Showing posts with label ನೆನಪು. Show all posts
Showing posts with label ನೆನಪು. Show all posts

Sunday, May 10, 2026

PARYAYA: ತಾರಾ ಎಂಬ ಎಲೆಮರೆಯ ಕುಸುಮ

 ತಾರಾ ಎಂಬ ಎಲೆಮರೆಯ ಕುಸುಮ

ಮೊನ್ನೆ ಮೊನ್ನೆ ಗಿರಿನಗರದ ಶ್ರೀ ಮಹಾಗಣಪತಿಯ ಜಾತ್ರೆಯ ಆರಂಭದ ದಿನ. ನನ್ನ ಅತ್ತೆಯವರಿಗೆ ಸ್ವಲ್ಪ ಮೈ ಹುಶಾರಿಲ್ಲ ಎಂದು ಗಿರಿನಗರದ ಆಸ್ಪತ್ರೆಗೆ ದಾಖಲಿಸಿದ್ದೆವು. ಅದರ ಮರುದಿನ ಮಧ್ಯಾಹ್ನ ವೈದ್ಯರ ಸಲಹೆಯಂತೆ ಒಂದಷ್ಟು ಔಷಧಗಳನ್ನು ತರಲೆಂದು ಮೇಲಿನ ಮಹಡಿಯಿಂದ ಕೆಳಕ್ಕೆ ಇಳಿದು ಬರುತ್ತಿದ್ದೆವು.

ನೆಲ ಮಹಡಿಯಲ್ಲಿ ಲಿಫ್ಟಿನ ಎದುರಲ್ಲೇ ಆಕೆ ಗಾಲಿ ಕುರ್ಚಿಯಲ್ಲಿ ಕುಳಿತಿದ್ದಳು. ಅಚ್ಚರಿಯಾಯಿತು. ʼಏನಮ್ಮ ಇದು? ಏಕೆ ಇಲ್ಲಿ?ʼ ಅಂತ ಪ್ರಶ್ನೆ ಮಾಡಿದೆ. ʼಏನೋಪ್ಪ. ನಿನ್ನೆ ರಾತ್ರಿಯಿಂದಲೂ ಒಂದೇ ಸಮನೆ ವಾಂತಿ ಭೇದೀಪ್ಪ. ಏನ್‌ ಕಥೇನೋ ಗೊತ್ತಿಲ್ಲʼ ಅಂದಳು ಆಕೆ. ಮುಖದಲ್ಲಿ ಎಂದಿನತೆಯೇ ನಗು ಇತ್ತು, ಆದರೆ ಅದು ಕ್ಷೀಣವಾಗಿತ್ತು. ಬಳಲಿಕೆಯ ಚಿಹ್ನೆ ಎದ್ದು ಕಾಣುತ್ತಿತ್ತು. ಅಷ್ಟರಲ್ಲಿ ನರ್ಸ್‌ ಆಕೆಯನ್ನು ಮಹಡಿಗೆ ಕರೆದೊಯ್ದಳು.

ಒಂದು ಕ್ಷಣ. ಮನಸ್ಸು ನೆನಪಿನ ಆಳಕ್ಕೆ ಸರಿಯಿತು..

ನಮ್ಮ ನಿವೇಶನಗಳ ಹೋರಾಟ ಉತ್ತುಂಗದಲ್ಲಿದ್ದ ಸಮಯ. ಪ್ರಕರಣ ಹೈಕೋರ್ಟಿನಲ್ಲಿತ್ತು. ಅದಕ್ಕೂ ಮುನ್ನ ಕರ್ನಾಟಕ ಮೇಲ್ಮನವಿ ಟ್ರಿಬ್ಯೂನಲ್ಲಿನಲ್ಲಿ ತೀರ್ಪು ನಮಗೆ ವಿರುದ್ಧವಾಗಿತ್ತು. ಆ ತೀರ್ಪಿನಲ್ಲಿ ನ್ಯಾಯಾಧೀಶರು, ನಮ್ಮೆದುರು ಬಂದಿದ್ದ ಈಕೆಯ ಹೆಸರನ್ನೇ ಉಲ್ಲೇಖಿಸಿದ್ದರು. ತಪ್ಪು ಕಲ್ಪನೆಯಿಂದ ಇದ್ದಿರಬಹುದು. ಆದರೆ ಆ ಪ್ರಕರಣದಲ್ಲಿ ಇದ್ದದ್ದು ಈಕೆಯಲ್ಲ. ಪ್ರಕರಣದಲ್ಲಿ ಇದ್ದದ್ದು ಅದೇ ಹೆಸರಿನ ಬೇರೊಬ್ಬ ಮಹಿಳೆ.

ಹೈಕೋರ್ಟಿನಲ್ಲಿ ಇದೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಸುದೀರ್ಘ ವಾದ ವಿವಾದಗಳ ಬಳಿಕ ನ್ಯಾಯಮೂರ್ತಿಗಳು ಕೆಳಗಿನ ನ್ಯಾಯಾಲಯದ ತೀರ್ಪು ಹಾಗೂ ಅದಕ್ಕೂ ಕೆಳಗಿನ ಎಸಿಯವರ (ಅಸಿಸ್ಟೆಂಟ್‌ ಕಮೀಷನರ್)‌ ಆದೇಶವನ್ನು ರದ್ದು ಪಡಿಸಿದರು. ಆದರೆ… ಪ್ರಕರಣವನ್ನು ಮತ್ತೆ ಮರುವಿಚಾರಣೆಗೆಂದು ಕೆಳಗಿನ ಕೋರ್ಟಿಗೇ ವಾಪಸ್‌ ಕಳಿಸಿ ಆದೇಶ ಮಾಡಿದ್ದರು.

ಈ ತೀರ್ಪು ನಾವು ಅಪೇಕ್ಷಿದ್ದಲ್ಲ. ನಮಗೆ ನ್ಯಾಯಬೇಕಿತ್ತು. ದಶಕಗಳ ಹೋರಾಟದ ಈ ಪ್ರಕರಣಕ್ಕೆ ಒಂದು ಅಂತಿಮತೆ ಬೇಕಿತ್ತು.. ನೂರಾರು ಮಂದಿ ನಿವೇಶನದಾರರಿಗೆ ನೆಮ್ಮದಿ ಬೇಕಿತ್ತು. ಆದರೆ ನಿವೇಶನ ನೀಡಿದ್ದ ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ಹಾಗೂ ನಮ್ಮ ಪರ ವಾದಿಸುತ್ತಿದ್ದ ವಕೀಲರ ಹೊಂದಾಣಿಕೆಯ ನಿಲುವಿನ ಪರಿಣಾಮವಾಗಿ ನ್ಯಾಯಾಲಯದಿಂದ ಈ ತೀರ್ಪು ಬಂದಿತ್ತು. ಅದನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ.

ಆ ಕ್ಷಣ ಅಯೋಮಯವಾಗಿತ್ತು. ಮುಂದೇನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಸೊಸೈಟಿಯ ಬದಲಾಗಿದ್ದ ಆಡಳಿತ ಮಂಡಳಿ ತಾನು ಗೆದ್ದೆನೆಂದು ಬೀಗುತ್ತಿತ್ತು.

ಆ ಕ್ಷಣದಲ್ಲಿ ನಮ್ಮ ನೆರವಿಗೆ ಬಂದಿದ್ದುದು ಇದೇ ಮಹಿಳೆ. ಈಕೆ ನೇರವಾಗಿ ಹಿರಿಯ ಅನುಭವೀ ವಕೀಲರಾಗಿದ್ದ ಸುಬ್ರಹ್ಮಣ್ಯ ಜೋಯಿಸರ ಬಳಿಗೆ ಹೋಗಿದ್ದಳು. ಅವರ ಬಳಿ ನಮ್ಮ ಕಥೆ ಹೇಳಿದ್ದರು. ಇಂತಹ ಹೊತ್ತಿನಲ್ಲಿ ಏನು ಮಾಡಬಹುದು ಎಂದು ಅವರನ್ನು ಕೇಳಿದ್ದಳು.

ಅವರು ಸಮಾಧಾನದಿಂದ ʼಮತ್ತೆ ಕೆಳಕ್ಕೆ ಹೋಗುವುದು ಸರಿಯಲ್ಲ. ಏನಿದ್ದರೂ ನ್ಯಾಯಾಲಯಗಳ ಹೋರಾಟದಲ್ಲಿ ಮೇಲಕ್ಕೆ ಹೋಗುವುದು ಉತ್ತಮ. ನನ್ನನ್ನು ಬೇಟಿಯಾಗುವಂತೆ ಅವರಿಗೆ ಹೇಳುʼ ಎಂದು ಹೇಳಿ ಈಕೆಯನ್ನು ನಮ್ಮ ಬಳಿಗೆ ಕಳುಹಿಸಿದ್ದರು.

ಬಳಿಕ ನಾವು ಸುಬ್ರಹ್ಮಣ್ಯ ಜೋಯಿಸರನ್ನು ಬೇಟಿ ಮಾಡಿದ್ದೆವು. ʼಭೂ ವಿವಾದಗಳಲ್ಲಿ ಅತ್ಯಂತ ಅನುಭವ ಇರುವ ಒಬ್ಬ ಹಿರಿಯ ವಕೀಲರಿದ್ದಾರೆ. ಬಿಎಂ ಕೃಷ್ಣಭಟ್‌ ಅಂತ ಅವರನ್ನು ಭೇಟಿ ಮಾಡಿʼ ಎಂದು ಸಲಹೆ ಮಾಡಿದ್ದರು.ವಯೋವೃದ್ಧ  ಕೃಷ್ಣಭಟ್‌ ಅವರನ್ನು ಭೇಟಿ ಮಾಡಿದಾಗ ಪ್ರಕರಣವನ್ನು ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಒಯ್ಯಲು ಅವರು ಒಪ್ಪಿದರು.

ವಿಭಾಗೀಯ ಪೀಠದಲ್ಲಿ ತಮ್ಮ ವಾಕ್ಚಾತುರ್ಯದಿಂದ ಪೀಠದ ಮನ ಒಲಿಸಿದರು. ಪ್ರಕರಣವನ್ನು ಮತ್ತೆ ಹಿಂದಕ್ಕೆ ಕಳುಹಿಸುವಂತೆ ಆಜ್ಞಾಪಿಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ರದ್ದು ಪಡಿಸಿ, ಹೈಕೋರ್ಟ್‌ ಏಕ ಸದಸ್ಯ ಪೀಠವೇ ಪ್ರಕರಣದ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥ ಪಡಿಸಬೇಕು ಎಂದು ವಿಭಾಗೀಯ ಪೀಠ ತೀರ್ಪು ನೀಡಿತು.

ಬಳಿಕ ಹಲವಾರು ವರ್ಷಗಳ ವಿಚಾರಣೆಯ ಬಳಿಕ ಏಕಸದಸ್ಯ ಪೀಠವೇ ಈ ಪ್ರಕರಣಕ್ಕೆ ಮುಕ್ತಾಯ ಹಾಡಿತು.

