Monday, February 10, 2020

ಇಂದಿನ ಇತಿಹಾಸ History Today ಫೆಬ್ರುವರಿ 10

2020: ಅಲಹಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉಸ್ತುವಾರಿ ನೋಡಿ ಕೊಳ್ಳಲಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಇದೇ ೧೯ರಂದು ದೆಹಲಿಯಲ್ಲಿ ಮೊದಲ ಸಭೆ ನಡೆಸಲಿದ್ದು, ದೇಗುಲ ನಿರ್ಮಾಣದ ಕುರಿತು ಚರ್ಚೆ ನಡೆಸಲಿದೆ ಎಂದು ಟ್ರಸ್ಟ್ ಸದಸ್ಯ ಸ್ವಾಮಿ ವಾಸುದೇವಾನಂದ ಸರಸ್ವತಿ 2020 ಫೆಬ್ರುವರಿ 10ರ ಸೋಮವಾರ ತಿಳಿಸಿದರು. ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ೧೫ ಸದಸ್ಯರ ಟ್ರಸ್ಟ್ ರಚನೆ ಮಾಡಿತ್ತು. ಇದೇ ತಿಂಗಳಲ್ಲಿ ಮೊದಲ ಸಭೆ ನಡೆಸಲು ಟ್ರಸ್ಟ್ ತೀರ್ಮಾನಿಸಿದ್ದು, ಟ್ರಸ್ಟಿಗೆ  ಶ್ರೀ ರಾಮಮಂದಿರ ನ್ಯಾಸ್ ಮುಖ್ಯಸ್ಥ ಮಹಾಂತ ನೃತ್ಯಗೋಪಾಲ್ ದಾಸ್ ಅವರನ್ನೂ ಸೇರ್ಪಡೆ ಮಾಡಿಕೊಳ್ಳುವ ಕುರಿತೂ ಚರ್ಚೆ ನಡೆಸಲಾಗುತ್ತದೆ ಎಂದೂ ಅವರು ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ವಿಶಾಲ ಪೀಠಕ್ಕೆ ಒಪ್ಪಿಸುವ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ 2020 ಫೆಬ್ರುವರಿ 10ರ ಸೋಮವಾರ ಎತ್ತಿ ಹಿಡಿಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಮೂರ್ತಿಗಳ ಪೀಠವು ತನ್ನ ಪುನರ್ ಪರಿಶೀಲನಾ ವ್ಯಾಪ್ತಿಯಲ್ಲಿ ವಿಶಾಲ ಪೀಠಕ್ಕೆ ಒಪ್ಪಿಸಬೇಕಾದ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ರೂಪಿಸುವ ಅಧಿಕಾರವನ್ನು ಹೊಂದಿದೆ ಎಂದು ತೀರ್ಪು ನೀಡಿತು. ಪೀಠವು ಆಲಿಸಬೇಕಾದ ಪ್ರಶ್ನೆಗಳನ್ನು ಕೂಡಾ ನ್ಯಾಯಾಲಯವು ಪುನರ್ ನಿರೂಪಣೆ ಮಾಡಿತು. ನವ ಸದಸ್ಯ ಸಂವಿಧಾನ ಪೀಠದ ಮುಂದೆ ವಿಚಾರಣೆ ಫೆಬ್ರುವರಿ ೧೭ಕ್ಕೆ ಆರಂಭವಾಗಲಿದೆ. ಪ್ರತಿಯೊಂದು ಕಡೆಯ ವಕೀಲರೂ ಪ್ರಮುಖ ವಾದಗಳನ್ನು ಮುಂದಿಡಲಿದ್ದಾರೆ ಮತ್ತು ವಾದ ಮಂಡನೆಗೆ ಪೂರ್ಣ ದಿನದ ಕಾಲಾವಕಾಶ ಪಡೆಯಲಿದ್ದಾರೆ. ಪ್ರತಿಯೊಬ್ಬ ವಕೀಲರಿಗೂ ಪೂರಕ ವಾದ ಮಂಡನೆಗೆ ಎರಡು ಗಂಟೆಗಳ ಹೆಚ್ಚುವರಿ ಕಾಲಾವಕಾಶವನ್ನು ನ್ಯಾಯಾಲಯ ನೀಡಲಿದೆ. ೨೦೧೯ರ ನವೆಂಬರ್ ೧೪ರಂದು ಪಂಚ ಸದಸ್ಯ ಪೀಠವು ಶಬರಿಮಲೈ ಪುನರ್ ಪರಿಶೀಲನಾ ಅರ್ಜಿಗಳನ್ನು ಆಲಿಸಿ ಏಳು ಪ್ರಶ್ನೆಗಳನ್ನು ವಿಶಾಲ ಪೀಠದ ಉತ್ತರಕ್ಕಾಗಿ ರೂಪಿಸಿತ್ತು. ಪ್ರಶ್ನೆಗಳಲ್ಲಿ ಸಂವಿಧಾನದ ೨೫ ಮತ್ತು ೨೬ನೇ ಪರಿಚ್ಛೇದಗಳ ಅಡಿಯಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಚಲಾವಣೆ ಮತ್ತು ಇತರ ಮೂಲಭೂತ ಹಕ್ಕುಗಳು- ಮುಖ್ಯವಾಗಿ ೧೪ನೇ ಪರಿಚ್ಛೆದದ ಅಡಿಯಲ್ಲಿನ ಸಮಾನತೆಯ ಹಕ್ಕು, ನೈತಿಕತೆ ಅಥವಾ ಸಾಂವಿಧಾನಿಕ ನೈತಿಕತೆ ಅಭಿವ್ಯಕ್ತಿಯ ವ್ಯಾಪ್ತಿ ಮತ್ತು ನಿರ್ದಿಷ್ಟ ಆಚರಣೆಯೊಂದು ಧರ್ಮದ ಅವಿಭಾಜ್ಯ ಅಂಗವೇ ಎಂಬುದಾಗಿ ನ್ಯಾಯಾಲಯವು ಎಷ್ಟರ ಮಟ್ಟಿಗೆ ಪರಿಶೀಲಿಸಬಹುದು ಎಂಬ ವಿಷಯಗಳೂ ಇವುಗಳಲ್ಲಿ ಸೇರಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2020: ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ೨೦೧೮ರ ಮಾರ್ಚ್ ತಿಂಗಳಲ್ಲಿ ನೀಡಿದ್ದ ತೀರ್ಪಿನ ಪರಿಣಾಮ ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ೨೦೧೮ರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು  ಸುಪ್ರೀಂ ಕೋರ್ಟ್  2020 ಫೆಬ್ರುವರಿ 10ರ ಸೋಮವಾರ  ಎತ್ತಿ ಹಿಡಿಯಿತು. ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಅರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರಾಥಮಿಕ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಹಿರಿಯ ಪೊಲೀಸ್ ಅಧಿಕಾರಿಯ ಅನುಮತಿಯೂ ಬೇಕಿಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿತು. ತ್ರಿಸದಸ್ಯ ಪೀಠದ ಸದಸ್ಯರ ಪೈಕಿ ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಭಿನ್ನಮತದ ತೀರ್ಪು ನೀಡಿದ್ದು ಪ್ರತಿಯೊಬ್ಬ ನಾಗರಿಕನೂ ಸಹ ನಾಗರಿಕನನ್ನು ಸಮಾನವಾಗಿ ಕಾಣುವ ಅಗತ್ಯವಿದೆ ಮತ್ತು ಭ್ರಾತೃತ್ವದ ಕಲ್ಪನೆಯನ್ನು ಪೋಷಿಸುವ ಅಗತ್ಯವಿದೆ ಎಂದು ಹೇಳಿದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಕಾಯ್ದೆಯ ಅಡಿಯಲ್ಲಿ ಮೇಲ್ನೋಟಕ್ಕೇ ಪ್ರಕರಣ ಕಂಡು ಬರದ ಸಂದರ್ಭದಲ್ಲಿ ನ್ಯಾಯಾಲಯವು ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ರದ್ದು ಪಡಿಸಬಹುದು ಮತ್ತು  ನಿರೀಕ್ಷಣಾ ಜಾಮೀನಿನ ಉದಾರ ಬಳಕೆಯ ಸಂಸತ್ತಿನ ಉದ್ದೇಶವನ್ನು ವಿಫಲಗೊಳಿಸಬಹುದು ಎಂದು ನ್ಯಾಯಮೂರ್ತಿ ಭಟ್ ಹೇಳಿದರು. ಕಾಯ್ದೆಯ ಅಡಿಯಲ್ಲಿ ನಿರೀಕ್ಷಣಾ ಜಮೀನಿಗೂ ಅವಕಾಶವಿಲ್ಲ. ಆದರೆ, ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಎಫ್ಐಆರ್ನ್ನು ವಿಶೇಷ ಸಂದರ್ಭಗಳಲ್ಲಿ ರದ್ದು ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ಇಲ್ಲದೇ ಹೋದರೆ ಅದು ನ್ಯಾಯದ ಅಸಮಾನತೆಯಾಗುತ್ತದೆ ಎಂದು ನ್ಯಾಯಮೂರ್ತಿ ಭಟ್ ನುಡಿದರು.  (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ)





No comments:

Post a Comment