Thursday, February 27, 2025
PARYAYA: ಮಹಾಕುಂಭ ಮುಗಿಯಿತು.....
Wednesday, February 26, 2025
PARYAYA: ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ
ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಫೆಬ್ರುವರಿ ೨೬ರ ಬುಧವಾರ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.
ಬೆಳಗ್ಗೆ ಭಕ್ತರೊಬ್ಬರ ಮನೆಯ ಮಗುವಿಗೆ ನಾಮಕರಣ ಕಾರ್ಯಕ್ರಮವು ಶಿವರಾತ್ರಿ ಸಂಭ್ರಮಕ್ಕೆ ಹೊಸ ಕಳೆ ನೀಡಿತ್ತು.
ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮತ್ತು ನವಗ್ರಹಗಳಿಗೆ ಅಭಿಷೇಕ, ಅಲಂಕಾರ ಪೂಜೆಯೊಂದಿಗೆ ಮುಂಜಾನೆಯೇ ಸಡಗರ. ಇಡೀ ದಿನ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ವಿಶ್ವದ ಗಮನ ಸೆಳೆದಿರುವ ಕುಂಭಮೇಳ ಸ್ಥಳವಾದ ಪ್ರಯಾಗದ ತ್ರಿವೇಣಿ ಸಂಗಮದಿಂದ ತಂದ ಗಂಗಾಜಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ ಭಕ್ತರು ಪುನೀತರಾದರು.
ಸಂಜೆ ಶಿವನಿಗೆ ರುದ್ರಾಭಿಷೇಕ ಮಹಾ ಪೂಜೆ ನೆರವೇರಿತು.
ಮಹಾಶಿವರಾತ್ರಿ ಆಚರಣೆ ಸಂದರ್ಭದ ಕೆಲವು ಚಿತ್ರಗಳು ವಿಡಿಯೋಗಳು ಇಲ್ಲಿವೆ. ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿರಿ.
ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ
ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...
ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
Tuesday, February 25, 2025
PARYAYA: ಬರುತಿದೆ ಬರುತಿದೆ ವಸಂತ!
ಬರುತಿದೆ ಬರುತಿದೆ ವಸಂತ!
ಇದು ಸುವರ್ಣ ನೋಟ
ಮಹಾಶಿವರಾತ್ರಿ ಶಿಶಿರ ಋತುವಿನ ಮಹಾ ಹಬ್ಬ. ಶಿವನಿಗೆ ಮೀಸಲಾದ ಹಬ್ಬ. ಶಿಶಿರ ಋತುವಿನಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ. ಗಿಡಮರಗಳು ಎಲೆಗಳನ್ನು ಉದುರಿಸಿ ಹೊಸ ಚಿಗುರುಗಳಿಗೆ ಸಿದ್ಧವಾಗುತ್ತದೆ. ಈ ಋತುವು ವಸಂತ ಋತುವಿನ ಆಗಮನದ ಮುನ್ಸೂಚನೆಯನ್ನು ನೀಡುತ್ತದೆ.
ವಸಂತ ಋತು ಪ್ರಕೃತಿಯ ಪುನರುತ್ಥಾನದ ಸಂಕೇತ. ಹೊಸ ಚಿಗುರು, ಅರಳುವ ಹೂಗಳೊಂದಿಗೆ ಪ್ರಕೃತಿ ವರ್ಣಮಯವಾಗಿ ಕಂಗೊಳಿಸುತ್ತದೆ.
ಚಳಿಗಾಲ ಮುಗಿದು, ಅದೇ ತಾನೇ ಆರಂಭವಾಗುವ ಬೆಚ್ಚಗಿನ ವಾತಾವರಣ, ಹೂವುಗಳ ಸುವಾಸನೆ ಮತ್ತು ಪಕ್ಷಿಗಳ ಕಲರವವು ಸಂತೋಷ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ.
ವಸಂತ ಕಾಲವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ದೃಷ್ಟಕೋನವನ್ನು ಹುಟ್ಟುಹಾಕುತ್ತದೆ.
ಯುಗ ಯುಗಗಳು ಕಳೆದರೂ ಮತ್ತೆ ಮತ್ತೆ ಬರುವ ಯುಗಾದಿ ವಸಂತಕಾಲ ಸಂಭ್ರಮವನ್ನು ದ್ವುಗುಣಗೊಳಿಸುತ್ತದೆ.
ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ನಾಂದಿ ಹಾಡುತ್ತಾರೆ. ಚೈತನ್ಯಶಾಲೀ ಪ್ರಕೃತಿಯ ಮಡಿಲಲ್ಲಿ ಯೋಗ, ಧ್ಯಾನ, ನಡಿಗೆ ದೇಹ, ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.
ವಸಂತಾಗಮನಕ್ಕೆ ಮೊದಲಿನ ಋತುವಾದ ಈಗಿನ ಶಿಶಿರ ಋತುವಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಬೆಳ್ಳಂಬೆಳಗ್ಗೆ ಮಿತ್ರರೊಬ್ಬರ ಮನೆಗೆ ಹೋಗಿದ್ದರು. ಅಲ್ಲಿ ಅದೇ ತಾನೇ ಚಿಗುರುತ್ತಿದ್ದ ಗಿರಮರ, ಅರಳಲು ಸಜ್ಜಾಗಿದ್ದ ಹೂವುಗಳ ಸಂಭ್ರಮ ಕಣ್ಣಿಗೆ ಬಿತ್ತು.
ಸುವರ್ಣರ ಕ್ಯಾಮರಾ ಹೆಗಲೇರಿತು. ಹತ್ತಾರು ಕ್ಲಿಕ್ಗಳು. ಕ್ಯಾಮರಾದಿಂದ ಹೊರಬಂದ ʼಸುವರ್ಣನೋಟʼದ ಪುಷ್ಪಗಳು ಇಲ್ಲಿವೆ. ನೋಡಿ ಅನುಭವಿಸಿ, ಆಸ್ವಾದಿಸಿ, ಸಂಭ್ರಮಿಸಿ.
ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿ,
ಹಾಂ. ಹಾಗೆಯೇ ಇಲ್ಲೊಂದು ಕವನವಿದೆ- ವಸಂತ ಕಾಲಕ್ಕೆ ಸಂಬಂಧಿಸಿದ್ದು.
ವಸಂತ ಕಾಲದ ಸೊಬಗು
ಪಲ್ಲವಿ:
ವಸಂತ ಬಂದಿದೆ, ವನಸಿರಿ ನಲಿದಿದೆ,
ಹೂಗಳ ಚಿತ್ತಾರ, ಬಣ್ಣಗಳ ಸಂಭ್ರಮ.ಚರಣ 1:
ಗಿಡಮರಗಳೆಲ್ಲಾ ಚಿಗುರೊಡೆದಿವೆ,
ಹಕ್ಕಿಗಳ ಕಲರವ, ಇಂಪಾಗಿ ಮೊಳಗಿದೆ.
ತಂಗಾಳಿಯ ತಂಪನು, ಮನವು ಬಯಸಿದೆ,
ಹೊಸತನದ ಆನಂದ, ಎಲ್ಲೆಡೆ ತುಂಬಿದೆ.
ಚರಣ 2:
ನದಿ ತೊರೆಗಳು, ತಿಳಿಯಾಗಿ ಹರಿಯುತಿವೆ,
ದುಂಬಿಗಳ ಝೇಂಕಾರ, ಕಿವಿಗೆ ಇಂಪಿದೆ.
ಹೊಲ ಗದ್ದೆಗಳಲ್ಲಿ, ಹಸಿರು ನಲಿಯುತಿದೆ,
ಕೃಷಿಕರ ಮುಖದಲ್ಲಿ, ಸಂತಸ ಮೂಡಿದೆ.
ಚರಣ 3:
ಉಗಾದಿ ಹಬ್ಬದ, ಸಂಭ್ರಮವಿದು,
ಹೊಸ ವರ್ಷದ, ಹರುಷವಿದು.ಬೆಲ್ಲದ ಸಿಹಿಯ, ಸವಿಯುವ ಸಮಯವಿದು,
ಬೇವು-ಬೆಲ್ಲದ, ಸಮಭಾವವಿದು.
ಚರಣ 4:
ವಸಂತ ಕಾಲವು, ಜೀವನದ ಸಂಕೇತ,
ಹೊಸ ಆಸೆಗಳ, ಚಿಗುರುವ ಸಮಯ.
ನಾವೆಲ್ಲರೂ, ಒಂದಾಗಿ ನಲಿಯೋಣ,
ಪ್ರಕೃತಿಯ ಸೌಂದರ್ಯವನು, ಸವಿಯೋಣ.
