Showing posts with label Nitish Kumar. Show all posts
Showing posts with label Nitish Kumar. Show all posts

Sunday, December 23, 2018

೧೭-೧೭-೬: ಬಿಹಾರ ಸೀಟ್ ಹಂಚಿಕೆ ಒಪ್ಪಂದ ಪ್ರಕಟಿಸಿದ ಅಮಿತ್ ಶಾ

೧೭-೧೭-: ಬಿಹಾರ ಸೀಟ್ ಹಂಚಿಕೆ ಒಪ್ಪಂದ ಪ್ರಕಟಿಸಿದ ಅಮಿತ್ ಶಾ
ಪಾಟ್ನಾ: ಬಿಜೆಪಿ ಮತ್ತು ಜೆಡಿ (ಯು) ಗೆ ೧೭ ಸ್ಥಾನಗಳು ಮತ್ತು ಲೋಕ ಜನಶಕ್ತಿ ಪಕ್ಷಕ್ಕೆ ಆರು ಸ್ಥಾನಗಳನ್ನು ನಿಗದಿ ಪಡಿಸಿ, ಬಿಹಾರದ ಎನ್ ಡಿ ಎ ಅಂಗ ಪಕ್ಷಗಳ  ಅಂತಿಮ ಸ್ಥಾನ ಹಂಚಿಕೆ ಒಪ್ಪಂದವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ, ಜನತಾದಳ (ಯು) ಮುಖ್ಯಸ್ಥ   ನಿತೀಶ್ ಕುಮಾರ್ ಮತ್ತು ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು 2018ರ ಡಿಸೆಂಬರ್ 23ರ ಭಾನುವಾರ ಇಲ್ಲಿ ಪ್ರಕಟಿಸಿದರು.

ಲೋಕಜನಶಕ್ತಿ ಪಕ್ಷವು ಬಿಹಾರದ ಆರು ಲೋಕಸಭಾ ಕ್ಷೇತ್ರಗಳಲ್ಲದೆ,ಉತ್ತರ ಪ್ರದೇಶ ಅಥವಾ ಜಾರ್ಖಂಡ್ ನಲ್ಲಿ ಒಂದು ಲೋಕಸಭಾ ಕ್ಷೇತ್ರ ಮತ್ತು ರಾಜ್ಯಸಭೆಯ ಒಂದು ಕ್ಷೇತ್ರ ಪಡೆಯುವ ಸಾಧ್ಯತೆಯಿದೆ.ರಾಜ್ಯಸಭಾ ಸ್ಥಾನವನ್ನು ಪ್ರಸ್ತುತ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಪಾಸ್ವಾನ್ ಅವರು ಪಡೆಯುವ ಸಾಧ್ಯತೆ ಇದೆ.

ಪಾಸ್ವಾನ್ ಮತ್ತು ಬಿಜೆಪಿಯೊಂದಿಗಿನ ತಮ್ಮ ಪಕ್ಷದ ಭಿನ್ನಾಭಿಪ್ರಾಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದ  ಪಾಸ್ವಾನ್ ಪುತ್ರ ಚಿರಾಗ್ ಅವರು ಶುಕ್ರವಾರ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಈ ಒಪ್ಪಂದವನ್ನು ರೂಪಿಸಲಾಯಿತು. ಸ್ಥಾನಗಳನ್ನು ಹಂಚಿಕೆಯಲ್ಲದೆ ಇತರ ಸಮಸ್ಯೆಗಳೂ ಇವೆ ಎಂದು ಚಿರಾಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.
ಉಭಯ ಪಕ್ಷಗಳ ನಡುವಣ ಭಿನ್ನಮತ ನಿವಾರಣೆಯಾಗಿದೆ ಎಂದು ಬಳಿಕ ಮೂಲಗಳು ಹೇಳಿದವು..

2014ರ ಲೋಕಸಭಾ ಚುನಾವಣೆಯಲ್ಲಿ 31 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ನೇತೃತ್ವದ  ಎನ್ ಡಿಎ, ರಾಜಕೀಯವಾಗಿ ನಿರ್ಣಾಯಕ ರಾಜ್ಯವಾಗಿರುವ ಬಿಹಾರದಲ್ಲಿ ಮಿತ್ರ ಪಕ್ಷ ಜೆಡಿಯು ಜೊತೆಗೆ ಈ ಬಾರಿ ಸಮಾನ ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಈ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಕಟಿಸಿದ್ದರು.

ಲೋಕಜನಶಕ್ತಿ ಪಕ್ಷದ (ಎಲ್ ಜೆಪಿ) ಜೊತೆಗೆ ಮೈತ್ರಿ ಗಟ್ಟಿಗೊಳಿಸುವ ಕಾರ್ಯವನ್ನು ಪಕ್ಷವು ವಿವಿಧ ಪಕ್ಷಗಳ ನಾಯಕರ ಜೊತೆಗೆ  ಉತ್ತಮ ಸ್ನೇಹ ಸಂಬಂಧ ಹೊಂದಿರುವ ಜೇಟ್ಲಿ ಅವರಿಗೆ ಬಿಜೆಪಿ ವಹಿಸಿತ್ತು. ಎಲ್ ಜೆಪಿಯು ದಲಿತ ವರ್ಗದ ಪ್ರಬಲ ಬೆಂಬಲವನ್ನು ಹೊಂದಿರುವುದು ಇಲ್ಲಿ ಗಮನಾರ್ಹ.

ಬಿಜೆಪಿಯ ಅಧ್ಯಕ್ಷ ಶಾ ಮತ್ತು ಜೇಟ್ಲಿ ಅವರು ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಪುತ್ರ ಚಿರಾಗ್ ಜೊತೆಗೆ ಗುರುವಾರ ಒಂದು ಗಂಟೆಗೂ ಹೆಚ್ಚಿನ ಮಾತುಕತೆ ನಡೆಸಿದ್ದರು.

ಇದಕ್ಕೆ ಮುನ್ನ ಜೇಟ್ಲಿ ಅವರಿಗೆ ಪತ್ರ ಬರೆದಿದ್ದ ಚಿರಾಗ್ ಪಾಸ್ವಾನ್ ಅವರು ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಏನು ಪ್ರಯೋಜನವಾಗಿದೆ ಎಂದು ವಿವರಿಸುವಂತೆ ಆಗ್ರಹಿಸಿದ್ದರು.

ಸ್ಥಾನ ಹಂಚಿಕೆ ಪ್ರಕಟಣೆಯ ವಿಳಂಬದಿಂದ ಆಡಳಿತಾರೂಢ ಮೈತ್ರಿಕೂಟಕ್ಕೆ ಹಾನಿಯಾಗಬಹುದು ಎಂದೂ ಅವರು ಟ್ವೀಟ್ ಮಾಡಿದ್ದರು.