"ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ"
ಆಕ್ಸಿಯಂ-4 ವಿದಾಯ ಭಾಷಣದಲ್ಲಿ ಶುಭಾಂಶು ಶುಕ್ಲಾ
ಬೆಂಗಳೂರು: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಆಕ್ಸಿಯಂ-4 ಮಿಷನ್ ಪ್ರಯಾಣವು ಅದ್ಭುತವಾಗಿತ್ತು ಎಂದು ೨೦೨೫ ಜುಲೈ ೭ರ ಭಾನುವಾರ ಹೇಳಿದರು. ಈ ಯಶಸ್ಸಿಗೆ ಮಿಷನ್ನಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿದಾಯ ಸಮಾರಂಭದಲ್ಲಿ ಮಾತನಾಡಿ, "ನಮಗೆ ಸಿಕ್ಕಿದ ಪ್ರತೀ ಕ್ಷಣದಲ್ಲಿಯೂ ನಾವು ಭೂಮಿಯನ್ನು ನೋಡುತ್ತಿದ್ದೆವು. ಅದು ನಿಜಕ್ಕೂ ಮಾಂತ್ರಿಕವಾಗಿ ಕಾಣುತ್ತಿತ್ತು" ಎಂದು ನುಡಿದರು.
"ಇದು ನಂಬಲಸಾಧ್ಯವಾದ ಪ್ರಯಾಣ. ಇದರಲ್ಲಿ ತೊಡಗಿಕೊಂಡ ಜನರಿಂದಾಗಿ ಇದು ಅದ್ಭುತವಾಗಿದೆ" ಎಂದು ಅವರು ತಿಳಿಸಿದರು.
ದೇಶವಾಸಿಗಳಿಗೆ ಹಿಂದಿಯಲ್ಲಿ ಸಂದೇಶ ನೀಡಿದ ಶುಭಾಂಶು ಶುಕ್ಲಾ, "ನನ್ನ ಬಾಹ್ಯಾಕಾಶ ಪ್ರಯಾಣ ಮುಗಿಯುತ್ತಿರಬಹುದು, ಆದರೆ ಭಾರತದ ಮಾನವ ಬಾಹ್ಯಾಕಾಶ ಮಿಷನ್ ಪ್ರಯಾಣ ಇನ್ನೂ ಬಹಳ ಸುದೀರ್ಘ ಕಠಿಣವಾಗಿದೆ" ಎಂದು ಹೇಳಿದರು.
"ಆಪ್ಕಿ ಔರ್ ಮೇರಿ ಯಾತ್ರಾ ಅಭಿ ಬಹುತ್ ಲಂಬಿ ಹೈ (ನಮ್ಮ ಪ್ರಯಾಣ ಇನ್ನೂ ಬಹಳ ಸುದೀರ್ಘವಿದೆ)" ಎಂದು ಅವರು ನುಡಿದರು.
"ನಾನು ನಿಮಗೆ ಭರವಸೆ ನೀಡುತ್ತೇನೆ, ನಾವು ದೃಢ ನಿರ್ಧಾರ ಮಾಡಿದರೆ, ನಕ್ಷತ್ರಗಳನ್ನೂ ತಲುಪಬಹುದು" ಎಂದು ಅವರು ಹೇಳಿದರು.
'ಇಂದಿನ ಭಾರತ'
ʼ41 ವರ್ಷಗಳ ಹಿಂದೆ ಒಬ್ಬ ಭಾರತೀಯ (ರಾಕೇಶ್ ಶರ್ಮಾ) ಬಾಹ್ಯಾಕಾಶಕ್ಕೆ ಹೋಗಿ ಅಲ್ಲಿಂದ ನಮ್ಮ ದೇಶ ಹೇಗಿತ್ತು ಎಂದು ಹೇಳಿದರು. ಈಗಿನ ಜನರು ಇಂದಿನ ಭಾರತ ಹೇಗಿದೆ ಎಂದು ತಿಳಿಯಲು ಬಯಸುತ್ತಾರೆʼ ಎಂದು ನುಡಿದ ಶುಕ್ಲಾ ಭಾರತ ತಮಗೆ ಕಂಡ ಬಗೆಯನ್ನು ವರ್ಣಿಸಿದರು.
