Friday, February 28, 2020

ಇಂದಿನ ಇತಿಹಾಸ History Today ಫೆಬ್ರುವರಿ 28

2020: ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಉಡುಗೊರೆಯಾಗಿ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಣ ಅಂತರರಾಜ್ಯ ಮಹದಾಯಿ ನದಿಯ ನೀರನ್ನು ಹಂಚಿಕೊಳ್ಳುವ ಕುರಿತು ಕೇಂದ್ರ ಸರ್ಕಾರ 2020 ಫೆಬ್ರುವರಿ 27ರ ಗುರುವಾರ ರಾತ್ರಿ ಅಧಿಸೂಚನೆ ಹೊರಡಿಸಿತು. ನದಿಯಿಂದ ಕರ್ನಾಟಕಕ್ಕೆ ೧೩.೪೨ ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ ಮಹದಾಯಿ ಜಲ ವಿವಾದ ನ್ಯಾಯ ಮಂಡಳಿಯು (ನ್ಯಾಯಾಧಿಕರಣ)  ೨೦೧೮ ಆಗಸ್ಟ್ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಜಾರಿಗೆ ತರಲು ಅಧಿಸೂಚನೆ ಕೋರಿದೆ. ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಫೆಬ್ರುವರಿ ೨೧ ರಂದು ನಿರ್ದೇಶನ ನೀಡಿದ ನಂತರ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ನಾಲ್ಕು ದಶಕಗಳಿಂದ ನಡೆಯುತ್ತಿರುವ ಮೂರು ರಾಜ್ಯಗಳ ನಡುವಿನ ವಿವಾದವನ್ನು ಬಗೆಹರಿಸಲು ನ್ಯಾಯ ಮಂಡಳಿಯನ್ನು ರಚಿಸಲಾಗಿತ್ತು. ನೀರಾವರಿ ಉದ್ದೇಶಗಳಿಗಾಗಿ ನೀರನ್ನು ಬಳಸುವ ಕಳಸ ಬಂಡೂರಿ ಯೋಜನೆಯನ್ನು ಜಾರಿಗೆ ತರಲು ಇದು ಕರ್ನಾಟಕಕ್ಕೆ ದಾರಿ ಮಾಡಿಕೊಡುತ್ತದೆ. ಕರ್ನಾಟಕದಲ್ಲಿ ಪ್ರಮುಖ ಬೇಡಿಕೆಯಾದ ಮಲಪ್ರಭಾ ನದಿಯ ಕಳಸ ಮತ್ತು ಬಂಡೂರಿ ಉಪನದಿಗಳಲ್ಲಿ ಕಾಲುವೆಗಳ ನಿರ್ಮಾಣವನ್ನು ಗೋವಾ ಸರ್ಕಾರ ವಿರೋಧಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಇತಿಹಾಸಕಾರ ಮತ್ತು ಸಂಶೋಧಕ ಷ.ಶೆಟ್ಟರ್ (೮೫) ಅವರು 2020 ಫೆಬ್ರುವರಿ 28ರ ಶುಕ್ರವಾರ ನಿಧನರಾದರು. ಉಸಿರಾಟದ ತೊಂದರೆಯಿಂದಾಗಿ ಕೆಲ ದಿನಗಳ ಹಿಂದೆಷ್ಟೇ ಷ.ಶೆಟ್ಟರ್ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈದಿನ ನಸುಕಿನ ೩.೧೫ರ ವೇಳೆ ಹೃದಯಘಾತದಿಂದ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದರು.   ಇತಿಹಾಸ ಸಂಶೋಧನೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಖ್ಯಾತಿ ಗಳಿಸಿದ್ದ  ಷ.ಶೆಟ್ಟರ್ ಅವರು ೧೯೩೫ರ ಡಿಸೆಂಬರ್ ೧೧ರಂದು ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದ್ದರು.. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಳ್ಳಾರಿಯಲ್ಲಿ ಪೂರೈಸಿ ಆ ನಂತರ ಮೈಸೂರು, ಧಾರವಾಡ ಮತ್ತು ಕೇಂಬ್ರಿಡ್ಜ್ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಹಳೆಗನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಅಭಿರುಚಿ ಹೊಂದಿದ್ದ ಅವರು ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯ ಕುರಿತು ಸುಮಾರು ೨೭ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದರು. ಖ್ಯಾತ ವಿಶ್ವವಿದ್ಯಾಲಯಗಳಾದ ಕೇಂಬ್ರಿಜ್,  ಹಾರ್ವಡ್, ಹೈಡಲ್ಬರ್ಗ್, ಮಾಸ್ಕೋ ಯೂನಿವರ್ಸಿಟಿಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಬಿಜೆಪಿಗೆ ಅದರ ರಾಜಧರ್ಮ ಹೇಗಿರಬೇಕು ಎಂಬುದಾಗಿ ನೆನಪಿಸಿದ್ದಕ್ಕಾಗಿ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು 2020 ಫೆಬ್ರುವರಿ 28ರ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ನೀಡಿದರು. ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಕಾಂಗ್ರೆಸ್ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಗುರುವಾರ ಭೇಟಿ ಮಾಡಿ ಇತರರಿಗೆ ತಮ್ಮ ರಾಜಧರ್ಮದ ಬಗ್ಗೆ ನೆನಪಿಸಲು ಯತ್ನಿಸಿದೆ, ಆದರೆ ಕಾಂಗ್ರೆಸ್ ಪಕ್ಷವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ತನ್ನ ನಿಲುವನ್ನು ಬದಲಾಯಿಸುತ್ತಿರುವುದು ಏಕೆ ಎಂದು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದರು. ನಿಮ್ಮ ಹಿರಿಯ ನಾಯಕರು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದವರ ಬಗ್ಗೆ ಹೊಂದಿದ್ದ ಅಭಿಪ್ರಾಯದ ಬಗ್ಗೆ ನಾನು ಸೋನಿಯಾ ಗಾಂಧಿಯವರನ್ನು ಕೇಳುತ್ತೇನೆ. ಉಗಾಂಡಾದಿಂದ ಪಲಾಯನಗೈದ ಜನರಿಗೆ ಇಂದಿರಾಗಾಂಧಿಯವರು ನೆರವು ನೀಡಿದ್ದರು, ರಾಜೀವ ಗಾಂಧಿಯವರು ಶ್ರೀಲಂಕೆಯ ತಮಿಳರಿಗೆ ನೆರವಾಗಿದ್ದರು. ಮನಮೋಹನ್ ಸಿಂಗ್ ಅವರು ಪೌರತ್ವ ನೀಡಬೇಕು ಎಂದು  ಎಲ್.ಕೆ. ಅಡ್ವಾಣಿ ಅವರನ್ನು ಒತ್ತಾಯಿಸಿದ್ದರು. ಅಶೋಕ ಗೆಹ್ಲೋಟ್ ಅವರು ಪೌರತ್ವಕ್ಕಾಗಿ ಯುಪಿಎ ಮತ್ತು ಎನ್ಡಿಎ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅದೇ ರೀತಿ ತರುಣ್ ಗೊಗೋಯಿ ಆಗ್ರಹಿಸಿದ್ದರು. ಆದ್ದರಿಂದ ನಿಮ್ಮ ಪಕ್ಷವನ್ನು ತಿರುವು-ಮುರುವು ಮಾಡುತ್ತಿರುವ ರಾಜಧರ್ಮ ಯಾವುದು? ಎಂದು ರವಿಶಂಕರ ಪ್ರಸಾದ್ ಪ್ರಶ್ನಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ರಾಲಿಯಲ್ಲಿ ಸೋನಿಯಾ ಗಾಂಧಿಯವರು ‘’ಇಸ್ ಪಾರ್ ಓರ್ ಉಸ್ ಪಾಸ್ ( ದಡವೋ ದಡವೋ) ಎಂಬುದು ಈಗ ನಿರ್ಧಾರವಾಗಬೇಕು ಎಂಬ ಹೇಳಿಕೆ ನೀಡಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಸಚಿವರು ಆಪಾದಿಸಿದರು.   (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಈಶಾನ್ಯ ದೆಹಲಿಯ ಚಾಂದ್ ಬಾಗ್  ಚರಂಡಿಯಿಂದ ಹೊರತೆಗೆಯಲಾದ ಗುಪ್ತಚರ (ಐಭಿ) ಅಧಿಕಾರಿ ಅಂಕಿತ್ ಶರ್ಮ ಅವರನ್ನು ಕ್ರೂರವಾಗಿ ಇರಿದು ಕೊಂದಿರುವುದು ಶವ ಪರೀಕ್ಷೆ ವರದಿಯಿಂದ 2020 ಫೆಬ್ರುವರಿ 28ರ ಶುಕ್ರವಾರ ಬಹಿರಂಗಗೊಂಡಿತು.  ಶರ್ಮ ಅವರ ದೇದಲ್ಲಿ ಹರಿತವಾದ ವಸ್ತುವಿನಿಂದ ಮಾಡಲಾದ ಆಳವಾದ ಹಲವಾರು ಇರಿತ ಮತ್ತು ಉಜ್ಜುಗಾಯಗಳು ಕಂಡು ಬಂದಿವೆ ಎಂದು ಶವ ಪರೀಕ್ಷಾ ವರದಿ ಹೇಳಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.. ಶವ ಪರೀಕ್ಷೆ ನಡೆಸಿದ ವೈದ್ಯರು ೨೬ರ ಹರೆಯದ ಅಧಿಕಾರಿಯನ್ನು ಹಲವಾರು ಬಾರಿ ಇರಿಯಲಾಗಿದೆ ಎಂದು ಹೇಳಿದ್ದಾರೆ ಎಂದು ಇನ್ನೊಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು. ಶರ್ಮ ಅವರು ಗುಪ್ತಚರ ಇಲಾಖೆಯಲ್ಲಿ ಭದ್ರತಾ ಸಹಾಯಕರಾಗಿ ೨೦೧೭ರಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಈಶಾನ್ಯ ದೆಹಲಿಯ ಚಾಂದ್ ಬಾಗ್ನಲ್ಲಿ ವಾಸವಾಗಿದ್ದರು.  ತೀವ್ರ ಹಿಂಸಾಚಾರ ಸಂಭವಿಸಿದ ಮಂಗಳವಾರ ತಮ್ಮ ಬಡಾವಣೆಯಲ್ಲಿ ಏನು ಗದ್ದಲವಾಗುತ್ತಿದೆ ಎಂದು ನೋಡಲು ಹೊರಕ್ಕೆ ಹೋಗಿದ್ದ ಅವರು ಮರಳಿ ಮನೆಗೆ ಬರಲಿಲ್ಲ. ಶರ್ಮ ಅವರು ಕುಟುಂಬ ಸದಸ್ಯರು ಅವರಿಗಾಗಿ ಎಂಟು ಗಂಟೆಗಳ ಕಾಲ ತೀವ್ರ ಹುಡುಕಾಟ ನಡೆಸಿದರು. ಅಂತಿಮವಾಗಿ ಮರುದಿನ ಬೆಳಗ್ಗೆ ಅವರ ಶವ ಚರಂಡಿಯಲ್ಲಿ ಲಭಿಸಿತ್ತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರದಲ್ಲಿ ಮುಸ್ಲಿಮರಿಗೆ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ಮೀಸಲಾಗಿ ವಿಸ್ತರಿಸುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ 2020 ಫೆಬ್ರುವರಿ 28ರ ಶುಕ್ರವಾರ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿತು. ಪ್ರಮುಖ ಅಂಗ ಪಕ್ಷಗಳಾದ ಎನ್ಸಿಪಿ ಮತ್ತು ಶಿವಸೇನೆ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧ ನಿಲುವು ತಾಳಿದವು.  ರಾಜ್ಯ ಸರ್ಕಾರವು ಶೀಘ್ರವೇ ಮೀಸಲಾತಿ ಮಸೂದೆ ಅಂಗೀಕಾರದ ಬಗ್ಗೆ ಖಾತರಿ ನೀಡುವುದು ಮತ್ತು ನಿಟ್ಟಿನಲ್ಲಿ ಶಾಲಾ ಪ್ರವೇಶಾತಿ ಆರಂಭಕ್ಕೆ ಮುನ್ನವೇ ಕ್ರಮ ಕೈಗೊಳ್ಳುವುದು ಎಂದು ಎನ್ಸಿಪಿಗೆ ಸೇರಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ಶುಕ್ರವಾರ ರಾಜ್ಯ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು. ಕಾಂಗ್ರೆಸ್ ಶಾಸಕ ಶರದ್ ರಣ್ಪಿಸೆ ಅವರ ಪ್ರಶ್ನೆಗೆ ಮಲಿಕ್ ಉತ್ತರ ನೀಡುತ್ತಿದ್ದರು. ಆದಾಗ್ಯೂ, ಮಲಿಕ್ ಅವರ ಹೇಳಿಕೆಯ ಸ್ವಲ್ಪವೇ ಹೊತ್ತಿನ ಬಳಿಕ ಹಿರಿಯ ಸಚಿವ ಏಕನಾಥ ಶಿಂಧೆ ಅವರು ಇಂತಹ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟ ಪಡಿಸಿದರು. ಶಿವಸೇನೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡಿರುವ  ಅಧಿಕಾರಾರೂಡ ಮಹಾ ವಿಕಾಸ ಅಘಾಡಿಯ ನಾಯಕರು ಮಾತುಕತೆಗಳ ಬಳಿಕ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವರು ಎಂದು ಹಿರಿಯ ಸೇನಾ ರಾಜಕಾರಣಿ ನುಡಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆರು ವರ್ಷಗಳ ಅವಧಿಯಲ್ಲಿಯೇ ಹಿಂದಿನ ತ್ರೈಮಾಸಿಕದಲ್ಲಿ ಅತ್ಯಂತ ಕಡಿಮೆ ಅಂದರೆ ಶೇಕಡಾ .೫ಕ್ಕೆ ಇಳಿದಿದ್ದ ಭಾರತದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಮೂರನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದ್ದು, ಶೇಕಡಾ .೭ಕ್ಕೆ ಏರುವ ಮೂಲಕ ಅಲ್ಪ ಪ್ರಗತಿಯನ್ನು ದಾಖಲಿಸಿತು. 2020 ಫೆಬ್ರುವರಿ 28ರ ಶುಕ್ರವಾರ ಬಿಡುಗಡೆ ಮಾಡಲಾಗಿರುವ ಅಧಿಕೃತ ಅಂಕಿಅಂಶಗಳು ಭಾರತದ ಒಟ್ಟು ದೇಶೀಯ ಉತ್ಪಾದನೆಯಲ್ಲಿ (ಜಿಡಿಪಿ) ಅಲ್ಪ ಪ್ರಗತಿ ಆಗಿರುವುದನ್ನು ತೋರಿಸಿವೆ. ಆದಾಗ್ಯೂ, ೨೦೧೮-೧೯ರ ಸಾಲಿನ ಇದೇ ಅವಧಿಯಲ್ಲಿ ದಾಖಲಾಗಿದ್ದ ಶೇಕಡಾ . ಜಿಡಿಪಿಗೆ ಹೋಲಿಸಿದರೆ, ಪ್ರಸ್ತುತ ಜಿಡಿಪಿ ಕಡಿಮೆಯೇ. ರಾಷ್ಟ್ರೀಯ ಅಂಕಿಸಂಖ್ಯಾ ಕಚೇರಿ (ಎನ್ ಎಸ್ ) ದೇಶೀಯ ಒಟ್ಟು ಉತ್ಪಾದನೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿತು.. ಶುಕ್ರವಾರ ಬಿಡುಗಡೆ ಮಾಡಲಾಗಿರುವ ಒಟ್ಟು ದೇಶೀಯ ಉತ್ಪನ್ನದ ಮಾಹಿತಿಯು ಕಳೆದ ವರ್ಷದ ಕೊನೆಯಲ್ಲಿ ಕೊರೋನಾವೈರಸ್ ಸೋಂಕು ಚೀನಾವನ್ನು ದಿಗಿಲುಗೊಳಿಸಿದ್ದಕ್ಕಿಂತ ಮುಂಚಿನ ಮಾಹಿತಿಯಾಗಿದೆ. ಸೆಪ್ಟೆಂಬರಿನಲ್ಲಿ ಮುಕ್ತಾಯವಾಗುವ ತ್ರೈಮಾಸಿಕದವರೆಗೆ ಕಳೆದ ಆರು ವರ್ಷಗಳಲ್ಲಿ ತೀವ್ರ ದುರ್ಬಲಗೊಳ್ಳುತ್ತಾ ಸಾಗಿದ್ದ ಭಾರತದ ಆರ್ಥಿಕತೆ ಕೊರೋನಾವೈರಸ್ ಜಾಗತಿಕವಾಗಿ ಹಬ್ಬುವುದಕ್ಕೆ ಮುನ್ನ ಡಿಸೆಂಬರಿನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚೇತರಿಸಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
  