ಈ ನಿವೇಶನದಾರರಿಗೆ ಅನ್ಯಾಯವಾಗಬಾರದು ಎಂಬ ಕಾಳಜಿ ಈ ಮಹಿಳೆಗೆ ಎಷ್ಟಿತ್ತು ಎಂದರೆ, ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ತನ್ನ ಮಗನ ಜೊತೆಗೆ ತಾನೂ ಬಂದು ಕುಳಿತುಕೊಂಡು ನ್ಯಾಯಾಲಯದ ಕಲಾಪ ವೀಕ್ಷಿಸುತ್ತಿದ್ದಳು. ಬರಲು ಸಾಧ್ಯವಾಗದಿದ್ದರೆ ಅದೇ ದಿನ ಸಂಜೆ ಫೋನ್‌ ಮೂಲಕ ವಿಚಾರಿಸಿಕೊಳ್ಳುತ್ತಿದ್ದಳು.

ಗಿರಿಯನ್ನು ಒಂದು ಸುಸಜ್ಜಿತ ನಗರವನ್ನಾಗಿ ಮಾಡುವಲ್ಲಿ ತನ್ನ ಅಪ್ಪನಿಗೆ ಇದ್ದ ಕಾಳಜಿಯ ಗುಣಗಳೇ ಈಕೆಯಲ್ಲೂ ಮೂಡಿ ಬಂದಿದ್ದವು. ದಶಕಗಳ ಹಿಂದಿನ ಆ ದಿನಗಳಲ್ಲಿ ಈಕೆಯ ಅಪ್ಪ, ಕೇವಲ ಕುರುಚಲು ಗಿಡಗಳಿದ್ದ ಗಿರಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಅವುಗಳ ನೀರನ್ನು ಬಾವಿಯೊಂದರಲ್ಲಿ ಸಂಗ್ರಹಿಸಿ, ಟ್ಯಾಂಕಿಗೆ ಏರಿಸಿ ಕಟ್ಟಿದ ಸುಸಜ್ಜಿತ ಬಡಾವಣೆಗೆ ನೀರು ಒದಗಿಸಲು ಪಟ್ಟಿದ್ದ ಕಷ್ಟ, ರಾತ್ರಿ ಹಗಲೆನ್ನದೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾ ಆ ನಗರದ ಐದು ಹಂತಗಳನ್ನು ನಿರ್ಮಿಸಿದ್ದ ಶ್ರಮ ಎಷ್ಟೆಂಬುದು ಆ ಕೆಲಸಗಳನ್ನು ಕಂಡಿದ್ದವರಿಗಷ್ಟೇ ಗೊತ್ತು. ಅವರು ನೆಟ್ಟಿದ್ದ ಮರಗಳೇ ಇಂದೂ ಈ ಪ್ರದೇಶದಲ್ಲಿ ತಂಪಾದ ನೆರಳನ್ನು ಕೊಡುತ್ತಿರುವುದು.

ಅದನ್ನೆಲ್ಲ ಕಂಡಿದ್ದ ಈಕೆ, ತನ್ನಪ್ಪ ನಿರ್ಮಿಸಿದ್ದ ಈ ನಗರಗಳಲ್ಲಿ ವಾಸವಾಗಿರಲು ಬಯಸಿದವರಿಗೆ ನೆಮ್ಮದಿ ಬಯಸಿ, ಅದೇ ಕಾಳಜಿಯೊಂದಿಗೆ ಎಲೆಮರೆಯ ಕಾಯಿಯಂತೆ ತನ್ನ ಕಾರ್ಯ ನಿರ್ವಹಿಸಿದ್ದುದು ಬಹುಮಂದಿಗೆ ಗೊತ್ತಿರಲಾರದು. ನಗರ ಕಟ್ಟುವಲ್ಲಿ ಅಪ್ಪನಿಗಿದ್ದ ದೂರದೃಷ್ಟಿ ಈಕೆಯಲ್ಲೂ ಮೈಗೂಡಿತ್ತು. ನಿವಾಸಿಗಳ ಆ ಹೋರಾಟದ ಕಥೆ ಏನೆಂಬುದು ನಮ್ಮ ʼಚಕ್ರವ್ಯೂಹʼ ಪುಸ್ತಕದಲ್ಲಿ ಇದೆ. ಆಸಕ್ತರು ಕ್ಲಿಕ್‌ ಮಾಡಿ ನೋಡಬಹುದು, ಕೊಳ್ಳಬಹುದು.

ಕೆಲ ಸಮಯದ ಹಿಂದೆ ಪತಿಯೊಂದಿಗೆ ಬೈಕಿನಲ್ಲಿ ಬರುತ್ತಿದ್ದಾಗ, ಬಿಪಿ ಇಳಿದು ಕುಸಿದು ಬಿದ್ದ ಪತಿಯನ್ನು ಸ್ವತಃ ರಿಕ್ಷಾಕ್ಕೆ ಏರಿಸಿಕೊಂಡು ಆಸ್ಪತ್ರೆಗೆ ಓಡಿ ಬಂದಿದ್ದಳು. ಆಕೆಯ ಪ್ರಸಂಗಾವಧಾನತೆಯ ಪರಿಣಾಮವಾಗಿ ಪತಿಗೆ ಪುನರ್‌ ಜನ್ಮ ಸಿಕ್ಕಿದಂತಾಗಿತ್ತು.

ಮನೆ, ತೋಟದ ಎರಡರ ವ್ಯವಹಾರಗಳನ್ನೂ ನಿಭಾಯಿಸುತ್ತಿದ್ದ ಈಕೆ ತನ್ನ ತೋಟದಿಂದಲೇ ತಂದು ತಯಾರಿಸುತ್ತಿದ್ದ ಅಪ್ಪೆ ಮಿಡಿಯ ಉಪ್ಪಿನಕಾಯಿ ಎಂದರೆ ಅಸುಪಾಸಿನವರಿಗೆಲ್ಲ ಅಚ್ಚು ಮೆಚ್ಚು. ನನ್ನ ಮಗ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತಾನೇ ಊಟ ತಿಂಡಿ ತಯಾರಿಸಿ ಅವನಿಗೆ ಕಳುಹಿಸಿ ಕೊಡುತ್ತಿದ್ದಳು.

ಅಂದ ಹಾಗೆ, ಈಕೆ ಗಾಲಿ ಕುರ್ಚಿಯಲ್ಲಿ ಕಂಡ ಕಥೆ ಹೇಳ ಹೊರಟಿದ್ದೆನಲ್ಲ. ಹೌದು. ಅಂದು ಆಸ್ಪತ್ರೆಯಲ್ಲಿ ಗಾಲಿ ಕುರ್ಚಿಯಲ್ಲಿ ಕಂಡಿದ್ದ ಆಕೆ ಆ ದಿನ ಇಡೀ ಅದೇ ಆಸ್ಪತ್ರೆಯಲ್ಲಿ ಇದ್ದಳು. ಬಳಿಕ ಆರೋಗ್ಯ ಇನ್ನಷ್ಟು ಹದಗೆಟ್ಟಿತು ಎಂದು ಬೇರೊಂದು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದರು.

ಆರನೇ ದಿನ ೨೦೨೬ ಏಪ್ರಿಲ್‌ ೨೮ರ ಮಂಗಳವಾರದ ದಿನ, ʼಇಲ್ಲಿರುವುದು ಸುಮ್ಮನೇ, ಅಲ್ಲಿ ಇಹುದು ನಮ್ಮನೆʼ ಎಂದು ಈಕೆ, ಪತಿ, ತಮ್ಮಂದಿರು, ಪುತ್ರ, ಸೊಸೆ, ಮೊಮ್ಮಗನನ್ನು ಬಿಟ್ಟು ತಾರಾಲೋಕಕ್ಕೆ ಪಯಣ ಬೆಳೆಸಿದ್ದಳು- ಮಲಗಿದ್ದ ವ್ಯಕ್ತಿ ಚಾಪೆಯಿಂದ ಎದ್ದು ನಡೆದುಹೋದ ಹಾಗೆ, ಈಗಲೂ ನಂಬಲೂ ಸಾಧ್ಯವಾಗದ ರೀತಿ!.

ಈಕೆಯ ಹೆಸರು ಹೇಳಲಿಲ್ಲವಲ್ಲ? ಈಕೆಯ ಹೆಸರು ಬಿ.ಕೆ. ತಾರಾ. ಅಂತಿಮ ನಮನಗಳು ತಾರಾ.

-ನೆತ್ರಕೆರೆ ಉದಯಶಂಕರ

PARYAYA: ತಾರಾ ಎಂಬ ಎಲೆಮರೆಯ ಕುಸುಮ:   ತಾರಾ ಎಂಬ ಎಲೆಮರೆಯ ಕುಸುಮ ಮೊ ನ್ನೆ ಮೊನ್ನೆ ಗಿರಿನಗರದ ಶ್ರೀ ಮಹಾಗಣಪತಿಯ ಜಾತ್ರೆಯ ಆರಂಭದ ದಿನ. ನನ್ನ ಅತ್ತೆಯವರಿಗೆ ಸ್ವಲ್ಪ ಮೈ ಹುಶಾರಿಲ್ಲ ಎಂದು ಗಿರಿನಗರದ ಆಸ್ಪತ್...

Monday, November 12, 2018

‘ಅನಂತ’ ನೆನಪು...

ಅನಂತನೆನಪು...

ಅದು ತೊಂಬತ್ತರ ದಶಕ. ನಾನು ಪ್ರಜಾವಾಣಿ ವರದಿಗಾರನಾಗಿ ಹುಬ್ಬಳ್ಳಿಯಲ್ಲಿ ಇದ್ದ ಸಮಯ. ಈದ್ಗಾ ಮೈದಾನದ ಧ್ವಜ ವಿವಾದದ  ಬಿಸಿ ಎಲ್ಲಡೆ ಹರಡಿತ್ತು.
 
ನಾನು ಕಚೇರಿಯಲ್ಲಿ ಕಾರ್ಯನಿರತನಾಗಿದ್ದ ಹೊತ್ತು. ಫೋನ್ ರಿಂಗಣಿಸಿತು. ಕೈಗೆ ತೆಗೆದುಕೊಂಡರೆ ಕಡೆಯ ಧ್ವನಿ ಕೇಳಿತು: ಉದಯಶಂಕರ್ ಇದ್ದಾರಾ?

ಹೌದು ನಾನೇ ಎಂದು ಉತ್ತರಿಸುತ್ತಿದ್ದಂತೆಯೇ. ನೀವೇನಾ? ಉಶಂನಾಭ ಅವರೇ ನಾನು ಅನಂತ ಮಾತನಾಡುತ್ತಿದ್ದೇನೆ ಗುರುತು ಸಿಕ್ಕಿತಾ?’ ಎಂಬ ಪ್ರಶ್ನೆ ಬಂತು ಕಡೆಯಿಂದ.

ಓ.. ಗೊತ್ತಾಯಿತು, ಬಿಡಿ, ಎಲ್ಲಿದ್ದೀರಿ?’ ಪ್ರಶ್ನಿಸಿದೆ.

ಶ್. ಎಲ್ಲಿದ್ದೇನೆ ಎಂದು ಕೇಳಬೇಡಿ. ಅಜ್ಞಾತವಾಸಿಯಾಗಿದ್ದೇನೆ. ಇನ್ನೂ ಸುರಕ್ಷಿತ ಸ್ಥಳ ಬೇಕಾಗಿದೆ. ನಿಮ್ಮ ಮನೆಗೇ ಬಂದು ಬಿಡಲಾ? ಪೊಲೀಸರ ಕಣ್ಣು ಬೀಳದಲ್ಲವೇ?’ ಎಂಬ ಮರುಪ್ರಶ್ನೆ ಬಂತು ಕಡೆಯಿಂದ.

ಒಮ್ಮಿಂದೊಮ್ಮೆಗೇ ಬಂದ ಪ್ರಶ್ನೆಗೆ ಏನು ಉತ್ತರ ಕೊಡಲಿ ಎಂದು ಯೋಚಿಸುವಷ್ಟರಲ್ಲಿ, ‘ಸಧ್ಯಕ್ಕೆ ಬೇಡ ಬಿಡಿ. ಅಂತಹ ಅಗತ್ಯ ಇದ್ದರೆ ಮತ್ತೆ ಫೋನ್ ಮಾಡುವೆಎಂದು ಉತ್ತರಿಸಿತ್ತು ಕಡೆಯ ಧ್ವನಿ.

ಹೌದು. ಫೋನ್ ಮಾಡಿದ್ದ ವ್ಯಕ್ತಿ ಅನಂತ ಕುಮಾರ್.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ ಎಂದು ಬಿಜೆಪಿ, ಏನಾದರೂ ಸರಿ ಧ್ವಜ ಹಾರಿಸಲು ಬಿಡೆವು ಎಂದು ಪೊಲೀಸರು ಪಟ್ಟು ಹಿಡಿದಿದ್ದ ಸಂದರ್ಭವದು.
 
ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸುವ ಯೋಜನೆಯ ಜಾರಿಯಲ್ಲಿ ಅವರ ಪಾತ್ರವೇ ಮಹತ್ವದ್ದಾಗಿತ್ತು. ಸಾಧ್ವಿ ಉಮಾ ಭಾರತಿ ಅವರನ್ನೂ ಕಾರ್ಯಕ್ರಮಕ್ಕಾಗಿ ಕರೆಸಿದ್ದರು.

ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹೂಡಿದ್ದ ಐಜಿಪಿ ಬರ್ಮನ್ಈದ್ಗಾ ಮೈದಾನದಲ್ಲಿ ಒಂದು ಸೊಳ್ಳೆಯೂ ಹಾರಲು ಸಾಧ್ಯವಿಲ್ಲಎಂದಿದ್ದರು.

ಆದರೆ, ಗಣರಾಜ್ಯೋತ್ಸವದ ದಿನ ಬೆಳ್ಳಂಬೆಳಗ್ಗೆಯೇ ಒಂದಿಬ್ಬರು ತರುಣರು ಈದ್ಗಾ ಮೈದಾನ ಪ್ರವೇಶಿಸಿ ಧ್ವಜ ಹಿಡಿದುಕೊಂಡು ಮೈದಾನದ ಒಳಗಿನ ಬೇಲಿಯ ಬದಿಯಲ್ಲೇ ಓಡಿದ್ದರು. ‘ಮೈದಾನದಲ್ಲಿ ಧ್ವಜ ಅರಳಿಯೇ ಬಿಟ್ಟಿತ್ತು!’

ಬಳಿಕ ಮೈದಾನದತ್ತ ಮೆರವಣಿಗೆಯಲ್ಲಿ ಹೊರಟಿದ್ದ ಅನಂತಕುಮಾರ್, ಉಮಾಭಾರತಿ ಮತ್ತಿತರ ನಾಯಕರನ್ನು ಪೊಲೀಸರು ಬಂಧಿಸಿದ್ದರು.

ಧ್ವಜ ಹಿಡಿದು ಓಡಿದ್ದ ಅನಂತಕುಮಾರ ಹೆಗಡೆ ಮತ್ತುಇನ್ನೊಬ್ಬ ವ್ಯಕ್ತಿ ಪೊಲೀಸರ ಲಾಠಿ ಏಟಿನಿಂದ ಜರ್ಜರಿತರಾಗಿ ಆಸ್ಪತ್ರೆ ಸೇರಿದ್ದರು.

ಅನಂತ ಕುಮಾರ್ ಪೂರ್ತಿ ಹೆಸರು ಎಚ್.ಎನ್. ಅನಂತ ಕುಮಾರ್ ನನಗೆ ಪರಿಚಿತರಾಗಿದ್ದುದು ಅದಕ್ಕೂ ಸುಮಾರು ಒಂದು ದಶಕಕ್ಕೂ ಹಿಂದೆ. ಅಂದರೆ 1979-80 ಅವಧಿಯಲ್ಲಿ. ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಬೆಂಗಳೂರು ಕಾಟನ್ ಪೇಟೆಯಲ್ಲಿದ್ದ ವಿದ್ಯಾರ್ಥಿ ಪರಿಷತ್ತಿನ ಕಚೇರಿಯಲ್ಲಿ.

ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ವಸತಿ ಒದಗಿಸಿದ್ದು ವಿದ್ಯಾರ್ಥಿ ಪರಿಷತ್ ಕಚೇರಿಯೇ. ಪ್ರಸ್ತುತ ಆರೆಸ್ಸೆಸ್ ಪ್ರಮುಖರಾಗಿರುವ ದತ್ತಾತ್ರೇಯ ಹೊಸಬಾಳೆ, ಪ್ರೇಮ್ ಕುಮಾರ್ ಮತ್ತಿತರರು ಅಲ್ಲಿಯೇ ವಾಸವಾಗಿದ್ದರು.

ಕಚೇರಿಯಲ್ಲಿಯೇ ಒಂದು ಕೊಠಡಿಯಲ್ಲಿ ನಾವು ಅಡುಗೆ ಮಾಡಿಕೊಳ್ಳುತ್ತಿದ್ದೆವು. ನಾವು ತಯಾರು ಮಾಡುತ್ತಿದ್ದ ಅಡುಗೆಯನ್ನೇ ಕಚೇರಿಗೆ ಬರುತ್ತಿದ್ದ ಇತರ ಕೆಲವು ಕಾರ್ಯಕರ್ತರು ಉಣ್ಣುತ್ತಿದ್ದುದೂ ಇತ್ತು. ಹಾಗೆ ನಮ್ಮೊಂದಿಗೆ ಊಟ ಜೊತೆಯಾಗಿ ಊಟ ಮಾಡುತ್ತಿದ್ದ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು ಅನಂತ ಕುಮಾರ್.

ನನ್ನ ಹೆಸರು ಬಹಳ ಉದ್ದವಾಗಿದೆ ಎಂದು ಅನಂತಕುಮಾರ್, ಹೊಸಬಾಳೆ, ಬಪ (ಬಸವರಾಜ ಪಾಟೀಲ), ಮಸೂದೆ (ಮಧು ಸೂಧನ ದೇಸಾಯಿ), ಮಾಪಣ್ಣ (ಮಹಾಬಲೇಶ್ವರ ಭಟ್) ಮತ್ತಿತರರೆಲ್ಲ ಸೇರಿಉಶಂನಾಭ ಅಡ್ಡ ಹೆಸರಿಟ್ಟಿದ್ದರು.

ಪರಿಷತ್ತಿನವಿದ್ಯಾರ್ಥಿ ಪಥಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ನಾವೆಲ್ಲ ಒಟ್ಟಾಗಿ ಆಗ ನಿಭಾಯಿಸುತ್ತಿದ್ದೆವು.

ಕೆಲಸ ಮುಗಿದ ಬಳಿಕ ರಾತ್ರಿ ಒಟ್ಟಾಗಿ ಕಾಂತಿ ಸ್ವೀಟ್ಸ್ ಗೆ ಹೋಗಿಬಾದಾಮಿ ಹಾಲುಕುಡಿದು ಬರುತ್ತಿದ್ದೆವು.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಕಡೆಗೂ ಬಿಜೆಪಿಗೆ ದೊಡ್ಡ ವರದಾನವಾಗಿತ್ತು. ನಂತರದ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಯಶಸ್ಸುಗಳಿಗೆ ಈದ್ಗಾ ವಿವಾದ ಮೂಲ ಮೆಟ್ಟಿಲಾಗಿತ್ತು.

ಮುಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅನಂತಕುಮಾರ್ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾದರು.

ಸಚಿವರಾದ ಮೇಲೆ ಹುಬ್ಬಳ್ಳಿಗೆ ಬಂದ ಅನಂತಕುಮಾರ್ ಪತ್ರಕರ್ತರನ್ನು ಭೇಟಿ ಮಾಡಿದಾಗ, ಬೆಂಗಳೂರಿನ ಹಳೆಯ ದಿನಗಳ ಮೆಲುಕು ಹಾಕುವುದನ್ನು ಮರೆಯಲಿಲ್ಲ. ಪತ್ರಕರ್ತ ಮಿತ್ರರೊಂದಿಗೂಇವರು ನನ್ನ ಹಳೆಯ ಗೆಳೆಯ ಉಶಂನಾಭಎಂದು ಹೇಳಿಕೊಂಡಿದ್ದರು.

ಇಂತಹ ಸ್ನೇಹಶೀಲಅನಂತಈದಿನ (12.11.2018)ಅನಂತದಲ್ಲಿ ಲೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುವೆ.



Saturday, November 10, 2018

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಗ್ರಾಹಕರ ಸುಖ ದುಃಖ  

ಯಾವುದೇ ಒಂದು ವಸ್ತುವನ್ನು ಮಾರಾಟ ಮಾಡುವ ಜಾಗ ಶುಚಿಯಾಗಿಯೂ ಅಪಾಯ ರಹಿತವೂ ಆಗಿರಬೇಕು. ಇದು ಮಾರಾಟಗಾರನ ಹೊಣೆಗಾರಿಕೆಯೂ ಹೌದು. ಇಂತಹ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದುದರ ಪರಿಣಾಮವಾಗಿ ಏನಾದರೂ  ಅಪಾಯ ಸಂಭವಿಸಿ ಗ್ರಾಹಕನಿಗೆ ತೊಂದರೆಯಾದರೆ?

ಚಿಂತಿಸಬೇಕಾಗಿಲ್ಲ. ಗ್ರಾಹಕ  ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರಲ್ಲಿ ಬೆಂಗಳೂರು ನಗರ  ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು..

ಪ್ರಕರಣದಲ್ಲಿ ಅರ್ಜಿದಾರರು: ಎಸ್. ಗೋವಿಂದನ್, ಬಾಪೂಜಿ ಬಡಾವಣೆ, ಬೆಂಗಳೂರು.
ಪ್ರತಿವಾದಿ: ಮ್ಯಾನೇಜರ್, ಫುಡ್ ವರ್ಲ್ಡ್. ಆರ್.ಪಿ..ಸಿ ಲೇಔಟ್, ವಿಜಯನಗರ, ಬೆಂಗಳೂರು.

ಅರ್ಜಿದಾರ ಗೋವಿಂದನ್ ಅವರು18-6-2010ರಂದು ಸಂಜೆ 6.30 ಗಂಟೆಗೆ ಪ್ರತಿವಾದಿ ಸಂಸ್ಥೆ ಫುಡ್ ವರ್ಲ್ಡ್‌ಗೆ ದಿನಸಿ ಹಾಗೂ ಇತರ ವಸ್ತುಗಳ ಖರೀದಿ ಸಲುವಾಗಿ ಹೋಗಿದ್ದರು.

ಫುಡ್ ವರ್ಲ್ಡ್ ಹವಾ ನಿಯಂತ್ರಿತ  ತಾಣವಾಗಿದ್ದು ತರಕಾರಿ, ದಿನಸಿ ವಸ್ತುಗಗಳು, ಬೇಕರಿ ವಸ್ತುಗಳು, ಎಣ್ಣೆ, ಸೌಂದರ್ಯ ಸಾಧನಗಳು, ಡಿಢೀರ್ ಆಹಾರ ವಸ್ತುಗಳು ಇತ್ಯಾದಿ  ಎಲವನ್ನೂ ಪೊಟ್ಟಣಗಳಲ್ಲಿ ತುಂಬಿ ಕವಾಟುಗಳಲ್ಲಿ ಇಡುವುದು ವಾಡಿಕೆ. ಗ್ರಾಹಕರು ಅಲ್ಲೇ ಇರಿಸಲಾಗುವ ಪುಟ್ಟ  ಕೈಗಾಡಿಯೊಂದನ್ನು ಒಯ್ದು ತಮಗೆ ಬೇಕಾದ ಸಾಮಗ್ರಿಗಳನ್ನು ತಾವೇ ಆಯ್ಕೆ ಮಾಡಿ, ಕೈಗಾಡಿಯಲ್ಲಿ ತುಂಬಿಕೊಂಡು ಕ್ಯಾಷಿಯರ್ ಬಳಿಗೆ ಒಯ್ಯಬೇಕು. ಅಲ್ಲಿ ಅದನ್ನು ತೂಕ ಮಾಡಿ ಬಿಲ್ ಮಾಡಲಾಗುತ್ತದೆ. ಗ್ರಾಹಕ ನಗದು ರೂಪದಲ್ಲಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡಬೇಕು.

ಆದಿನ ಅರ್ಜಿದಾರ ಗೋವಿಂದನ್ ಫುಡ್ ವರ್ಲ್ಡ್‌ನೊಳಕ್ಕೆ ಹೋದಾಗ ಒಂದು ಕಡೆಯಲ್ಲಿ ನೆಲದ ಮೇಲೆ ಎಣ್ಣೆ ಚೆಲ್ಲಿತ್ತು. ಆದರೆ ಎಣ್ಣೆ ಚೆಲ್ಲಿದ್ದ ಜಾಗದಲ್ಲಿ ಯಾವುದೇ ಎಚ್ಚರಿಕೆಯ ಬರಹವನ್ನು ಬರೆದಿಟ್ಟಿರಲಿಲ್ಲ. ಬದಲಿಗೆ ಚೆಲ್ಲಿದ ಎಣ್ಣೆಯನ್ನು ಮುಚ್ಚಿಡಲಾಗಿತ್ತು.

ಗೋವಿಂದನ್ ಅವರು ತಮಗೆ ಬೇಕಾದ ವಸ್ತುಗಳನ್ನು ಹುಡುಕುತ್ತಾ ಯಾವುದೇ ಅರಿವೂ ಇಲ್ಲದೆ ಚೆಲ್ಲಿದ್ದ ಎಣ್ಣೆಯ ಮೇಲೆ ಹಾಕಿದ್ದ ಹೊದಿಕೆಯ ಮೇಲೆ ಕಾಲಿಟ್ಟರು. ಅದು ಜಾರಿದ ಪರಿಣಾಮವಾಗಿ ಬಿದ್ದರು. ಬಿದ್ದ ಏಟಿಗೆ ಅವರ ಎಡಗೈಯ ಮಣಿಕಟ್ಟು ಮೂಳೆಗೆ ಏಟು ಬಿದ್ದು ಬಿರುಕು ಉಂಟಾಯಿತು. ಗೋವಿಂದನ್ ಅವರು ಚಿಕಿತ್ಸೆಗೆ ವೆಚ್ಚ ಮಾಡುವುದರ ಜೊತೆಗೆ ಮಾನಸಿಕ ಕ್ಲೇಶಕ್ಕೂ ಒಳಗಾದರು. ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ಅಡಚಣೆಯಾಯಿತು. ಹೀಗಾಗಿ ತಮಗೆ 50,000 ರೂಪಾಯಿಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗೋವಿಂದನ್ ಅವರು ಪ್ರತಿವಾದಿಗೆ ಪತ್ರ ಬರೆದರು.

ಆದರೆ ಪ್ರತಿವಾದಿಯು ಕೊರಿಯರ್ ಮೂಲಕ ಕಳುಹಿಸಲಾದ ಪತ್ರವನ್ನು ಪಡೆದುಕೊಳ್ಳಲು ನಿರಾಕರಿಸಿದರು.

ಪರಿಹಾರ ಹಾಗೂ ವೈದ್ಯಕೀಯ ವೆಚ್ಚ ಭರಿಸುವಂತೆ ಅರ್ಜಿದಾರರು ಪರಿಪರಿಯಾಗಿ ಮನವಿ ಮಾಡಿದರು. ಪ್ರತಿವಾದಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಕಡೆಗೆ ಬೇಸತ್ತ ಅರ್ಜಿದಾರರು ಸೇವಾಲೋಪದ ಆರೋಪ ಹೊರಿಸಿ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಿದರು.

ಅಧ್ಯಕ್ಷ ಬಿ.ಎಸ್. ರೆಡ್ಡಿ, ಸದಸ್ಯರಾದ ಎಂ. ಯಶೋದಮ್ಮ ಮತ್ತು  . ಮುನಿಯಪ್ಪ ಅವರನ್ನು  ಒಳಗೊಂಡ ಪೀಠವು ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತು. ಪ್ರತಿವಾದಿ ನೋಟಿಸ್‌ಗೆ ಉತ್ತರಿಸಲಿಲ್ಲ, ನ್ಯಾಯಾಲಯಕ್ಕೂ ಹಾಜರಾಗಲಿಲ್ಲ.

ಅರ್ಜಿದಾರ ಗೋವಿಂದನ್ ಅವರು ಪ್ರಮಾಣಪತ್ರದ ಜೊತೆಗೆ ತಾವು ಅಂಗಡಿಯ ಒಳಕ್ಕೆ ಹೋಗಿದ್ದ ದಿನಾಂಕ 18-6-2010 ದಿನಾಂಕದ ಇನ್‌ವಾಯ್ಸೆನ ಪ್ರತಿ, ಪರಿಹಾರ ನೀಡುವಂತೆ ಆಗ್ರಹಿಸಿ ಬರೆದ 25-6-2010 ಪತ್ರ, ಕೊರಿಯರ್ ಹಿಂಬರಹ, ವಾಪಸ್ ಬಂದ ಕೊರಿಯರ್ ಲಕೋಟೆ, ರವಿ ಕಿರ್ಲೋಸ್ಕರ್ ಸ್ಮಾರಕ ಆಸ್ಪತ್ರೆಯಿಂದ ನೀಡಲಾದ 24-7-2010 ದಿನಾಂಕದ ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಹಾಜರು ಪಡಿಸಿದ್ದನ್ನು ನ್ಯಾಯಾಲಯ ಗಮನಿಸಿತು. ಪ್ರತಿವಾದಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಅರ್ಜಿದಾರರೊಬ್ಬರ ವಾದವನ್ನೂ ಆಲಿಸಿತು.

ಫುಡ್ ವರ್ಲ್ಡ್ ಅಂಗಡಿಯಲ್ಲಿ ಬಿದ್ದ ಮರುದಿನ 19-6-2010ರಂದು ಅರ್ಜಿದಾರರು ರವಿ ಕಿರ್ಲೋಸ್ಕರ್ ಆಸ್ಪತ್ರೆಗೆ ಹೋದಾಗ ಎಕ್ಸ್‌ರೇ ತೆಗೆದುಕೊಂಡು ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಆಗ ಮೂಳೆ ಮುರಿದುದು ಬೆಳಕಿಗೆ ಬಂದು ಒಂದು ತಿಂಗಳ ಕಾಲ ಪ್ಯಾಸ್ಟರ್ ಆಫ್ ಪ್ಯಾರಿಸ್ ಹಾಕಬೇಕಾಗಿ ಬಂದಿತ್ತು.
ಆಸ್ಪತ್ರೆಯ  ಸರ್ಜನ್ ಡಾ. ಕೆ.ಎಸ್. ವೆಂಕಟೇಶ್ ಅವರು ನೀಡಿದ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಇತರ ಸಾಕ್ಷ್ಯಾಧಾರಗಳು, ಪ್ರತಿವಾದಿ ಪಾಲಿನ ಸೇವಾಲೋಪವನ್ನು ದೃಢಪಡಿಸುತ್ತವೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯ ಅರ್ಜಿದಾರರು  ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂಬ ನಿಲುವು ತಾಳಿತು.

ಅರ್ಜಿದಾರರು 50,000 ರೂಪಾಯಿಗಳ ಪರಿಹಾರಕ್ಕೆ ಆಗ್ರಹಿಸಿದ್ದನ್ನು ಉಲ್ಲೇಖಿಸಿದ ನ್ಯಾಯಾಲಯ, ಆದರೆ ಇಷ್ಟೊಂದು ಪರಿಹಾರ ಕೇಳಲು  ಅರ್ಜಿದಾರರು ಯಾವುದೇ ಆಧಾರಗಳನ್ನೂ ನೀಡಿಲ್ಲ ಎಂದು ವಿಶ್ಲೇಷಿಸಿದರು.

ಎಲ್ಲ ಹಿನ್ನೆಲೆಯಲ್ಲಿ 10,000 ರೂಪಾಯಿಗಳ ಪರಿಹಾರವನ್ನು ನಾಲ್ಕು ವಾರಗಳ  ಒಳಗೆ ನೀಡುವಂತೆಯೂ, ತಪ್ಪಿದಲ್ಲಿ ಆದೇಶದ ದಿನದಿಂದ ಹಣಪಾವತಿಯಾಗುವರೆಗೂ ವಾರ್ಷಿಕ ಶೇಕಡಾ 9 ಬಡ್ಡಿಯನ್ನೂ ಸೇರಿಸಿಕೊಂಡು ಪರಿಹಾರವನ್ನು ಪಾವತಿ ಮಾಡುವಂತೆ ಗ್ರಾಹಕ ನ್ಯಾಯಾಲಯವು ಪ್ರತಿವಾದಿಗೆ ಆದೇಶ ಮಾಡಿತು.