"ಆಜ್ ಕಾ ಭಾರತ್ ಸ್ಪೇಸ್ ಸೇ ಮಹತ್ವಾಕಾಂಕ್ಷಿ ದಿಖ್ತಾ ಹೈ, ಆಜ್ ಕಾ ಭಾರತ್ ನಿದರ್ ದಿಖ್ತಾ ಹೈ, ಆಜ್ ಕಾ ಭಾರತ್ ಕಾನ್ಫಿಡೆಂಟ್ ದಿಖ್ತಾ ಹೈ, ಆಜ್ ಕಾ ಭಾರತ್ ಗರ್ವ್ ಸೇ ಪೂರ್ಣ ದಿಖ್ತಾ ಹೈ, ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ ದಿಖ್ತಾ ಹೈ, ಜಲ್ದಿ ಹಿ ಧರ್ತಿ ಪರ್ ಮುಲಾಕಾತ್ ಕರ್ತೆ ಹೈ (ಇಂದಿನ ಭಾರತ ಬಾಹ್ಯಾಕಾಶದಿಂದ ಮಹತ್ವಾಕಾಂಕ್ಷಿಯಾಗಿ ಕಾಣುತ್ತದೆ, ಇಂದಿನ ಭಾರತ ನಿರ್ಭೀತವಾಗಿ ಕಾಣುತ್ತದೆ, ಇಂದಿನ ಭಾರತ ಆತ್ಮವಿಶ್ವಾಸದಿಂದ ಕಾಣುತ್ತದೆ, ಇಂದಿನ ಭಾರತ ಹೆಮ್ಮೆಯಿಂದ ತುಂಬಿದಂತೆ ಕಾಣುತ್ತದೆ, ಇಂದಿನ ಭಾರತ ಇನ್ನೂ ಇಡೀ ಜಗತ್ತಿಗಿಂತ ಉತ್ತಮವಾಗಿ ಕಾಣುತ್ತದೆ. ಶೀಘ್ರದಲ್ಲೇ ಭೂಮಿಯ ಮೇಲೆ ಭೇಟಿಯಾಗೋಣ)" ಎಂದು ಅವರು ಹೇಳಿದರು.
ಶುಭಾಂಶು ಶುಕ್ಲಾ ಅವರು ಕಳುಹಿಸಿದ ಸುಂದರ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ
'ಮಾಂತ್ರಿಕವಾಗಿ ಕಾಣುತ್ತದೆ'
ಮಿಷನ್ ಸಮಯದಲ್ಲಿ ಅವಕಾಶ ಸಿಕ್ಕಿದ ಯಾವುದೇ ಸಮಯದಲ್ಲಿಯೂ ಸಿಬ್ಬಂದಿ ಭೂಮಿಯನ್ನು ನೋಡುತ್ತಿದ್ದರು ಮತ್ತು ಅದು ಅವರಿಗೆ "ಮಾಂತ್ರಿಕವಾಗಿ" ಕಾಣುತ್ತಿತ್ತು ಎಂದು ಶುಭಾಂಶು ಶುಕ್ಲಾ ಹೇಳಿದರು.
"ಕಳೆದ ಎರಡೂವರೆ ವಾರಗಳಿಂದ, ನಾವು ಹೊರಗಡೆ ಚಟುವಟಿಕೆಗಳನ್ನು ಮಾಡಿದ್ದೇವೆ ಮತ್ತು ನಾವು ಅವಕಾಶ ಸಿಕ್ಕಿದಾಗಲೆಲ್ಲಾ ಭೂಮಿಯನ್ನು ನೋಡುತ್ತಿದ್ದೆವು, ನಾವು ಯಾವಾಗಲೂ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆವು. ಅದು ನನಗೆ ಮಾಂತ್ರಿಕವಾಗಿ ಕಾಣುತ್ತಿತ್ತು” ಎಂದು ಅವರು ನುಡಿದರು.