2020: ಮುಂಬಯಿ: ಕೊರೊನಾ ವೈರಸ್ ಸೋಂಕು ಭಾರತೀಯ ಷೇರು ಮಾರುಕಟ್ಟೆ ಮೇಲೆ ಭಾರೀ ಪರಿಣಾಮ ಬೀರಿದ್ದು, 2020 ಫೆಬ್ರುವರಿ 28ರ ಶುಕ್ರವಾರ ದೇಶದ ಷೇರು ಮಾರುಕಟ್ಟೆಯಲ್ಲಿ ದಿಢೀರನೆ ಕುಸಿತ ಉಂಟಾಗಿ ಹೂಡಿಕೆದಾರರಿಗೆ ಕೇವಲ ನಿಮಿಷದಲ್ಲಿ ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿತು. ಇದರೊಂದಿಗೆ ಹೂಡಿಕೆದಾರರಲ್ಲಿ ಮಹಾ ಭೀತಿ ಎದುರಾಯಿತು. ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ದಿನದ ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ,೪೪೮ ಅಂಕ ಕುಸಿತವಾಗಿ ಅಂಶಗಳ ಇಳಿಕೆಯೊಂದಿಗೆ ೩೮,೨೯೭ ಅಂಶಗಳಿಗೆ ತಲುಪಿತು. ಇದರಿಂದಾಗಿ ಹೂಡಿಕೆದಾರರು ನಷ್ಟ ಅನುಭವಿಸಿದರು. ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ೪೨೩ ಅಂಶ ಇಳಿಕೆಯಾಗಿ ೧೧,೨೧೦ ಅಂಶಗಳನ್ನು ಮುಟ್ಟಿತು. ಚೀನಾ, ದಕ್ಷಿಣ ಕೊರಿಯಾ, ಇಟಲಿ ಸೇರಿದಂತೆ ನಾನಾ ದೇಶಗಳಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಉತ್ಪಾದನಾ ವಲಯದ ಮೇಲೆ ಭಾರಿ ಪರಿಣಾಮವಾಗಿದ್ದು, ಇದರಿಂದ ಬಹುತೇಕ ದೇಶಗಳಲ್ಲಿ ಷೇರು ಮಾರುಕಟ್ಟೆ ಕುಸಿದಿದೆ. ವಾರದ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಸಂವೇದಿ ಸೂಚ್ಯಂಕವು ,೧೦೦ ಅಂಕಗಳ ಕುಸಿತ ಕಂಡಿತು. ಇದರಿಂದ ಹೂಡಿಕೆದಾರರು ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು. ಸೂಚ್ಯಂಕ ಕುಸಿತ ಮುಂದುವರೆದು, ದಿನದಂತ್ಯಕ್ಕೆ ೧೪೪೮ ಅಂಕ ಕುಸಿತವನ್ನು ದಾಖಲಿಸಿತು. ಪರಿಣಾಮವಾಗಿ ಹೂಡಿಕೆದಾರರು ಕೇವಲ ನಿಮಿಷದಲ್ಲಿ ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರುರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ಮಾರುಕಟ್ಟೆಯಲ್ಲೂ ಭಾರಿ ಪ್ರಮಾಣದಲ್ಲಿ ಕುಸಿvವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಗಲ್ಲು ಶಿಕ್ಷೆ ಜಾರಿಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿರುವಾಗ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳು ಪುನಃ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಬಳಸಿಕೊಳ್ಳಲು ಆರಂಭಿಸಿದರು. ೨೦೧೨ರ ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ೨೫ ವರ್ಷ ವಯಸ್ಸಿನ ಪವನ್ ಕುಮಾರ್ ಗುಪ್ತಾ 2020 ಫೆಬ್ರುವರಿ 28ರ ಶುಕ್ರವಾರ ಸುಪ್ರೀಂ ಕೋರ್ಟಿಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು, ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದ. ನಾಲ್ವರು ಆಪರಾಧಿಗಳ ಪೈಕಿ ಪವನ್ ಗುಪ್ತಾ ಈವರೆಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿರಲಿಲ್ಲ. ರಾಷ್ಟ್ರಪತಿಗಳಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನೂ ಸಲ್ಲಿಸಿಲ್ಲ. ಉಳಿದ ಮೂವರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಕ್ಷಮಾದಾನ ಅರ್ಜಿಗಳನ್ನು ಈಗಾಗಲೇ ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ. ರಾಷ್ಟ್ರಪತಿಗಳೂ ತಮ್ಮ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಮುಖೇಶ್ ಕುಮಾರ್ ಮತ್ತು ವಿನಯ್ ಶರ್ಮಾ ಕೋರ್ಟಿನಲ್ಲಿ ಪ್ರಶ್ನಿಸಿ ಹಿನ್ನಡೆ ಅನುಭವಿಸಿದ್ದಾರೆ. ಅಕ್ಷಯ್ ಕುಮಾರ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಇನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಪ್ರಸುತ ಎಡ ಪಕ್ಷ ನಾಯಕರಾಗಿರುವ ಕನ್ನಯ್ಯ ಕುಮಾರ್ ವಿರುದ್ಧ ೨೦೧೬ರ ರಾಷ್ಟ್ರದ್ರೋಹ ಪ್ರಕರಣದಲ್ಲಿ ಖಟ್ಲೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರವು 2020 ಫೆಬ್ರುವರಿ 28ರ ಶುಕ್ರವಾರ ತನ್ನ ಒಪ್ಪಿಗೆ ನೀಡಿತು. ೨೦೧೬ರ ಜೆಎನ್ಯು  ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡುವ ಬಗ್ಗೆ ತಮ್ಮ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವುದು ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭರವಸೆ ನೀಡಿದ ದಿನಗಳ ಬಳಿಕ ದೆಹಲಿ ಸರ್ಕಾರದಿಂದ ಒಪ್ಪಿಗೆ ಲಭಿಸಿದೆ. ದೆಹಲಿ ನ್ಯಾಯಾಲಯವು ಏಪ್ರಿಲ್ ೩ರಂದು ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಕಡತವು ಗೃಹ ಇಲಾಖೆಯನ್ನು ನೋಡಿಕೊಳ್ಳುತ್ತಿರುವ ಆಪ್ ಸಚಿವ ಸತ್ಯೇಂದರ್ ಜೈನ್ ಬಳಿ ಬಾಕಿ ಉಳಿದಿತ್ತು. ಗೃಹ ಇಲಾಖೆಯು ಕಡತ ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡಿತು ಎಂದು ಮೂಲಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

  

No comments:

Post a Comment