ಬರೆದವನು ನಾನಲ್ಲ- ಗೂಗಲ್ ಜೆಮಿನಿ. ಯಾರಾದರೂ ರಾಗ ಹಾಕಿ, ಹಾಡುವುದಿದ್ದರೆ ದಯವಿಟ್ಟು ಹಾಡಿ, ರೆಕಾರ್ಡ್ ಮಾಡಿ ನನಗೂ ಕಳುಹಿಸಿಕೊಡಿ.
ಕೆಳಗಿನವುಗಳನ್ನೂ ಓದಿರಿ:
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
Friday, February 21, 2025
PARYAYA: ದೇಗುಲ ವಾರ್ಷಿಕೋತ್ಸವ: ಪಂಚಹೋಮ
ದೇಗುಲ ವಾರ್ಷಿಕೋತ್ಸವ: ಪಂಚಹೋಮ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ೨೦೨೫ ಫೆಬ್ರುವರಿ ೨೦ ಗುರುವಾರ ಸಂಪನ್ನಗೊಂಡಿತು.
ವಿಡಿಯೋ ನೋಡಲು ಎಡಬದಿಯ ಚಿತ್ರ ಕ್ಲಿಕ್ ಮಾಡಿರಿ.
ದೇವಾಲಯಕ್ಕೆ ಒಂದು ವರ್ಷ ತುಂಬಿದ ಸಲುವಾಗಿ ಈ ಸಂದರ್ಭದಲ್ಲಿ ಪಂಚಹೋಮಗಳ ಸಲುವಾಗಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ಶ್ರೀ ಸುಬ್ರಹ್ಮಣ್ಯ ಹಾಗೂ ನವಗ್ರಹ ದೇವತೆಗಳನ್ನು ಸ್ಥಾಪಿಸಿ ಅರ್ಚನೆ ನೆರವೇರಿಸಲಾಯಿತು.
ಆ ಬಳಿಕ ಶ್ರೀ ಗಣಪತಿ ಅಥರ್ವ ಶೀರ್ಷ ಹೋಮ, ಶ್ರೀ ಶ್ರೀ ವೆಂಕಟೇಶ್ವರ ಮೂಲಮಂತ್ರ ಹೋಮ,ಶ್ರೀ ಆಂಜನೇಯ ಮೂಲಮಂತ್ರ ಹೋಮ, ನವಗ್ರಹ ಹೋಮ, ಸರ್ಪ ಸೂಕ್ತ ಹೋಮಗಳನ್ನು ನಡೆಸಲಾಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
ಪಂಚಹೋಮಗಳ ಬಳಿಕ ಮಹಾಮಂಗಳಾರತಿ ನಡೆಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
ಸಂಜೆ ಭಕ್ತರು ಭಜನೆ ಸೇವೆ ಸಲ್ಲಿಸಿದರು. ಆಸುಪಾಸಿನ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುನಿರಾಜು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
Wednesday, February 12, 2025
PARYAYA: ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಪೂರ್ಣಿಮೆ ಪವಿತ್ರ ಸ್ನಾನ: ಭಕ್ತರ ಮೇಲೆ ಹೂ ಮಳೆ
ಮಾಘ ಹುಣ್ಣಿಮೆಯ ದಿನವಾದ ಬುಧವಾರ (2025 ಫೆಬ್ರುವರಿ 12) ಲಕ್ಷಾಂತರ ಭಕ್ತರು ʼಮಾಘ ಪೂರ್ಣಿಮೆ ಪವಿತ್ರ ಸ್ನಾನʼ ಆರಂಭಿಸುವುದರೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್ ನ ಗಂಗಾ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 2025ರ ಮಹಾಕುಂಭವು ಉತ್ತುಂಗಕ್ಕೆ ಏರಿದೆ.
ತ್ರಿವೇಣಿ ಸಂಗಮದಲ್ಲಿ ಮಾಘ ಪೂರ್ಣಿಮಾ ಪವಿತ್ರ ಸ್ನಾನ ಮಾಡುತ್ತಿದ್ದ ಭಕ್ತರ ಮೇಲೆ ಹೆಲಿಕಾಪ್ಟರ್ ಮೂಲಕ ʼಪುಷ್ಪ ವೃಷ್ಟಿʼ ಮಾಡಲಾಯಿತು.
ಪುಷ್ಪ ವೃಷ್ಟಿಯ ANI ವಿಡಿಯೋ ಇಲ್ಲಿದೆ.
ಕಲ್ಪವಾಸಿಗಳಿಗೆ ಮಾಘ ಪೂರ್ಣಿಮವು ಮತ್ತೊಂದು ಪವಿತ್ರ ಸ್ನಾನದ ಸಂದರ್ಭವಾಗಿದ್ದು ಸ್ನಾನ, ದಾನ ಮತ್ತು ಪೂಜೆಯ ಧಾರ್ಮಿಕ ಮಹತ್ವದ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒತ್ತಿ ಹೇಳಿದ್ದಾರೆ.
ಒಂದು ತಿಂಗಳ ಕಲ್ಪವಾಸದ ಅವಧಿಯು ಮಾಘ ಪೂರ್ಣಿಮೆಯಂದು ಕೊನೆಗೊಳ್ಳುತ್ತದೆ.
ಜನವರಿ 13ರಿಂದ ಈವರೆಗೆ 45 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದು, ಎರಡು ಪ್ರಮುಖ ಸ್ನಾನ ಹಬ್ಬಗಳು ಉಳಿದಿರುವುದರಿಂದ, ಪವಿತ್ರ ಸ್ನಾನ ಮಾಡುವ ಒಟ್ಟು ಭಕ್ತರ ಸಂಖ್ಯೆ 50 ಕೋಟಿ ಮೀರುವ ನಿರೀಕ್ಷೆಯಿದೆ.
ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭವು ಫೆಬ್ರವರಿ 26 ರವರೆಗೆ ಮುಂದುವರಿಯಲಿದೆ. ಫೆಬ್ರವರಿ 3ರಂದು ಬಸಂತ್ ಪಂಚಮಿ - ಮೂರನೇ ಶಾಹಿ ಸ್ನಾನ ನಡೆದಿದ್ದು, ಇಂದು-, ಫೆಬ್ರವರಿ 12 ರಂದು ಮಾಘಿ ಪೂರ್ಣಿಮಾ ಶಾಹಿ ಸ್ನಾನ ನಡೆಯುತ್ತಿದೆ. ಫೆಬ್ರವರಿ 26ರ ಮಹಾ ಶಿವರಾತ್ರಿಯಂದು ಇನ್ನೊಂದು ಪವಿತ್ರ ಸ್ನಾನ ನೆರವೇರಲಿದೆ.
ಈ ಕೆಳಗಿನವುಗಳನ್ನೂ ಓದಿರಿ:
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
Tuesday, February 11, 2025
PARYAYA: ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್ ವೇ…!
ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್ ವೇ…!
ಇದು ಸುವರ್ಣ ನೋಟ
ಬೆಂಗಳೂರಿನಲ್ಲಿ ಏರೋ ಇಂಡಿಯಾದ 15 ನೇ ಆವೃತ್ತಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಂದ 2025ರ ಫೆಬ್ರುವರಿ 10ರಂದು ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ನಿನಲ್ ಉದ್ಘಾಟನೆಗೊಂಡಿದೆ. ಇದರೊಂದಿಗೆ ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನ ಅನಾವರಣಗೊಂಡಿವೆ.
ʼದಿ ರನ್ ವೇ ಟು ಎ ಬಿಲಿಯನ್ ಅಪರ್ಚುನಿಟೀಸ್ʼ ಎಂಬ ವಿಶಾಲ ಥೀಮಿನೊಂದಿಗೆ ಆರಂಭವಾಗಿರುವ ಈ ʼಲೋಹದ ಹಕ್ಕಿಗಳʼ ಐದು ದಿನಗಳ ಮೇಳದಲ್ಲಿ ಭಾರತ ಸೇರಿದಂತೆ 90 ದೇಶಗಳ 900 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಅಂದಾಜು 30 ರಕ್ಷಣಾ ಮಂತ್ರಿಗಳು ಮತ್ತು 100 ಕ್ಕೂ ಹೆಚ್ಚು OEM ಗಳು (ಮೂಲ ಸಲಕರಣೆ ತಯಾರಕರು) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜಾಗತಿಕ ಏರೋಸ್ಪೇಸ್ ಕಂಪೆನಿಗಳ ಅತ್ಯಾಧುನಿಕ ವಿಮಾನಗಳು, ಹೆಲಿಕಾಪ್ಟರ್ ಇತ್ಯಾದಿ ಉತ್ಪನ್ನಗಳ ಜೊತೆಗೆ ಅತ್ಯಾಧುನಿಕ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ, ದೇಶೀ ಉತ್ಪನ್ನಗಳ ಉತ್ಪಾದನೆಯಲ್ಲಿ ಅಂತಾರಾಷ್ಟ್ಟೀಯ ಸಹಯೋಗ ಸಾಧನೆಯ ವೇದಿಕೆ ರೂಪಿಸಲು ಈ ಮೇಳ ಅನುವು ಮಾಡಿಕೊಡಲಿದೆ. ತನ್ಮೂಲಕ ʼಆತ್ಮ ನಿರ್ಭರ ಭಾರತʼ ಮತ್ತು ʼಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ʼ ದೃಷ್ಟಿಗೆ ಅನುಗುಣವಾಗಿ 2047 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಅನುಗಣವಾದ ʼವಿಕಸಿತ ಭಾರತʼದ ಗುರಿ ಸಾಧನೆಗೆ ಒತ್ತು ಸಿಗಲಿದೆ.
ಗಡಚಿಕ್ಕುವ ಸದ್ದಿನೊಂದಿಗೆ ಬಾನಿನಲ್ಲಿ ಮೋಡಿ ಮಾಡುವ ವೈವಿಧ್ಯಮಯ ವಿಮಾನ, ಹೆಲಿಕಾಪ್ಟರುಗಳ ʼಬಾನಿನಾಟʼ ನೋಡಲು ತೆರಳಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಈ ʼವೈಮಾನಿಕ ಮೇಳʼ ಮೂಡಿ ಬಂದ ಬಗೆ ಇಲ್ಲಿದೆ.
ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿ.
ಕೆಳಗಿನವುಗಳನ್ನೂ ಓದಿರಿ:
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)
Sunday, February 9, 2025
PARYAYA: ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್
ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್
ಬೆಂಗಳೂರು: ಇದು ಬಹುಶಃ ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್ ಎಂಬುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳು 300 ಕಿಲೋಮೀಟರ್ಗಳಷ್ಟು ದೂರದಿಂದಲೇ ವಾಹನಗಳ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿವೆ ಎಂದು ವರದಿಗಳು ಹೇಳುತ್ತಿವೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ಲಕ್ಷಾಂತರ ಯಾತ್ರಿಕರು 2025 ಫೆಬ್ರುವರಿ 9ರ ಭಾನುವಾರ ಕುಂಭಮೇಳದಿಂದ ನೂರಾರು ಕಿಲೋಮೀಟರ್ ದೂರದಲ್ಲೇ ತಮ್ಮ ಕಾರುಗಳಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ.
5 ಕಿಮೀ ಸಾಗಲು 5 ಗಂಟೆ ಹಿಡಿಯಿತು ಎಂದು ಭಾಸ್ಕರ ಸರ್ಮಾ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದರೆ, ವಾಹನ ದಟ್ಟಣೆಯ ವಿಡಿಯೋ ಪೋಸ್ಟ್ ಮಾಡಿರುವ ನಿತುನ್ ಕುಮಾರ್ ಪ್ರಯಾಗರಾಜ್ ಗೆ ಬರುವ ಮುನ್ನ ಯೋಚಿಸಿ ಯೋಜನೆ ಮಾಡಿಕೊಂಡು ಬನ್ನಿ ಎಂದು ಸಲಹೆ ಮಾಡಿದ್ದಾರೆ.
ಇಲ್ಲಿ ವಿಡಿಯೋ ನೋಡಿ:
ಈ ಅಭೂತಪೂರ್ವ ವಾಹನದಟ್ಟಣೆ ದಟ್ಟಣೆ, ಮಧ್ಯಪ್ರದೇಶದ ಮೂಲಕ ಮಹಾ ಕುಂಭಮೇಳಕ್ಕೆ ಹೋಗುವ ವಾಹನಗಳ ಯಾತ್ರಿಕರ ಅನುಭವಕ್ಕೆ ಬಂದಿದೆ. ಈ ವಾಹನ ದಟ್ಟಣೆ ಸುಮಾರು 200-300 ಕಿಲೋಮೀಟರ್ಗಳವರೆಗೆ ವಿಸ್ತರಿಸಿದೆ ಎಂದು ವರದಿಗಳು ಹೇಳಿವೆ.
ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಸಂಚಾರವನ್ನು ಪೊಲೀಸರು ನಿಲ್ಲಿಸಿದರು. ಇದಕ್ಕೆ ಮಧ್ಯಪ್ರದೇಶದಿಂದ ಪ್ರಯಾಗರಾಜ್ಗೆ ಹೋಗುವ ರಸ್ತೆಗಳಲ್ಲಿ ಉಂಟಾಗಿರುವ ಭಾರೀ ದಟ್ಟಣೆ ಕಾರಣ. ವಾಹನ ಹಾಗೂ ಜನದಟ್ಟಣೆ ನಿವಾರಿಸಲು ಈ ವಾಹನಗಳ ಸಂಚಾರ ತಡೆಗಟ್ಟಬೇಕಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮಧ್ಯಪ್ರದೇಶದಲ್ಲೇ ಸುರಕ್ಷಿತರ ಆಶ್ರಯಗಳನ್ನು ಹುಡುಕಿಕೊಳ್ಳುವಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ ಎಂದೂ ವರದಿ ಹೇಳಿದೆ.
ಕಟ್ನಿ ಜಿಲ್ಲೆಯಲ್ಲಿ ಸೋಮವಾರದವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಹಾರ್ ಪೊಲೀಸರು ವಾಹನಗಳು ಕಟ್ನಿ ಮತ್ತು ಜಬಲ್ಪುರದ ಕಡೆಗೆ ಹಿಂತಿರುಗಿ ಅಲ್ಲಿಯೇ ಇರಬೇಕೆಂದು ಅವರು ಕೇಳಿಕೊಂಡಿದ್ದಾರೆ. "ಇಂದು ಪ್ರಯಾಗರಾಜ್ ಕಡೆಗೆ ಚಲಿಸುವುದು ಅಸಾಧ್ಯ ಏಕೆಂದರೆ 200-300 ಕಿಲೋಮೀಟರ್ ಟ್ರಾಫಿಕ್ ಜಾಮ್ ಇದೆ" ಎಂದು ಪೊಲೀಸರು ಹೇಳಿರುವುದಾಗಿ ವರದಿ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿನ ಹಲವಾರು ವೀಡಿಯೊಗಳು ಮಧ್ಯಪ್ರದೇಶದ ಕಟ್ನಿ, ಜಬಲ್ಪುರ, ಮೈಹಾರ್ ಮತ್ತು ರೇವಾ ಜಿಲ್ಲೆಗಳಾದ್ಯಂತ ರಸ್ತೆಗಳಲ್ಲಿ ಸಾವಿರಾರು ಕಾರುಗಳು ಮತ್ತು ಟ್ರಕ್ಗಳ ಬೃಹತ್ ಸರತಿ ಸಾಲುಗಳನ್ನು ತೋರಿಸಿವೆ.
ರೇವಾ ಜಿಲ್ಲೆಯ ಚಕ್ಘಾಟ್ನಲ್ಲಿ ಕಟ್ನಿಯಿಂದ ಮಧ್ಯಪ್ರದೇಶ-ಉತ್ತರ ಪ್ರದೇಶದ ಗಡಿಗಳವರೆಗಿನ 250 ಕಿಮೀ ವ್ಯಾಪ್ತಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಜನವರಿ 13 ರಂದು ಆರಂಭವಾಗಿ ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿರುವ ಮಹಾ ಕುಂಭಮೇಳವು, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮಸ್ಥಳವಾದ ಪ್ರಯಾಗರಾಜ್ ನಲ್ಲಿ ʼಪವಿತ್ರ ಸ್ನಾನʼಕ್ಕಾಗಿ ದೇಶಾದ್ಯಂತ ಮತ್ತು ವಿದೇಶಗಳಿಂದ 40 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಇದು 144 ವರ್ಷಗಳ ಬಳಿಕ ಬಂದಿರುವುದು ವಿಶೇಷವಾಗಿದ್ದು, ಇನ್ನೊಮ್ಮೆ ಬರಲು 144 ವರ್ಷ ಕಾಯಬೇಕಾಗಿರುವುದರಿಂದ ಜನದಟ್ಟಣೆ ಹೆಚ್ಚಿದೆ.
ಇದನ್ನೂ ಓದಿ:
ಇನ್ನೂ ಓದಿಲ್ಲವೇ?
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)