ಈ ಮಿಷನ್ಗೆ ಅವಕಾಶ ನೀಡಿದ ಇಸ್ರೋ (ISRO)ಗೆ, ತಾವು ತೆಗೆದುಕೊಂಡು ಹೋಗಿದ್ದ ವಸ್ತುಗಳನ್ನು ಅಭಿವೃದ್ಧಿಪಡಿಸಿದ ಭಾರತದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
"
ಈ ಅವಕಾಶವನ್ನು ಬಳಸಿಕೊಂಡು ನನ್ನ ದೇಶಕ್ಕೆ ಮತ್ತು ಈ ಮಿಷನ್ ಹಾಗೂ ನನಗೆ ಪೂರ್ಣ ಹೃದಯದಿಂದ ಬೆಂಬಲ ನೀಡಿದ ಎಲ್ಲಾ ನಾಗರಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದನ್ನು ಸಾಧ್ಯವಾಗಿಸಿದ ಇಸ್ರೋಗೆ, ಎಲ್ಲಾ ಪ್ರೋಟೋಕಾಲ್ಗಳು ಮತ್ತು ಔಟ್ರೀಚ್ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ದಣಿವರಿಯದೆ ಕೆಲಸ ಮಾಡಿದ ಇಸ್ರೋದ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು."ನಾವು ಸಾಕಷ್ಟು ಉತ್ತಮ ತರಬೇತಿ ಪಡೆದಿರುವುದನ್ನು ಖಚಿತಪಡಿಸಿದ ಮತ್ತು ನಿರಂತರ ಬೆಂಬಲ ನೀಡಿದ NASA ಮತ್ತು ಅದರ ಅಂತರರಾಷ್ಟ್ರೀಯ ಪಾಲುದಾರರಾದ ಆಕ್ಸಿಯಂ ಸ್ಪೇಸ್, ಸ್ಪೇಸ್ಎಕ್ಸ್ ಸಂಸ್ಥೆಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅವರು ಸೇರಿಸಿದರು.
ಮಿಷನ್ನಿಂದ ಏನನ್ನು ಮರಳಿ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಅವರು ವರ್ಣಿಸಿದರು.
"ಇಲ್ಲಿಂದ ಹಿಂದಿರುಗುವಾಗ, ಈ ಮಿಷನ್ನಿಂದ ನಾನು ಬಹಳಷ್ಟು ನೆನಪುಗಳು ಮತ್ತು ಕಲಿಕೆಗಳನ್ನು ಕೊಂಡೊಯ್ಯುತ್ತೇನೆ. ಅವುಗಳನ್ನು ನಾನು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ ಒಂದು ವಿಷಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ, ಅದು ಮಾನವಕುಲವು ಒಗ್ಗೂಡಿದಾಗ, ವಿಶ್ವದ ವಿವಿಧ ಭಾಗಗಳಿಂದ ಒಟ್ಟಾಗಿ ಒಂದು ಸಾಮಾನ್ಯ ಗುರಿಗಾಗಿ ಕೆಲಸ ಮಾಡಿದಾಗ ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಿದೆ ಎನ್ನುವುದು. ಇದು ನಿಜಕ್ಕೂ ನಂಬಲಸಾಧ್ಯ" ಎಂದು ಅವರು ಹೇಳಿದರು.
ಈ ಕೆಳಗಿನದ್ದನ್ನೂ ಓದಿರಿ:
PARYAYA: "ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ": " ಆಜ್ ಕಾ ಭಾರತ್ ಅಭಿ ಭಿ ಸಾರೆ ಜಹಾನ್ ಸೇ ಅಚ್ಛಾ" ಆಕ್ಸಿಯಂ- 4 ವಿದಾಯ ಭಾಷಣದಲ್ಲಿ ಶುಭಾಂಶು ಶುಕ್ಲಾ ಬೆಂ ಗಳೂರು: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟ...