Sunday, March 12, 2017

ಗೋವಾ ನೂತನ ಸಿಎಂ ಆಗಿ ಮನೋಹರ ಪರಿಕ್ಕರ್ ನೇಮಕ

ಗೋವಾ ನೂತನ ಸಿಎಂ ಆಗಿ ಮನೋಹರ ಪರಿಕ್ಕರ್ ನೇಮಕ
ಪಣಜಿ (ಗೋವಾ): ಗೋವಾ ರಾಜ್ಯಪಾಲರಾದ ಮೃದುಲಾ  ಸಿನ್ಹ ಅವರು ಭಾನುವಾರ, 12 ಮಾರ್ಚ್ 2017ರ  ರಾತ್ರಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ನೇಮಕ ಮಾಡಿದರು.
 ಪ್ರಮಾಣ ವಚನ ಬೋಧಿಸಿದ 15 ದಿನಗಳ ಒಳಗಾಗಿ ಗೋವಾ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸಿನ್ಹ ಅವರು ಪರಿಕ್ಕರ್ ಅವರಿಗೆ ಸೂಚಿಸಿದರು. ಪರಿಕ್ಕರ್ ಅವರು 21 ಸದಸ್ಯರ ಬೆಂಬಲ  ಇರುವ ಬಗ್ಗೆ ದಾಖಲೆಗಳನ್ನು ನೀಡಿದ ಬಳಿಕ ರಾಜ್ಯಪಾಲರು ಈ ಕ್ರಮ ಕೈಗೊಂಡರು ಎಂದು ರಾಜಭವನ ಮೂಲಗಳು ತಿಳಿಸಿದವು.

 40 ಸದಸ್ಯ ಬಲದ ವಿಧಾನಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ  22 ಸದಸ್ಯರ ಬಲ ಲಭಿಸಿದೆ ಎಂದು ಹೇಳಲಾಯಿತು.

Thursday, March 9, 2017

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ B. Krishna Bhat no more

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ

ಬೆಂಗಳೂರು: ಹಿರಿಯ ಪರಿಸರವಾದಿ , ಸಾಮಾಜಿಕ ಕಾರ್ಯಕರ್ತ , ಗಿರಿನಗರ ನಿರ್ಮಾತೃ ಬಿ. ಕೃಷ್ಣ ಭಟ್ ಅವರು ಗುರುವಾರ, 09 ಮಾರ್ಚ್ 2017ರ ರಾತ್ರಿ 10 ಗಂಟೆ ಸುಮಾರಿಗೆ ಗಿರಿನಗರದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.  ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ಸಮೀಪದ ಬೋಳುಬೈಲಿನವರಾದ ಕೃಷ್ಣಭಟ್ ಅವರು  ಉಡುಪಿಯಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು. ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಲಹೆಯಂತೆ ಬೆಂಗಳೂರಿನಲ್ಲಿ ಸಹಕಾರ ಸಂಘದ ಮೂಲಕ ವಸತಿ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೃಷ್ಣಭಟ್, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಿರಿನಗರ  ಮತ್ತು ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದರು.

 ಗಿರಿನಗರ ಬಡಾವಣೆಯ ಶಂಕುಸ್ಥಾಪನೆಗೆ ಆಗಿನ ರಾಷ್ಟ್ರಪತಿ ವರಾಹ ವೆಂಕಟ ಗಿರಿ ಅವರನ್ನು ಕರೆಸಿ, ಅವರ ಹೆಸರನ್ನೇ ಬಡಾವಣೆಗೆ ಇಟ್ಟಿದ್ದರು.

ಬಡಾವಣೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಸುದೀರ್ಘ ನ್ಯಾಯಾಂಗ ಸಮರ ನಡೆಸಿದ್ದ ಕೃಷ್ಣಭಟ್ ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆಯೂ ಸಾರ್ವಜನಿಕ ಹಿತಾಸಕ್ತಿ ಖಟ್ಲೆಗಳನ್ನು ಹೂಡುವ ಮೂಲಕ ನ್ಯಾಯಾಂಗ ಹೋರಾಟ ನಡೆಸಿದ್ದರು.

ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಬೆಂಗಳೂರಿನಲ್ಲಿ ವಸತಿ ಬಡಾವಣೆ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಭಟ್ ಅವರು ತುರ್ತು ಪರಿಸ್ಥಿತಿ ಕಾಲದಲ್ಲಿ ಎಲ್.ಕೆ. ಅಡ್ವಾಣಿ ಮತ್ತಿತರ ನಾಯಕರ ಜೊತೆಗೆ ಬೆಂಗಳೂರಿನಲ್ಲಿ  ಸೆರೆವಾಸವನ್ನೂ ಅನುಭವಿಸಿದ್ದರು.


ಕೃಷ್ಣ ಭಟ್ ಅವರು ಪತ್ನಿ ರಾಧಮ್ಮ, ಪುತ್ರರಾದ ಪಾರ್ಥಸಾರಥಿ, ಡಾ. ವಿಶ್ವನಾಥ, ಪುತ್ರಿ ತಾರಾ, ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  ಅಂತ್ಯಕ್ರಿಯೆಯನ್ನು ದೊಡ್ಡ ಬಳ್ಳಾಪುರದ ಕಲ್ಲಹಳ್ಳಿಯ ಜಮೀನಿನಲ್ಲಿ ಈದಿನ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

B. Krishna Bhat (86), founder of Girinagar and Sachhidananda Nagar Layouts in Bengaluru, social worke and environmentalist died on Thursday, 9th March 2017 night at his residence in Girinagar, Bangalore.



Thursday, February 16, 2017

ಪಾಕ್‌ನಲ್ಲಿ ಐಸಿಸ್ ಬಾಂಬ್‌: 100 ಸಾವು

ಪಾಕ್ನಲ್ಲಿ ಐಸಿಸ್ ಬಾಂಬ್‌: 100 ಸಾವು

ಕರಾಚಿ: ಆತ್ಮಾಹುತಿ ಬಾಂಬ್ದಾಳಿಯಲ್ಲಿ 100ಕ್ಕೈ ಹೆಚ್ಚು ಜನ ಸಾವನ್ನಪ್ಪಿ, ಇತರ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್ಪ್ರದೇಶದಲ್ಲಿರುವ ಸೆಹವಾನ್ಪಟ್ಟಣದ ಸೂಫಿ ಶಹಬಾಜ್ಕಲಂದರ್ಪ್ರಾರ್ಥನಾ ಮಂದಿರದ ಬಳಿ 16 ಫೆಬ್ರುವರಿ 2017ರ ಗುರುವಾರ ಘಟಿಸಿತು.

ಒಂದು ವಾರದ ಅವಧಿಯೊಳಗೆ ಪಾಕಿಸ್ತಾನದಲ್ಲಿ ಸಂಭವಿಸಿದ  ಐದನೇ ಆತ್ಮಾಹುತಿ ಬಾಂಬ್ದಾಳಿ ಇದು. ಧಮಲ್‌–ಸೂಫಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದಿದ್ದ ನೂರಾರು ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು  ಬಾಂಬ್ದಾಳಿ ನಡೆಸಲಾಯಿತು.

30 ಮೃತದೇಹಗಳನ್ನು ಮತ್ತು ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮೊಯಿನುದ್ದೀನ್ಸಿದ್ದಿಕಿ ತಿಳಿಸಿದ್ದಾರೆ. ಸೆಹವಾನ್ ಪಟ್ಟಣದ ಸುತ್ತುಮುತ್ತಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.‌
ದಾಳಿಯಲ್ಲಿ ಕನಿಷ್ಠ 100 ಜನ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿದ್ದು, ಇತರ ಕೆಲವು ವರದಿಗಳು ಸಾವಿನ ಸಂಖ್ಯೆ ಅಂದಾಜು 50 ಎಂದು ತಿಳಿಸಿದವು. ಪ್ರತಿ ಗುರುವಾರ ಭಕ್ತಾದಿಗಳು ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಲು ಸ್ಥಳದಲ್ಲಿ ಜಮಾಯಿಸುತ್ತಿದ್ದರು. ಮಹಿಳೆಯರಿಗಾಗಿ ಮೀಸಲಿರಿಸುತ್ತಿದ್ದ ಸ್ಥಳದಲ್ಲಿ ಪ್ರಬಲ ಬಾಂಬ್ಸ್ಫೋಟಿಸಿತು.

ಸ್ಫೋಟ
ನಡೆದ ಸ್ಥಳ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಧಾರ್ಮಿಕ ಸೂಫಿ ಸಂತತಿಯ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಲಾಲ್ಶಹಬಾಜ್ಖಲಂದರ್ಅವರಿಗೆ ಸೇರಿದೆ. ಸ್ಫೋಟದ ಹೊಣೆಯನ್ನು ಐಸಿಸ್ಉಗ್ರ ಸಂಘಟನೆ ಹೊತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

Monday, February 6, 2017

ಉತ್ತರ ಭಾರತದಲ್ಲಿ ತೀವ್ರ ಭೂಕಂಪ

ಉತ್ತರ ಭಾರತದಲ್ಲಿ ತೀವ್ರ ಭೂಕಂಪ

ನವದೆಹಲಿ:  ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೋಮವಾರ 06 ಫೆಬ್ರುವರಿ 2017ರ ರಾತ್ರಿ 10.30 ಗಂಟೆಗೆ ಪ್ರಬಲ ಭೂಕಂಪ ಸಂಭವಿಸಿತು.
ರಿಕ್ಟರ್ ಮಾಪಕದ ಪ್ರಕಾರ ಭೂಕಂಪದ ತೀವ್ರತೆ 5.8ರಷ್ಟು ಇತ್ತು ಎಂದು ವರದಿಗಳು ತಿಳಿಸಿವೆ. ಹರಿಯಾಣ, ಪಂಜಾಬ್, ಉತ್ತರಾಖಂಡ ಮತ್ತು ದೆಹಲಿಯಲ್ಲಿ 30 ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಯಿತು. ಯಾವುದೇ ಹಾನಿ ಕುರಿತು ತತ್ ಕ್ಷಣಕ್ಕೆ ವರದಿಗಳು ಬಂದಿಲ್ಲ.  
ಉತ್ತರಾಖಂಡದ ಪಥೌರಗಢದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತು.

Thursday, January 26, 2017

ಕಿಂಕಿಣಿ ನೃತ್ಯೋತ್ಸವ: ನಿರುಪಮಾ ರಾಜೇಂದ್ರ ‘ಯುಗಳ್’

ಕಿಂಕಿಣಿ ನೃತ್ಯೋತ್ಸವ:  ನಿರುಪಮಾ ರಾಜೇಂದ್ರ ‘ಯುಗಳ್

ಕಥಕ್ ಧಾರೆಯಾಗಿ ಹರಿಯಲಿದೆ ‘ಅಭಂಗ್ ಎಂಬ ಕಾವ್ಯಧಾರೆ
ಬೆಂಗಳೂರು:  ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ... ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.

ಜನವರಿ ೨೭ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ೩೩ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ ವಿಶೇಷ ‘ಯುಗಳ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್‌ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.

ನಿರುಪಮಾ ರಾಜೇಂದ್ರ ಪ್ರಸ್ತುತಪಡಿಸುವ ‘ತಾಲ್ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.

ರಾಮ ಮತ್ತು ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.

  ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್‌ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ ತರಾನಾ ನೃತ್ಯ.

ನಿರುಪಮಾ ರಾಜೇಂದ್ರ ಅವರ ಕಥಕ್‌ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್‌ರೋಜ್ ಖಾನ್; ಕೊಳಲು- ಶಿವಲಿಂಗ.


ಸ್ಥಳ: ಜೆಎಸ್ ಎಸ್ ಅಡಿಟೋರಿಯಂ, ಜಯನಗರ, 

ದಿನಾಂಕ: 27 ಜನವರಿ 2017, ಸಂಜೆ 7.30

Tuesday, January 24, 2017

ಕಲಾ ಸೇವೆಗೊಂದು ರಸೀದಿ

ಕಲಾ ಸೇವೆಗೊಂದು ರಸೀದಿ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಬಹುಷಃ ಈ ಸಾಲುಗಳಿಗೆ ಅನ್ವರ್ಥಕವಾಗಿ ಬದುಕುವವರು ಇಂದಿನ ದಿನಮಾನದಲ್ಲಿ ಬಹು ಕಡಿಮೆ. ಆದರೆ ನಮ್ಮ ನಡುವಣ ಕಲಾವಿದನೊಬ್ಬ ಸಂಪೂರ್ಣವಾಗಿ ತನ್ನ ಜೀವನವನ್ನ ಕಲೆ ಮತ್ತು ಮುಖ್ಯವಾಗಿ ಕಲಾವಿದರ ಸೇವೆಗಾಗಿಯೆ ಮುಡುಪಾಗಿಟ್ಟಿರುವುದು ಬಲು ಅಪರೂಪದ ಸಂಗತಿ. ತಬಲಾ ಕಲಾವಿದ ಶ್ರೀ.ಚಂದ್ರಶೇಖರ್ ಬಡಿಗೇರ್ ಪಂ.ರಘುನಾಥ್ ನಾಕೋಡ್ ಅವರ ಶಿಷ್ಯ ಮತ್ತು ಗದುಗಿನ ಸಂತ ಪಂ.ಪುಟ್ಟರಾಜ ಗವಾಯಿಗಳ ಆಶ್ರಮದ ಅನುಯಾಯಿ.

ಕೇವಲ ಇಷ್ಟು ವಿಶೇಷಣಗಳನ್ನು ಮಾತ್ರ ಹೊಂದಿದ್ದಲ್ಲಿ ಚಂದ್ರಶೇಖರ್ ಮತ್ತೊಬ್ಬ ಸಾಮಾನ್ಯ ಕಲಾವಿದರಾಗುತ್ತಿದ್ದರೇನೊ.. ಆದರೆ ಆ ವ್ಯಕ್ತಿ ಕಲಾಪ್ರಪಂಚಕ್ಕೆ ಮತ್ತು ಕಲಾವಿದರಿಗೆ ಸಲ್ಲಿಸಿದ ಸೇವೆ ಅಪೂರ್ವ. ಸರ್ವೆಸಾಮಾನ್ಯವಾಗಿ ಆರ್ಥಿಕ ಸಹಾಯ ನೀಡುವುದೊಂದೆ ಸಹಾಯ ಮಾಡುವ ರೀತಿ ಅಂತ ಭಾವಿಸುವುದು ಲೋಕರೂಢಿ. ಆದರೆ ಕಲಾವಿದರಿಗೆ ಅವರ ದೈಹಿಕ ಅಸ್ವಸ್ಥತೆಗಳ ಮಧ್ಯೆ, ಅವರ ಜೊತೆಗಿದ್ದು ಅವರ ನಿತ್ಯಕರ್ಮಗಳಿಗೆ ಸಹಕರಿಸುತ್ತಾ, ಊರುಗೋಲಾಗಿ ನಿಂತಂತಹ ವ್ಯಕ್ತಿ ಚಂದ್ರಶೇಖರ್ ಬಡಿಗೇರ್. ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಇಂದಿಗೂ ಹಲವಾರು ಕಲಾವಿದರು ಹನಿಗಣ್ಣಾಗುವುದನ್ನು ಹಲವರು ಕಂಡಿದ್ದಾರೆ.

ಅಲ್ಲದೆ ಗದುಗಿನ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿ, ಬೆಂಗಳೂರು ಮಹಾನಗರದಲ್ಲಿ ನೆಲೆ ಕಂಡುಕೊಳ್ಳಲು ಬರುವ ಹಲವಾರು ಯುವಕರಿಗೆ, ತನ್ನ ಪುಟ್ಟ ಗೂಡಿನಲ್ಲಿಯೆ ಅವರು ಇರಬಯಸಿದಷ್ಟು ದಿನ ಆಶ್ರಯ ನೀಡಿದ ವ್ಯಕ್ತಿ ಚಂದ್ರು. ಆ ಯುವಕಲಾವಿದ ಬೆಂಗಳೂರು ಮಹಾನಗರದಲ್ಲಿ ನೆಲೆನಿಲ್ಲುವವರೆಗೂ ತನ್ನ ಮನೆಯಲ್ಲಿಯೆ ಉಳಿಸಿಕೊಂಡು ಅವರ ಊಟೋಪಚಾರಗಳ ವ್ಯವಸ್ಥೆಯನ್ನು ಸರಿದೂಗಿಸಿ ಹಲವರಿಗೆ ಬಾಳು ಕಟ್ಟಿಕೊಳ್ಳಲು ಸಹಕಾರ ನೀಡಿದ್ದಾರೆ.

ನಿರಂತರವಾಗಿ ಈ ಕಾಯಕದಲ್ಲಿ ನಿರತರಾಗಿದ್ದ ಚಂದ್ರು ಅವರಿಗೆ ಇದೀಗ ಅತಿಯಾದ ಅನಾರೋಗ್ಯ ಕಾಡುತ್ತಿದ್ದು, ಕಲಾವಿದರು ಅವರ ಋಣಸಂದಾಯ ಮಾಡಲು ಒಂದಾಗಿದ್ದಾರೆ. ಇದಕ್ಕಾಗಿ ಅನನ್ಯ ಸಂಸ್ಥೆಯ ರಾಘವೇಂದ್ರ ಅವರ "ಅನನ್ಯ ಆರೋಗ್ಯಧಾರಾ ನಿಧಿ"ಯ ಮೂಲಕ ಸಹಾಯ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪದ್ಮಶ್ರೀ.ಪಂ.ಎಮ್.ವೆಂಕಟೇಶ್ ಕುಮಾರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಚಂದ್ರು ಅವರ ಗುರುಗಳಾದ ಪಂ.ರಘುನಾಥ್ ನಾಕೋಡ್ ತಬಲಾ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ಹಾರ್ಮೋನಿಯಂನಲ್ಲಿ ಶ್ರೀ.ಮಧುಸೂದನ್ ಭಟ್ ಮತ್ತು ಸಾರಂಗಿಯಲ್ಲಿ ಶ್ರೀ.ಸರ್ಫರಾಜ್ ಖಾನ್ ಸಾಥ್ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂಗೀತ ರಸಿಕರು ಉದಾರವಾಗಿ ಈ ನಿಧಿಗೆ ದಾನ ನೀಡಿ ಕಲಾವಿದನೊಬ್ಬನ ಶ್ರೇಯೋಭಿವೃದ್ಧಿಗೆ ಜೊತೆಯಾಗಬೇಕೆಂದು ಅನನ್ಯ ಸಂಘಟನೆಕೋರಿದೆ.

ದಿನಾಂಕ 26 ಜನವರಿ, , ಗುರುವಾರ
ಸ್ಥಳ ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ಸಮಯ ಸಂಜೆ 6 ಗಂಟೆ.


Friday, January 20, 2017

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಯುಗಾರಂಭ

ಅಮೆರಿಕದಲ್ಲಿ ಡೊನಾಲ್ಡ್
ಟ್ರಂಪ್ ಯುಗಾರಂಭ

ವಾಷಿಂಗ್ಟನ್: ವಾಷಿಂಗ್ಟನ್ನಿನ ಸಂಸತ್ ಭವನದ ವೆಸ್ಟ್ ಫ್ರಂಟಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಮೆರಿಕದ 45ನೇ ಅಧ್ಯಕ್ಷರಾಗಿ 70 ವರ್ಷದ ಡೊನಾಲ್ಡ್ ಟ್ರಂಪ್ ಶುಕ್ರವಾರ, 20ನೇ ಜನವರಿ 2017ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೂಲಕ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಯುಗ ಆರಂಭವಾಯಿತು.


 ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಜಾನ್ ರಾಬರ್ಟ್ ಅವರು ಡೊನಾಲ್ಡ್ ಟ್ರಂಪ್ಅವರಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಅಮೆರಿಕದ ಉಪಾಧ್ಯಕ್ಷರಾಗಿ ಮೈಕೆಲ್ ಪೆನ್ಸ್ ಸಹ ಪ್ರಮಾಣ ವಚನ ಸ್ವೀಕರಿಸಿದರು.  ಪೆನ್ಸ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪೆನ್ಸಿಲ್ವೇನಿಯಾ ಅವೆನ್ಯೂನಿಂದ ಶ್ವೇತಭವನಕ್ಕೆ ಪರೇಡ್ನಲ್ಲಿ ತೆರಳಿದರು.