜೀವಮಾನದ ವಿಶಿಷ್ಟ ಕೊಡುಗೆಗೆ ಸಲ್ಲುವ ಪುರಸ್ಕಾರ ನಟ ಮತ್ತು ನಿರ್ದೇಶಕ ದ್ವಾರಕೀಶ್ ಅವರಿಗೆ ಲಭಿಸಿತು. ಎರಡು ತುಳು ಚಿತ್ರಗಳೂ ಸೇರಿದಂತೆ ಒಟ್ಟೂ 37 ಚಿತ್ರಗಳು ಸ್ಪರ್ಧಾಕಣದಲ್ಲಿದ್ದವು. ತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು `ಸ್ನೇಹಾಂಜಲಿ' ಚಿತ್ರದ ಅಭಿನಯಕ್ಕಾಗಿ, ಹುಟ್ಟು ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಹಾಗೂ `ದಾಟು' ಚಿತ್ರಕ್ಕೆ ನೀಡಲಾಯಿತು.

2007: 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಇನ್ನೊಬ್ಬ ಅರೋಪಿ ಮೊಹಮದ್ ಇಕ್ಬಾಲ್ ಮೊಹಮದ್ ಯುಸೂಫ್ ಶೇಖ್ ಎಂಬಾತನಿಗೆ ಮರಣ ದಂಡನೆ ವಿಧಿಸಿತು. ಪಿತೂರಿಯಲ್ಲಿ ಭಾಗಿಯಾಗಿದ್ದ ಅಪರಾಧಕ್ಕಾಗಿ ಸೇವೆಯಿಂದ ವಜಾಗೊಂಡ ಕಸ್ಟಮ್ಸ್ ಕಲೆಕ್ಟರ್ ಸೋಮನಾಥ್ ಥಾಪಾ ಮತ್ತು ಬಷಿರ್ ಅಹಮದ್ ಖೈರುಲ್ಲಾಗೆ ಟಾಡಾ ನ್ಯಾಯಾಧೀಶ ಪಿ. ಡಿ. ಕೊಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.
ಮೀನುಗಾರರ ವಸತಿ ಪ್ರದೇಶದ ಮೇಲೆ ಗ್ರೆನೇಡ್ ಎಸೆದ ಅಪರಾಧಿಗಳ ಗುಂಪಿನಲ್ಲಿ ಬಷಿರ್ ಅಹಮದ್ ಖೈರುಲ್ಲಾ ಭಾಗಿಯಾಗಿದ್ದ. ಈ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಮೊಹಮದ್ ಇಕ್ಬಾಲ್ಗೆ ಗಲ್ಲು ಶಿಕ್ಷೆ ವಿಧಿಸುವುದರೊಂದಿಗೆ ಮುಂಬೈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಏಳಕ್ಕೆ ಏರಿತು. ರಾಯಗಡ ಜಿಲ್ಲೆಯ ಸಂಧೇರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಅಲ್ಹುಸ್ಸೇನಿ ಕಟ್ಟಡದಲ್ಲಿ ಆರ್ಡಿಎಕ್ಸ್ ಅಳವಡಿಸಲು ನೆರವಾದ ಹಾಗೂ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ದಾದರಿನಲ್ಲಿ ಸ್ಕೂಟರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಕೃತ್ಯಕ್ಕಾಗಿ ಅಹಮದ್ ಇಕ್ಬಾಲ್ನನ್ನು ಕಳೆದ ಸೆಪ್ಟೆಂಬರ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು. 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನೂರು ಜನರನ್ನು ಅಪರಾಧಿಗಳು ಎಂದು ಘೋಷಿಸಲಾಗಿತ್ತು. ಇದುವರೆಗೆ 87 ಮಂದಿ ಅಪರಾಧಿಗಳ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿದೆ. 1993ರ ಮಾರ್ಚ್ 12ರ ಸ್ಫೋಟದಲ್ಲಿ 257 ಮಂದಿ ಸತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯವು ಈವರೆಗೆ ಏಳು ಮಂದಿಗೆ ಮರಣದಂಡನೆ ಹಾಗೂ 16 ಮಂದಿಗೆ ಜೀವಾಧಿ ಶಿಕ್ಷೆ ವಿಧಿಸಿತು.

2007: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಮೊಹಮ್ಮದ್ ಹಮೀದ್ ಅನ್ಸಾರಿ ಅವರನ್ನು ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಪಿಎ) ಮತ್ತು ಎಡಪಕ್ಷಗಳು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವು. ನವದೆಹಲಿಯಲ್ಲಿ ಈದಿನ ನಡೆದ ಯುಪಿಎ ಮತ್ತು ಎಡಪಕ್ಷಗಳ ಸಮನ್ವಯ ಸಮಿತಿಯ ಸಭೆಯ ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಾಜಿ ರಾಜತಾಂತ್ರಿಕ ಅನ್ಸಾರಿ ಅವರ ಹೆಸರು ಪ್ರಕಟಿಸಿದರು.

2007: ದೇಶದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಅಮಾನತುಗೊಳಿಸಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೊರಡಿಸಿದ್ದ ಆದೇಶವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತು. ಇದರಿಂದಾಗಿ ಅನೇಕ ಸಮಸ್ಯೆ, ವಿವಾದದಲ್ಲಿ ಸಿಕ್ಕಿ ತತ್ತರಿಸಿದ ಮುಷರಫ್ ಅವರಿಗೆ ಭಾರಿ ಮುಖಭಂಗವಾಯಿತು. ನ್ಯಾಯಮೂರ್ತಿ ಖಲೀಲುರ್ ರೆಹಮಾನ್ ರಾಮಡೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠ ಎರಡು ತಿಂಗಳು ವಿಚಾರಣೆ ನಡೆಸಿ, ಚೌಧರಿ ವಿರುದ್ಧ ಮುಷರಫ್ ಸರ್ಕಾರ ಸಿದ್ಧಪಡಿಸಿದ್ದ ಆರೋಪಗಳ ಪಟ್ಟಿಯನ್ನು 10-3 ಮತಗಳಿಂದ ವಜಾ ಮಾಡಿತು. ತಮ್ಮ ಮಗನಿಗೆ ಉನ್ನತ ಪೊಲೀಸ್ ಹುದ್ದೆ ದೊರಕಿಸಲು ಹಾಗೂ ವೈಯಕ್ತಿಕ ಅನುಕೂಲ ಮಾಡಿಕೊಳ್ಳಲು ಚೌಧರಿ ಪ್ರಭಾವ ಬೀರಿದ್ದರು ಎಂಬ ಸರ್ಕಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೀಠ ಹೇಳಿತು.

2007: ದುಬೈ ನಗರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ `ಬುರ್ಜ್ ದುಬೈ' ಗಗನಚುಂಬಿ ಕಟ್ಟಡ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಲಭಿಸಿತು. ಇದುವರೆಗೆ 507.3 ಮೀಟರ್ ಎತ್ತರದ `ತೈಪೆ ಟವರ್ಸ್' ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿ ಪಡೆದಿತ್ತು. ಆದರೆ ಈಗ `ಬುಜರ್್ ದುಬೈ' ಕಟ್ಟಡ ಅದನ್ನು ಹಿಂದಿಕ್ಕಿದೆ ಎಂದು ಬೃಹತ್ ಕಟ್ಟಡಗಳ ನಿರ್ವಹಣಾ ಮಂಡಳಿಯು ಅಧಿಕೃತವಾಗಿ ಸ್ಪಷ್ಟಪಡಿಸಿತು. ಹೋಟೆಲುಗಳು, ಶಾಪಿಂಗ್ ಮಾಲ್ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಫ್ಲಾಟುಗಳನ್ನು ಹೊಂದಲಿರುವ `ಬುರ್ಜ್ ದುಬೈ' ಕಟ್ಟಡದ ಎತ್ತರ 705ರಿಂದ 950 ಮೀಟರ್ ನಡುವೆ ಇರಲಿದೆ ಎಂಬ ಅಂದಾಜಿದೆ. ಇದು 154ರಿಂದ 180 ಅಂತಸ್ತುಗಳನ್ನು ಹೊಂದಲಿದೆ. ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಾರ್ಪೊರೇಷನ್ ಕಂಪೆನಿ ಈ ಕಟ್ಟಡದ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿದೆ. 2005ರ ಫೆಬ್ರವರಿ 1ರಂದು ಕಾಮಗಾರಿ ಆರಂಭವಾಗಿದ್ದು, 2009ರ ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು. ಈ ಬೃಹತ್ ಕಟ್ಟಡದ ಅಂದಾಜು ವೆಚ್ಚ 7300 ಕೋಟಿ ದಿರಹಂ (ಯುಎಇ ಹಣ). ಚಿಕಾಗೋ ಮೂಲದ ಸ್ಕಿಡ್ಮೋರ್, ಓವಿಂಗ್ಸ್ ಹಾಗೂ ಮೆರಿಲ್ ಕಂಪೆನಿಗಳು ಇದರ ವಿನ್ಯಾಸ ರೂಪಿಸಿವೆ.

2007: ವಿಶ್ವದಲ್ಲೇ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿರುವ ಸ್ವಾಮಿನಾರಾಯಣ ದೇವಸ್ಥಾನ ಜುಲೈ 22ರಂದು ಕೆನಡಾದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಈದಿನ ಟೊರೆಂಟೋದಲ್ಲಿ ಪ್ರಕಟಿಸಲಾಯಿತು. ಟೊರೆಂಟೋ ನಗರದ ಈಶಾನ್ಯ ಭಾಗದಲ್ಲಿ ಹಿಮಾಚ್ಛಾದಿತ ಹಿಮಾಲಯ ಶಿಖರದಂತೆ ಕಾಣುವ ಸ್ವಾಮಿನಾರಾಯಣ ಮಂದಿರವು ಪ್ರಧಾನಿ ಸ್ಟೀಫನ್ ಹಾರ್ಪರ್, ಟೋರೆಂಟೋ ಮೇಯರ್ ಡೇವಿಡ್ ಮಿಲ್ಲರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ. ಇಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳಿದ್ದಾರೆ. ದೇಗುಲದ ಹೊರ ಆವರಣವನ್ನು ಸುಣ್ಣದ ಕಲ್ಲು ಹಾಗೂ ಹೊಳೆಯುವ ಇಟಲಿ ಕೆರ್ರಾರ ಶಿಲೆಯಲ್ಲಿ ಕೆತ್ತಲಾಗಿದೆ. ಒಳ ಆವಣರದಲ್ಲಿ ಗುಲಾಬಿ ವರ್ಣದ ಕಲ್ಲುಗಳು ಶೋಭಿಸುತ್ತಿವೆ. ಸ್ಥಳೀಯ ಹಿಂದು ಸಮುದಾಯ ಕಟ್ಟಡಕ್ಕಾಗಿ 4 ಕೋಟಿ ಅಮೆರಿಕ ಡಾಲರ್ ನೀಡಿದೆ. 400 ಸ್ವಯಂ ಸೇವಕರು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನ ಒಂದು ಹಂತದಲ್ಲಿ 15,683 ಅಂಶಗಳ ಗಡಿ ದಾಟಿ ಹೊಸ ದಾಖಲೆ ಮಾಡಿತು.

1982: ಗಾಂಧೀಜಿ ಅನುಯಾಯಿ ಮೀರಾ ಬೆಹನ್ ನಿಧನ.

1969: ವರಾಹಗಿರಿ ವೆಂಕಟಗಿರಿ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದರು.

1961: ಎಚ್.ಎಲ್. ಪುಷ್ಪ ಜನನ.

1958: ಮಂದಾಕಿನಿ ಪುರೋಹಿತ ಜನನ.

1955: ಬಸವರಾಜ ಸಾದರ ಜನನ.

1943: ಸಾಹಿತಿ ಡಿ.ಆರ್. ಬಳೂರಗಿ ಜನನ.

1940: ವೈದ್ಯ, ಸಾಹಿತಿ, ಸಂಶೋಧಕ ಡಾ. ಸ.ಜ. ನಾಗಲೋಟಿಮಠ ಅವರು ಜಂಬಯ್ಯ ವೀರಬಸಯ್ಯ- ಹಂಪವ್ವ ದಂಪತಿಯ ಪುತ್ರನಾಗಿ ಗದಗದಲ್ಲಿ ಈದಿನ ಜನಿಸಿದರು. ಕನ್ನಡದಲ್ಲಿ 42, ಇಂಗ್ಲಿಷ್ನಲ್ಲಿ 14 ಗ್ರಂಥಗಳನ್ನು ರಚಿಸಿದ ನಾಗಲೋಟಿಮಠ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

1925: ಸಾಹಿತಿ ಟಿ.ಬಿ. ಹಂಡಿ ಜನನ.

1924: ಹದಿನೈದು ದೇಶಗಳ ಪ್ರತಿನಿಧಿಗಳು ಪ್ಯಾರಿಸ್ಸಿನಲ್ಲಿ ಭೇಟಿಯಾಗಿ ಚೆಸ್ಗಾಗಿ ಒಂದು ಶಾಶ್ವತ ಒಕ್ಕೂಟ (ಫಿಡೆ) ಸ್ಥಾಪಿಸಲು ನಿರ್ಧರಿಸಿದರು.

1905: ಬಂಗಾಳ ವಿಭಜನೆಯ ಲಾರ್ಡ್ ಕರ್ಜನ್ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು.

1532: ಕವಿ, ತತ್ವಜ್ಞಾನಿ ತುಳಸೀದಾಸರು ಉತ್ತರ ಪ್ರದೇಶದ ರಾಜಪುರದಲ್ಲಿ ಈದಿನ ಜನಿಸಿದರು. ಮಹತ್ವದ ಹಿಂದಿ ಕವಿಗಳಲ್ಲಿ ಒಬ್ಬರಾಗಿರುವ ತುಳಸೀದಾಸರು 12 ಪುಸ್ತಕ ಬರೆದಿದ್ದಾರೆ. ರಾಮನ ಕುರಿತು ಬರೆದಿರುವ `ರಾಮಚರಿತ ಮಾನಸ' ಇವರ ಪ್ರಮುಖ ಗ್ರಂಥಗಳಲ್ಲಿ ಒಂದು.

No comments:

Post a Comment