ನಾನು ಮೆಚ್ಚಿದ ವಾಟ್ಸಪ್

Tuesday, August 4, 2020

ಇಂದಿನ ಇತಿಹಾಸ History Today ಆಗಸ್ಟ್ 04

ಇಂದಿನ ಇತಿಹಾಸ  History Today ಆಗಸ್ಟ್ 04

2020: ಮುಂಬೈ: ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾಂತಾಕ್ರೂಜ್ ಪೂರ್ವ ಭಾಗದಲ್ಲಿ ಭಾರೀ ಮಳೆಗೆ ಮನೆಯೊಂದು 2020 ಆಗಸ್ಟ್ 04ರ ಮಂಗಳವಾರ ತೆರೆದ ಚರಂಡಿಗೆ ಕುಸಿದು ಅದರಲ್ಲಿದ್ದ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಚರಂಡಿ ನೀರಿನಲ್ಲಿ ಕಣ್ಮರೆಯಾದರು. ಗುಂಪು ಮನೆಗಳ (ಚಾಲ್) ಒಂದು ಭಾಗ ಕುಸಿದಾಗ ಒಟ್ಟು ನಾಲ್ವರು ಚರಂಡಿಗೆ ಬಿದ್ದರು. ಅವರ ಪೈಕಿ ಒಬ್ಬ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದು, ಆಕೆಯನ್ನು ವಿಎನ್ ದೇಸಾಯಿ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರು. ಬೆಳಗ್ಗೆ ೧೧.೩೩ ಸುಮಾರಿಗೆ ಮನೆಗಳು ಕುಸಿದಿದ್ದು, ಸಾಂತಕ್ರೂಜ್ ಪೂರ್ವದ ವಕೋಲಾ ನಾಲೆಯಲ್ಲಿ ಮಹಿಳೆ ಮತ್ತು ಇಬ್ಬರು ಬಾಲಕಿಯರಿಗಾಗಿ ಶೋಧ ಕಾರ್ಯಗಳು ಮುಂದುವರೆದವು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಚರಂಡಿಗೆ ಹೊಂದಿಕೊಂಡ ಎರಡು ಮನೆಗಳು ಕುಸಿದ ನಂತರ ಮಹಿಳೆ ಮತ್ತು ಮೂವರು ಬಾಲಕಿಯರು ಚರಂಡಿಗೆ ಬಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಯೋಧ್ಯೆಯಲ್ಲಿನ ಸರಯೂ ನದಿ ತೀರದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ 2020 ಆಗಸ್ಟ್ ೫ರ ಬುಧವಾರ ಭೂಮಿ ಪೂಜೆ ನಡೆಯಲಿದ್ದು ಇಡೀ ದೇಗುಲ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದೇ ವೇಳೆಯಲ್ಲಿ ರೂಪುಗೊಳ್ಳಲಿರುವ ಯೋಜಿತ ದೇವಾಲಯದ ಹೊರ ರಚನೆಯ ನೀಲನಕ್ಷೆಯನ್ನು ಸರ್ಕಾರ  2020 ಆಗಸ್ಟ್ 04ರ ಮಂಗಳವಾರ ಬಿಡುಗಡೆ ಮಾಡಿತು. ಗೋಪುರಗಳು, ಕಂಬಗಳು ಮತ್ತು ಗುಮ್ಮಟಗಳನ್ನು ಒಳಗೊಂಡ ಮೂರು ಅಂತಸ್ತಿನ ಭವ್ಯವಾದ ರಚನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯದ ಯೋಜನೆಯ ಪ್ರಕಾರ ದೇಗುಲವು ಮೊದಲು ರೂಪಿಸಿದ್ದಕ್ಕಿಂತಲೂ ಎರಡು ಪಟ್ಟು ದೊಡ್ಡದಾಗುವ ಸಾಧ್ಯತೆ ಇದೆ. ಭೂ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ದೇವಾಲಯವನ್ನು ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದೆ. ಹೆಚ್ಚಿನ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಎರಡು ಗುಮ್ಮಟಗಳ ಬದಲಿಗೆ ಈಗ ಐದು ಗುಮ್ಮಟಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.