Saturday, January 2, 2021

ಇಂದಿನ ಇತಿಹಾಸ History Today ಜನವರಿ 02

 ಇಂದಿನ ಇತಿಹಾಸ  History Today ಜನವರಿ 02  

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಿದ ಬಳಿಕ ಭಾರತ ಸರ್ಕಾರ ನೇಮಿಸಿದ ವಿಷಯ ತಜ್ಞರ ಸಮಿತಿಯು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಲಸಿಕೆಯನ್ನು ಕೂಡಾ ನಿರ್ಬಂಧಿತ ತುರ್ತು ಬಳಕೆಗಾಗಿ ಶಿಫಾರಸು ಮಾಡಿದೆ ಎಂದು ಸರ್ಕಾರದ ಮೂಲಗಳು 2021 ಜನವರಿ 02ರ ಶನಿವಾರ ಖಚಿತಪಡಿಸಿವೆ. ಉಭಯ ಲಸಿಕೆಗಳಿಗೂ ಭಾರತದ ಔಷಧ ಮಹಾನಿಯಂತ್ರಕವು (ಡ್ರಗ್ ಕಂಟ್ರೋಲರ್ ಜನರಲ್ -ಡಿಸಿಜಿಐ) ಅಂತಿಮ ಅನುಮೋದನೆ ನೀಡಲಿದೆ.  ಇದರೊಂದಿಗೆ ಭಾರತ್ ಬಯೋಟೆಕ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಮೊದಲ ಸ್ಥಳೀಯ ಅನುಮೋದಿತ ಲಸಿಕೆ ಇದಾಗಲಿದೆ. ಭಾರತ್ ಬಯೋಟೆಕ್ ಡಿಸೆಂಬರ್ ರಂದು ಮೊದಲು ತುರ್ತು-ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿತ್ತು. ಹೆಚ್ಚಿನ ಪರಿಗಣನೆಗೆ ನಡೆಯುತ್ತಿರುವ ಹಂತ ಕ್ಲಿನಿಕಲ್ ಪ್ರಯೋಗದಿಂದ ತಮ್ಮ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದತ್ತಾಂಶವನ್ನು (ಡೇಟಾ) ಸಲ್ಲಿಸುವಂತೆ ತಜ್ಞರ ಸಮಿತಿ ಸಂಸ್ಥೆಯನ್ನು ಕೇಳಿತ್ತು. ಭಾರತದಲ್ಲಿ ನಿರ್ಬಂಧಿತ ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್ ಕೋವಿಡ್ -೧೯ ಲಸಿಕೆ ಅರ್ಜಿದಾರ ಕೋವಾಕ್ಸಿನ್‌ನ್ನು ಅನುಮೋದಿಸಬೇಕೆಂದು ರಾಷ್ಟ್ರೀಯ ಔಷಧs ನಿಯಂತ್ರಕದ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶನಿವಾರ ಶಿಫಾರಸು ಮಾಡಿತು. ಶುಕ್ರವಾರ ಸಂಜೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಿದ ನಂತರ ಸ್ಥಳೀಯವಾಗಿ ತಯಾರಿಸಿದ ಲಸಿಕೆಗೆ ತಜ್ಞರ ಸಮಿತಿಯ ಒಪ್ಪಿಗೆ ಲಭಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಜನವರಿ ೨೬ರ ಗಣರಾಜ್ಯೋತ್ಸವ ದಿನದ ಒಳಗಾಗಿ ಮೂರು ಕೃಷಿ ಕಾನೂನು ರದ್ದು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿ ನೀಡುವ ಕಾನೂನು ಜಾರಿಯ ಬೇಡಿಕೆಗಳು ಈಡೇರದೇ ಇದ್ದಲ್ಲಿ ಗಣರಾಜ್ಯದಿನ ಪ್ರತಿಭಟನಾ ನಿರತ ಸಹಸ್ರಾರು ರೈತರು ರಾಷ್ಟ್ರ ರಾಜಧಾನಿಗೆ ಟ್ರ್ಯಾಕ್ಟರುಗಳೊಂದಿಗೆ ಪ್ರವೇಶಿಸಿ ಪೆರೇಡ್ ನಡೆಸಲಿದ್ದಾರೆ ಎಂದು ಕೃಷಿ ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು 2021 ಜನವರಿ 02ರ ಶನಿವಾರ ಹೇಳಿದರು. ರಾಜಧಾನಿಯಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಆಂದೋಳನವನ್ನು ಸಮನ್ವಯಗೊಳಿಸುತ್ತಿರುವ ಮೋರ್ಚಾದ ಏಳು ಸದಸ್ಯರ ತಂಡವು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜನವರಿ ರಿಂದ ೧೫ ದಿನಗಳವರೆಗೆ ಹೊಸ ಆಂದೋಲನ ಕಾರ್ಯಸೂಚಿಯನ್ನು ವಿವರಿಸಿತು. ಹೊಸ ಕಾರ್‍ಯಸೂಚಿ ಪ್ರಕಾರ ರಾಜಭವನಗಳ ಮುಂದೆ ಪಿಕೆಟಿಂಗ್, ದೆಹಲಿ ಗಡಿಯಲ್ಲಿನ ದಿಗ್ಬಂಧನ ಸ್ಥಳಗಳಿಂದ ಜನವರಿ ೨೬ರ ಟ್ರ್ಯಾಕ್ಟರ್ ಪೆರೇಡಿಗಾಗಿ ಪೂರ್ವಾಭ್ಯಾಸ ಸೇರಿವೆ. ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿzಂತೆ ಸರ್ಕಾರದೊಂದಿಗೆ ಜನವರಿ ೪ರಂದು ಸರ್ಕಾರದ ಜೊತೆಗೆ ನಡೆಯಲಿರುವ ಮಾತುಕತೆ ಮತ್ತು ಸುಪ್ರೀಂಕೋರ್ಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಜನವರಿ ೫ರಂದು ನಡೆಯಲಿರುವ ವಿಚಾರಣೆಗಳ ಫಲಿತಾಂಶಕ್ಕಾಗಿ ನಾವು ಕಾಯುತ್ತೇವೆ ಎಂದು ಕೃಷಿ ಮುಖಂಡರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್--ತೈಬಾ (ಎಲ್‌ಇಟಿ) ಕಾರ್ಯಾಚರಣೆಯ ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಪಾಕಿಸ್ತಾನದಲ್ಲಿ 2021 ಜನವರಿ 02ರ ಶನಿವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಮುಂಬೈ ದಾಳಿ ಪ್ರಕರಣದಲ್ಲಿ ೨೦೧೫ ರಿಂದ ಜಾಮೀನಿನಲ್ಲಿದ್ದ ಲಖ್ವಿಯನ್ನು ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿದೆ.  ಆದರೆ, ಆತನ ಬಂಧನದ ಸ್ಥಳವನ್ನು ಸಿಟಿಡಿ ಬಹಿರಂಗಪಡಿಸಿಲ್ಲ. "ಸಿಟಿಡಿ ಪಂಜಾಬ್ ನಡೆಸಿದ ಗುಪ್ತಚರ ಸುಳಿವು ಆಧರಿತ ಕಾರ್ಯಾಚರಣೆಯ ನಂತರ, ನಿಷೇಧಿತ ಸಂಸ್ಥೆ ಎಲ್‌ಇಟಿ ನಾಯಕ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಭಯೋತ್ಪಾದನೆ ಹಣಕಾಸು ಆರೋಪದ ಮೇಲೆ ಬಂಧಿಸಲಾಯಿತು" ಎಂದು ಸಿಟಿಡಿ ಹೇಳಿತು. ಲಾಹೋರಿನ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣವನ್ನು ೬೧ ವರ್ಷದ ಲಖ್ವಿ ವಿರುದ್ಧ ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ. "ಲಖ್ವಿ ಔಷಧಾಲಯವನ್ನು ನಡೆಸುತ್ತಿದ್ದು, ಇಲ್ಲಿನ ಹಣವನ್ನು ಭಯೋತ್ಪಾದನೆಗೆ ಹಣಕಾಸು ನೆರವಿಗಾಗಿ ಬಳಸಿದ್ದಾನೆ ಎಂದು ಆಪಾದಿಸಲಾಗಿದೆ. ಲಖ್ವಿ ಜೊತೆಗೆ ಇತರರು ಸಹ ಔಷಧಾಲಯದಿಂದ ಹಣವನ್ನು ಸಂಗ್ರಹಿಸಿದರು ಅದನ್ನು ಮತ್ತಷ್ಟು ಭಯೋತ್ಪಾದಗೆ ಹಣಕಾಸು ನೆರವು ಒದಗಿಸಲು ಬಳಸಿದ್ದಾರೆ. ಅವರು ಹಣವನ್ನು ವೈಯಕ್ತಿಕ ಖರ್ಚುಗಳಿಗೂ ಬಳಸಿದ್ದಾರೆ ಎಂದು ಸಿಟಿಡಿ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಕೋಲ್ಕತ: ಭಾರತದ ಮಾಜಿ ಕ್ರಿಕೆಟ್ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ 2021 ಜನವರಿ 02ರ ಶನಿವಾರ ಲಘು ಹೃದಯಾಘಾತ ಸಂಭವಿಸಿದ್ದು, ಕೋಲ್ಕತದ ವುಡ್ ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಂಜಿಯೋಪ್ಲಾಸ್ಟಿ ಮಾಡಲಾಗಿದೆ.  ಶನಿವಾರ ಎದೆನೋವು ಬಗ್ಗೆ ದೂರಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಟ್ರೆಡ್ ಮಿಲ್ ಮಾಡುವಾಗ ಎದೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರು ಕುಟುಂಬ ಹೃದ್ರೋU ಇತಿಹಾಸವನ್ನು ಹೊಂದಿದ್ದರು. ಮಧ್ಯಾಹ್ನ ಗಂಟೆಗೆ ಅವರು ಆಸ್ಪತ್ರೆಗೆ ಬಂದಾಗ, ಹೃದಯದ ಸ್ಥಿತಿಗತಿಯಲ್ಲಿ ಏರು ಪೇರು ಕಂಡು ಬಂದಿತ್ತು ಎಂದು ವುಡ್ ಲ್ಯಾಂಡ್ಸ್ ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿತು. ಗಂಗೂಲಿ ಅವರಿಗೆ ಬಳಿಕ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಯಿತು. ೪೮ ವರ್ಷದ ಗಂಗೂಲಿ ಅವರು ೨೦೧೯ ಅಕ್ಟೋಬರಿನಿಂದ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ಈಗ ಬಂಗಾಳದ ಕ್ರಿಕೆಟ್ ಅಸೋಸಿಯೇಶನ್ನಿನಲ್ಲಿ ನಿರ್ವಾಹಕರಾಗಿರುವ ಅವರ ಅಣ್ಣ ಸ್ನೇಹಶಿಶ್ ಅವರಿಗೆ  ಕಳೆದ ವರ್ಷ ಕೋವಿಡ್ -೧೯ ಸೋಂಕು ತಗುಲಿತ್ತು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸ ಬೇಕಾಗಿ ಬಂದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬೂಟಾ ಸಿಂಗ್ ಅವರು 2021 ಜನವರಿ 02ರ ಶನಿವಾರ ಬೆಳಿಗ್ಗೆ ನಗರದ ಏಮ್ಸ್‌ನಲ್ಲಿ ನಿಧನರಾದರು. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಳೆದ ವರ್ಷ ಅಕ್ಟೋಬರಿನಿಂದ ಕೋಮಾ ಸ್ಥಿತಿಯಲ್ಲಿದ್ದರು. ಅವರನ್ನು ಮಿದುಳಿನ ರಕ್ತಸ್ರಾವಕ್ಕಾಗಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ (ಏಮ್ಸ್) ದಾಖಲಿಸಲಾಗಿತ್ತು.  ಬೂಟಾ ಸಿಂಗ್ ಅವರು ಎಂಟು ಬಾರಿ ಸಂಸದರಾಗಿದ್ದರು ಮತ್ತು ಬಿಹಾರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.  ೧೯೩೪ರ ಮಾರ್ಚ್ ೨೧ರಂದು ಪಂಜಾಬಿನ ಜಲಂಧರ್ ಜಿಲ್ಲೆಯಲ್ಲಿ ಜನಿಸಿದ ಸಿಂಗ್ ಎಂಟು ಬಾರಿ ಲೋಕಸಭಾ ಸಂಸದರಾಗಿದ್ದರು. ಅವರು ರಾಜಸ್ಥಾನದ ಜಲೋರ್ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ೧೯೬೨ ರಲ್ಲಿ ಮೊದಲಿಗೆ ಸಂಸತ್ತಿನ ಕೆಳಮನೆಗೆ ಆಯ್ಕೆಯಾಗಿದ್ದರು.  ಸಿಂಗ್ ಹಿಂದೆ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಯೊಂದಿಗೆ ಸಂಬಂಧ ಹೊಂದಿದ್ದರು, ಆದರೆ ನಂತರ ೧೯೬೦ ದಶಕದ ಆರಂಭದಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿದ್ದ ಅವರು ೧೯೭೩-೭೪ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹರಿಜನ ಕೋಶದ ಸಂಚಾಲಕರಾಗಿದ್ದರು. ೧೯೭೮ ರಲ್ಲಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೊರೋನಾವೈರಸ್ ವಿರುದ್ಧಅಣಕು ಚುಚ್ಚುಮದ್ದು ಕಾರ್‍ಯಾಚರಣೆ ಆರಂಭಿಸುತ್ತಿದ್ದಂತೆಯೇಕೋವಿಡ್ ವಿರುದ್ಧ ನಾಲ್ಕು ಲಸಿಕೆಗಳನ್ನು ಸಿದ್ಧ ಪಡಿಸಿರುವ ಏಕೈಕ ದೇಶ ಭಾರತವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ 2021 ಜನವರಿ 02ರ ಶನಿವಾರ ಹೇಳಿದರು.  ಇಂಗ್ಲೆಂಡಿನಿಂದ ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗೆ ಅನುಮತಿ ನೀಡಲಾಗಿದೆ. ಫಿಜರ್‌ನ ತುರ್ತು ಬಳಕೆಯನ್ನು ಅಮೆರಿಕ ಅನುಮೋದಿಸಿದೆ. ಆದರೆ ಭಾರತವು ಈಗಾಗಲೇ ತುರ್ತು ಬಳಕೆ ಅಧಿಕಾರಕ್ಕಾಗಿ ಮೂರು ಅರ್ಜಿಗಳನ್ನು ಪಡೆದಿದ್ದು, ಒಂದಕ್ಕಿಂತ ಹೆಚ್ಚು ಲಸಿಕೆಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಚಿವರು ಸೂಚಿಸಿದರು.  ಪ್ರಸ್ತುತ, ಆರು ಕೋವಿಡ್ -೧೯ ಲಸಿಕೆಗಳು ಭಾರತದಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಗಾಗುತ್ತಿವೆ, ಇದರಲ್ಲಿ ಮುಂಚೂಣಿಯಲ್ಲಿರುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಸೇರಿವೆ. ಕೋವಿಶೀಲ್ಡ್ ಎಂಬುದು ಆಕ್ಸ್‌ಫರ್ಡ್ ಲಸಿಕೆ, ಇದನ್ನು ಅಸ್ಟ್ರಾಜೆನೆಕಾ ಮತ್ತು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಸ್ಥಳೀಯವಾಗಿದೆ. ಎರಡರ ಹೊರತಾಗಿ, ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗದ ಸಹಯೋಗದೊಂದಿಗೆ ಅಹಮದಾಬಾದಿನ  ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ ಮತ್ತು ಝೈಕೋವ್-ಡಿಯನ್ನು ಅಭಿವೃದ್ಧಿ ಪಡಿಸಿದೆ ಮತ್ತು ನೋವಾವಾಕ್ಸ್ ಸಹಯೋಗದೊಂದಿಗೆ ಸೀರಮ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಎನ್‌ವಿಎಕ್ಸ್-ಕೋವಿ ೨೩೭೩ ಕೂಡಾ ಇದೆ. ಇದಲ್ಲದೆ ಇತರ ಎರಡು ಲಸಿಕೆಗಳು ಸಿದ್ಧತೆಯ ಹಂತದಲ್ಲಿವೆ. ಒಂದು ಹೈದರಾಬಾದಿನ ಬಯೋಲಾಜಿಕಲ್ ಲಿಮಿಟೆಡ್, ಎಂಐಟಿ, ಅಮೆರಿಕದ ಸಹಯೋಗದೊಂದಿಗೆ ತಯಾರಿಸಲ್ಪಟ್ಟಿದೆ ಮತ್ತು ಇನ್ನೊಂದನ್ನು ಅಮೆರಿಕದ ಎಚ್‌ಡಿಟಿ ಸಹಯೋಗದೊಂದಿಗೆ ಪುಣೆ ಮೂಲದ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್-೧೯ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮೂರು ಕೋಟಿ ಜನರಿಗೆ ಮೊದಲ ಹಂತದಲ್ಲಿ ಉಚಿತ ಕೊರೊನಾವೈರಸ್ ಲಸಿಕೆಗಳನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ 2021 ಜನವರಿ 02ರ ಶನಿವಾರ ಹೇಳಿದರು.  ಭಾರತವು ಕೋವಿಡ್ ಲಸಿಕೆ ಚುಚ್ಚುಮದ್ದು ನೀಡಲು ಪ್ರಾರಂಭಿಸಿದಾಗ ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ಅವರು ಹೇಳಿದರು.  " ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಕೋಟಿ ಮುಂಚೂಣಿ ಕಾರ್‍ಯಕರ್ತರನ್ನು ಒಳಗೊಂಡ ಹೆಚ್ಚಿನ ಆದ್ಯತೆಯ ಫಲಾನುಭವಿಗಳಿಗೆ ಉಚಿತ ಕೋವಿಡ್-೧೯ ಚುಚ್ಚುಮದ್ದನ್ನು ದೇಶಾದ್ಯಂತ ಒದಗಿಸಲಾಗುವುದು. ಜುಲೈ ಅಂತ್ಯದ ಒಳಗಾಗಿ ಇನ್ನೂ ೨೭ ಕೋಟಿ ಆದ್ಯತೆಯ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು ಎಂದು ಡಾ. ಹರ್ಷ ವರ್ಧನ್ ಅವರು ಶನಿವಾರ ಮಧ್ಯಾಹ್ನ ಟ್ವೀಟ್  ಮಾಡಿದರು.  ಭಾರತದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಜನರನ್ನು ಬಾಧಿಸಿ, .೪೯ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ಕಾಯಿಲೆ ವಿರುದ್ಧ ಲಸಿಕೆ ಪಡೆಯಲು ಭಾರತ ಒಂದು ಹೆಜ್ಜೆ ಹತ್ತಿರ ಹೋದ ಒಂದು ದಿನದ ನಂತರ ಅವರ ಹೇಳಿಕೆ ಬಂದಿದೆ.  ಸರ್ಕಾರದಿಂದ ನೇಮಕಗೊಂಡ ವಿಷಯ ತಜ್ಞರ ಸಮಿತಿಯು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ - ಕೋವಿಶೀಲ್ಡ್ ತಯಾರಿಸಿದ ಆಕ್ಸ್‌ಫರ್ಡ್ ಲಸಿಕೆಗಾಗಿ ತನ್ನ ಶಿಫಾರಸುಗಳನ್ನು ಭಾರತದ ಔಷಧ ಮಹಾ ನಿಯಂತ್ರಕರಿಗೆ (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ -ಡಿಸಿಜಿಐ) ಶುಕ್ರವಾರ ಕಳುಹಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜನವರಿ 02  (2020+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment