ನಾನು ಮೆಚ್ಚಿದ ವಾಟ್ಸಪ್

Tuesday, January 24, 2017

ಕಲಾ ಸೇವೆಗೊಂದು ರಸೀದಿ

ಕಲಾ ಸೇವೆಗೊಂದು ರಸೀದಿ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಬಹುಷಃ ಈ ಸಾಲುಗಳಿಗೆ ಅನ್ವರ್ಥಕವಾಗಿ ಬದುಕುವವರು ಇಂದಿನ ದಿನಮಾನದಲ್ಲಿ ಬಹು ಕಡಿಮೆ. ಆದರೆ ನಮ್ಮ ನಡುವಣ ಕಲಾವಿದನೊಬ್ಬ ಸಂಪೂರ್ಣವಾಗಿ ತನ್ನ ಜೀವನವನ್ನ ಕಲೆ ಮತ್ತು ಮುಖ್ಯವಾಗಿ ಕಲಾವಿದರ ಸೇವೆಗಾಗಿಯೆ ಮುಡುಪಾಗಿಟ್ಟಿರುವುದು ಬಲು ಅಪರೂಪದ ಸಂಗತಿ. ತಬಲಾ ಕಲಾವಿದ ಶ್ರೀ.ಚಂದ್ರಶೇಖರ್ ಬಡಿಗೇರ್ ಪಂ.ರಘುನಾಥ್ ನಾಕೋಡ್ ಅವರ ಶಿಷ್ಯ ಮತ್ತು ಗದುಗಿನ ಸಂತ ಪಂ.ಪುಟ್ಟರಾಜ ಗವಾಯಿಗಳ ಆಶ್ರಮದ ಅನುಯಾಯಿ.

ಕೇವಲ ಇಷ್ಟು ವಿಶೇಷಣಗಳನ್ನು ಮಾತ್ರ ಹೊಂದಿದ್ದಲ್ಲಿ ಚಂದ್ರಶೇಖರ್ ಮತ್ತೊಬ್ಬ ಸಾಮಾನ್ಯ ಕಲಾವಿದರಾಗುತ್ತಿದ್ದರೇನೊ.. ಆದರೆ ಆ ವ್ಯಕ್ತಿ ಕಲಾಪ್ರಪಂಚಕ್ಕೆ ಮತ್ತು ಕಲಾವಿದರಿಗೆ ಸಲ್ಲಿಸಿದ ಸೇವೆ ಅಪೂರ್ವ. ಸರ್ವೆಸಾಮಾನ್ಯವಾಗಿ ಆರ್ಥಿಕ ಸಹಾಯ ನೀಡುವುದೊಂದೆ ಸಹಾಯ ಮಾಡುವ ರೀತಿ ಅಂತ ಭಾವಿಸುವುದು ಲೋಕರೂಢಿ. ಆದರೆ ಕಲಾವಿದರಿಗೆ ಅವರ ದೈಹಿಕ ಅಸ್ವಸ್ಥತೆಗಳ ಮಧ್ಯೆ, ಅವರ ಜೊತೆಗಿದ್ದು ಅವರ ನಿತ್ಯಕರ್ಮಗಳಿಗೆ ಸಹಕರಿಸುತ್ತಾ, ಊರುಗೋಲಾಗಿ ನಿಂತಂತಹ ವ್ಯಕ್ತಿ ಚಂದ್ರಶೇಖರ್ ಬಡಿಗೇರ್. ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಇಂದಿಗೂ ಹಲವಾರು ಕಲಾವಿದರು ಹನಿಗಣ್ಣಾಗುವುದನ್ನು ಹಲವರು ಕಂಡಿದ್ದಾರೆ.

ಅಲ್ಲದೆ ಗದುಗಿನ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿ, ಬೆಂಗಳೂರು ಮಹಾನಗರದಲ್ಲಿ ನೆಲೆ ಕಂಡುಕೊಳ್ಳಲು ಬರುವ ಹಲವಾರು ಯುವಕರಿಗೆ, ತನ್ನ ಪುಟ್ಟ ಗೂಡಿನಲ್ಲಿಯೆ ಅವರು ಇರಬಯಸಿದಷ್ಟು ದಿನ ಆಶ್ರಯ ನೀಡಿದ ವ್ಯಕ್ತಿ ಚಂದ್ರು. ಆ ಯುವಕಲಾವಿದ ಬೆಂಗಳೂರು ಮಹಾನಗರದಲ್ಲಿ ನೆಲೆನಿಲ್ಲುವವರೆಗೂ ತನ್ನ ಮನೆಯಲ್ಲಿಯೆ ಉಳಿಸಿಕೊಂಡು ಅವರ ಊಟೋಪಚಾರಗಳ ವ್ಯವಸ್ಥೆಯನ್ನು ಸರಿದೂಗಿಸಿ ಹಲವರಿಗೆ ಬಾಳು ಕಟ್ಟಿಕೊಳ್ಳಲು ಸಹಕಾರ ನೀಡಿದ್ದಾರೆ.

ನಿರಂತರವಾಗಿ ಈ ಕಾಯಕದಲ್ಲಿ ನಿರತರಾಗಿದ್ದ ಚಂದ್ರು ಅವರಿಗೆ ಇದೀಗ ಅತಿಯಾದ ಅನಾರೋಗ್ಯ ಕಾಡುತ್ತಿದ್ದು, ಕಲಾವಿದರು ಅವರ ಋಣಸಂದಾಯ ಮಾಡಲು ಒಂದಾಗಿದ್ದಾರೆ. ಇದಕ್ಕಾಗಿ ಅನನ್ಯ ಸಂಸ್ಥೆಯ ರಾಘವೇಂದ್ರ ಅವರ "ಅನನ್ಯ ಆರೋಗ್ಯಧಾರಾ ನಿಧಿ"ಯ ಮೂಲಕ ಸಹಾಯ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪದ್ಮಶ್ರೀ.ಪಂ.ಎಮ್.ವೆಂಕಟೇಶ್ ಕುಮಾರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಚಂದ್ರು ಅವರ ಗುರುಗಳಾದ ಪಂ.ರಘುನಾಥ್ ನಾಕೋಡ್ ತಬಲಾ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ಹಾರ್ಮೋನಿಯಂನಲ್ಲಿ ಶ್ರೀ.ಮಧುಸೂದನ್ ಭಟ್ ಮತ್ತು ಸಾರಂಗಿಯಲ್ಲಿ ಶ್ರೀ.ಸರ್ಫರಾಜ್ ಖಾನ್ ಸಾಥ್ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂಗೀತ ರಸಿಕರು ಉದಾರವಾಗಿ ಈ ನಿಧಿಗೆ ದಾನ ನೀಡಿ ಕಲಾವಿದನೊಬ್ಬನ ಶ್ರೇಯೋಭಿವೃದ್ಧಿಗೆ ಜೊತೆಯಾಗಬೇಕೆಂದು ಅನನ್ಯ ಸಂಘಟನೆಕೋರಿದೆ.

ದಿನಾಂಕ 26 ಜನವರಿ, , ಗುರುವಾರ
ಸ್ಥಳ ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ಸಮಯ ಸಂಜೆ 6 ಗಂಟೆ.


No comments:

Post a Comment