ಕಳೆದ ವರ್ಷ ಸುಪ್ರೀಂ ಕೋರ್ಟ್ ಅಯೋಧ್ಯೆಯ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ನಂತರ ವಿನ್ಯಾಸವನ್ನು ಪುನರುಜ್ಜೀವನಗೊಳಿಸಲಾಯಿತು. ಅಯೋಧ್ಯೆಯಲ್ಲಿ ಹೊಸ ಮಸೀದಿ ನಿರ್ಮಿಸಲು ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಅಯೋಧ್ಯೆ: ಅಯೋಧ್ಯೆಯು 2020 ಆಗಸ್ಟ್ ೫ರ ಬುಧವಾರ ರಾಮಮಂದಿರ ಶಿಲಾನ್ಯಾಸಕ್ಕಾಗಿ ಸಜ್ಜಾಗಿದ್ದು, ಕಾರ್ಯಕ್ರಮಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯ ನಂತರ ಬೆಳ್ಳಿಯ ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಇಡುವ ಮೂಲಕ ಭವ್ಯ ಮಂದಿರಕ್ಕೆ ಅಡಿಪಾಯ ಹಾಕಲಿದ್ದಾರೆ. ದೇವಾಲಯಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಅವರು ೪೦ ಕೆಜಿ ಬೆಳ್ಳಿ ಇಟ್ಟಿಗೆಯನ್ನು ದಾನ ಮಾಡಿದ್ದಾರೆ, ಪ್ರಧಾನಿಯವರು ಇದೇ ಇಟ್ಟಿಗೆಯನ್ನು ಬಳಸಲಿದ್ದಾರೆ. ಏನಿದ್ದರೂ, ಭೂಮಿ ಪೂಜೆಯ ನಂತರ ಇಟ್ಟಿಗೆಯನ್ನು ತೆಗೆಯಲಾಗುತ್ತದೆ. ತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗೆಶ್ರೀರಾಮನ ಲಕ್ಷ್ಮಣ, ಸೀತೆ, ಹನುಮಂತರ ಚಿತ್ರಗಳನ್ನು ಒಳಗೊಂಡ ಬೆಳ್ಳಿ ನಾಣ್ಯಗಳನ್ನು ಕಳುಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ದಿವಂಗತ ಅಧ್ಯಕ್ಷ ಅಶೋಕ ಸಿಂಘಾಲ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಅಶೋಕ ಸಿಂಘಾಲ್ ಪ್ರತಿಷ್ಠಾನದ ಪರವಾಗಿ ಜಯೇಂದ್ರ ಸರಸ್ವತಿ ಅವರು ನಾಣ್ಯಗಳನ್ನು ಕಳುಹಿಸಿದ್ದಾರೆ. ನಾಣ್ಯಗಳನ್ನು ಭೂಮಿ ಪೂಜೆಗೆ ಹಾಜರಾಗುವ ಸಂತರಿಗೆ ಬುಧವಾರ ವಿತರಿಸಲಾಗುವುದು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕವು ವಿನಾಶಕಾರಿ ವೇಗದಲ್ಲಿ ಸಾಗುತ್ತಿದ್ದು, ಲಸಿಕೆ ಪ್ರಯೋಗ ಇನ್ನೂ ತಡವಾಗುವ ಸಂಭವ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಆಗಸ್ಟ್  04ರ ಮಂಗಳವಾರ ತಿಳಿಸಿತು.  ಈವರೆಗೂ ವೈರಸ್ಸಿಗೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಲಭ್ಯವಿಲ್ಲಎಂದು ಆರೋಗ್ಯ ಸಚಿವಾಲಯದ ರಾಜೇಶ ಭೂಷಣ್ ಹೇಳಿದರು. ಲಸಿಕೆಯ ಅಗತ್ಯವು ಅತ್ಯಂತ ತುರ್ತಿನದಾಗಿದೆ. ಏಕೆಂದರೆ ಸಾಂಕ್ರಾಮಿಕವು ವಿನಾಶಕಾರಿ ವೇಗದಲ್ಲಿ ಸಾಗುತ್ತಿದೆ. ಆದರೆ ಲಸಿಕೆ ತಯಾರಿಯು ಸಮಯ ತೆಗೆದುಕೊಳ್ಳುತ್ತದೆಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದರು. ವಿಶ್ವದ ೧೪೧ ಸಂಸ್ಥೆಗಳು ೨೬ ಹಂತದ ಪ್ರಯೋಗಗಳಲ್ಲಿ ನಿರತವಾಗಿವೆ. ಭಾರತದ ಮೂರು ಸಂಸ್ಥೆಗಳು ವಿವಿಧ ಹಂತಗಳ ಪ್ರಯೋಗ ನಡೆಸುತ್ತಿವೆ ಎಂದು ಅವರು ನುಡಿದರು. ವಿವಿಧ ಹಂತಗಳ ಪ್ರಯೋಗಕ್ಕೆ ಇತ್ತೀಚೆಗೆ ಆಕ್ಸ್‌ಫರ್ಡ್ ಲಸಿಕೆ ಸೇರ್ಪಡೆಯಾಗಿದೆ. ಇದನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ, ಇದು ಹಂತ ಮತ್ತು ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ಪಡೆದಿದದು, ೧೭ ತಾಣಗಳಲ್ಲಿ ಒಂದು ವಾರದೊಳಗೆ ಪ್ರಯೋಗಗಳು ಪ್ರಾರಂಭವಾಗಲಿವೆ ಎಂದು ಡಾ.ಭಾರ್ಗವ ಹೇಳಿದರು. "ಪ್ರಸ್ತುತ ಕ್ಷಣದಲ್ಲಿ, ನಾವು ಮೂರು ಸಂಭಾವ್ಯ ಭಾರತೀಯ ಲಸಿಕೆಗಳನ್ನು ಹೊಂದಿದ್ದೇವೆ, ಅವು ಕ್ಲಿನಿಕಲ್ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ಲಸಿಕೆಗಳು- ಭಾರತ್ ಬಯೋಟೆಕ್ ಲಸಿಕೆ ಮತ್ತು ಝೈಡಸ್ ಕ್ಯಾಡಿಲಾದ ಡಿಎನ್‌ಎ ಲಸಿಕೆ ಹಂತ ಅನ್ನು ಪೂರ್ಣಗೊಳಿಸಿ ನೇ ಹಂತಕ್ಕೆ ಕಾಲಿಡುತ್ತಿವೆ. ಮೂರನೆಯದು ಆಕ್ಸ್‌ಫರ್ಡ್ ಲಸಿಕೆಎಂದು ಅವರು ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಲಕ್ನೋ: ಅಯೋಧ್ಯೆಯಲ್ಲಿ ಬುಧವಾರಕ್ಕೆ ನಿಗದಿಯಾಗಿರುವ ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಬಿಜೆಪಿ ಸಹಿತವಾಗಿ ಹಲಡೆಗಳಿಂದ ಬಂದಿರುವ ಸಾಕಷ್ಟು ಟೀಕೆಗಳ ಬಳಿಕ 2020  ಆಗಸ್ಟ್  04ರ ಮಂಗಳವಾರ ಮೌನ ಮುರಿದಿರುವ ಕಾಂಗ್ರೆಸ್, ಸಮಾರಂಭಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿತು. ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇವಾಲಯಕ್ಕಾಗಿ ಶಿಲಾನ್ಯಾಸ ಸಮಾರಂಭದ ಒಂದು ದಿ ಮುಂಚಿತವಾಗಿ ಟ್ವಿಟ್ಟರಿನಲ್ಲಿ ನೀಡಿದ ಹೇಳಿಕೆಯಲ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಮ ಮಂದಿರದ ಭೂಮಿ ಪೂಜೆಯನ್ನುರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭಎಂಬುದಾಗಿ ಬಣ್ಣಿಸಿದರು. ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆಗಳು ದೀನಬಂಧು ಭಗವಾನ್ ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರಲ್ಲೂ ಇದ್ದಾನೆ, ರಾಮ ಎಲ್ಲರೊಂದಿಗೂ ಇದ್ದಾನೆ. ರಾಮ ಮತ್ತು ಮಾತೆ ಸೀತಾ ಅವರ ಸಂದೇಶ ಮತ್ತು ಆಶೀರ್ವಾದದೊಂದಿಗೆ, ರಾಮಲಾಲ ದೇವಾಲಯದ ಭೂಮಿಪೂಜೆಯು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭವಾಗಿದೆಎಂದು ಪ್ರಿಯಾಂಕಾ ಮಂಗಳವಾರ ಟ್ವೀಟಿನಲ್ಲಿ  ತಿಳಿಸಿದರು. ರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತೀಯ ಉಪಖಂಡದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆ. ಭಗವಾನ್ ರಾಮ, ತಾಯಿ ಸೀತಾ ಮತ್ತು ರಾಮಾಯಣದ ಕಥೆ ಪ್ರಕಾಶ ಪುಂಜವಾಗಿ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆ. ಭಾರತೀಯ ಜನತೆ ರಾಮಾಯಣ, ಧರ್ಮ, ನೀತಿ, ಕರ್ತವ್ಯ, ತ್ಯಾಗ, ಭವ್ಯ, ಪ್ರೀತಿ, ಶೌರ್ಯ ಮತ್ತು ಸೇವೆಯ ವಿಷಯಗಳಿಂದ ಪ್ರೇರಿತರಾಗಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ರಾಮಕಥೆಯು ಅನೇಕ ರೂಪಗಳಲ್ಲಿ ಸ್ವಯಂ ವ್ಯಕ್ತವಾಗಿದೆ. ಶ್ರೀಹರಿಯ ಅಸಂಖ್ಯಾತ ರೂಪಗಳಂತೆ, ರಾಮಕಥಾ ಹರಿಕಥೆಯೂ ಅನಂತಎಂದು ಕಾಂಗ್ರೆಸ್ ನಾಯಕಿ ಬರೆದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಗುಜರಾತಿನ ಜುನಾಗಢ ಹಾಗೂ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳು ಎಂಬುದಾಗಿ ಬಿಂಬಿಸುವ ಪಾಕಿಸ್ತಾನದ ಹೊಸ ರಾಜಕೀಯ ನಕ್ಷೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2020 ಆಗಸ್ಟ್  04ರ ಮಂಗಳವಾರ ಅನಾವರಣಗೊಳಿಸಿದರು. "ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಚಾರಿತ್ರಿಕ ದಿನ" ಎಂದು ಖಾನ್ ನಕ್ಷೆಗೆ ಸಚಿವ ಸಂಪುಟದ ಅನುಮೋದನೆ  ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ಭಾರತದ ವಿದೇಶಾಂಗ ಸಚಿವಾಲಯವು ಹೊಸ ನಕ್ಷೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಭಾರತೀಯ ಅಧಿಕಾರಿಯೊಬ್ಬರು ದಾಖಲೆ ಪ್ರಕಟಿಸಲು ಇಸ್ಲಾಮಾಬಾದ್ ಮಾಡಿದ ಪ್ರಯತ್ನವನ್ನುಭೂಪಟ ಭ್ರಮೆ (ಕಾರ್ಟೊಗ್ರಾಫಿಕ್ ಹಾಲ್ಯುಸಿನೇಷನ್) ಎಂದು ಬಣ್ಣಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ, ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳೀತ ಪ್ರದೇಶಗಳಾಗಿ ವಿಭಜಿಸುವ ಶಾಸನವನ್ನು ಸಂಸತ್ತಿನಲ್ಲಿ ಭಾರತ ಸರ್ಕಾರ ಮಂಡಿಸಿದ ಮೊದಲ ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿ, ಭಾರತವನ್ನು ಚುಚ್ಚಲು ಇಮ್ರಾನ್ ಖಾನ್ ಕ್ರಮ ಕೈಗೊಂಡಿದ್ದಾರೆ. ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಇಮ್ರಾನ್ ಖಾನ್ ಅವರ ಸರ್ಕಾರವು ಈಗಾಗಲೇ ಕಾರ್ಯಕ್ರಮಗಳ ಸುದೀರ್ಘ ಪಟ್ಟಿಯನ್ನು ರೂಪಿಸಿದೆ, ಅದರ ಪಾಲುದಾರರಾದ ಚೀನಾ ಮತ್ತು ಟರ್ಕಿಯಂತಹ ದೇಶಗಳಿಗೆ ಹೇಳಿಕೆಗಳನ್ನು ನೀಡುವಂತೆ ಅಥವಾ ಭಾರತವನ್ನು ಟೀಕಿಸುವ ಟ್ವೀಟ್ ಮಾಡುವಂತೆ ಪಾಕಿಸ್ತಾನ ಕೋರಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 04 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment